ಮುಂಬಯಿ: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಹೋಳಿ ಆಚರಣೆಯು ಮಾ. 13ರಂದು ವಸಾಯಿಯಲ್ಲಿರುವ ಗೋನ್ಸಾಲ್ವಿಸ್ ಅನಾಥಾಶ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಅನಾಥಾಶ್ರಮದ ಮಕ್ಕಳೊಂದಿಗೆ ಸಂಘದ ಸದಸ್ಯ ಬಾಂಧವರು ಹೋಳಿ ಆಚರಣೆಗೈದು ಮೆರುಗು ತಂದರು.
ಸಂಘದ ಗೌರವಾಧ್ಯಕ್ಷ ರಾಘು ಸುವರ್ಣ ಮತ್ತು ಸಂಘದ ಮಾಜಿ ಅಧ್ಯಕ್ಷ ಯಶೋಧರ ಕೋಟ್ಯಾನ್, ರಾಜ್ ಯಾದವ್, ಸಂಘದ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯೆಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಆಶ್ರಮದ ಮಕ್ಕಳಿಗೆ ಸಿಹಿತಿಂಡಿ, ಶಾಲಾ ಪರಿಕರಗಳು, ದಿನೋಪಯೋಗಿ ವಸ್ತುಗಳಾದ ಟೂತ್ಬ್ರೆಶ್, ಪೇಸ್ಟ್, ಸಾಬೂನು, ಎಣ್ಣೆ, ಬಿಸ್ಕಿಟ್ ಇತ್ಯಾದಿಗಳನ್ನು ವಿತರಿಸಿದರು. ಅಲ್ಲದೆ ಮಕ್ಕಳಿಗೆ ಮಧ್ಯಾಹ್ನದ ಭೋಜನವನ್ನು ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳೊಂದಿಗೆ ಸದಸ್ಯ ಬಾಂಧವರು ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಸಂಘದ ಕಾರ್ಯದರ್ಶಿ ಶ್ರೀಪತಿ ಸುವರ್ಣ ಹಾಗೂ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುಧೀರ್ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಕರ್ಕೇರ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮವು ಜರಗಿತು. ಸಂಘದ ಸದಸ್ಯ ಬಾಂಧವರ ಪ್ರಾಯೋಜಕತ್ವದಲ್ಲಿ ಅನಾಥಾಶ್ರಮದ ಮಕ್ಕಳಿಗೆ ದಿನೋಪಯೋಗಿ ವಸ್ತುಗಳನ್ನು ಹಂಚಲಾಯಿತು. ಸುಧೀರ್ ಸಾಲ್ಯಾನ್ ಅವರು ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮಕ್ಕಳಿಗೆ ಹಾಗೂ ಅನಾಥಾಶ್ರಮದ ಸಂಚಾಲಕರಿಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.