Advertisement

ಕಂದಾಯ ಸೇವೆಯಲ್ಲಿ ವ್ಯತ್ಯಯ; ಜನರಿಗೆ ಸಂಕಷ್ಟ 

08:25 PM Nov 13, 2021 | Team Udayavani |

ಉಡುಪಿ:  ರಾಜ್ಯಮಟ್ಟದಲ್ಲಿ ಕಂದಾಯ ಸೇವೆಗೆ ಸಂಬಂಧಿಸಿ ಜಿಲ್ಲೆ ಗಣನೀಯ ಸಾಧನೆ ಮಾಡಿದ್ದರೂ ತಳಮಟ್ಟದಲ್ಲಿ ಸಾರ್ವಜನಿಕರು ಕಂದಾಯ ಸೇವೆ ಪಡೆಯಲು ಅಲೆದಾಡಬೇಕಾದ ಸ್ಥಿತಿಯಿದೆ. ಇದಕ್ಕೆ ಕಾರಣ, ಗ್ರಾಮ ಲೆಕ್ಕಿಗರಿಗೆ ಕಂದಾಯ ಸೇವೆಗಿಂತ ಅನ್ಯ ಇಲಾಖೆಯ ಕಾರ್ಯಭಾರವೇ ಹೆಚ್ಚಾಗಿದೆ ಮತ್ತು ನಿರಂತರ ಒತ್ತಡದಲ್ಲಿ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Advertisement

2-3 ಗ್ರಾಮ ವ್ಯಾಪ್ತಿ:

ಗ್ರಾಮ ಲೆಕ್ಕಿಗರು ಎರಡು ಅಥವಾ ಮೂರು ಗ್ರಾಮಗಳ ವ್ಯಾಪ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕಂದಾಯ ಸೇವೆ ಜತೆಗೆ ಇತರ  ಇಲಾಖೆಗಳ ಸಮೀಕ್ಷೆ, ಗಣತಿ, ವರದಿ ನೀಡುವ ಕೆಲಸಗಳಿಂದ ಹೈರಾಣಾಗಿದ್ದಾರೆ. ಇದರಿಂದ ಸಕಾಲ ವ್ಯಾಪ್ತಿ ಹೊರತುಪಡಿಸಿ ಇತರ ಕಂದಾಯ ಸೇವೆಯ ಸಾಕಷ್ಟು ಅರ್ಜಿಗಳು ವಿಲೇ ವಾರಿ ವಿಳಂಬವಾಗುತ್ತಿದೆ. ಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು  ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ವಿಎಗಳ ಮೇಲೆ ಹೆಚ್ಚಿದ ಒತ್ತಡ :

ವಾರಕ್ಕೆ ಒಂದು ಅಥವಾ ಎರಡು ಸಮೀಕ್ಷೆ, ಗಣತಿ, ಸೀಲ್‌ಡೌನ್‌ ಎಂದು ಗ್ರಾಮ ಲೆಕ್ಕಿಗರ ಮೇಲೆ ಕಾರ್ಯದ ಒತ್ತಡ ಹೆಚ್ಚಿಸುತ್ತಲೇ ಇರುತ್ತಾರೆ. ಇಷ್ಟೊಂದು ಒತ್ತಡದ ನಡುವೆ ಜನರಿಗೆ ಸರಿಯಾದ ಸಮಯಕ್ಕೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಳೆ, ಬೆಳೆ ಹಾನಿಗೆ ಸಂಬಂಧಿಸಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಮೀಕ್ಷೆ,  ಆರ್‌ಟಿಸಿಗೆ ಆಧಾರ್‌ ಕಾರ್ಡ್‌ ಲಿಂಕ್‌,  ನೀರಾವರಿ ಗಣತಿ, ಸಾಂಖ್ಯೀಕ ಇಲಾಖೆಯ ಕಾರ್ಯ, ಕೋವಿಡ್‌ ಸಂಬಂಧಿತ ಸೇವೆ (ಗ್ರಾಮೀಣ ಭಾಗದಲ್ಲಿ ಸೀಲ್‌ಡೌನ್‌), ಅಕ್ರಮ ಮರಳುಗಾರಿಕೆ ತಡೆಯುವ ಪ್ರಕ್ರಿಯೆ, ಅಕ್ರಮ ಮದ್ಯ ಮಾರಾಟ ತಡೆ ಹೀಗೆ ವಿವಿಧ ಇಲಾಖೆಗಳ ಹೆಚ್ಚುವರಿ ಕಾರ್ಯ, ನ್ಯಾಯಾಲಯದ ವ್ಯಾಜ್ಯ, ಕಚೇರಿಗೆ ಸಂಬಂಧಿಸಿದ ಕೆಲಸಕ್ಕೂ ನಮ್ಮನ್ನೇ ನಿಯೋಜಿಸುತ್ತಾರೆ. ಬಹುತೇಕ ಕಂದಾಯ ಸೇವೆಗಳು ಆನ್‌ಲೈನ್‌ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಕಂಪ್ಯೂಟರ್‌, ಇಂಟರ್‌ನೆಟ್‌ ಸಂಪರ್ಕ ವನ್ನು ಸರಕಾರ  ಒದಗಿಸಿಲ್ಲ ಮತ್ತು ಮೊಬೈಲ್‌ ಕೂಡ ನೀಡಿಲ್ಲ  ಎಂದು ಗ್ರಾಮಲೆಕ್ಕಿಗರು  ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ಶೇ. 50ರಷ್ಟು  ವಿಎಗಳಿಗೆ ಕಚೇರಿ ಕೆಲಸ :

ಜಿಲ್ಲೆಯಲ್ಲಿ 216 ಮಂಜೂರಾದ ಗ್ರಾಮ ಲೆಕ್ಕಿಗ ಹುದ್ದೆಯಲ್ಲಿ ಹೊಸದಾಗಿ 18 ಹುದ್ದೆ ಗಳು ಭರ್ತಿಯಾಗಿವೆ. ಇದರಲ್ಲಿ 14 ಮಂದಿಗೆ ಕಾರ್ಯಾದೇಶ ನೀಡಲಾಗಿದೆ. ಒಟ್ಟಾರೆ 198 ವಿಎಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ. 50ರಷ್ಟು ವಿಎಗಳು ಡಿಸಿ, ಎಸಿ, ತಾಲೂಕು ಹಾಗೂ ನಾಡ ಕಚೇರಿಗಳಿಗೆ ನಿಯೋಜಿಸಲ್ಪಟ್ಟಿದ್ದಾರೆ. ಇಲ್ಲಿನ ಬಹುತೇಕ ವಿಭಾಗದಲ್ಲಿ ಎಸ್‌ಡಿಎ, ಕ್ಲರಿಕಲ್‌ ಪೋಸ್ಟ್‌ ಗಳು ಖಾಲಿ ಇದ್ದು, ಇವರ ಕೆಲಸವನ್ನು ವಿಎಗಳು ಮಾಡುವಂತಾಗಿದೆ ಎಂದು ಮೂಲಗಳು ತಿಳಿಸಿವೆ.

11ನಕ್ಷೆಗೆ ಜನರ ಪರದಾಟ :

ಜಿಲ್ಲೆಯೊಂದರಲ್ಲೇ ಮೂರು ನಾಲ್ಕು ವರ್ಷಗಳಿಂದ ಕೃಷಿ ಜಮೀನಿಗೆ ಸಂಬಂಧಿಸಿದ 11ಇ ನಕ್ಷೆ ಕೋರಿ ಸಲ್ಲಿಕೆಯಾದ 7,700 ಅರ್ಜಿಗಳು ವಿಲೇವಾರಿಯಾಗಿಲ್ಲ.  ವಿಎಗಳ ಕೆಲಸದ ಒತ್ತಡದಿಂದ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಆರ್‌ಟಿಸಿ-ಆಖಾರ್‌ಬಂದ್‌ ಪ್ರಕ್ರಿಯೆ, 11ಇ ನಕ್ಷೆ ಪಡೆಯಲು ಜನರು ಪರದಾಡುತ್ತಿದ್ದಾರೆ. ಆರ್‌ಟಿಸಿ-ಸರ್ವೇ ಟ್ಯಾಲಿ, ಆರ್‌ಟಿಸಿ ಮ್ಯುಟೇಶನ್‌, ಆದಾಯ, ಜಾತಿ, ವಾಸ್ತವ್ಯ ಪ್ರಮಾಣ ಪತ್ರ, ಜಮಾಬಂದಿ ಸೇರಿದಂತೆ ಕಂದಾಯ ಇಲಾಖೆಯ ಮೂಲ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ  ಎಂದು ಗ್ರಾಮ ಲೆಕ್ಕಿಗರು ದೂರಿದ್ದಾರೆ.

ಅನ್ಯ ಇಲಾಖೆ ಕೆಲಸಗಳು ಹೆಚ್ಚಿರುವುದರಿಂದ ಗ್ರಾಮ ಲೆಕ್ಕಿಗರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಗ್ರಾಮ ಲೆಕ್ಕಿಗನಿಗೆ ಎರಡು ಮೂರು ಗ್ರಾಮಗಳಲ್ಲಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಇದೆ. ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕಂದಾಯ ಸಂಬಂಧಿತ ಸೇವೆ ಒದಗಿಸಲು ಕಷ್ಟವಾಗುತ್ತಿದೆ. ಭರತ್‌ ಶೆಟ್ಟಿ, ಅಧ್ಯಕ್ಷರು, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಉಡುಪಿ ಜಿಲ್ಲೆ

ರಾಜ್ಯಮಟ್ಟದ ಕಂದಾಯ ಸೇವೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸುತ್ತಿದೆ. ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ನಿರಂತರ ಶ್ರಮವಿದೆ.  ಕಂದಾಯ ಇಲಾಖೆ ಮಾತೃ ಇಲಾಖೆಯಾದ್ದರಿಂದ ತುರ್ತು ಸಂದರ್ಭದಲ್ಲಿ  ಅನ್ಯ ಇಲಾಖೆಗಳ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಚೇರಿಗಳಲ್ಲಿಯೂ ಕಂದಾಯ ಸಂಬಂಧಿತ ಸೇವೆ ಹೆಚ್ಚಿದ್ದು, ಸಿಬಂದಿ ಕೊರತೆ ಇರುವುದರಿಂದ ವಿಎಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ 20 ವಿಎಗಳ ನೇಮಕಾತಿಗೆ ಸರಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ.  – ಕೂರ್ಮಾರಾವ್‌ ಎಂ.,  ಜಿಲ್ಲಾಧಿಕಾರಿ,  ಉಡುಪಿ ಜಿಲ್ಲೆ

 

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next