Advertisement

ವಂದೇ ಮಾತರಂ ಸುಜಲಾಂ ಸುಫ‌ಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ’

08:14 PM Aug 14, 2020 | Karthik A |

ಸುಮಾರು 160 ವರ್ಷಗಳ ಹಿಂದೆ ಭರತಖಂಡದ ನಡುವೆ ಸುಂಟರಗಾಳಿ ಎದ್ದಿತ್ತು.

Advertisement

ಪರಕೀಯ ಬ್ರಿಟಿಷರ ವಿರುದ್ಧ ಭಾರತೀಯ ಸಿಪಾಯಿಗಳು ಎಬ್ಬಿಸಿದ್ದ ಮೊದಲ ಸಂಗ್ರಾಮದ ಕರೆ ದೇಶದ ಸುತ್ತ ಮಿಂಚು ಹರಿಸಿತ್ತು.

1857ರ ಒಂದು ಮುಂಜಾನೆ ಮಂಗಲ್‌ ಪಾಂಡೆ ಬ್ರಿಟಿಷರ ವಿರುದ್ಧ ಮೊದಲ ಹೊಡೆತ ನೀಡಿದ್ದ, ಅದರ ಬೆನ್ನಿಗೆ ದೇಶಪ್ರೇಮಿ ಸಿಪಾಯಿಗಳು ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ “ಹಲ್ಲಾ ಬೋಲ್‌’ ಎಂಬ ಕರೆ ನೀಡಿದ್ದರು.

ನಾನಾ ಸಾಹೇಬ್‌, ರಾಣಿ ಲಕ್ಷ್ಮೀ ಬಾಯಿ, ತಾತ್ಯಾ ಟೋಪೆ, ಬೇಗಂ ಹಜ್ರತ್‌ ಮಹಲ್‌ ಮುಂತಾದ ಸಾಹಸಿಗಳು ಈ ಸಂಗ್ರಾಮದ ದಳ್ಳುರಿಗೆ ಧುಮುಕಿದ್ದರು. ಈ ಸಂಗ್ರಾಮದ ರೊಚ್ಚಿಗೆ ಕಂಪೆನಿ ಸರಕಾರದ ಅಧಿಕಾರಿಗಳು ಕಂಗಾಲಾಗಿದ್ದರು.

ಬಂದೂಕುಗಳನ್ನು ಎಸೆದು ದಿಕ್ಕಾಪಾಲಾಗಿ ಓಡಿದ್ದರು. ಆದರೆ ಭಾರತದ ದುರದೃಷ್ಟ, ಭಾರತೀಯ ಚೈತನ್ಯವನ್ನು ಬಡಿದೆಬ್ಬಿಸಿದ ಜನ ಸಂಗ್ರಾಮ ಹೆಚ್ಚು ಕಾಲ ಮುಂದುವರಿಯಲಿಲ್ಲ, ಕೆಲವು ದೇಶದ್ರೋಹಿ ಅರಸರು ಬ್ರಿಟಿಷರ ಆಮಿಷಕ್ಕೆ ಒಲಿದು ಅವರತ್ತ ಸಹಾಯಹಸ್ತ ಚಾಚಿದರು.

Advertisement

ಅವರ ನೆರವಿನಿಂದ ಬ್ರಿಟಿಷ್‌ ಸೈನ್ಯ ಸಿಪಾಯಿಗಳ ವಿರುದ್ಧ ವಿಜಯ ಸಾಧಿಸಿತ್ತು.

ಬ್ರಿಟಿಷರು ಸಿಪಾಯಿಗಳನ್ನು ಕತ್ತರಿಸಿ ಹಾಕಿದ್ದರು. ಸಂಗ್ರಾಮದ ನಾಯಕರನ್ನು ಸಾಲು ಸಾಲಾಗಿ ಗಲ್ಲಿಗೇರಿಸಿದರು. ಭಾರತದ ಬೀದಿ ಬೀದಿಗಳಲ್ಲಿ ಸಿಪಾಯಿಗಳ ಶವಗಳನ್ನು ತೂಗಿಸಿದ್ದರು. ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಧೈರ್ಯ ಕೂಡ ಭಾರತೀಯರಲ್ಲಿ ಉಳಿದಿರಲಿಲ್ಲ. ಬಂಗಾಲದ ಬಂಕಿಮ್‌ ಚಂದ್ರ ಚಟರ್ಜಿ ಆಗಿನ್ನೂ ಹದಿಹರೆಯದ ಹುಡುಗ. ಆಗ ತಾನೆ ಆರಂಭವಾಗಿದ್ದ ಕೋಲ್ಕತಾ ವಿಶ್ವವಿದ್ಯಾನಿಲಯದ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ಸಿಪಾಯಿಗಳ ಸೋಲಿನ ವೃತ್ತಾಂತ ಈ ಹುಡುಗನ ರಕ್ತ ಕುದಿಸುವಂತೆ ಮಾಡಿತ್ತು. “ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ, ನಮ್ಮವರನ್ನು ಒಂದುಗೂಡಿಸಲು ಒಂದು ಆದರ್ಶ ಇರಲಿಲ್ಲ, ಅದಕ್ಕೇ ನಾವು ಸೋತೆವು’ ಎಂದು ಆತ ಚಿಂತಿಸುತ್ತಿದ್ದ. ಭಾರತೀಯರನ್ನೆಲ್ಲ ಒಂದುಗೂಡಿಸುವ ಮಾಯಾವಿ ಮಂತ್ರ ಬೇಕೆಂದು ಕನಸು ಕಾಣುತ್ತಿದ್ದ.

ಈ ಮಂತ್ರ ಹುಟ್ಟಿಕೊಂಡದ್ದು ಅದೇ ಹುಡುಗನ ಲೇಖನಿಯಿಂದ. ಸುಮಾರು ಇಪ್ಪತ್ತು ವರ್ಷಗಳ ಬಳಿಕ. ಬಂಕಿಮ್‌ಚಂದ್ರ ಪ್ರತಿಭಾವಂತ ವಿದ್ಯಾರ್ಥಿ. 1858ರಲ್ಲಿ ಪದವಿ ಪಡೆದ ಕೂಡಲೇ ಸರಕಾರಿ ಹುದ್ದೆ ಅವರನ್ನು ಅರಸಿಕೊಂಡು ಬಂದಿತ್ತು.

l1872ರಲ್ಲಿ “ಬಂಗದರ್ಶನ’ ಪತ್ರಿಕೆ
ಬಂಕಿಮ್‌ಚಂದ್ರ ಕೋಲ್ಕತಾದ ಡೆಪ್ಯುಟಿ ಮ್ಯಾಜಿಸ್ಟ್ರೇಟ್‌ ಮತ್ತು ಡೆಪ್ಯುಟಿ ಕಲೆಕ್ಟರ್‌ ಹುದ್ದೆಗೆ ಭಡ್ತಿಯಾಗಿದ್ದರು. ಸರಕಾರಿ ಕೆಲಸದಲ್ಲಿ ಇದ್ದುಕೊಂಡೇ ಭಾರತಮಾತೆಯ ಸೇವೆ ಮಾಡಬೇಕೆಂಬುದು ಅವರ ವಿಚಾರವಾಗಿತ್ತು. ಅನಂತರ ಅವರು 1872ರಲ್ಲಿ “ಬಂಗದರ್ಶನ’ ಎಂಬ ಪತ್ರಿಕೆ ಆರಂಭಿಸಿದರು. ಅವರ ಹೆಚ್ಚಿನ ಕಥೆಗಳು, ಕಾದಂಬರಿಗಳು, ಸಾಮಾಜಿಕ ಟೀಕೆ, ಧಾರ್ಮಿಕ ವಿವೇಚನೆ, ತಾತ್ವಿಕ ಚರ್ಚೆಗಳು ಬೆಳಕು ಕಂಡದ್ದು ಇದೇ ಪತ್ರಿಕೆಯಲ್ಲಿ. ಬಂಗದರ್ಶನವು ಬಂಗಾಲದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಹುಟ್ಟಿಸಿತು. “ಪ್ರಕೃತಿಯ ಜಡತೆ ನಿವಾರಿಸಿ ಹೊಸ ಚೈತನ್ಯ ತುಂಬುವ ಆಷಾಡದ ಮೊದಲ ಮಳೆ ಇದು’ ಎಂದು ರವೀಂದ್ರನಾಥ ಟಾಗೋರರು ಅವರ ಬರಹಗಳನ್ನು ಹೊಗಳಿದ್ದರು.

ಬಂಕಿಮ್‌ಚಂದ್ರ ಪೆನ್‌ ಹಿಡಿದು…
1876ರ ಒಂದು ರಾತ್ರಿ ಅವರ ಪತ್ರಿಕೆ ಅಚ್ಚಿಗೆ ಹೋಗಲು ತಡವಾಗಿತ್ತು. ಆದರೆ ಎರಡು ಪುಟಗಳನ್ನು ತುಂಬಿಸಲು ಇನ್ನೂ ಬಾಕಿ ಇದೆ ಎಂದು ಮುದ್ರಣಾಲಯದ ಮ್ಯಾನೇಜರ್‌ ವರದಿ ತಂದ. ಪುಟ ಈಗ ಕೊಡುತ್ತೇನೆ ತಡಿ ಎಂದು ಬಂಕಿಮ್‌ಚಂದ್ರ ಪೆನ್‌ ಹಿಡಿದು ಕಣ್ಣು ಮುಚ್ಚಿದರು. ಅವರ ಮುಚ್ಚಿದ ಕಣ್ಣುಗಳ ಮುಂದೆ ಒಬ್ಬಳು ದಿವ್ಯಸ್ತ್ರೀ ಕಾಣಿಸಿಕೊಂಡಿದ್ದಳು. ಯಾರ ಬಗ್ಗೆ ಬರೆಯುತ್ತೀ? ನನ್ನ ಬಗ್ಗೆ ಬರಿ ಎಂದಳು. ಅವಳು ಯಾರೆಂದು ಬಂಕಿಮ್‌ಚಂದ್ರ ಕೇಳಲಿಲ್ಲ. ಅವರ ಅಂತರಾತ್ಮ ಅವಳನ್ನು ಗುರುತಿಸಿತ್ತು. ಅವರು ಹಗಲಿರುಳು ಕನಸು ಕಾಣುತಿದ್ದ ಭಾರತಮಾತೆಯೇ ಅವಳಾಗಿದ್ದಳು. ಅವಳೇ ಶಬ್ದಗಳನ್ನು ಉದುರಿಸಿದ್ದಳು. ಅವಳೇ ಅವರ ಕೈ ಹಿಡಿದು ನಡೆಸಿದ್ದಳು. ಪೆನ್‌ ಕಾಗದದ ಮೇಲೆ ನಿರರ್ಗಳವಾಗಿ ಚಲಿಸಿತು.

ಕೇವಲ ಇಪ್ಪತ್ತು ನಿಮಿಷಗಳ ಬಳಿಕ ಮ್ಯಾನೇಜರ್‌ ಮರಳಿ ಬಂದಾಗ ಬಂಕಿಮ್‌ಚಂದ್ರ ಅವರ ಕೈಗೆ ಕಾಗದ ಕೊಟ್ಟು ಅದೊಂದು ಕವಿತೆಯಾಗಿತ್ತು. ಸಂಸ್ಕೃತ ಶಬ್ದಗಳೇ ಹೆಚ್ಚಾಗಿದ್ದ ಬಂಗಾಲಿ ಕವಿತೆಯನ್ನು ನೋಡಿ ಆತನಿಗೆ ಕಸಿವಿಸಿ ಆಯಿತು. ಆಗಿನ್ನೂ ಬಂಗಾಲದ ಓದುಗರಿಗೆ ಪರಿಚಯವಾಗಿರದ ಶೈಲಿ ಅದು. “ಸ್ವಾಮಿ ಇದನ್ನು ಓದುವುದು ಕಷ್ಟ, ಒಂದಿಷ್ಟು ತಿದ್ದಿ ಕೊಡಿ’ ಎಂದ “ಇದನ್ನು ನಾನು ಬೆರೆದಿಲ್ಲ ಬೇರೆ ಯಾರೋ ಬರೆಸಿದ್ದು. ಇದರ ಒಂದು ಶಬ್ದ ಕೂಡ ಬದಲಿಸುವ ಅಧಿಕಾರ ನನಗಿಲ್ಲ ಅಚ್ಚಿಗೆ ಹೀಗೆ ಕಳಿಸು. ಓದುಗರಿಗೆ ಅರ್ಥವಾಗದಿದ್ದರೆ ಬೇಡ. ಒಂದು ದಿನ ಅರ್ಥಮಾಡಿಕೊಳ್ಳುತ್ತಾರೆ ಆಗ ಬಂಗಾಲದ ಎಲ್ಲರ ನಾಲಗೆಯ ಮೇಲೆ ಈ ಕವಿತೆ ಕುಣಿದಾಡುತ್ತದೆೆ ಎಂದರು ಬಂಕಿಮ್‌ಚಂದ್ರ. ಕವಿತೆ ಹಾಗೆಯೇ ಅಚ್ಚಿಗೆ ಹೋಯಿತು. ಮಹಾಕವಿಯ ಮಾತು ಕೂಡ ನಿಜವಾಯಿತು. ಇಪ್ಪತ್ತು ವರ್ಷಗಳಲ್ಲಿ ಬಂಗಾಲ ಮಾತ್ರವಲ್ಲದೆ ಪೂರ್ತಿ ಭಾರತವೇ ಈ ಕವಿತೆಯನ್ನು ಭಾವಪರವಶತೆಯಿಂದ ಹಾಡುತ್ತಿತ್ತು. ಇದೇ ವಂದೇ ಮಾತರಂ.

ವಂದೇ ಮಾತರಂ ಸುಜಲಾಂ ಸುಫ‌ಲಾಂ…
ಭಾರತ ಮಾತೆಯ ಸೌಂದರ್ಯದ ವರ್ಣನೆ ಇದು. ಭಾರತೀಯರಿಗೆಲ್ಲ ಸುಲಭವಾಗಿ ಅರ್ಥವಾಗುವಂತೆ ಸರಳ ಸಂಸ್ಕೃತ ಶಬ್ದಗಳ ಭಾಷೆ. ಇದಾಗಿ ಆರು ವರ್ಷಗಳ ಬಳಿಕ ಬಂಕಿಮ್‌ ಚಂದ್ರ “ಆನಂದ ಮಠ’ ಎಂಬ ಕಾದಂಬರಿ ಬರೆದರು. ಬಂಗದರ್ಶನ ಪತ್ರಿಕೆಯಲ್ಲಿ ಈ ಕಾದಂಬರಿ ಧಾರಾವಾಹಿಯಾಗಿ ಮೂಡಿಬಂತು. ಪರಕೀಯರ ದಾಸ್ಯದ ವಿರುದ್ಧ ದೇಶಪ್ರೇಮಿ ಸನ್ಯಾಸಿಗಳು ಹೋರಾಟದ ಕಥೆ ಇದು. ಕಾದಂಬರಿಯಲ್ಲಿ ಸನ್ಯಾಸಿಗಳು ಸ್ಫೂರ್ತಿಯಾಗಿ “ವಂದೇ ಮಾತರಂ’ ಹಾಡುತ್ತಾರೆ. ಭಾರತ ಮಾತೆಯನ್ನು ದುರ್ಗೆಯಾಗಿ ಪೂಜಿಸುತ್ತಾರೆ. ಆನಂದ ಮಠ ಒಂದು ರಾಷ್ಟ್ರಪ್ರೇಮದ ಕಥೆ. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ ದೇಶಪ್ರೇಮಿಗಳ ಕಥೆ. ಈ ದೇಶ ಪ್ರೇಮಿಗಳಿಗೆ “ಸಂತಾನ’ ಎಂದು ಹೆಸರು. “ಮಾತೃ ಭೂಮಿಯೇ ನಮ್ಮ ತಾಯಿ, ನಮಗೆ ಬೇರೆ ತಂದೆ, ತಾಯಿ, ಪತ್ನಿ, ಮಕ್ಕಳು, ಮನೆ, ಕುಟುಂಬ ಇಲ್ಲ. ನಮ್ಮ ಬಂಧು ಇವಳೊಬ್ಬಳೇ. ಸುಜಲೆ, ಸುಫ‌ಲೆ, ಮಲಯಜ ಶೀತಲೆ’ ಎನ್ನುತ್ತಾರೆ ಇವರು.

ಮಧುರ ರಾಗ ಸಂಯೋಜನೆ
“ಆನಂದ ಮಠ’ ಭಾರೀ ಜನಪ್ರಿಯತೆ ಪಡೆಯಿತು. ವಂದೇ ಮಾತರಂ ಬಂಗಾಲದ ದೇಶಪ್ರೇಮಿಗಳ ಮೆಚ್ಚಿನ ಮಂತ್ರವಾಯಿತು. ಯುವಕರು ಭೇಟಿಯಾದಾಗ ವಂದೇಮಾತರಂ ಎಂದು ಪರಸ್ಪರ ವಂದಿಸಲು ಆರಂಭಿಸಿದ್ದರು. 1894ರಲ್ಲಿ ಬಂಕಿಮ್‌ಚಂದ್ರ ತೀರಿಕೊಂಡರು. 1896ರ ಕೋಲ್ಕತಾದ ಕಾಂಗ್ರೆಸ್‌ ಅಧಿವೇಶನದಲ್ಲಿ ಆಗಿನ್ನೂ ಬೆಳಕಿಗೆ ಬರುತಿದ್ದ ಯುವ ಕವಿ ರವೀಂದ್ರನಾಥ ಟಾಗೋರ್‌, “ವಂದೇ ಮಾತರಂ’ ಗೀತೆಗೆ ಮಧುರ ರಾಗ ಸಂಯೋಜನೆ ಮಾಡಿ ಹಾಡಿದರು. ತುಂಬಿದ ಸಭೆಯಲ್ಲಿ ಎಲ್ಲರಿಗೂ ರೋಮಾಂಚನದ ಅನುಭವವಾಗಿತ್ತು. ವಂದೇ ಮಾತರಂ ಹಾಡು ದೇಶದ ಸುತ್ತ ಎಲ್ಲರ ಹೃದಯದಲ್ಲಿ ಮನೆ ಮಾಡಿತ್ತು. ಆಗಿನ್ನೂ ಸ್ವಾತಂತ್ರ್ಯ ಚಳವಳಿ ತಣ್ಣಗಿತ್ತು. 1857ರ ಗಾಯ ಇನ್ನೂ ಹೃದಯಗಳಿಂದ ಮಾಸಿರಲಿಲ್ಲ. ಅಲ್ಲಲ್ಲಿ ಸಂಘಟನೆಗಳು ನಡೆಯುತ್ತಿದ್ದರೂ ವ್ಯಾಪಕ ಜನಜಾಗೃತಿ ಆರಂಭವಾಗಿರಲಿಲ್ಲ.

ಒಂದೇ ಮಂತ್ರ- ವಂದೇ ಮಾತರಂ
1905ರಲ್ಲಿ ಬ್ರಿಟಿಷರು ಬಂಗಾಲದ ವಿಭಜನೆ ಮಾಡಿದಾಗ ಮಾತ್ರ ಜನರು ಸಿಡಿದೆದ್ದರು. ಬಂಗಾಲದಲ್ಲಿ ಆರಂಭವಾದ ಆಕ್ರೋಶ ದೇಶವನ್ನೇ ಉರಿಸಿದ ಸಂಗ್ರಾಮವಾಯಿತು. ಆಗಸ್ಟ್‌ 7, 1905ರಂದು ಕೋಲ್ಕತಾದ ವಿದ್ಯಾರ್ಥಿಗಳು ಜಾತಿಭೇದವಿಲ್ಲದೆ ಒಟ್ಟು ಸೇರಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ಮೆರವಣಿಗೆ ನಡೆಸಿದರು. ಅವರೆಲ್ಲರ ಬಾಯಿಯಲ್ಲಿ ಒಂದೇ ಮಂತ್ರ- ವಂದೇ ಮಾತರಂ! ಅವರ ಒಕ್ಕೊರಲಿನ ಕೂಗು ಮುಗಿಲು ಮುಟ್ಟಿತು.

ವಂದೇ ಮಾತರಂ ಪತ್ರಿಕೆ ಆರಂಭ
1905ರ ಬನಾರಸ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ಟಾಗೋರರ ಸೋದರ ಸೊಸೆ ಸರಳಾದೇವಿ ಚೌದುರಾಣಿ ವಂದೇಮಾತರಂ ಗೀತೆ ಹಾಡಿದರು. ಸಭೆಯಲ್ಲಿದ್ದ ಜನರಲ್ಲಿ ವಿದ್ಯುತ್‌ ಹರಿದಂತೆ ಆಗಿತ್ತು. ಆ ದಿನದಿಂದ ವಂದೇ ಮಾತರಂ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯ ಪ್ರೇಮಿಯ ಮಂತ್ರವಾಯಿತು. ದೇಶದ ಸುತ್ತ ರಾಷ್ಟ್ರ ಪ್ರೇಮದ ಸಂದೇಶ ಸಾರಿ ಜನಜಾಗೃತಿ ಹುಟ್ಟಿಸಿತ್ತು. 1906ರಲ್ಲಿ ಬಿಪಿನ್‌ ಚಂದ್ರಪಾಲ್‌ ವಂದೇ ಮಾತರಂ ಪತ್ರಿಕೆಯನ್ನು ಆರಂಭಿಸಿದರು. ದಾದಾಬಾಯಿ ನವರೋಜಿ 1906ರಲ್ಲಿ ಕೋಲ್ಕತಾದ ಕಾಂಗ್ರೆಸ್‌ ಅಧಿವೇಶನದಲ್ಲಿ ಅನಾವರಣಗೊಳಿಸಿದ್ದ ಮೊದಲ ರಾಷ್ಟ್ರೀಯ ಧ್ವಜದ ನಡುವೆ ವಂದೇ ಮಾತರಂ ಎಂದು ಬರೆಯಲಾಗಿತ್ತು.

ಸಮಗ್ರ ದೇಶಕ್ಕೆ ವಂದನೆ: ಗಾಂಧೀಜಿ
1907ರಲ್ಲಿ ಬ್ರಿಟಿಷ್‌ ಸರಕಾರ ವಂದೇ ಮಾತರಂ ಪತ್ರಿಕೆಯ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಬಿಪಿನ್‌ ಚಂದ್ರಪಾಲ್‌ರನ್ನು ಬಂಧಿಸಿತು. ಕೋಲ್ಕತಾದ ಲಾಲ್‌ ಬಜಾರ್‌ನ ನ್ಯಾಯಾಲಯದಲ್ಲಿ ತೀರ್ಪು ನಡೆಯಿತು. ನ್ಯಾಯಾಲಯದ ಹೊರಗೆ ಸಾವಿರಾರು ಯುವಕರು ಜಾಗರಣೆ ನಡೆಸಿದರು. ದಿನ ರಾತ್ರಿಯೆನ್ನದೆ ಅವರ ಘೋಷಣೆ ಕೇಳಿ ಬರುತ್ತಿದ್ದದ್ದು ವಂದೇ ಮಾತರಂ. ಲಾಠೀಚಾರ್ಜ್‌ ನಡೆಸಿದರೂ ಅವರ ಧ್ವನಿ ಅಡಗಿಸುವ ಪ್ರಯತ್ನದಲ್ಲಿ ಸರಕಾರ ವಿಫ‌ಲವಾಗಿತ್ತು. ಪಂಡಿತ್‌ ವಿಷ್ಣು ದಿಗಂಬರ ಪುಲಾಸ್ಕರ್‌ ಲಾಹೋರ್‌ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದರು. ಅದರ ಬಳಿಕ ಪ್ರತಿಯೊಂದು ಕಾಂಗ್ರೆಸ್‌ ಅಧಿವೇಶನದಲ್ಲಿ ಅವರು ವಂದೇ ಮಾತರಂ ಹಾಡುವುದು ವಾಡಿಕೆಯೇ ಆಯಿತು. “ನಾವು ವಂದೇ ಮಾತರಂ ಹಾಡುವುದು ಸಮಗ್ರ ದೇಶಕ್ಕೆ ವಂದನೆ ಸಲ್ಲಿಸಿದಂತೆ’ ಎಂದಿದ್ದರು ಗಾಂಧೀಜಿ.

ಕಂಗಾಲಾಗಿದ್ದ ಬ್ರಿಟಿಷರು
ಸ್ವಾÌತಂತ್ರ್ಯ ಚಳವಳಿಯ ಬೀಜ ಮಂತ್ರವಾಗಿತ್ತು ವಂದೇ ಮಾತರಂ. ದಮನಿಸಿದಷ್ಟು ಮತ್ತೆ ಮತ್ತೆ ಬಲವಾಗಿ ಕೇಳಿಸುತಿದ್ದ ಈ ಕೂಗನ್ನು ಅಡಗಿಸುವುದೇ ಬ್ರಿಟಿಷ್‌ ಅಧಿಕಾರದ ಮುಂದಿನ ಸವಾಲಾಗಿತ್ತು. ದೇಶದಲ್ಲಿ ವಿದ್ಯುತ್ಸಂಚಾರ ಮಾಡಿಸಿದ್ದ ಈ ಮಂತ್ರ ಶಕ್ತಿಯ ಮುಂದೆ ಬ್ರಿಟಿಷ್‌ ಆಳ್ವಿಕೆಯ ಅಡಿಪಾಯವೇ ನಡುಗಿತ್ತು.

ವಂದೇ ಮಾತರಂ ರಾಷ್ಟ್ರಗೀತೆ ಆಗಬಹುದಿತ್ತು, ಆದರೆ…
1937ರಲ್ಲಿ ಇದನ್ನು ರಾಷ್ಟ್ರಗೀತೆಯಾಗಿ ಮಾಡುವ ಪ್ರಯತ್ನ ನಡೆಯಿತು. ಆದರೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. “ಈ ಗೀತೆಯ ಶಬ್ದಗಳು ಬ್ರಿಟಿಷರ ಸಾಮ್ರಾಜ್ಯದ ವಿರುದ್ಧ ದೇಶದ ಪ್ರತಿಭಟನೆಯ ಸಂಕೇತವಾಗಿದೆ. ಇದು ಶಕ್ತಿಯ ಕರೆ, ಜನರಿಗೆ ಸ್ಫೂರ್ತಿ ಕೊಡುವ ಅಕ್ಷರ ಧಾರೆ’ ಎಂದು ನೆಹರೂ ಜೀ ಘೋಷಿಸಿದರು. ಆದರೆ ಕೆಲವರ ವಿರೋಧದ ಕಾರಣ ಈ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಬಳಸಲಾಯಿತು. ಸ್ವಾತಂತ್ರ್ಯದ ಬಳಿಕ ವಂದೇ ಮಾತರಂ ರಾಷ್ಟ್ರóಗೀತೆ ಆಗಬಹುದಿತ್ತು. ಆಗಲೂ ಕೆಲವರಿಂದ ವಿರೋಧ ವ್ಯಕ್ತವಾದ ಕಾರಣದಿಂದ ಟಾಗೋರರ “ಜನಗಣಮನ’ ಗೀತೆಯನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಯಿತು.

ಅಭಿಲಾಷ್‌ ಕುರುಂಜಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next