Advertisement

ಹೆಸರಲ್ಲೇನಿದೆ ಶಿವಾ?ಇದು “ವಜ್ರಮುನಿ’ಪ್ರಸಾದ

01:05 PM Jul 19, 2018 | Sharanya Alva |

ವಜ್ರಮುನಿಗೂ ವಜ್ರಮುನಿಗೂ ಏನು ವ್ಯತ್ಯಾಸ?”ವಜ್ರಮುನಿ’ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟ. “ವಜ್ರಮುನಿ’ ಕನಕಪುರ ಸಮೀಪದ ಕನಕನಹಳ್ಳಿ ಗ್ರಾಮದ ವಜ್ರಮುನೇಶ್ವರ ದೇವರು. ಇಲ್ಲೊಂದು ಹೊಸಬರ ತಂಡ “ವಜ್ರಮುನಿ’ ಎಂಬ ಶೀರ್ಷಿಕೆಯಡಿ ಚಿತ್ರ ಶುರು ಮಾಡಲು ಸಜ್ಜಾಗಿದೆ. ಆದರೆ, ಖಳನಟ ವಜ್ರಮುನಿ ಅವರ ಮನೆಯವರು ಈ ಶೀರ್ಷಿಕೆ ಕೊಡುವಂತಿಲ್ಲ ಎಂದು ಮನವಿ ಮಾಡಿರುವ ಬಗ್ಗೆ ಸುದ್ದಿಯಾಗಿದ್ದೇ ತಡ, ಚಿತ್ರತಂಡ “ವಜ್ರಮುನಿ’ ಶೀರ್ಷಿಕೆಗೆ ಸ್ಪಷ್ಟನೆ ಕೊಟ್ಟಿದೆ. ಅಷ್ಟಕ್ಕೂ ಈ ತಂಡ “ವಜ್ರಮುನಿ’ ಎಂದು ಶೀರ್ಷಿಕೆ ನೋಂದಾಯಿಸಿರುವುದು ಕೃಷ್ಣೇಗೌಡ ಅವರ ಮಂಡಳಿಯಲ್ಲಿ. ಶೀರ್ಷಿಕೆಗೆ ಮಂಡಳಿ ಯಾವುದೇ ಸಮಸ್ಯೆ ಮಾಡಿಲ್ಲ. ಆದರೂ, ಶೀರ್ಷಿಕೆ ಕೊಡಬಾರದು ಅಂತ ಆ ಮನೆಯವರು ಎಲ್ಲೋ ಸುದ್ದಿ ಹಬ್ಬಿಸಿರುವುದರಿಂದ ಅದಕ್ಕೊಂದು ಉತ್ತರ ಕೊಟ್ಟಿದೆ ಚಿತ್ರತಂಡ.

Advertisement

ಈ ಚಿತ್ರಕ್ಕೆ ಭರತ್‌ ಚಕ್ರವರ್ತಿ ನಿರ್ದೇಶಕ. ಅವರಿಗೆ ಇದು ಮೊದಲ ಪ್ರಯತ್ನ. “ವಜ್ರಮುನಿ ಕನ್ನಡದ ಖಳನಟರು. ಅವರಿಗೂ ನಮ್ಮ ಈ “ವಜ್ರಮುನಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೆಸರಿಗೆ ಧಕ್ಕೆ ತರುವಂಥದ್ದಾಗಲಿ, ಅವರ ಭಾವಚಿತ್ರವಾಗಲಿ, ಅವರ ಜೀವನ ಚರಿತ್ರೆಯಾಗಲಿ ಈ ಚಿತ್ರದಲ್ಲಿರುವುದಿಲ್ಲ. “ವಜ್ರಮುನಿ’ ಎಂದರೆ, ಒಂದು ಊರಲ್ಲಿರುವ ವಜ್ರ ಮುನೇಶ್ವರ ಸ್ವಾಮಿಯ ಹೆಸರು. ಚಿತ್ರದ ನಾಯಕನ ಅಪ್ಪ, ವಜ್ರಮುನೇಶ್ವರನ ಪರಮಭಕ್ತರು. ಆ ದೇವರ ಕೃಪೆಯಿಂದ ಜನಿಸುವ ಮಗನಿಗೆ, “ವಜ್ರಮುನಿ’ ಎಂದು ನಾಮಕರಣ ಮಾಡುತ್ತಾರೆ. ಎಲ್ಲರೂ ವಜ್ರ ಅಂತ ಪ್ರೀತಿಯಿಂದ ಕರೆಯುತ್ತಾರೆ. ಇದು ಬಿಟ್ಟರೆ, ಖಳನಟ ವಜ್ರಮುನಿ ಅವರಿಗೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಅಂಥದ್ದೇನಾದರೂ ಇದ್ದಲ್ಲಿ, ಚಿತ್ರ ಬಿಡುಗಡೆ ಮಾಡುವುದೇ ಇಲ್ಲ’ ಎಂಬುದು ನಿರ್ದೇಶಕರ ಮಾತು.

ಇಲ್ಲೊಂದು ಸಂದೇಶವಿದೆ. ಮಾಸ್‌ ಅಂಶಗಳಿರುವ ಈ ಚಿತ್ರದಲ್ಲಿ ಮನರಂಜನೆಗೂ ಜಾಗವಿದೆ. ಕೆಟ್ಟವರು, ಒಳ್ಳೆಯವರು ನಡುವಿನ ವಿಷಯವಿದೆ. ಎರಡು ಶೇಡ್‌ ಕಥೆ ಇರುವ ಚಿತ್ರದಲ್ಲಿ ಯಾವ ಅಶ್ಲೀಲತೆಯಾಗಲಿ, ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳಾಗಲಿ ಇರಲ್ಲ. ಮೂರು ಭರ್ಜರಿ ಫೈಟ್ಸ್‌, ನಾಲ್ಕು ಹಾಡುಗಳು ಚಿತ್ರದಲ್ಲಿರಲಿವೆ ಎಂಬ ವಿವರ ಕೊಡುತ್ತಾರೆ ಭರತ್‌ ಚಕ್ರವರ್ತಿ.

ಚಿತ್ರಕ್ಕೆ ರಾಜ್‌ಗೌತಮ್‌ ನಾಯಕ. ಮಂಗಳೂರು ಮೂಲದ ರಾಜ್‌ ಗೌತಮ್‌ ನಟನೆ ತರಬೇತಿ ಕಲಿತು ಒಳ್ಳೆಯ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಬಂದ ಅವಕಾಶವಿದು. ಇದಕ್ಕೂ ಮುನ್ನ, ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ರಾಜ್‌ಗೌತಮ್‌.
ಯಶವಂತ್‌ ಶೆಟ್ಟಿ ಅವರಿಗಿಲ್ಲಿ ಒಂದು ಹಳ್ಳಿಯಲ್ಲಿರುವ ರಗಡ್‌ ಹುಡುಗ ಪಾತ್ರ ಸಿಕ್ಕಿದೆ. ಈಗಾಗಲೇ “ಜ್ವಲಂತಂ’, “ಅಥರ್ವ’ ಚಿತ್ರದಲ್ಲಿ ಸೈ ಎನಿಸಿಕೊಂಡಿರುವ ಯಶವಂತ್‌ ಶೆಟ್ಟಿಗೆ ಇಲ್ಲೂ ಹೊಸ ರೀತಿಯ ಚಾಲೆಂಜಿಂಗ್‌ ಪಾತ್ರ ಸಿಕ್ಕಿದೆ.

ನಿರ್ಮಾಪಕ ಸಂಪತ್‌ ಅವರು ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಟನೆ ಅವರಿಗಿಷ್ಟದ ಕ್ಷೇತ್ರ. ಹಲವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅವರಿಗೆ ಈ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಳ್ಳೆಯ ಚಿತ್ರ ಮಾಡುವ ಉತ್ಸಾಹದಲ್ಲಿ ಹೊಸ ತಂಡ ಕಟ್ಟಿಕೊಂಡು ಬಂದಿದ್ದಾರೆ. ಚಿತ್ರಕ್ಕೆ ಬಕ್ಕೇಶ್‌ ಸಂಗೀತವಿದೆ. ಎಲ್‌.ಮೋಹನ್‌ ಛಾಯಾಗ್ರಹಣವಿದೆ. ಸಂತೋಷ್‌ ಮುಂದಿನ ಮನೆ ಸಂಭಾಷಣೆ ಬರೆದಿದ್ದಾರೆ. ಆಷಾಢ ಬಳಿಕ 30 ದಿನಗಳ ಕಾಲ ಮಂಡ್ಯ, ಕೊಳ್ಳೆಗಾಲ ಸುತ್ತಮುತ್ತ ಚಿತ್ರೀಕರಣ ಶುರುವಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next