Advertisement

ರಚನೆಯಾಗಬೇಕಿದೆ ವಚನ ವಿಶ್ವಕೋಶ: ಡಾ| ಸಂಗಮೇಶ

05:59 PM Dec 18, 2023 | Team Udayavani |

ಗದಗ: ಭಾರತೀಯ ಪರಂಪರೆಯ ಆಚೆಗಿಟ್ಟು ನೋಡಲಾಗದ ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ವಚನ ವಿಶ್ವಕೋಶ ರಚನೆಯಾಗಬೇಕಾದ ಅಗತ್ಯವಿದೆ ಎಂದು ವಿದ್ವಾಂಸ ಡಾ| ಸಂಗಮೇಶ ಸವದತ್ತಿಮಠ ಹೇಳಿದರು.

Advertisement

ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವ ವಿದ್ಯಾಲಯದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್‌, ಕನಕದಾಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ ವಚನ ದರ್ಶನ ವಿಚಾರ ಸಂಕಿರಣ
ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯ ಜಗತ್ತಿನಲ್ಲಿಯೇ ಅನನ್ಯ ಸಾಹಿತ್ಯವಾಗಿದ್ದು, ಅನೇಕ ಕೃತಿಗಳು ಹೊರ ಬಂದರೂ ಈವರೆಗೆ ವಚನ ವಿಶ್ವಕೋಶ ರಚನೆಯಾಗಿಲ್ಲ. ಕಾರಣ ಶಿವಶರಣರ ವಚನ ಸೀಮಿತಾರ್ಥದಲ್ಲಿ ಗ್ರಹಿಸಿ ಮಿತಿಗೊಳಿಸುವ ಕೆಲಸ ಮಾಡದೇ ವಿಶಾಲ ದೃಷ್ಟಿಯಲ್ಲಿ ನೋಡುವಂತಾಗಬೇಕು. ಸಕಲ ಜೀವಾತ್ಮರಿಗೆ ಅವರವರ ದೃಷ್ಟಿಕೋನದಲ್ಲಿ ಅರ್ಥ ವ್ಯಾಪ್ತಿಗಳನ್ನು ವಿಸ್ತರಿಸಿಕೊಳ್ಳುವ ವೈಶಾಲ್ಯತೆ
ಹೊಂದಿದ್ದರೂ ಭಿನ್ನಭಾವಗಳಿಗೆ ವಿರೋಧ ಸಲ್ಲದು ಎಂದು ಹೇಳಿದರು.

ವಚನಕಾರರದು ಮೂಲತಃ ವೀರಶೈವ ಪ್ರಣೀತವಾದ ತತ್ವವೇ. ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಬಸವಣ್ಣ ಕಾಯಕದಿಂದ ಸಮಾಜದ ವಿವಿಧ ಸ್ತರದ ಭಕ್ತರನ್ನು ಮೇಲಕ್ಕೆತ್ತುವ ಕೆಲಸ ಮಾಡಿದ್ದು, ಎಲ್ಲರಲ್ಲಿ ವೈಚಾರಿಕತೆ ಬಿತ್ತಿದ್ದರು. ಆಧ್ಯಾತ್ಮಿಕ, ಸಾಮಾಜಿಕ, ಉಭಯ ಸ್ತರಗಳಲ್ಲಿಯೂ ವಿಸ್ತಾರಗೊಂಡಿದೆ. ನಕಾರಾತ್ಮಕ ಸಂಕುಚಿತ ಭಾವವನ್ನು ಬಿಟ್ಟು, ಕೇವಲ ಕರ್ನಾಟಕದ ಮಟ್ಟಿಗೆ ವಿಚಾರ ಮಾಡದೇ ತಮ್ಮ ಮೂಗಿನ ನೇರಕ್ಕೆ ಐಡಿಯಾಲಾಜಿ ಮತ್ತು ಕಲ್ಪಕತೆಯಿಂದ ಹೊರ ಬಂದು ವಾಸ್ತವಿಕವಾದ ಭಾರತೀಯ ಸಂಸ್ಕೃತಿಯ ಮೂಲಕವೇ ವಚನ ಭಕ್ತಿ ಕಾಯಕ ದಾಸೋಹಗಳನ್ನು ನೋಡಬೇಕು ಎಂದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಚನಕಾರರು ಗ್ರಾಮ ಮಟ್ಟದಿಂದಲೇ ಉನ್ನತ ಸ್ಥಾನಕ್ಕೆ ಏರಿದವರು. ಆಧ್ಯಾತ್ಮಿಕತೆ ಇಲ್ಲದೇ ಕಾಯಕವನ್ನು ತಿರಸ್ಕರಿಸಿದವರು. ಅವರ ದಾಸೋಹದ ದೃಷ್ಟಿ ಸಮಷ್ಟಿಯ ಪ್ರಜ್ಞೆಯಲ್ಲಿಯೇ ಬಂದಿದ್ದು, ಗ್ರಾಮಾಭಿವೃದ್ಧಿ ಕೇವಲ ಆರ್ಥಿಕತೆಯ ಮೇಲೆ ನಿಂತಿಲ್ಲ. ಸಮಗ್ರ ದೃಷ್ಟಿಕೋನದಿಂದಲೇ ವ್ಯಕ್ತಿ ಬೆಳೆಯಬೇಕು ಎಂಬುದು ಶರಣರ ದರ್ಶನವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯ ಶೈಕ್ಷಣಿಕವಾದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದರು.

Advertisement

ಅಂದಾಜು 70 ಜನರು ವಿಷಯ ಮಂಡನೆ ಮಾಡಲು ಆಗಮಿಸಿದ್ದು ಸಂತಸದ ವಿಷಯವಾಗಿದೆ. ಈ ಸಂಕಿರಣದಲ್ಲಿ ಚರ್ಚೆ
ನಡೆದು ಶಿವಶರಣರ ವಚನಗಳನ್ನು ಹೊಸದಾದ ಈ ನೆಲದ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯುವ ಆಶಯವನ್ನು ವ್ಯಕ್ತಪಡಿಸಿದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕೆಳ ಸ್ತರದಲ್ಲಿರುವ ಯೋಗ್ಯತೆ ಇರುವ ವ್ಯಕ್ತಿಗಳನ್ನು ಎತ್ತರಕ್ಕೆ ಏರಿಸಿದ ಕಾಲ ಶರಣರ ಕಾಲವಾಗಿದೆ. ಹೀಗಾಗಿ ಕೆಳಸ್ತರದ ಕಾಯಕಕ್ಕೆ ಮನ್ನಣೆ ದೊರಕಿದೆ. ರಾಮರಾಜ್ಯಕ್ಕೂ ಮತ್ತು ಶರಣರ ಕಾಲದ ಬಸವಣ್ಣನವರಂಥ ಶರಣರು ಕಂಡ ಕಾಲದ ಸಮಾಜಕ್ಕೂ ಭಿನ್ನತೇ ಏನೂ ಇಲ್ಲ. ಭಾರತೀಯ ವಿಚಾರ ಧಾರೆಯಲ್ಲಿಯೇ ಸೂಕ್ಷ್ಮವಾಗಿ ವಚನಕಾಲವನ್ನು ನೋಡಬೇಕಿದೆ ಎಂದು ಹೇಳಿದರು.

ವಿವಿ ಕುಲಸಚಿವ ಡಾ| ಸುರೇಶ ನಾಡಗೌಡರ, ಕನಕದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರನಾಥ ದಂಡಿನ, ರಾಜ್ಯ ಅಭಾಸಾಪ ಸಹಕಾರ್ಯದರ್ಶಿ ಡಾ| ಶಿವಶರಣ ಗೋಡ್ರಾಳ, ದುಂಡಪ್ಪ ಬಡಲಕ್ಕಣ್ಣವರ ಇದ್ದರು. ವಿಚಾರ ಸಂಕಿರಣದಲ್ಲಿ ಸಂಯೋಜಕ ಜನಮೇಜಯ ಉಮ್ಮರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಡಾ| ಸಂತೋಷಕುಮಾರ ಪಿ.ಕೆ. ಸ್ವಾಗತಿಸಿದರು. ರವಿ ದಂಡಿನ ವಂದಿಸಿದರು. ನಂತರ ವಿವಿಧ ಗೋಷ್ಠಿಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next