Advertisement

UV Fusion: ಈ ಸಮಯ ಕಳೆದು ಹೋಗುತ್ತದೆ

03:12 PM Feb 03, 2024 | Team Udayavani |

ಗಾಳಿಗಿಂತ ವೇಗವಾಗಿ ಚಲಿಸುವುದು ಕಾಲ. ಅರಿವೇ ಇರದಂತೆ, ಕಳೆದುಹೋದರೂ ತಿಳಿಯದಂತೆ. ಈ ವಾಕ್ಯಗಳು ಎಷ್ಟು ಅರ್ಥ ಪೂರ್ಣವಾಗಿದೆ, ಬದುಕಿನಲ್ಲಿ ಅಮೂಲ್ಯತೆಯನ್ನು ಪಡೆದಿರುವ ಸಮಯದ ಮೌಲ್ಯವನ್ನು ತಿಳಿಸುವುದರೊಂದಿಗೆ ಅದು ಎಷ್ಟು ವೇಗವಾಗಿ ಸಾಗುತ್ತಿದೆ ಮತ್ತು ಹೇಗೆ ಸಾಗಿದೆ ಎಂಬುದನ್ನು ಮೌಲ್ಯಯುತವಾಗಿ ವಿವರಿಸಿದೆ. ಸಮಯ ಎಂಬ ಒಂದು ಪದ ಮೂರು ಅಕ್ಷರ ಹೊಂದಿರುವ ಇದು ಜಗತ್ತನ್ನೇ ತನ್ನ ಹಿಡಿತದಲ್ಲಿ ಹಿಡಿದುಕೊಂಡಿರುವಾಗ ನಾವೆಲ್ಲರೂ ಅದರ ಕೈಗೊಂಬೆಗಳೇ ತಾನೇ.

Advertisement

ಸಮಯ ತನ್ನ ಪಾಡಿಗೆ ಮುಂದೆ ವೇಗವಾಗಿ ಸಾಗುವುದೇ ಹೊರತು ಹಿಂದೆ ಚಲಿಸದು. ಆದರೆ ನಾವು ಸಮಯದ ಜತೆ ಸಾಗುತ್ತಲೇ ಇರಬೇಕು, ನಮ್ಮ ಕಾರ್ಯಸಿದ್ಧಿಗೆ ನಾವು ಅದರೊಂದಿಗೆ ಹೋರಾಡಲೇಬೇಕು. ಆಗ ಮಾತ್ರ ಕಾಲದ ವೇಗದೊಂದಿಗೆ ನಾವು ಸರಿ ಸಮನಾಗುವ ಪ್ರಯತ್ನದತ್ತ ಹೆಜ್ಜೆ ಹಾಕಬಹುದು.

ಪ್ರತಿಯೊಂದು ವ್ಯಕ್ತಿಯ ಬದುಕಿನಲ್ಲಿ ಸಮಯ ಬಹಳ ಮೌಲ್ಯಯುತವಾದುದು. ಸಮಯದ ಬಗ್ಗೆ ಅರಿವು ಇರಲೇಬೇಕು. ಪೌರಾಣಿಕ ಹಿನ್ನಲೆಯನ್ನು ಒಮ್ಮೆ ನೋಡಿದಾಗ ಅದು ಕೃಷ್ಣ ಮತ್ತು ಅರ್ಜುನರ ಸಂಭಾಷಣೆಯ ಮೂಲಕ ತಿಳಿಯುವುದು.

ಅರ್ಜುನನು ಕೃಷ್ಣನಲ್ಲಿ ಗೋಡೆ ಬರವಣಿಗೆಯಲ್ಲಿ ಸಂತೋಷ – ದುಃಖದ ಪ್ರಶ್ನೆಯನ್ನು ಮುಂದಿಟ್ಟಾಗ ಕೃಷ್ಣನು ಈ ಸಮಯ ಕಳೆದುಹೋಗುತ್ತದೆ ಎಂಬ ಅದ್ಭುತ ವಾಕ್ಯದೊಂದಿಗೆ ಸಮಯದ ಅಮೂಲ್ಯತೆಯನ್ನು ಸಾರಿ ಹೇಳುತ್ತಾನೆ. ಕೃಷ್ಣನ ಕೈಯಲ್ಲಿ ಮೂಡಿದ ಗೋಡೆ ಬರವಣಿಗೆಯು ಇಂದು ಏನನ್ನಾದರೂ ಸಾಧಿಸು ನಾಳೆ ಶಾಶ್ವತವಲ್ಲ ಎಂಬ ಸಂದೇಶವನ್ನು ತಿಳಿಸುವುದು.

ಸಮಯ ಎಂಬುದು ಗೋಡೆ ಮೇಲೆ ನೇತಾಡುವ ಗಡಿಯಾರವಲ್ಲ ನಮ್ಮ ಸಾಧನೆಯ ಯಂತ್ರವೇ ಹೌದು. ಸಾಧನೆಗೆ ಸಮಯ ನೀಡು, ಅದು ನಿನ್ನನು ಗುರಿಯತ್ತ ಸಾಗಿಸುವುದು ಖಂಡಿತ. ಪ್ರಯತ್ನ, ಅಭ್ಯಾಸಕ್ಕೆ ಸಮಯ ನೀಡಿದರೆ ಸಾಧನೆಯ ಮೆಟ್ಟಿಲು ಏರಬಹುದು.

Advertisement

ಕಾಲ ನಿಂತ ನೀರಲ್ಲ ಅದು ಸಾಗಲೇಬೇಕು. ಅದು ಕಾಲನೀತಿ ನಿಯಮ. ಆದರೆ ನಾವು ಕಾಲದೊಂದಿಗೆ ಓಡುತ್ತಿದ್ದರೆ ಮಾತ್ರ ಕನಸುಗಳತ್ತ ಸಾಗುವ ಭರವಸೆ ನಮ್ಮೊಳಗೇ ಚಿಗುರಬಹುದು . ಸಮನಾಗಿ ಸಮಯಕ್ಕೆ ಹೊಂದಿಕೊಂಡು ಸಮಯದ ಹೊಂದಾಣಿಕೆಯ ಅರಿವು ನಮಗೆ ಬಹಳ ಮುಖ್ಯ.

ವೇಗವಾಗಿ ಸಾಗುತ್ತಿರುವ ಕಾಲವನ್ನು ಹಿಡಿದು ನಿಲ್ಲಿಸುವುದು ಅಸಾಧ್ಯ. ಅದರೊಂದಿಗೆ ನಾವು ಹೊಂದಿಕೊಂಡು ಸಾಗುವುದೇ ಜೀವನ. ನಾಳೆ ಎಂಬುದು ನಮ್ಮದಲ್ಲ . ಸಮಯ ಕ್ಷಣಿಕ ನಾಳೆ ಎಂಬುದನ್ನು ಅದು ಕಾಯುವುದಿಲ್ಲ. ಇಂದು ಏನಿದೆ ಅದೇ ವಿಶೇಷ, ಅದೇ ಅದ್ಭುತ.

ಇಂದು ಏನಿದೆ ಅದು ಅಮೂಲ್ಯ. ಅದು ಕಳೆದು ಹೋದರೆ ಮತ್ತೆ ಎಂದಿಗೂ ಮರಳಿಬಾರದು. ನಮ್ಮ ಬದುಕಿನ ಸಾಗರದಲ್ಲಿ ಸಮಯದ ಹಾಗೆಯೇ ಸಂತೋಷ, ದುಃಖವೂ ಕೂಡ. ಇಂದು ಸಂತಸವಿದ್ದರೆ ನಾಳೆ ದುಃಖವಿರಬಹುದು. ಅದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಕಳೆದ ಸಮಯ ಮತ್ತೆ ಬರುವುದಿಲ್ಲ ಎಂದು ತಿಳಿದರೂ ನಾವು ಅಜಾಗರೂಕತೆ, ಆಲಸ್ಯದಿಂದ ಅದನ್ನು ವ್ಯರ್ಥ ಮಾಡುತ್ತೇವೆ. ಆದರೆ ಒಂದೊಂದು ನಿಮಿಷಗಳನ್ನು ವ್ಯರ್ಥ ಮಾಡದೆ ನಮ್ಮ ಗುರಿಗೆ ಅದನ್ನು ಮೀಸಲಿಟ್ಟರೆ ಸಮಯವು ಸಾಧನೆಗೆ ಬಹುದೊಡ್ಡ ಕೊಡುಗೆ ನೀಡಬಹುದು. ಸಮಯ ವ್ಯರ್ಥ ಮಾಡದೆ ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಚಿತ್ತ ಹರಿಸಬೇಕಾಗಿದೆ. ಇದು ಸಾಧನೆಗೆ ದಾರಿಯಾಗುತ್ತದೆ.

-ವಿಜಯಲಕ್ಷ್ಮೀ ಬಿ. ಕೆಯ್ಯೂರು,

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next