Advertisement

Mother: ಜೀವನ ಪಾಠ ಕಲಿಸಿದ ನನ್ನವ್ವ

12:44 PM May 29, 2024 | Team Udayavani |

ಖ್ಯಾತ ತತ್ವಶಾಸ್ತ್ರಜ್ಞ ಹೆನ್ರಿ ವಾರ್ಡ್‌ ಬೀಚರ್‌ ಅವರು “ಆ ದೇವರು ಕಣ್ಣಿಗೆ ಕಾಣಿಸಲ್ಲ. ಈ ಜಗತ್ತಿನಲ್ಲಿ ನಮ್ಮ ತಂದೆ-ತಾಯಿಯರೇ ನಿಜವಾದ ಮತ್ತು ಕಣ್ಣಿಗೆ ಕಾಣಸಿಗುವ ದೈವಶಕ್ತಿಯ ಪ್ರತಿರೂಪ. ಅದಕ್ಕಾಗಿ ಪ್ರತಿಯೊಬ್ಬರು ಜನ್ಮ ನೀಡಿದ ತಂದೆ ತಾಯಿಯನ್ನು ಪ್ರೀತಿಸಿ, ಗೌರವಿಸಿದರೆ ನಾವು ನೈಜದೇವರನ್ನು ಒಲಿಸಿಕೊಂಡಂತೆಯೇ ಸರಿ’ ಎಂದು ಹೇಳಿದ್ದಾರೆ.

Advertisement

ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು, ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ನಮಗಾಗಿಯೇ ತ್ಯಾಗ ಮಾಡಿ ಕುಟುಂಬದ ಸದಸ್ಯರ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ತ್ಯಾಗಜೀವಿ ನನ್ನವ್ವ. ತಾನು ಅಶಿಕ್ಷಿತಳಾಗಿದ್ದರೂ ನಮ್ಮ ಬದುಕಿಗೊಂದು ಶಿಕ್ಷಣ ಆಸರೆಯಾಗಿ ಸ್ವಾವಲಂಭಿಗಳಾಗಬೇಕೆಂಬ ಹೆಬ್ಬಯಕೆ ಆಕೆಯದು.

ಹೊತ್ತು, ಹೆತ್ತು, ಪಾಲನೆ-ಪೋಷಣೆ, ಕಲಿಸಿ-ಬೆಳೆಸಿ, ತಿದ್ದಿ-ತೀಡಿ, ಜೀವನ-ಬದುಕಿನ ಕಲೆ-ನೆಲೆಯನ್ನು ತಿಳಿಸಿಕೊಟ್ಟು ನಮ್ಮಲ್ಲಿ ಜೀವನ-ಮೌಲ್ಯ, ಆದರ್ಶ, ನೈತಿಕತೆ, ಸದ್ಗುಣ, ಸದ್ವಿಚಾರ, ಸನ್ನಡತೆ, ಸಂಸ್ಕೃತಿ-ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಮತ್ತು ಸತ್ಕಾರ್ಯಗಳನ್ನು ಒಡಮೂಡಿಸಿದ ಶ್ರೇಷ್ಠ ಗುರುವೆಂದರೆ ತಾಯಿ. ಅದಕ್ಕಂತಲೇ “ಮನೆಯೇ ಮಂತ್ರಾಲಯ, ತಾಯಿಯೇ ಮೊದಲ ಗುರು’ ಎಂದು ನಂಬಿರುವ ಸಮಾಜ ನಮ್ಮದು.

ಅಮ್ಮ ಎಂಬ ಎರಡಕ್ಷರದಿ ಅಡಗಿದೆ ಜಗದ ಉಸಿರು. ಆಕೆ ಕೇವಲ ಮನೆ ಬೆಳಗುವ ಜ್ಯೋತಿಯಲ್ಲ, ಜಗವ ಬೆಳಗುವ ದಿವ್ಯಜ್ಯೋತಿ ಎಂದರೆ ಅತಿಶಯೋಕ್ತಿಯಾಗದು. ಕೇವಲ ತಾಯಿಯಾಗದೇ, ಮಮತೆಯ ಮಡಿಲು, ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಡದಿಯಾಗಿ, ಮನೆ-ಕುಟುಂಬದ ಎಲ್ಲ ಸದಸ್ಯರಿಗಾಗಿ ಸದಾ ದುಡಿಯುವಳು ಆಕೆ.

ಹೆಣ್ಣು ಮಗುವಿನ ಜನನವಾದರೆ ಕೆಲವರು ಹೆಣ್ಣು ಮನೆಗೆ ಹುಣ್ಣು ಎಂದು ಹೇಳುವವರಿದ್ದಾರೆ. ಆದರೆ ನನ್ನವ್ವ ಎರಡನೆಯವಳಾಗಿ ಹುಟ್ಟಿದ ನನ್ನಕ್ಕಳಿಗೆ ತೋರುತ್ತಿರುವ ಮಮತೆ-ವಾತ್ಸಲ್ಯ ಅಷ್ಟಿಷ್ಟಲ್ಲ. ನಮ್ಮ ಮನೆಗೆ ಭಾಗ್ಯ ಲಕ್ಷ್ಮೀ ಹುಟ್ಟಿ ಬಂದಳೆಂದು ಸಂತೋಷ ನೂರ್ಮಡಿಯಾಗಿತ್ತು. ಅದರಲ್ಲೂ ನನ್ನಕ್ಕಳಿಗೆ ಮದುವೆಯಾದ ಅನಂತರ ಹುಟ್ಟಿದ ಮೊದಲ ಮಗು ಕೂಡ “ಹೆಣ್ಣು’ ಎಂಬ ಯಾವುದೇ ಬೇಸರ ವ್ಯಕ್ತಪಡಿಸಲಿಲ್ಲ. ಎಷ್ಟೇ ಕಷ್ಟದಲ್ಲಿದ್ದರೂ ಸದಾ ನಗುಮುಖವ ತೊಡಿಸಿಕೊಂಡಿದ್ದವಳು. ಬಾಲ್ಯದಿಂದಲೂ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಧೈರ್ಯ ತುಂಬಿ, ಉದಾತ್ತವಾದ ಗುರಿಯನ್ನಿಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಿದ್ದಳು ನನ್ನ ಹಡೆದವ್ವ.

Advertisement

ನಾನು ದ್ವೀತಿಯ ಪಿ.ಯು.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾದಾಗ ಆಕೆಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ರಾತ್ರಿ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಬಿಸಿ ಚಹಾ ಮಾಡಿ ಕುಡಿಸಿದ ನೆನಪುಗಳು ಈಗಲೂ ನನ್ನ ಕಣ್ಮುಂದೆ ಬಂದು ಹೋಗುತ್ತವೆ. ನನ್ನ ಮಗ ಉಪನ್ಯಾಸಕನಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಳು ನನ್ನ ತಾಯಿ. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದರೆ ಮುಂದೊಂದು ದಿನ ಒಳ್ಳೆಯ ದಿನ ಬಂದೇ ಬರುತ್ತದೆ.

ಕೆಳಗೆ ಬಿದ್ದೊರಿಗೆ ಮಾತ್ರ ಮೇಲೆಳುವುದು ಗೊತ್ತಾಗುತ್ತದೆ ಎಂದು ಆತ್ಮಸ್ಥೆçರ್ಯ ತುಂಬುತ್ತಿದ್ದಳು ಆಕೆ. 1998ರಲ್ಲಿ ನನ್ನೂರಿನ ಮತ್ತು ನಾ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದೆ. ಮುಂದೆ 2009ರಲ್ಲಿ ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡಾಗ ಇಡೀ ಊರ ತುಂಬೆಲ್ಲ ಸಿಹಿ ಹಂಚಿ ಸಂಭ್ರಮಿಸಿದ್ದಳು.

ವೃತ್ತಿಯನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳು ನಿನ್ನ ಮಕ್ಕಳಂತೆ ಕಾಣಬೇಕು. ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ಸದಾ ವೃತ್ತಿ ಗೌರವ ಮತ್ತು ಸಾಮಾಜಿಕ ಬದ್ಧತೆಯ ಗುಣಗಳನ್ನು ಕಲಿಸಿದಾಕೆ ನನ್ನವ್ವ.

ನನ್ನ ಮಗ ಕೇವಲ ಶಿಕ್ಷಕನಾಗದೇ ವಿದ್ಯಾರ್ಥಿಗಳ ಭವಿಷ್ಯ ರೂಪಕನಾಗಬೇಕೆಂಬ ಕನಸು ಕಂಡವಳು. ಆಕೆ ಇಂದು ನಮ್ಮ ಜತೆ ಭೌತಿಕವಾಗಿ ಇಲ್ಲವೆಂದರೂ ಆಕೆಯ ಭವಿಷ್ಯತ್ತಿನ ಸ್ಪೂರ್ತಿದಾಯಕ ಕಿವಿಮಾತು, ಸಲಹೆ ಮತ್ತು ತೋರಿದ ಬದುಕಿನ ದಾರಿ ನಮಗೆಲ್ಲ ದಾರಿದೀಪವಾಗಿದೆ. ಇಂದು ಆಕೆಯ ನೆನಪು ಬಂದಾಗ ನನ್ನ ಕಣ್ಣಂಚಿನಲ್ಲಿ ಭಾಷ್ಪಗಳು ನನಗೆ ಗೊತ್ತಿರದ ಹಾಗೆ ಉದುರುತ್ತವೆ.

ಅದಕ್ಕಂತಲೇ ಹಿರಿಯರು ಹೇಳುತ್ತಾರೆ ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಲು ಹಾಗೂ ಎಲ್ಲ ಸಂಕಷ್ಟಗಳಿಂದ ಜನರನ್ನು ಕಾಯಲು ದೇವರಿಗೆ ಆಗದೆಂದು ತಾಯಿ ಎಂಬ ಸ್ವರೂಪದ ದೇವತೆಯನ್ನು ಸೃಷ್ಟಿಸಿದ್ದಾನೆ. ಆದ್ದರಿಂದ ಅಮ್ಮ ಎಂಬ ಪರಮದೈವ ನಮ್ಮ ಜತೆಗಿದ್ದರೆ ಸಮಸ್ಯೆಗಳು ಹತ್ತಿರವೇ ಸುಳಿಯುವುದಿಲ್ಲ.

ಒಂದು ವೇಳೆ ಬಂದರೂ ಅವೆಲ್ಲವುಗಳಿಗೆ ತಾಯಿಯೆಂಬ ಅಗಣಿತ ಶಕ್ತಿದೇವತೆ ಹೊಡೆದೋಡಿಸುವಳು. ತಾಯಿಯಾದವಳು ಪ್ರತಿಯೊಂದು ಮನೆಯಲ್ಲಿ ಸಂಸ್ಕೃತಿ-ಸಂಸ್ಕಾರ, ಮನೆಯ ಪದ್ಧತಿ, ಸಂಪ್ರದಾಯ, ಆಚರಣೆ ಮತ್ತು ಸಾಮಾಜಿಕ-ಧಾರ್ಮಿಕ ವಿಧಿವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ಸರ್ವರಿಗೂ ಆದರ್ಶಪ್ರಾಯಳು.

ನನ್ನ ಮೊದಲ ಆದರ್ಶ ಮೂರ್ತಿ, ಸ್ಪೂರ್ತಿ ಮತ್ತು ಬದುಕು ರೂಪಿಸಿದ ಸಾಕಾರಮೂರ್ತಿ ಎಂದರೆ ನನ್ನವ್ವ. ಅದಕ್ಕಾಗಿ ಪ್ರತಿಯೊಬ್ಬರೂ ದೈವ ಸ್ವರೂಪರಾದ ತಂದೆ-ತಾಯಿಯರನ್ನು ಪ್ರೀತಿ, ಆದರ, ಗೌರವದೊಂದಿಗೆ ಕಾಣುತ್ತಾ ಸಂಸ್ಕಾರದ ಪ್ರತಿಬಿಂಬವಾಗಿರುವ ಅವರನ್ನು ಭಾವ-ಭಕ್ತಿಯಿಂದ ಪೂಜಿಸಬೇಕು ಎನ್ನುವುದೇ ನನ್ನ ಆಶಯ.

-ಮಲ್ಲಪ್ಪ ಸಿ. ಖೊದ್ನಾಪೂರ

ತಿಕೋಟಾ

Advertisement

Udayavani is now on Telegram. Click here to join our channel and stay updated with the latest news.

Next