Advertisement

UV Fusion: ಆಸೆ ಗುಲಾಮನಾಗಿಸಿದರೆ ತಾಳ್ಮೆ ರಾಜನನ್ನಾಗಿಸುತ್ತದೆ

03:06 PM May 29, 2024 | Team Udayavani |

ಎಂದಿನಂತೆ ಸೂರ್ಯ ಕತ್ತಲನ್ನು ಸರಿಸಿ ಬೆಳಕನ್ನು ಚೆಲ್ಲುತ್ತಾ ಭೂಮಿ ಕಡೆಗೆ ಬಂದ. ಭೂಮಿಗೆ ಬಂದ ಸೂರ್ಯ ನಮ್ಮ ಮನೆಗೆ ಬಾರದಿರುವನೇ, ಅವನು ಆಗಲೇ ಮನೆಯ ಮುಂದೆ ಬಂದು ನಿಂತಿದ್ದನು, ಅವನ ಕೇಶರಾಶಿಯಂತಿರುವ ಕಿರಣಗಳು ನನ್ನನ್ನು ಸ್ಪರ್ಶಿಸಿ ಬೆಳಕಿನ ಲೋಕಕ್ಕೆ ಬರ ಮಾಡಿಕೊಂಡವು. ಹಾಸಿಗೆಯಿಂದ ಎದ್ದು ನಾನು ನನ್ನೆಲ್ಲ ನಿತ್ಯ ಕರ್ಮವನ್ನು ಮುಗಿಸಿ ಚಾ ಕುಡಿಯಲೆಂದು ಅಡುಗೆ ಮನೆಯ ಕಡೆ ಪಯಣ ಬೆಳೆಸಿದೆ.

Advertisement

ಬೆಳಗಿನ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ಚಹಾದಿಂದ ನನ್ನ ತುಟಿಗಳಿಗೆ ಶಾಖ ಕೊಡುತ್ತಾ ನನ್ನನ್ನು ನಾನು ನಿದ್ದೆಯಿಂದ ಎಬ್ಬಿಸುತ್ತಿದ್ದೆ. ಆ ಸಮಯದಲ್ಲಿ ಎಲ್ಲೋ ಸ್ವಲ್ಪ ದೂರದಲ್ಲಿ ಮಧುರವಾದ ಧ್ವನಿಯಲ್ಲಿ ಕನ್ನಡ ಚಲನಚಿತ್ರದ ಹಾಡೊಂದು ಕೇಳ ತೊಡಗಿತು. ಓ ನನ್ನ ಜಂಗಮವಾಣಿ ನನ್ನನ್ನು ಕರೆಯುತ್ತಿರುವುದೆಂದು ಅಲ್ಲಿಂದ ಎದ್ದೋಡಿದೆ. ಅಲ್ಲಿ ನೋಡಿದರೆ ನನ್ನ ಸ್ನೇಹಿತ ನನ್ನೊಂದಿಗೆ ಮಾತನಾಡಲು ಕಾತುರದಿಂದ ಕಾದು ನಿಂತು ಕರೆ ಮಾಡಿದ್ದ.

ಹಲೋ ಗೆಳೆಯ ಹೇಳ್ಳೋ ಎಂದೆನು, ಅಲ್ಲಿಂದ ಆತ ಭಾರವಾದ ಧ್ವನಿಯಿಂದ ಅವನಿಗೆ ದೊರೆಯದ ಉದ್ಯೋಗದ ಕಥೆಯನ್ನು ಹೇಳತೊಡಗಿದ. “ನನ್ನಿಂದ ನಗಲು ಆಗುತ್ತಿಲ್ಲ, ಹಾಗಂತ ಅಳಲಾರೆ. ನನ್ನ ಅಕ್ಕ ಪಕ್ಕ ಇರುವವರೆಲ್ಲ ಖುಷಿಯಿಂದ ಇರುವರು. ಅವರನ್ನು ನೋಡಿ ಖುಷಿ ಪಡುವುದೋ, ನನ್ನ ನೋವನ್ನು ನೆನೆದು ಅಳುವುದೋ ತಿಳಿಯುತ್ತಿಲ್ಲ. ಅಕ್ಕ ಪಕ್ಕದವರಿಗೆ ಇರುವ ಖುಷಿ ನನಗೇಕೆ ಇಲ್ಲ. ನಾನೇನು ಅಂತಹ ತಪ್ಪು ಮಾಡಿದೆ. ಅವರೊಟ್ಟಿಗೆ ಅವರಂತೆ ಎಲ್ಲ ಕೆಲಸವನ್ನು ಶ್ರದ್ದೆಯಿಂದ ಮಾಡಿರುವೆ. ಆದರೆ ನಾನು ಆ ಉದ್ಯೋಗಕ್ಕೆ ಅನರ್ಹ ಎಂದರು.’ ಎಂದು ದುಃಖ ಪಡುತ್ತಿದ್ದನು.

ಇಂತಹ ಸಮಯದಲ್ಲಿ ಅವನನ್ನು ಸಮಾಧಾನ ಮಾಡುವ ಜವಾಬ್ದಾರಿ ನನ್ನ ಮೇಲಿತ್ತು. “ಅಯ್ಯೋ ಅದಕ್ಕೆ ಯಾಕೆ ನೊಂದುಕೊಳ್ಳುವೆ, ಜೀವನ ಒಂದು ಗಡಿಯಾರ ಇದ್ದಂತೆ. ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕು. ಹಾಗೆಯೇ ಕಷ್ಟದ ದಿನಗಳು ಕಳೆದ ಮೇಲೆ ಖುಷಿಯ ದಿನಗಳು ಬರುತ್ತವೆ. ನೀನೇಕೆ ನೊಂದುಕೊಳ್ಳುತ್ತಿರುವೆ, ನಿನಗೆ ಕಷ್ಟದ ದಿನಗಳು ಕಳೆದಿವೆ ಎಂದರೆ ಖುಷಿಯ ದಿನಗಳು ಸ್ವಾಗತಿಸುತ್ತಿವೆ ಎಂದು ತಿಳಿದುಕೋ.

ಈ ಕಷ್ಟದ ದಿನಗಳಲ್ಲಿ ನಿನ್ನಿಂದ ಆಗಿರುವ ತಪ್ಪುಗಳನ್ನು ನೀನು ಸರಿಪಡಿಸಿಕೋ ಏಕೆಂದರೆ, ನೀನು ಪ್ರತಿಭಾವಂತ ಮತ್ತು ನಿನಗೆ ಕೊಟ್ಟ ಕೆಲಸವನ್ನು ನೀನು ಶ್ರದ್ಧೆಯಿಂದ ಸಮಯಕ್ಕೆ ಸರಿಯಾಗಿ ಮಾಡಿರಬಹುದು, ಅದು ನಿನಗೆ ಗೊತ್ತು. ನಿನ್ನ ಮೇಲಾಧಿಕಾರಿಗಳಿಗೆ ಅದು ತಿಳಿದು ಬಂದಿಲ್ಲ. ನಿನ್ನನು ನೀನು ಗುರುತಿಸಿಕೊಂಡರೆ ಮಾತ್ರ ಅವರು ನಿನ್ನನ್ನು ಆಯ್ಕೆ ಮಾಡಿಕೊಳ್ಳಬಹುದಲ್ಲವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ.

Advertisement

ನಾವು ನಮಗಾಗಿ ಬದುಕಿದರೆ ನಾವು ಸಂಪಾದಿಸಿರುವುದರಲ್ಲಿ ನಮ್ಮ ಮುಂದಿನ ಜೀವನಕ್ಕೆ ಉಳಿಯುತ್ತದೆ, ಅದೇ ಅಕ್ಕ-ಪಕ್ಕದಲ್ಲಿರುವವರನ್ನು ನೋಡಿ ನಾವು ಬದುಕು ಕಟ್ಟಿಕೊಳ್ಳಲು ಹೋದರೆ ನಮ್ಮ ದುಡಿಮೆಯ ಜತೆಗೆ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ, ಆಸೆ ರಾಜನನ್ನು ಗುಲಾಮನನ್ನಾಗಿಸುತ್ತದೆ, ತಾಳ್ಮೆ ಗುಲಾಮನನ್ನು ರಾಜನನ್ನಾಗಿಸುತ್ತದೆ.

ನಾವು ಮಾಡುವ ಕೆಲಸ ಯಾವುದೇ ಇರಲಿ ಒಳ್ಳೆಯ ಉದ್ದೇಶ ಇರಲಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ, ಯಶಸ್ಸಿಗಾಗಿ ಕಾಯುವ ತಾಳ್ಮೆ ಇರಲಿ, ಇಂದಲ್ಲ ನಾಳೆ ಖುಷಿಯ ದಿನಗಳು ಯಶಸ್ಸಿನೊಂದಿಗೆ ನಿನ್ನತ್ತ ಬರುತ್ತವೆ. ಎಷ್ಟೋ ಸಾಧಕರನ್ನು ಕಂಡಿಲ್ಲವೇ. ಸಾಧನೆ ಎನ್ನುವುದು ತತ್‌ಕ್ಷಣ ಒಳಿಯುವುದಿಲ್ಲ. ಎಷ್ಟೋ ವರ್ಷಗಳ ತಾಳ್ಮೆಯ, ಛಲದ ಪ್ರತಿಫ‌ಲವಾಗಿರುತ್ತದೆ. ನನ್ನ ಗುರಿಯನ್ನು ಸಾಧಿಸುವೆ ಎಂಬ ನಂಬಿಕೆ ಇಟ್ಟು ಪ್ರತೀ ದಿನವೂ ಅದರತ್ತ ನಡೆಯಬೇಕು ಎಂದು ಧೈರ್ಯ ತುಂಬಿದೆ.

ಗೆಳೆಯಾ ಇಲ್ಲಿ ಯಾರೂ ಕಷ್ಟಪಡದೆ ಅಬ್ದುಲ್‌ ಕಲಾಂ, ವಿಶ್ವೇಶ್ವರಯ್ಯ ಆಗಿಲ್ಲ. ಅವರವರ ಜೀವನಕ್ಕೆ ಅವರೇ ನಾಯಕ. ಆದರೆ ಯಾರೂ ಕಷ್ಟ ಪಡುತ್ತಾ ಮೇಲೆ ಬಂದಿದ್ದಾರೋ, ಅವರು ಜಗತ್ತಿಗೆ ನಾಯಕರಾಗಿ ನಿಂತಿದ್ದಾರೆ. ಅವರೇ ನಿಜವಾದ ನಕ್ಷತ್ರ (ರಿಯಲ್‌ ಸ್ಟಾರ್‌) ಆಗಿದ್ದಾರೆ.

ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ…

- ಭರತ್‌ ವಾಸು ನಾಯ್ಕ

ಮಾಳಂಜಿ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next