Advertisement

UV Fusion: ಅಘನಾಶಿನಿ ನಮ್ಮೆಲ್ಲರ ಪಾಪ ವಿನಾಶಿನಿ…

03:21 PM Sep 05, 2024 | Team Udayavani |

ಅಘನಾಶಿನಿ ಎಂಬುದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಒಂದು ಗ್ರಾಮ. ಇಲ್ಲಿ ಹರಿಯುವ ನದಿಯೇ ಅಘನಾಶಿನಿ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಜೀವನಾಡಿಯಾಗಿ  ಪರಂಪರೆ, ಸಂಸ್ಕೃತಿಯನ್ನು ಕಾಪಾಡುತ್ತಿರುವ ದೇವಿಯ ಪ್ರತಿರೂಪವೇ ಈ ಅಘನಾಶಿನಿ ಎಂದರೆ ತಪ್ಪಿಲ್ಲ.

Advertisement

ಅಘನಾಶಿನಿ ನದಿಯನ್ನು ಮೆರ್ಜಿ ನದಿ ಎಂದೂ ಕರೆಯುವುದುಂಟು. ಈ ನದಿಯು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಂಕರ ಹೊಂಡದಲ್ಲಿ ಜನ್ಮತಾಳಿ, ಕುಮಟಾ ತಾಲೂಕಿನಲ್ಲಿರುವ ಅಘನಾಶಿನಿ ಗ್ರಾಮದ ಮೂಲಕ ಒಟ್ಟು 124 ಕಿ.ಮೀ. ದೂರದವರೆಗೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಈ ದಾರಿಯುದ್ದಕ್ಕೂ ಅಘನಾಶಿನಿ ಜತೆಗೆ ದೋಣಿಹಳ್ಳ, ಚಂಡಿಕಾಪುರಾ, ಮಾಸ್ತಿಮನೆ ಹಳ್ಳ, ಬೆಣ್ಣೆಹೊಳೆಗಳು ಕೂಡಿಕೊಳ್ಳುತ್ತವೆ. ಅಘನಾಶಿ ನದಿಯಿಂದ ಉಂಚ್ಚಳಿ ಜಲಪಾತ, ಬುರಡೆ ಜಲಪಾತ, ಬೆಣ್ಣೆ ಹೊಳೆ ಜಲಪಾತಗಳು ಹುಟ್ಟಿಕೊಂಡಿದೆ. ಅದೇ ರೀತಿ ಬೀರಾ, ಹುಲಿಯಪ್ಪ, ಜಾಟಕಪ್ಪಾ ಎಂಬ ದೇವರು ಅಘನಾಶಿಯಿಂದ ಸೃಷ್ಟಿಯಾದ ಕಾಡನ್ನು ಕಾಪಾಡುತ್ತಿದ್ದಾರೆ ಎಂಬ ನಂಬಿಕೆ ಇದೆ.

ಅಘನಾಶಿನಿಯಿಂದ ಸೃಷ್ಟಿಯಾದ ಕಾಡಿನಲ್ಲಿ ಸಿಂಗಳಿಕ್‌ ಎಂಬ ಅಪರೂಪದ ಪ್ರಾಣಿ ಸಂಕುಲವಿದೆ. ಜಗತ್ತಿನ ಅಳಿದುಳಿದಿರುವ ಪ್ರಾಣಿ ಪ್ರಭೇದಗಳಲ್ಲಿ ಈ ಸಿಂಗಳಿಕಗಳೂ ಇದ್ದು, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಅಘನಾಶಿನಿ ಹೊತ್ತಿದ್ದಾಳೆ.

ಅಘನಾಶಿನಿ ನದಿಯ ಮಾರ್ಗದಲ್ಲಿ ಔಗು ಪ್ರದೇಶ, ಕಂಡ್ಲಾ ವನಗಳೂ ಇದ್ದು, ಕಣ್ಣಾಯಿಸಿದಷ್ಟು ದೂರಕ್ಕೆ ಕಾಣುವ ಈ ಕಾಂಡ್ಲಾ ವನವನ್ನು ನೋಡುವುದು ಕೂಡ ಒಂದು ವಿಶಿಷ್ಟ ಬಗೆಯ ಅನುಭವ. ಇನ್ನು ನದಿಯ ಮಾರ್ಗದಲ್ಲಿ ಕಂಡುಬರುವ ಗಜನಿ ಭೂಮಿಯಲ್ಲಿ ಉಪ್ಪು ನೀರಿನಲ್ಲಿ ಬೆಳೆಯಬಹುದಾದ ಕಗ್ಗ ಎಂಬ ಅಪರೂಪದ ಭತ್ತವನ್ನು ಬೆಳೆಯಲಾಗುತ್ತದೆ. ಬೇರೆ ಯಾವ ನದಿ ದಡದಲ್ಲಿಯೂ ಸಣ್ಣಕ್ಕಿಯ ಅಂತಹ ವಿಶಿಷ್ಟ ಪರಿಮಳಯುಕ್ತ ಭತ್ತ ನೋಡಲು ಸಿಗುವುದಿಲ್ಲ.

Advertisement

ಈ ನದಿಯ ಅಳಿವೆ ಪ್ರದೇಶಗಳಲ್ಲಿ ಉಪ್ಪು ತಯಾರಿಕೆ ಸಲುವಾಗಿ 1973ರಲ್ಲಿ ಸರಕಾರವು ಕೈಗಾರಿಕೆ ನಿರ್ಮಾಣಕ್ಕೆ ಕುಷಿಕೋಟೆ, ಮಾದನಗೇರಿ, ವೇತಪುಳಿ ಮುಂತಾದ ಗ್ರಾಮಗಳ ಜನರಿಂದ ಸುಮಾರು 1,848 ಎಕ್ಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ  ಯೋಜನೆ ಸಫ‌ಲವಾಗಲಿಲ್ಲ. ಇದರ ಪರಿಣಾಮ ಸಾವಿರಾರು ಕುಟುಂಬಗಳು ತಮಗೆ ಆಧಾರವಾಗಿದ್ದ ವ್ಯವಸಾಯಕ್ಕೆ ಮೂಲವಾಗಿದ್ದ ಗಜನಿ ಭೂಮಿಯನ್ನು ಕಳೆದುಕೊಳ್ಳುವಂತಾಯಿತು.

ಭತ್ತ ಬೆಳೆದು ಜೀವನ ಸಾಗಿಸುತ್ತಿದ್ದ ಜನರು ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಭೂಮಿಯನ್ನು ಕಳೆದುಕೊಂಡು ಅನಂತರದ ದಿನಗಳಲ್ಲಿ ಮೀನುಗಾರಿಕೆ ಮಾಡಿ ತಮ್ಮ ಜೀವನ ನಡೆಸುವಂತಾಯಿತು. ಇಲ್ಲು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅಘನಾಶಿನಿ ಕಷ್ಟದಲ್ಲಿರುವರಿಗೆ ನೇರವಾಗುತ್ತಲೇ ಬಂದಿದ್ದಾಳೆ ಎಂದರೆ  ತಪ್ಪಾಗಲಾರದು.

ಅಘನಾಶಿನಿಯ ಅಳಿವೆ ಪ್ರದೇಶದಲ್ಲಿ ಚಿಪ್ಪು ಮೀನು ಅಥವಾ ಬಳಚ್ಚು ಮೀನು ಹೆರಲವಾಗಿ ದೊರಕುತ್ತವೆ. ಈ ಬಳಚ್ಚು ಮೀನಿಗೆ ವಿಶ್ವಾದ್ಯಂತ ಉತ್ತಮ ಬೇಡಿಕೆಯಿದೆ. ಮೀನುಗಾರರ ಪಾಲಿಗಂತು ಅಘನಾಶಿನಿ ಅಮೃತಕುಂದವಿದ್ದ ಹಾಗೆ. ಅಘನಾಶಿನಿಯಲ್ಲಿ ಮೀನುಗಾರಿಕೆ, ಕೃಷಿ ಕೈಂಕರ್ಯ ನಂಬಿ 2 ಲಕ್ಷಕ್ಕಿಂತ ಹೆಚ್ಚು ಜನ ಬದುಕು ನಡೆಸುತ್ತಿದ್ದಾರೆ.

ಅಘನಾಶಿನಿಯ ಮಡಿಲಲ್ಲಿ ಹಲವಾರು ಸಮುದಾಯಗಳು ನೆಲೆಸಿದ್ದು ಈ ಪೈಕಿ ಹಾಲಕ್ಕಿ ಸಮುದಾಯ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಘನಾಶಿನಿಯು ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಪೈಕಿ ಅತ್ಯಂತ ಸ್ವತ್ಛವಾದ ನದಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಅಘನಾಶಿನಿ ಕೇವಲ ನದಿಯಲ್ಲ ಅದು ಉತ್ತರ ಕನ್ನಡ ಜಿಲ್ಲೆಯ ಜನರ ಜೀವನಾಡಿ, ಉಸಿರು. ಈ ಭಾಗದ ಜನರನ್ನು ಪೊರೆಯುತ್ತಿರುವ ತಾಯಿ ಅವಳು. ಆದರೆ ಕೆಲವೊಮ್ಮೆ ಅಘನಾಶಿನಿಯೂ ಕೋಪಗೊಳ್ಳುತ್ತಾಳೆ, ಮಳೆ ಹೆಚ್ಚಾದಾಗಲೆಲ್ಲ ತನ್ನ ರೌದ್ರರೂಪವನ್ನು ತೋರಿಸುತ್ತಾಳೆ. ಅಭಿವೃದ್ಧಿ ನೆಪದಲ್ಲಿ ನಮ್ಮ ಸರಕಾರಗಳು ಅಘನಾಶಿನಿ ಹಾಗೂ ನಮ್ಮ ರಾಜ್ಯದಲ್ಲಿ ಹರಿಯುತ್ತಿರುವ ಇತರೆ ನದಿಗಳನ್ನು ತಿರುಗಿಸುವ ಯೋಜನೆಗಳನ್ನು ಜಾರಿ ಮಾಡದೆ, ಬರದ ನಾಡಿಗೆ ನೀರನ್ನು ಒದಗಿಸಲು ಬೇರೆ ಯಾವೆಲ್ಲ ಮಾರ್ಗಗಳು ಲಭ್ಯವಿದೆ ಎಂಬ ಕುರಿತ ಕ್ರಮ ಕೈಗೊಳ್ಳಲಿ ಎಂಬುದೇ ನಮ್ಮ ಆಶಯ. ಅಘನಾಶಿನಿಯಂತಹ ಸುಂದರ ನದಿಯನ್ನು ಹೊಂದಿರುವ ಉ. ಕನ್ನಡ ಜಿಲ್ಲೆಯ ಜನತೆ ನಿಜಕ್ಕೂ ಧನ್ಯರು. ಅಘನಾಶಿನಿ ನಮ್ಮೆಲ್ಲರ ಪಾಪವಿನಾಶನಿ ಅವಳ ರಕ್ಷಣೆ ನಮ್ಮೆಲರ ಹೊಣೆ.

ರೇಣುಕಾಸಂಗಪ್ಪನವರ

ಸಂತ ಅಲೋಶಿಯಸ್‌ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next