Advertisement

Waqf ಒತ್ತುವರಿ ಆಸ್ತಿ ಸಮುದಾಯದ ಏಳ್ಗೆಗೆ ಬಳಕೆ: ಸಚಿವ ಜಮೀರ್

07:20 PM Jun 24, 2024 | Team Udayavani |

ಬೀದರ್ : ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡುವ ಸಲುವಾಗಿಯೇ ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

Advertisement

ನಗರದ ಪಟೇಲ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಕ್ಪ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾವಿರಾರು ಎಕರೆ ವಖ್ಫ್ ಆಸ್ತಿ ಒತ್ತುವರಿ ಆಗಿದ್ದು. ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ 386 ಎಕರೆ ಜಾಮೀನು ಒತ್ತುವರಿದಾರರಿಂದ ತೆರವು ಮಾಡಿ ವಶಕ್ಕೆ ಪಡೆಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ವಕ್ಫ್ ಜಾಗದಲ್ಲಿ ಜಿಲ್ಲೆಗೊಂದು ಆಸ್ಪತ್ರೆ, ಕಾಲೇಜು ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ವಕ್ಫ್ ಆಸ್ತಿ ದೇವರ ಆಸ್ತಿ, ಇದರ ಮೇಲೆ ಕಣ್ಣು ಹಾಕುವುದು ಅಪರಾಧ. ಯಾರೇ ಒತ್ತುವರಿ ಮಾಡಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಸಚಿವ ಜಮೀರ್, ವಕ್ಫ್ ಆಸ್ತಿ ಸಂರಕ್ಷಣೆಗಾಗಿ ಏಕ ರೂಪದ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಮಾದರಿ ಶಾದಿ ಮಹಲ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಮಾತನಾಡಿ, ಜಮೀರ್ ಅವರು ಸಚಿವರಾದ ನಂತರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಅವರ ಕಾಳಜಿ ಮೆಚ್ಚುವಂತದ್ದು. ವಕ್ಫ್ ಜಾಗದಲ್ಲಿ ಜಿಲ್ಲೆಗೊಂದು ಮಹಿಳಾ ಕಾಲೇಜು ಸ್ಥಾಪನೆ ಮಾಡಲು ತೀರ್ಮಾನ ಮಾಡಿದ್ದು ಅದರಲ್ಲಿ ಬೀದರ ಜಿಲ್ಲೆ ಸಹ ಸೇರಿದೆ. ವಖ್ಫ್ ಬೋರ್ಡ್‌ಗೆ ಸಿದ್ದರಾಮಯ್ಯ ಅವರಿಂದ ಸಚಿವರು ಹೆಚ್ಚು ಅನುದಾನ ಕೊಡಿಸಿದ್ದು, ಸಮುದಾಯದ ಸೇವೆಗೆ ಜಿಲ್ಲೆಗೊಂದು ಆಂಬುಲೆನ್ಸ್, ತಾಲೂಕಿಗೆ ಒಂದು ಫ್ರೀಜರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಇಂದಿನ ಅದಾಲತ್‌ನಲ್ಲಿ 178 ಅರ್ಜಿಗಳು ಬಂದಿದ್ದು, ಆ ಪೈಕಿ 50 ಅನುದಾನ ಕೋರಿ,20 ಖಾತೆ ಸಮಸ್ಯೆ,18 ಒತ್ತುವರಿ ಉಳಿದಂತೆ ಖಬರಸ್ಥಾನ ಅಭಿವೃದ್ಧಿಗೆ ಸಂಬಂಧ ಸೇರಿವೆ. ಆದಷ್ಟು ಬೇಗ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Advertisement

ಒತ್ತುವರಿ ವಿರುದ್ಧ ಕ್ರಮ

ಬೀದರನಲ್ಲಿ ವಕ್ಫ್ ವ್ಯಾಪ್ತಿಯಲ್ಲಿ2747 ಸಂಸ್ಥೆಗಳಿದ್ದು, 3822 ವಕ್ಫ್ ಆಸ್ತಿ ಇವೆ.13,295 ಎಕರೆ ಪೈಕಿ 275 ಎಕರೆ ಮಾತ್ರ ನಮ್ಮ ವಶದಲ್ಲಿದೆ. ಉಳಿದದ್ದು ನ್ಯಾಯಾಲಯದಲ್ಲಿ ಕೆಲವು ಪ್ರಕರಣ ಇದ್ದು, ಒತ್ತುವರಿಯೂ ಆಗಿದೆ. ಇಲ್ಲಿನ ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ವಖ್ಫ್ ಅದಾಲತ್ ನಡೆಸುವ ತೀರ್ಮಾನ ಕೈಗೊಂಡ ಒಂದು ವಾರದಲ್ಲಿ ಬೀದರನಲ್ಲಿ 67 ಆಸ್ತಿಗಳ ಖಾತೆ ಮಾಡಿ ಕೊಡಲಾಗಿದೆ. ಉಳಿದ 20 ಆಸ್ತಿಗಳ ಖಾತೆ ವಿಚಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದರು.

ಪ್ರತಿ ತಿಂಗಳು 3 ಜಿಲ್ಲೆಗಳಲ್ಲಿ ಅದಾಲತ್

ವಕ್ಪ್ ಜಮೀನಿನ ಅತಿಕ್ರಮಣ ಮತ್ತು ಖಾತಾ ಸೇರಿ ಇತರೆ ವಿಷಯಗಳ ಕುರಿತು ಅಹವಾಲು ಸ್ವೀಕರಿಸಿ, ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರತಿ ತಿಂಗಳು 3 ಜಿಲ್ಲೆಗಳಲ್ಲಿ ವಕ್ಪ್ ಅದಾಲತ್ ನಡೆಸಲಾಗುವುದು. ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹಜ್ ಭವನಗಳನ್ನು ನಿರ್ಮಿಸಲಾಗುವುದು. ಮುಸ್ಲಿಂ ಸಮುದಾಯದ ಜನರು ಹೆಚ್ವಿರುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದರೆ ಅಲ್ಲಿ ಸರ್ಕಾರಿ ಜಾಗವಿದ್ದರೆ ಅದನ್ನು ಶ್ಮಶಾನ ಭೂಮಿಗೆ ನೀಡಲು ಅವಕಾಶವಿದೆ.

ಪೌರಾಡಳಿತ ಸಚಿವ ರಹೀಮ್ ಖಾನ್, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಮಾತನಾಡಿದರು. ನಗರಸಭೆ ಅಧಕ್ಷ ಮೊಹ್ಮದ್ ಗೌಸ್, ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಮಹ್ಮದ್ ಫಿರೋಜ್ ಖಾನ್, ರಾಜ್ಯ ಸದಸ್ಯ ಯಾಕೂಬ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಸಕ ಜಿಲಾನಿ ಮೊಕಾಶಿ, ಕಾಂಗ್ರೆಸ್ ಮುಖಂಡರಾದ ಅಯಾಜ ಖಾನ್ ಮತ್ತು ಮನ್ನಾನ ಸೇಠ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next