Advertisement

ಸೌಲಭ್ಯ ಕಲ್ಪಿಸಲು ದಂಡ ಶುಲ್ಕ ಬಳಕೆ

12:05 PM Sep 15, 2018 | Team Udayavani |

ಬೆಂಗಳೂರು: ಸಂಚಾರ ವಿಭಾಗದ ಪೊಲೀಸರು ದಂಡದ ಮೂಲಕ ಸಂಗ್ರಹಿಸುವ ಹಣದ ಪೈಕಿ ಸ್ವಲ್ಪ ಭಾಗವನ್ನು ಸರ್ಕಾರದಿಂದ ವಾಪಸ್‌ ಪಡೆದು ಪೊಲೀಸ್‌ ಇಲಾಖೆಯ ಮೂಲ ಸೌಕರ್ಯಕ್ಕೆ ಬಳಸಿಕೊಳ್ಳಲು ಚಿಂತನೆ ನಡೆದಿದೆ.

Advertisement

ಸರ್ಕಾರದಿಂದ ಈ ಹಣ ವಾಪಸ್‌ ಪಡೆಯಬೇಕೆಂದಾದರೆ ಅದಕ್ಕೆ ನಿಯಮಾವಳಿಯಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಹೀಗಾಗಿ ನಿಯಮಾವಳಿ ತಿದ್ದುಪಡಿ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂ ಸಿದ ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಿ ಅದನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಪ್ರತಿ ವರ್ಷ ಕೋಟ್ಯಂತರ ರೂ. ಈ ರೀತಿ ಸಂಗ್ರಹವಾಗಿ ಸರ್ಕಾರದ ಬೊಕ್ಕಸ ಸೇರುತ್ತಿದೆ. ಆದರೆ, ಇದರಲ್ಲಿ ಪೊಲೀಸ್‌ ಇಲಾಖೆಗೆ ಯಾವುದೇ ಪಾಲು ಸಿಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಕಂದಾಯ, ಕಾರ್ಮಿಕ ಸೇರಿದಂತೆ ಸರ್ಕಾರದ ಕೆಲವು ಇಲಾಖೆಗಳಲ್ಲಿ ಶುಲ್ಕ, ದಂಡದ ಮೂಲಕ ಸಂಗ್ರಹಿಸುವ ಹಣದ ಸ್ವಲ್ಪ ಭಾಗವನ್ನು ಸರ್ಕಾರದಿಂದ ಇಲಾಖೆಗೆ ವಾಪಸ್‌ ಪಡೆದುಕೊಳ್ಳುವ ರೀತಿ ಸಂಚಾರ ಪೊಲೀಸರು ಸಂಗ್ರಹಿಸುವ ದಂಡದಲ್ಲಿ ಒಂದು ಪಾಲು ವಾಪಸ್‌ ಪಡೆಯಲು ಯೋಚಿಸಲಾಗುತ್ತಿದೆ.

ಕಂದಾಯ, ಕಾರ್ಮಿಕ ಇಲಾಖೆಗಳಲ್ಲಿ ಬಜೆಟ್‌ನಲ್ಲಿ ಇಲಾಖೆಗೆ ನೀಡುವ ಅನುದಾನದ ಜತೆಗೆ ಆಯಾ ಇಲಾಖೆಗಳು ಸಂಗ್ರಹಿಸುವ ಇತರೆ ಶುಲ್ಕ, ಆದಾಯಗಳಲ್ಲಿ ಶೇ. 1ರಷ್ಟು ಮೊತ್ತವನ್ನು ಇಲಾಖೆಗೆ ವಾಪಸ್‌ ಪಡೆದು ಅದನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶವಿದೆ.

Advertisement

ಆದರೆ, ಈ ಇಲಾಖೆಗಳು ಸಾವಿರಾರು ಕೋಟಿ ರೂ. ಆದಾಯ ಸಂಗ್ರಹಿಸುತ್ತಿರುವುದರಿಂದ ಶೇ. 1ರಷ್ಟು ಮೊತ್ತದಲ್ಲಿ ಬರುವ ಪಾಲು ಸಾಕಷ್ಟಿರುತ್ತದೆ. ಅಲ್ಲದೆ, ಈ ಇಲಾಖೆಗಳಲ್ಲಿ ಪ್ರತಿ ವರ್ಷ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವೂ ಇರುವುದಿಲ್ಲ.

ಆದರೆ, ಪೊಲೀಸ್‌ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚು. ಹಗಲು-ರಾತ್ರಿ ಎನ್ನದೆ ಕೆಲಸ ನಿರ್ವಹಿಸುವುದರ ಜತೆಗೆ ಜನರಿಗೆ ರಕ್ಷಣೆ ಒದಗಿಸುವ ಪೊಲೀಸ್‌ ಕುಟುಂಬಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ಇದುವರೆಗೆ ಸರ್ಕಾರದಿಂದ ಸಾಧ್ಯವಾಗಿಲ್ಲ.

ಅಲ್ಲದೆ, ಪೊಲೀಸರಿಗೆ ಸೂಕ್ತ ವಾಹನ ವ್ಯವಸ್ಥೆ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನೀಡುವ ಅನುದಾನ ಸಾಕಾಗುವುದಿಲ್ಲ. ಹೀಗಾಗಿ ದಂಡದ ರೂಪದಲ್ಲಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಹಣದಲ್ಲಿ ಶೇ.25 ರಿಂದ 30ರಷ್ಟು ಭಾಗವನ್ನು ಪೊಲೀಸ್‌ ಇಲಾಖೆಗೆ ವಾಪಸ್‌ ಪಡೆದು ಅದನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಚಿಂತನೆ ನಡೆಸಿದ್ದಾರೆ.

ಅಲ್ಲದೆ, ಇಲಾಖೆಯಲ್ಲೇ ಒಂದಷ್ಟು ಮೊತ್ತ ಇದ್ದರೆ ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ಈ ಯೋಚನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಂತೆ ಪೊಲೀಸ್‌ ಇಲಾಖೆಯಲ್ಲಿ ಮೂಲ ಸೌಕರ್ಯಕ್ಕೆ ಅಗತ್ಯವಿರುವ ಹಣವೆಷ್ಟು?

ಪೊಲೀಸರು ದಂಡದ ರೂಪದಲ್ಲಿ ಸಂಗ್ರಹಿಸುವ ಹಣದಲ್ಲಿ ಶೇ.25ರಿಂದ 30 ಭಾಗವನ್ನು ವಾಪಸ್‌ ಪಡೆದರೆ ಅದರಿಂದ ವಾರ್ಷಿಕ ಎಷ್ಟು ಹಣ ಇಲಾಖೆಗೆ ಸಿಗಬಹುದು? ಇದನ್ನು ಯಾವ ರೀತಿ ವೆಚ್ಚ ಮಾಡಬಹುದು ಎಂಬಿತ್ಯಾದಿ ಅಂಶಗಳನ್ನೊಳಗೊಂಡ ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಿಕೊಡುವಂತೆ ಸೂಚನೆ ನೀಡಿರುವುದಾಗಿ ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಈ ವರ್ಷ 55 ಕೋಟಿ ರೂ. ಸಂಗ್ರಹ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಾಹನ ಮಾಲೀಕರಿಂದ ದಂಡ ಸಂಗ್ರಹಿಸುತ್ತಿದ್ದು, ವರ್ಷ ಕಳೆದಂತೆ ಈ ಮೊತ್ತ ಹೆಚ್ಚಾಗುತ್ತಲೇ ಇದೆ. ಎರಡು ವರ್ಷದ ಹಿಂದೆ ಸುಮಾರು 90 ಕೋಟಿ ರೂ. ಸಂಗ್ರಹಿಸಿದ್ದ ಪೊಲೀಸರು, ಕಳೆದ ವರ್ಷ 112 ಕೋಟಿ ರೂ. ದಂಡ ಸಂಗ್ರಹಿಸಿದ್ದರು.

2018ರಲ್ಲಿ ಆಗಸ್ಟ್‌ ಅಂತ್ಯದವರೆಗೆ 54 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ 55 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಇದರಲ್ಲಿ ಸ್ವಲ್ಪ ಭಾಗ ಇಲಾಖೆಗೆ ವಾಪಸ್‌ ಬಂದರೆ ಅದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಗೃಹ ಸಚಿವರ ಸೂಚನೆಯಂತೆ ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

* ಮೋಹನ್‌ ಭದ್ರಾವತಿ 

Advertisement

Udayavani is now on Telegram. Click here to join our channel and stay updated with the latest news.

Next