Advertisement

UPSC: 646ನೇ ರ‍್ಯಾಂಕ್ ಪಡೆದ ರಮೇಶ್ ಗುಮಗೇರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿನಂದನೆ

02:03 PM Aug 05, 2020 | Mithun PG |

ಬೆಂಗಳೂರು: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಕಡು ಬಡತನ ಕೃಷಿ ಕೂಲಿಕಾರ್ಮಿಕ ಕುಟುಂಬದಲ್ಲಿ ಜನಿಸಿದ   ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೀ ರಮೇಶ್ ಗುಮಗೇರಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 646ನೇ ಸ್ಥಾನವನ್ನು ಮುಡಿಗೇರಿಸಿಕೊಂಡು  ಕ್ರೈಸ್ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಯಮುನಪ್ಪ ಹಾಗೂ ಹುಲಿಗೆಮ್ಮ ಎಂಬ ರೈತ ದಂಪತಿಯ 3 ನೇ ಪುತ್ರರಾದ ಇವರು ಉತ್ತಮ ವ್ಯಾಸಂಗಕ್ಕಾಗಿ 2001-02 ನೇ ಸಾಲಿನಲ್ಲಿ 5 ನೇ ತರಗತಿಗೆ ನೀಡಶೇಸಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಪಡೆದು, 10 ನೇ ತರಗತಿಯವರೆಗೆ ವ್ಯಾಸಂಗ ಮಾಡಿ, ವಸತಿ ಶಾಲೆಯ ಗುಣಮಟ್ಟದ ಶಿಕ್ಷಣದ ಫಲವಾಗಿ  2006-07 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 89 ರಷ್ಟು ಅಂಕ ಪಡೆದು ಅತೀ ಹೆಚ್ಚು ಅಂಕಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನಗಳಿಸಿದ್ದರು.   ವಸತಿ ಶಾಲೆಯಲ್ಲಿದ್ದ ಗುಣಮಟ್ಟದ ಶಿಕ್ಷಣ ಪಡೆದು,  ಅಖಿಲ ಭಾರತ ಸೇವಾಧಿಕಾರಿಯಾಗಲು ಕನಸನ್ನು ಹೊಂದಿ, ಪೂರಕವಾಗಿ ಅಧ್ಯಯನ  ನಡೆಸುತ್ತಿದ್ದರು.

ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ  ಪದವಿ ಪಡೆದ ನಂತರ, ಇವರ ಪ್ರತಿಭೆಯನ್ನು ಗುರುತಿಸಿದ  ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರವು  ಇವರಿಗೆ  2015ರಲ್ಲಿ ದೆಹಲಿಯ ಪ್ರತಿಷ್ಠತಿ ತರಬೇತಿ ಸಂಸ್ಥೆ ವತಿಯಿಂದ ಉಚಿತವಾಗಿ  ಯುಪಿಎಸ್‍ಸಿ ತರಬೇತಿ ಕೊಡಿಸಲಾಯಿತು.

ಇವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಉಪಮುಖ್ಯಮಂತ್ರಿಗಳು, ಅಧ್ಯಯನ, ಪೂರ್ವ ತಯಾರಿ ಕುರಿತು ಚರ್ಚಿಸಿ, ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.  ವಸತಿ ಶಾಲೆಗಳ  ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿ, ವಿಶೇಷ ಅತಿಥಿ ಉಪನ್ಯಾಸಕರಾಗಿ ಆಗಾಗ್ಗೆ  ವಸತಿ  ಶಾಲೆಗಳಿಗೆ ಭೇಟಿ ನೀಡಿ,  ಎಲ್ಲಾ ವಿದ್ಯಾರ್ಥಿಗಳಲ್ಲಿ  ಅಖಿಲ ಭಾರತ ಸೇವೆಯ ಕನಸನ್ನು ಮೂಡಿಸಿ, ಪೂರ್ವ ಸಿದ್ದತೆಕೈಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಅವರಿಗೆ  ಡಿಸಿಎಂ ತಿಳಿಸಿದರು.

ವಸತಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಪೂರ್ವ ತರಬೇತಿಗೆ ಪೂರಕವಾದ ವಾತವರಣ, ಉಚಿತವಾಗಿ ಊಟ, ವಸತಿ, ಬಟ್ಟೆ, ನೋಟ್ ಪುಸ್ತಕಗಳು, ಪಠ್ಯಪುಸ್ತಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು  ಕ್ರೈಸ್ ನೀಡುವುದರ ಜೊತೆಗೆ ಗುರುಕುಲ ಮಾದರಿಯ  ಪೂರಕ ವಾತವರಣವನ್ನು ಕಲ್ಪಿಸಿದೆ. ಬಡತನ, ಸಂಕಷ್ಟ, ಗ್ರಾಮೀಣ ಪ್ರದೇಶ, ಸೌಲಭ್ಯಗಳ ಕೊರತೆ ಎನ್ನುವುದನ್ನು ಮೀರಿ, ಅಖಿಲ ಭಾರತ ಸೇವೆಗೆ ಆಯ್ಕೆಯಾಗಲು ಕ್ರೈಸ್ ಕಾರಣವಾಗಿದೆ. ಈ ವಸತಿ ಶಿಕ್ಷಣ ಸಂಸ್ಥೆಗೆ ಅಭಾರಿಯಾಗಿದ್ದೇನೆ. ಕ್ರೈಸ್‍ಗೆ  ಅತಿಥಿ ಉಪನ್ಯಾಸಕನಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸದಾ ಸಿದ್ದರಿರುವುದಾಗಿ ತಿಳಿಸಿದ ರಮೇಶ್ ಗುಮಗೇರಿ,  ತಾವು ಪಡೆದ ಸ್ಥಾನಕ್ಕೆ ಐಎಎಸ್  ದೊರಕುವ ಸಂಭವವಿದೆ ಎಂದು ಹರ್ಷವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next