Advertisement

ಮೆಸ್ಕಾಂ ಮೇಲ್ದರ್ಜೆಗೇರಿದ್ದರೂ ಸೇವೆ ಕಳಪೆ!

02:30 AM Jul 26, 2018 | Team Udayavani |

ಉಪ್ಪಿನಂಗಡಿ: ಉಪ್ಪಿನಂಗಡಿ ಮೆಸ್ಕಾಂ ಶಾಖಾ ಕಚೇರಿ ಮೇಲ್ದರ್ಜೆಗೆ ಏರಿದೆ. ಜೆ.ಇ. ಹುದ್ದೆ ಎ.ಇ. ಹುದ್ದೆ ಆಗಿದೆ. ಆದರೆ ಇಲ್ಲಿ ಈ ಹಿಂದೆ ಸಾರ್ವಜನಿಕರಿಗೆ ಸಿಗುತ್ತಿದ್ದ ಸೇವೆಗಳು ಮಾತ್ರ ಕೆಳದರ್ಜೆಗೆ ಇಳಿದಿದೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮೆಸ್ಕಾಂ ಸಮಸ್ಯೆಗಳ ಕುರಿತು ಸದಸ್ಯರಾದ ಯು.ಕೆ. ಇಬ್ರಾಹಿಂ, ಗೋಪಾಲ ಹೆಗ್ಡೆ, ರಮೇಶ್‌ ಭಂಡಾರಿ ಹಾಗೂ ಸುರೇಶ್‌ ಅತ್ರಮಜಲು, ಚಂದ್ರಶೇಖರ ಮಡಿವಾಳ ಮೊದಲಾದವರು ವಿಷಯ ಪ್ರಸ್ತಾವಿಸಿದರು. ಈ ಹಿಂದೆ ಇದ್ದ ಜೂನಿಯರ್‌ ಎಂಜಿನಿಯರ್‌ ಅವರು ವರ್ಗಾವಣೆಯಾದ ಬಳಿಕ ಇಲ್ಲಿ ಸಮಸ್ಯೆಗಳೇ ತಾಂಡವಾಡುತ್ತಿದೆ. ನಿರಂತರ ವಿದ್ಯುತ್‌ ಕೈಕೊಡುತ್ತಿದೆ. ಅಧಿಕಾರಿಗಳಿ ನಿಷ್ಕ್ರಿಯರಾಗಿದ್ದಾರೆ. ಹಿಂದಿನ ಅಧಿಕಾರಿ ಸುಂದರ್‌ ಅವರನ್ನೇ ಇಲ್ಲಿಗೆ ಮತ್ತೆ ನಿಯೋಜನೆ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಉಪ್ಪಿನಂಗಡಿಯಲ್ಲಿ ಸುಂದರ್‌ ಮತ್ತು ಶೇಷಪ್ಪ ಪೂಜಾರಿಯವರು ಮೆಸ್ಕಾಂನಲ್ಲಿ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಸಿಬಂದಿಗಳೊಂದಿಗೆ ಸೇರಿಕೊಂಡು ಅವರು ಕೆಲಸ ಮಾಡುತ್ತಿದ್ದರು. ಆದರೆ ಈಗ ಎಲ್ಲರೂ ನಿಷ್ಕ್ರಿಯರಾದಂತಿದ್ದಾರೆ. ಗ್ರಾ.ಪಂ.ಗೆ ಒತ್ತಡ ತಂದು ಜೀಪಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೀಗಿದ್ದರೂ ಕಾರ್ಯ ಸುಲಲಿತವಾಗಿಲ್ಲ. ಮೆಸ್ಕಾಂ ಕಚೇರಿಯಲ್ಲಿ ಹಾಗೂ ಅಧಿಕಾರಿಗಳು ಕರೆಯನ್ನೂ ಸ್ವೀಕರಿಸುತ್ತಿಲ್ಲ. ಹೀಗೆ ಮೆಸ್ಕಾಂಗೆ ಸಂಬಂಧಿಸಿ ಇನ್ನಿತರ ಹಲವು ವಿಷಯಗಳು ಚರ್ಚೆಗೆ ಬಂದವು. ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಹಿಂದೆ ಇದ್ದ ಸುಂದರ್‌ ಅವರನ್ನು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಕಚೇರಿಗೆ ನಿಯೋಜನೆ ಮಾಡುವಂತೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಏಕಮುಖ ರಸ್ತೆ ನಿರ್ಣಯಕ್ಕೆ ಆಕ್ಷೇಪ
ಬ್ಯಾಂಕ್‌ ರಸ್ತೆ ಏಕಮುಖ ರಸ್ತೆ ಮಾಡುವ ಸರ್ವಾನುಮತದ ನಿರ್ಣಯಕ್ಕೆ ನನ್ನ ಆಕ್ಷೇಪ ಇದೆ ಎಂದು ಸದಸ್ಯ ಯು.ಟಿ. ತೌಸೀಫ್ ಹೇಳಿದರು. ಆಕ್ಷೇಪ ದಾಖಲಿಸಿ. ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸದಸ್ಯ ಸುರೇಶ್‌ ಅತ್ರಮಜಲು ತಿಳಿಸಿದರು. ಸದಸ್ಯ ಗೋಪಾಲ ಹೆಗ್ಡೆ ಮಾತನಾಡಿ, ಬ್ಯಾಂಕ್‌ ರಸ್ತೆಯಲ್ಲಿ ಟ್ರಾಫಿಕ್‌ ಬ್ಲಾಕ್‌ ಆಗುತ್ತಿದೆ. ಜನರು, ವಿದ್ಯಾರ್ಥಿಗಳು ಭಯದಿಂದ ನಡೆದಾಡುತ್ತಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಣಯ ಮಾಡಿರುವುದು. ನಮಗೆ ವರ್ತಕರಷ್ಟೇ ಮುಖ್ಯ ಸಾರ್ವಜನಿಕರು. ವರ್ತಕರು ಗ್ರಾ.ಪಂ. ವಿರುದ್ಧ ಕೋರ್ಟು ಮೊರೆ ಹೋಗುತ್ತೇವೆ ಎಂದಿದ್ದಾರೆ. ಕೆಲವರು ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವುದೂ ನಮಗೆ ತಿಳಿದಿದೆ. ನಾವೂ ಕೋರ್ಟ್‌ಗೆ ಹೋಗುತ್ತೇವೆ ಎಂದು ಹೇಳಿದ ಅವರು, ಹಳೆ ಬಸ್ಸು ನಿಲ್ದಾಣದ ಬಳಿ ಬಟ್ಟೆ ಅಂಗಡಿ ಕೆಡವಿ ಕಾಮಗಾರಿ ನಡೆಸಲಾಗುತ್ತಿದ್ದು, ಅದರ ಜಲ್ಲಿ, ಮರಳು ರಾಶಿ ರಸ್ತೆಯಲ್ಲೇ ಇದೆ. ಇದನ್ನು ತತ್‌ ಕ್ಷಣ ತೆರವು ಮಾಡಿ ರಸ್ತೆಯನ್ನು ಬಿಟ್ಟುಕೊಡಬೇಕು. ಅವರಿಗೆ ನೊಟೀಸು ಜಾರಿಗೊಳಿಸಿ ಎಂದರು.

ವರ್ತಕರಿಂದಲೇ ತೊಂದರೆ!
ಸುರೇಶ್‌ ಅತ್ರಮಜಲು ಮಾತನಾಡಿ, ಮೂರು ವರ್ಷಗಳಿಂದ ಬ್ಯಾಂಕ್‌ ರಸ್ತೆಯಲ್ಲಿ ಎದುರಾಗುವ ಸಮಸ್ಯೆ ಬಗ್ಗೆ ಹಲವು ಸಭೆ ಕರೆಯಲಾಗಿದೆ. ಕೆಲ ವರ್ತಕರು ತಮ್ಮ ಅಂಗಡಿಗೆ ಬರುವವರಿಗೆ ಎಲ್ಲಿ ವಾಹನ ನಿಲ್ಲಿಸಬೇಕು ಎನ್ನುವ ಮಾಹಿತಿ ನೀಡದ ಕಾರಣ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಕಠಿನ ನಿಲುವು ತೆಗೆದುಕೊಳ್ಳಬೇಕು ಎಂದರು. ಸುನಿಲ್‌ ದಡ್ಡು ಮಾತನಾಡಿ, ಕೆಲವೊಂದು ಅನಧಿಕೃತ ಅಂಗಡಿಗಳು, ವರ್ತಕರ ವಿಸ್ತರಣೆ ತೆರವು ಮಾಡಿ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂದರು.

Advertisement

ಮಾಲ್‌ ಕಟ್ಟಡವೊಂದರ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದರ ಕಬ್ಬಣ, ಜಲ್ಲಿ, ಮರಳುಗಳನ್ನು ಕಂದಾಯ ಇಲಾಖೆ ಜಾಗದೊಳಗೆ ಹಾಕಲಾಗಿದೆ. ಇಲ್ಲಿ ಇದ್ದ ಚರಂಡಿಯನ್ನು ಬಂದ್‌ ಮಾಡಲಾಗಿದೆ. ಆ ಪರಿಸರ ಸೊಳ್ಳೆ ಉತ್ಪಾದನ ಕೇಂದ್ರವಾಗಿ ಮಾರ್ಪಾಡು ಹೊಂದಿದೆ. ತತ್‌ ಕ್ಷಣ ಅವುಗಳನ್ನು ತೆರವು ಮಾಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಉಪಾಧ್ಯಕ್ಷೆ ಹೇಮಲತಾ, ಸದಸ್ಯರುಗಳಾದ ಉಮೇಶ್‌ ಗೌಡ, ವಿನಾಯಕ ಪೈ, ಚಂದ್ರಾವತಿ ಹೆಗ್ಡೆ, ಕವಿತಾ, ಸುಂದರಿ, ಚಂದ್ರಾವತಿ, ಯೋಗಿನಿ, ಜಮೀಳಾ, ಸುಶೀಲಾ, ಝರೀನಾ ಉಪಸ್ಥಿತರಿದ್ದರು.ಗ್ರಾ.ಪಂ. ಕಾರ್ಯದರ್ಶಿ ಮರಿಯಮ್ಮ ಸ್ವಾಗತಿಸಿ, ಜ್ಯೋತಿ ವಂದಿಸಿ ದರು. ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ಗಾಯತ್ರಿ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರಾದ ಹೇಮಲತಾ, ನಳಿನಿ, ಯಶೋಧಾ, ವನಿತಾ ಹಾಜರಿದ್ದರು.

ಶೈಕ್ಷಣಿಕ ಸಾಲ ಕಟ್ಟಲಾಗದೆ ತೊಂದರೆ – ನಿರ್ಣಯ
ಗ್ರಾಮೀಣ ಮಹಿಳೆಯರು ಸ್ತ್ರೀ ಶಕ್ತಿ ಗುಂಪುಗಳಿಂದ ಸಾಲ ಪಡೆದು ಜೀವನ ಸಾಗಿಸುತ್ತಿದ್ದಾರೆ. ಆದರೆ ಆರ್ಥಿಕ ಮುಗ್ಗಟ್ಟುನಿಂದಾಗಿ ಸಾಲ ತೀರಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಗೆ ಅರಿವು ಸಾಲ ಮೊದಲಾದ ಶೈಕ್ಷ ಣಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಾಡಿಕೊಂಡಿದ್ದಾರೆ. ಶಿಕ್ಷಣ ಪೂರ್ಣಗೊಂಡಿದ್ದರೂ ಉದ್ಯೋಗ ಸಿಗದ ಕಾರಣ ಬ್ಯಾಂಕ್‌ ಸಾಲ ಮರುಪಾವತಿ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಬ್ಯಾಂಕಿನವರು ಮಾತ್ರ ಸಾಲ ಕಟ್ಟಲು ಅವರಿಗೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಶಕ್ತಿ ಗುಂಪು ಸಾಲ ಮತ್ತು ಶಿಕ್ಷಣ ಸಾಲವನ್ನು ಮನ್ನಾ ಮಾಡುವಂತೆ ಸರಕಾರವನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸುವಂತೆ ಸದಸ್ಯೆ ಭಾರತಿ ಅವರು ಆಗ್ರಹಿಸಿದರು. ಈ ವಿಷಯದ ನಿರ್ಣಯ ಅಂಗೀಕರಿಸಲಾಯಿತು.

ಪಿಡಿಒಗೆ ಡೆಂಗ್ಯೂ
ಉಪ್ಪಿನಂಗಡಿ ಪೊಲೀಸ್‌ ಠಾಣಾ ನೂತನ ಕಟ್ಟಡಕ್ಕೆ ಗುಂಡಿ ತೋಡಿ ಇಡಲಾಗಿದೆ. ಇಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ. ಸನಿಹದಲ್ಲೇ ಇರುವ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಡೆಂಗ್ಯೂ ಜ್ವರ ಪೀಡಿತರಾಗಿದ್ದಾರೆ. ಉಪ್ಪಿನಂಗಡಿ ಪರಿಸರದಲ್ಲಿ ಹಲವು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಸಭೆಯಲ್ಲಿ ಚರ್ಚೆಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next