Advertisement

ಕೆಲಸ ಕಳೆದುಕೊಂಡು ಕೆಲಸ ಮಾಡಿದ್ದರವರೆಗೆ…

11:06 AM Jan 02, 2018 | Team Udayavani |

ನಿರ್ದೇಶಕ ಆರ್‌.ಚಂದ್ರು ಹಾಗೂ “ದುನಿಯಾ’ ವಿಜಯ್‌ ಈಗ “ಕನಕ’ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತಿದೆ. ಆದರೆ, ಈ ಇಬ್ಬರು 2003ರಲ್ಲೂ ಜೊತೆಯಾಗಿ ಕೆಲಸ ಮಾಡಿದ್ದರು ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. 2003ರಲ್ಲಿ ಚಂದ್ರು ಹಾಗೂ ವಿಜಯ್‌ ಒಟ್ಟಿಗೆ ಧಾರಾವಾಹಿಯೊಂದರಲ್ಲಿ ಕೆಲಸ ಮಾಡಿದ್ದರು. ಅದರ ಎಫೆಕ್ಟ್ ಹೇಗಿತ್ತೆಂದರೆ ಅಂದು ಆರ್‌. ಚಂದ್ರು ಕೆಲಸವೇ ಕಳೆದುಕೊಂಡಿದ್ದರು!

Advertisement

ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. 2003ರಲ್ಲಿ ಆರ್‌. ಚಂದ್ರು ಧಾರಾವಾಹಿಯೊಂದರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ವಿಜಯ್‌ ಕೂಡಾ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ದಿನ ಅದು. ಇನ್ನೂ “ದುನಿಯಾ’ ಬಂದಿರಲಿಲ್ಲ. ಸಹಜವಾಗಿಯೇ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ದಿನಗಳು. ಸಣ್ಣಪುಟ್ಟ ಪಾತ್ರಗಳಿಗೂ ತೃಪ್ತಿ ಪಡಬೇಕಾದ ದಿನಗಳಲ್ಲೂ ವಿಜಯ್‌ ತಮ್ಮ ಪ್ರತಿಭೆ ತೋರಿಸುತ್ತಿದ್ದರು.

ಹೀಗಿರುವಾಗ ಚಂದ್ರು ಸಹಾಯಕ ನಿರ್ದೇಶಕರಾಗಿದ್ದ ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರವಿತ್ತು. ಚಂದ್ರುಗೆ ವಿಜಯ್‌ ಪರಿಚಯವಿದ್ದ ಕಾರಣ, ಅದನ್ನು ಅವರಿಂದ ಮಾಡಿಸಿಬಿಟ್ಟಿದ್ದಾರೆ. ಆದರೆ, ಆ ಚಿತ್ರದ ನಿರ್ದೇಶಕರಿಗೆ ಅದನ್ನು ಬೇರೆಯರಿಂದ ಮಾಡಿಸಬೇಕೆಂಬ ಆಸೆ ಇತ್ತಂತೆ. ಚಂದ್ರು, ವಿಜಯ್‌ ಅವರಿಂದ ಮಾಡಿಸಿ ಕಳುಹಿಸಿದ್ದರಿಂದ ಸಿಟ್ಟಾದ ನಿರ್ದೇಶಕರು, ಚಂದ್ರು ಅವರನ್ನು ಕೆಲಸದಿಂದ ಕಿತ್ತು ಹಾಕುತ್ತಾರೆ.

ಇದು ಅಂದಿನ ಕಥೆ. ಈಗ ಚಂದ್ರು ನಿರ್ದೇಶಕರಾಗಿ, ನಿರ್ಮಾಪಕರಾಗಿ ಬೆಳೆದಿದ್ದಾರೆ. ಈಗ ವಿಜಯ್‌ ಜೊತೆ ಸಿನಿಮಾ ಕೂಡಾ ಮಾಡಿದ್ದಾರೆ. ಅಂದಹಾಗೆ, ಈ ಫ್ಲ್ಯಾಶ್‌ಬ್ಯಾಕ್‌ಗೆ ಕಾರಣವಾಗಿದ್ದು, ಇತ್ತೀಚೆಗೆ ನಡೆದ “ಕನಕ’ ಟ್ರೇಲರ್‌ ಬಿಡುಗಡೆ. ಟ್ರೇಲರ್‌ ಬಿಡುಗಡೆಯಲ್ಲಿ ಕೆ.ಪಿ.ನಂಜುಂಡಿಯವರು ಚಂದ್ರು ಅವರ ಆರಂಭದ ದಿನಗಳನ್ನು ನೆನಪಿಸಿಕೊಂಡರು. ಅಂದು ಆ ಧಾರಾವಾಹಿಯಲ್ಲಿ ಕೆ.ಪಿ.ನಂಜುಂಡಿ ಕೂಡಾ ಪ್ರಮುಖ ಪಾತ್ರ ಮಾಡಿದ್ದರು.

ಚಂದ್ರು ಅವರನ್ನು ನಿರ್ದೇಶಕರು ಕೆಲಸದಿಂದ ತೆಗೆದು ಹಾಕಿದ ವಿಷಯ ಕೇಳಿ ಬೇಸರಗೊಂಡ ನಂಜುಂಡಿ, ಮತ್ತೆ ಅದೇ ಧಾರಾವಾಹಿಯಲ್ಲಿ ಚಂದ್ರು ಅವರಿಗೆ ಕೆಲಸ ಕೊಡಿಸುತ್ತಾರೆ. “ನಾನು ಈ ಧಾರಾವಾಹಿಯಲ್ಲಿ ನಟಿಸಬೇಕಾದರೆ, ಆ ಹುಡುಗ ಇರಬೇಕು’ ಎನ್ನುವ ಮೂಲಕ ಮತ್ತೆ ಅದೇ ಧಾರಾವಾಹಿಯಲ್ಲಿ ಚಂದ್ರು ಮುಂದುವರೆಯುತ್ತಾರೆ. ಹೀಗೆ “ಕನಕ’ ಚಿತ್ರದ ಟ್ರೇಲರ್‌ ಬಿಡುಗಡೆಯ ವೇದಿಕೆ ಆರ್‌.ಚಂದ್ರು ಹಾಗೂ ವಿಜಯ್‌ ಅವರ ಫ್ಲ್ಯಾಶ್‌ಬ್ಯಾಕ್‌ಗೆ ಕಾರಣವಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next