Advertisement

ರಾಜಕಾರಣದಲ್ಲಿ ಪಕ್ಷಾತೀತ, ಜಾತ್ಯತೀತ ಕುಚುಕು ಗೆಳೆಯ

11:40 AM Nov 25, 2018 | |

ಬೆಂಗಳೂರು: ಚಲನಚಿತ್ರರಂಗವಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ರೆಬಲ್‌ ಸ್ಟಾರ್‌ ಅಂಬರೀಷ್‌  ರಾಜ್ಯ ಕಂಡ ವಿಶಿಷ್ಟ ರಾಜಕಾರಣಿಯೂ ಹೌದು. ಅದು ಮುಖ್ಯಮಂತ್ರಿಯೇ ಆಗಿರಲಿ, ಕೇಂದ್ರ ಸಚಿವರೇ  ಆಗಿರಲಿ ಅತಿ ಸಲುಗೆಯಿಂದ ಮಾತನಾಡುವ “ಹಕ್ಕು’ ಹಾಗೂ “ಅಧಿಕಾರ’ ಹೊಂದಿದ್ದ ಅಂಬರೀಷ್‌ ರಾಜಕೀಯ ವಲಯದಲ್ಲಿ ಜಾತ್ಯತೀತವಾಗಿ ಅತ್ಯಂತ ದೊಡ್ಡ “ಕುಚುಕು’ ಗೆಳೆಯರ ಬಳಗವನ್ನೇ ಹೊಂದಿದ್ದರು.

Advertisement

ಅದು ವಿಧಾನಸೌಧ ಇರಲಿ, ರಾಜಕೀಯ ನಾಯಕರ ಔತಣಕೂಟವಿರಲಿ ಅಂಬರೀಷ್‌ ಪ್ರವೇಶ ಆಯ್ತು ಅಂದರೆ “ಹೊಯ್‌ ಏನೋ……ಬಡ್ಡೆ„ತದೆ….ಆಯ್ತು ಸುಮ್ಕಿರಪ್ಪ…. ನಿಮ್ದೆಲ್ಲಾ ನೋಡಿದ್ದೀವಿ….ಓ….ಬಾ ಇಲ್ಲಿ….ಹೀಗೆ ಮಾತನಾಡುವ ಹಾಗೂ ತಾನು ಮಾತನಾಡಿದ್ದನ್ನು ಅರಗಿಸಿಕೊಳ್ಳುವ “ಧಮ್‌’ ಇದ್ದವರು ಅಂಬರೀಷ್‌. ಅಂಬರೀಷ್‌ ಮನಸ್ಸು ಮಾಡಿದರೆ ರಾಜ್ಯದ ಮುಖ್ಯಮಂತ್ರಿ “ಮೆಟೀರಿಯಲ್‌’ ಆಗಬಹುದಿತ್ತು.

ಜಾತಿ , ಸಿನಿಮಾ ವರ್ಚಸ್ಸು, ಸಮೂಹ ಸೆಳೆಯುವ ತಾಕತ್ತು ಎಲ್ಲವೂ ಇದ್ದ ಅಂಬರೀಷ್‌ಗೆ ರಾಜಕೀಯದಲ್ಲಿ ಮಹತ್ವಾಕಾಂಕ್ಷೆ  ಇರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿ ಬಂದಿದ್ದನ್ನೆಲ್ಲಾ ಎದುರಿಸುತ್ತಲೇ ಹೋದರು. ರಾಮನಗರ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಸೋಲು ಅನುಭವಿಸಿದರೂ ಎದೆಗುಂದದರೆ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರ ಆಯ್ಕೆ ಮಾಡಿಕೊಂಡು ಸತತ ಮೂರು ಬಾರಿ ಗೆಲುವು ಸಾಧಿಸಿದರು.

ಅಂಬರೀಷ್‌ ಜನತಾದಳ ಆ ನಂತರ ಕಾಂಗ್ರೆಸ್‌ ಸೇರಿದರೂ ಪಕ್ಷ ನೆಪ ಮಾತ್ರ. ಅವರನ್ನು ಪಕ್ಷದಿಂದ ಯಾರೂ ಗುರುತಿಸುತ್ತಿರಲಿಲ್ಲ. ಅವರದೇ ಆದ ಐಡೆಂಟಿಟಿ ಇದ್ದ ಕಾರಣ ರಾಜಕೀಯ ಪಕ್ಷಗಳು ಅಂಬರೀಷ್‌ ಬೇಕು ಎಂದು ಬಯಸುತ್ತಿದ್ದವರು. ಹೀಗಾಗಿ, ಅಂಬರೀಷ್‌ ಮತ ತಂದುಕೊಡಬಲ್ಲ ಮಾಸ್‌ ಪುಲ್ಲರ್‌ ಆಗಿದ್ದರು. ಅಂಬರೀಷ್‌ ರಾಜಕೀಯ ಪ್ರವೇಶಿಸಿದ ನಂತರವೂ ಅಧಿಕಾರ ಅನುಭವಿಸಿದ್ದು ತೀರಾ ಕಡಿಮೆ.

ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದರೂ ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಟ್ಟು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿದ್ದರು. ಲೋಕಸಭೆ ಸಹವಾಸ ಸಾಕು ಎಂದು ವಿಧಾನಸಭೆಯತ್ತ ಚಿತ್ತ ಹರಿಸಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ 2008 ರಲ್ಲಿ ಸೋಲು ಅನುಭವಿಸಿ 2013 ರಲ್ಲಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದರು.

Advertisement

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು ನಂತರ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡ ನಂತರ ಸ್ವಲ್ಪ ಮಟ್ಟಿಗೆ ರಾಜಕೀಯದಿಂದಲೇ ವಿಮುಖರಾಗಲು ಪ್ರಾರಂಭಿಸಿದರು. ಇದೇ ಕಾರಣಕ್ಕೆ 2018 ರಲ್ಲಿ  ಎಐಸಿಸಿಯಿಂದ ಕೆಪಿಸಿಸಿ ವರೆಗೆ ಅತ್ತು ಕರೆದು ಟಿಕೆಟ್‌ ಕೊಡುತ್ತೇವೆ ಎಂದು ದುಂಬಾಲು ಬಿದ್ದರೂ ಸ್ಪರ್ಧೆ ಮಾಡಲಿಲ್ಲ. ಅದರಿಂದಾದ ನಷ್ಟ ಫ‌ಲಿತಾಂಶದ ನಂತರ ಗೊತ್ತಾಗಿತ್ತು.

ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಟ್ಟ ನಂತರ ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಎಂದೂ ಚಿಂತಿಸಲೇ ಇಲ್ಲ. ಕೆ.ಜೆ.ಜಾರ್ಜ್‌, ಎಂ.ಬಿ.ಪಾಟೀಲ್‌ ಅವರ ಹೆಗಲ ಮೇಲೆ ಕೈ ಹಾಕಿ ತಮ್ಮ ಎಂದಿನ ಸ್ಟೈಲ್‌ನಲ್ಲಿ  ಈ ಅಂಬರೀಷ್‌ ಸಚಿವ ಸ್ಥಾನಕ್ಕೆ ಯಾರ ಮನೆ ಬಾಗಿಲಿಗೂ ಹೋಗೋನಲ್ಲ. ನನಗೆ ಸಚಿವ ಸ್ಥಾನದಿಂದ ಏನೂ ಆಗಬೇಕಾಗಿಲ್ಲ ಎಂದು ಹೇಳಿದ್ದರು. 

ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಗೆಳೆತನ ಹೊಂದಿದ್ದ ಅಂಬರೀಷ್‌ ಖಾಸಗಿಯಾಗಿ ತಮಾಷೆ ಮಾಡುತ್ತಾ ಕಾಳೆಯುತ್ತಿದ್ದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಜತೆಯೂ ಒಳ್ಳೆಯ ಒಡನಾಟ ಹೊಂದಿದ್ದ ಅಂಬರೀಷ್‌ ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಎಂದೂ ವೈಯಕ್ತಿಕ ಗೆಳೆತನಕ್ಕೆ ಧಕ್ಕೆ ತಂದುಕೊಳ್ಳುತ್ತಿರಲಿಲ್ಲ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತೆ ಅಂಂಬರೀಷ್‌ ಅವರನ್ನು ಜನತಾದಳದ ತೆಕ್ಕೆಗೆ ಸೆಳೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹಾಗೂ ಇತ್ತೀಚೆಗೆ ನಿಧನರಾದ ಅನಂತಕುಮಾರ್‌ ಅವರು ಅಂಬರೀಷ್‌ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಇನ್ನಿಲ್ಲದ ಒತ್ತಡ ಹಾಕಿದರು.

ಆದರೂ ಅವರು ಒಪ್ಪಿರಲಿಲ್ಲ. ತಮಾಷೆ ಮಾಡುತ್ತಲೇ ನೀವು ನನಗೆ ಟಿಕೆಟ್‌ ಕೊಡ್ತಿರಾ, ಮಂಡ್ಯದಲ್ಲಿ ನಾನು ಬಿಜೆಪಿ ಬಾವುಟ ಹಿಡೀಬೇಕಾ…. ಆಯ್ತು ಬಿಡ್ರಪ್ಪಾ ಎಂದು ಚಟಾಕಿ ಹಾರಿಸಿ ಸುಮ್ಮನಾಗಿದ್ದರು.ರಜನೀಕಾಂತ್‌, ಮೋಹನ್‌ಬಾಬು, ಶತ್ರುಘ್ನಸಿನ್ಹಾರಂತಹ ದಿಗ್ಗಜರ ಜತೆ ಸ್ನೇಹ ಹೊಂದಿದ್ದರೂ ತಮ್ಮ ರಾಜಕೀಯ ಏಳಿಗೆಗೆ ಎಂದೂ ಅವರ ಹೆಸರು ಸಹ ಬಳಸಿಕೊಳ್ಳುತ್ತಿರಲಿಲ್ಲ. 

ತ್ರಿಮೂರ್ತಿಗಳು ಇಲ್ಲ: ರಾಜ್ಯದಲ್ಲಿ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು. ಆ ಪೈಕಿ ರಾಜ್‌ಕುಮಾರ್‌ ರಾಜಕೀಯಕ್ಕೆ ಬರಲೇ ಇಲ್ಲ. ವಿಷ್ಣುವರ್ಧನ್‌ ಅವರನ್ನು ಒಮ್ಮೆ ರಾಜಕೀಯಕ್ಕೆ ತರಲು ಖುದ್ದು ಅಂಬರೀಷ್‌ ಪ್ರಯತ್ನಿಸಿದ್ದರು. ಆದರೆ, ಅದು ಫ‌ಲ ನೀಡಿರಲಿಲ್ಲ. ಒಮ್ಮೆ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಅವರು ಒಟ್ಟಾಗಿ ಇದ್ದಾಗ ರಾಜಕೀಯ ವಿಚಾರ ಬಂದಾಗ ನೀನು ಇದ್ದೀಯಲ್ಲಪ್ಪಾ ನಾವ್ಯಾಕೆ, ನಿನಗೆ ರಾಜಕೀಯ ಒಲಿದಿದೆ ಜಮಾಯಿಸು ಎಂದು ಡಾ.ರಾಜ್‌ಕುಮಾರ್‌ ಹೇಳಿದ್ದರಂತೆ. 

Advertisement

Udayavani is now on Telegram. Click here to join our channel and stay updated with the latest news.

Next