Advertisement

Union Budget 2024: ನಿರ್ಮಲಾ ಆಯವ್ಯಯದಲ್ಲಿ ರಾಜ್ಯದ ನಿರೀಕ್ಷೆಗಳೇನು?

11:36 PM Jul 21, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 3ನೇ ಅವಧಿಯ ಮೊದಲ ಬಜೆಟ್‌ನ ಮೇಲೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಟ್ಟಿರುವ ಕರ್ನಾಟಕ ಆಸೆಗಣ್ಣಿನಿಂದ ನೋಡುತ್ತಿದೆ.

Advertisement

ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯವಿರುವ ಉಪನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹೀಗೆ ಹತ್ತಾರು ನಿರೀಕ್ಷೆಗಳಿದ್ದು ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ ಮೇಲೆ ರಾಜ್ಯ ಭಾರೀ ನಿರೀಕ್ಷೆಯನ್ನಿಟ್ಟಿದೆ.

ರೈಲ್ವೇ ಯೋಜನೆ ಮತ್ತು ಗುರಿ
ಆಗಲಿದೆಯೇ ಮಂಗಳೂರು ರೈಲ್ವೇ ವಿಭಾಗ ?
ಮಂಗಳೂರಿನ ರೈಲ್ವೇ ಮಾರ್ಗಗಳು ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ ಮತ್ತು ನೈಋತ್ಯ ರೈಲ್ವೇಗಳಲ್ಲಿ ಹಂಚಿ ಹೋಗಿವೆ. ಇವುಗಳನ್ನು ಒಂದೆಡೆಗೆ ತಂದು ಮಂಗಳೂರು ರೈಲ್ವೇ ವಿಭಾಗವನ್ನು ಸೃಷ್ಟಿಸಬೇಕು. ಇಲ್ಲವೇ ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೇಗೆ ಸೇರಿಸಬೇಕು ಎಂಬ ಬೇಡಿಕೆಯ ಬಗ್ಗೆ ಈ ಬಜೆಟ್‌ನಲ್ಲಿ ಪ್ರಸ್ತಾವವಾಗಬಹುದೆಂಬ ಎಂಬ ನಿರೀಕ್ಷೆಯಿದೆ.

ಬೆಂಗಳೂರು- ಮೀರಜ್‌ ವಿದ್ಯುದೀಕರಣ ?
ಬೆಂಗಳೂರು ವಿಭಾಗದಂತೆ ಕಲಬುರಗಿಯನ್ನೂ ವಿಭಾಗವಾಗಿ ಘೋಷಿಸಿ, ಕಾರ್ಯನಿರ್ವಹಣೆಗೆ ಚಾಲನೆ ನೀಡಬೇಕು. ಬೆಂಗಳೂರು- ಮೀರಜ್‌ ನಡುವೆ ವಿದ್ಯುದೀಕರಣಗೊಳ್ಳಬೇಕಿದೆ. ಬೆಂಗಳೂರು- ಹಾಸನ ನಡುವೆ ವಿದ್ಯುದ್ದೀಕರಣಗೊಂಡಿದ್ದರೂ, ಹಾಸನ ಯಾರ್ಡ್‌ ಇನ್ನೂ ಬಾಕಿ ಇದೆ.

ಗದಗ ಟು ವಾಡಿ ಹೊಸ ಮಾರ್ಗ?:
ಗಿಣಿಗೆರ-ಗಂಗಾವತಿ-ರಾಯಚೂರು, ತುಮಕೂರು- ಚಿತ್ರದುರ್ಗ- ದಾವಣಗೆರೆ, ತುಮಕೂರು- ಮಧುಗಿರಿ- ರಾಯದುರ್ಗ, ದಾವಣಗೆರೆ- ಬೆಳಗಾವಿ, ಗದಗ- ವಾಡಿಯಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ ಆಗಬೇಕಿದೆ.
ಇವುಗಳ ಜತೆಗೆ ರಾಜ್ಯದ ಹಲವು ರೈಲ್ವೇ ಮಾರ್ಗಗಳ ವಿದ್ಯುದೀಕರಣ, ಜೋಡಿ ಮಾರ್ಗವಾಗಿ ಮೇಲ್ದರ್ಜೆಗೆ ಏರಿಸುವ ಬೇಡಿಕೆಗಳಿಗೆ ಒಪ್ಪಿಗೆ, ವಿವಿಧ ಹಂತದಲ್ಲಿರುವ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಲು ತಕ್ಕ ಅನುದಾನವನ್ನು ನೀಡಬೇಕಿದೆ. ರಾಜ್ಯದವರೇ ಆದ ವಿ. ಸೋಮಣ್ಣ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿರುವುದು ರಾಜ್ಯಕ್ಕೆ ಪ್ಲಸ್‌ ಆಗಲಿದೆಯೇ?

Advertisement

ಬೆಂಗಳೂರು ವರ್ತುಲ ರೈಲಿಗೆ ಒತ್ತು
ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದಲ್ಲಿ 23 ಸಾವಿರ ಕೋಟಿ ರೂ. ವೆಚ್ಚದ ವರ್ತುಲ ರೈಲ್ವೇ ಯೋಜನೆಗೆ ಸಂಬಂಧಿಸಿದ ನೀಲನಕ್ಷೆ ತಯಾರಿಸಲಾಗಿದೆ. 287 ಕಿ.ಮೀ. ಉದ್ದದ ಈ ರೈಲು ಯೋಜನೆ ನಿಡುವಂದ- ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡುವಂದ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಪ್ರಮುಖ ರೈಲ್ವೇ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗೆ 2.300 ಕೋಟಿ ರೂ. ವೆಚ್ಚವಾಗುವ ಅಂದಾಜಿದ್ದು, ಅನುದಾನದ ನಿರೀಕ್ಷೆಯಿದೆ.

ಬೆಂಗಳೂರು ಉಪನಗರ ರೈಲ್ವೇಗೆ ಬೇಕಿದೆ ಅನುದಾನ
ಕುಂಟುತ್ತ ಸಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ವೇಗ ನೀಡಲು ಅಗತ್ಯವಾದ ಅನುದಾನಕ್ಕೆ ರಾಜ್ಯ ಕಾಯುತ್ತಿದೆ. ಬೆಂಗಳೂರು ನಗರದ ಟ್ರಾಫಿಕ್‌ ದಟ್ಟಣೆ ನಿಭಾಯಿಸಲು ಅಗತ್ಯವಾಗಿರುವ ಈ ಯೋಜನೆಗೆ 2023ರಲ್ಲಿ ಪ್ರಧಾನ ಮಂತ್ರಿ ಶಂಕುಸ್ಥಾಪನೆ ಮಾಡಿದ್ದರು. 4 ಮಾರ್ಗಗಳಲ್ಲಿ 64 ನಿಲ್ದಾಣಗಳನ್ನು ಹೊಂದಿರುವ 149.34 ಕಿಮೀ ಉದ್ದದ ಈ ರೈಲ್ವೇ ಜಾಲಕ್ಕೆ 15,767 ಕೋಟಿ ರೂ. ವೆಚ್ಚದ ಅಂದಾಜಿದೆ.

ಮೆಟ್ರೋ ಹಂತ 3’ರ ನಿರೀಕ್ಷೆ
ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರತಿ ಮೆಟ್ರೋ ಕಾಮಗಾರಿ ನಿಗದಿತ ಅವಧಿಗಿಂತ ತಡವಾಗಿ ಮುಕ್ತಾಯಗೊಳ್ಳುತ್ತಿದೆ. ಸದ್ಯ ಸಾಗುತ್ತಿರುವ ಏರ್‌ಪೋರ್ಟ್‌ ಲೈನ್‌, ಕಾಳೇನ ಅಗ್ರಹಾರ-ನಾಗವಾರ ಕಾಮಗಾರಿಗೆ ಅನುದಾನದ ಜತೆಗೆ ಮೆಟ್ರೋ ಹಂತ-3ರ ಯೋಜನೆಗೆ 15 ಸಾವಿರ ಕೋಟಿ ರೂ. ಪ್ರಸ್ತಾವದ ನಿರೀಕ್ಷೆಯಿದೆ.

ನೀರಾವರಿ ಯೋಜನೆಗಳು
ಭದ್ರಾ ಮೇಲ್ದಂಡೆ’ಗೆ ಸಿಗುತ್ತ ಅನುದಾನ?:
ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿÇÉೆಯ 2,25,525 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. 29.90 ಟಿಎಂಸಿಯಷ್ಟು ಅಂತರ್ಜಲ ಭರ್ತಿಗೆ ನೆರವಾಗಲಿದೆ. 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ 5,300 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದರೂ ಹಣ ಬಿಡುಗಡೆ ಆಗಿಲ್ಲ. ಈ ಬಾರಿ ಬಿಡುಗಡೆಯ ನಿರೀಕ್ಷೆ ಇದೆ.

ಮೇಕೆದಾಟು, ಕಳಸಾ, ಎತ್ತಿನಹೊಳೆ ಪ್ರಸ್ತಾಪ?
ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆ, ಎತ್ತಿನಹೊಳೆ ಯೋಜನೆ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೇರ ಅಥವಾ ಪರೋಕ್ಷವಾಗಿ ಸಹಾಯ ಮಾಡಬಲ್ಲ ನಿಲುವುಗಳನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಬಹುದೇ ಎಂಬ ನಿರೀಕ್ಷೆಯಿದೆ.

ವೈದ್ಯಕೀಯ, ಸಾರಿಗೆ, ಆಹಾರ ಕ್ಷೇತ್ರ
ರಾಯಚೂರಿಗೆ ಒಲಿಯುವುದೇ ಏಮ್ಸ್‌ ?
ಮಾನವ ಸೂಚ್ಯಂಕದಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಏಮ್ಸ್‌) ಮಂಜೂರು ಮಾಡಬೇಕು ಎಂಬುದು ಆ ಭಾಗದ ದಶಕಗಳ ಬೇಡಿಕೆ. ಇದಕ್ಕಾಗಿ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಭೋಸರಾಜು ಭಾರೀ ಪ್ರಯತ್ನ ನಡೆಸಿದ್ದು, ರಾಜ್ಯ ಸರಕಾರವು ಪತ್ರವನ್ನೂ ಬರೆದಿದೆ. ಈಗಾಗಲೇ ಐಐಟಿ, ಐಐಎಂ ಪಡೆದಿರುವ ಕರ್ನಾಟಕಕ್ಕೆ ಏಮ್ಸ್‌ ಬಂದರೆ ವೈದ್ಯಕೀಯ ಶಿಕ್ಷಣದ ಜತೆಗೆ ಬಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ನೆರವು ಸಿಗಲಿದೆ.

39 ರಸ್ತೆಗಳಿಗೆ ಸಿಗುತ್ತದಯೆ ರಾ.ಹೆ. ಭಡ್ತಿ?
ರಾಜ್ಯದ 39 ರಸ್ತೆಗಳಲ್ಲಿ ಒಟ್ಟು 5,225 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರಕಾರ ಹೊಂದಿದೆ. ಮಂಗಳೂರು ಬಂದರಿಗೆ ಉತ್ತಮ ರಸ್ತೆ ಸಂಪರ್ಕ, ಕೇರಳದ ಕಲ್ಪೆಟ್ಟವನ್ನು ಮೈಸೂರಿಗೆ ಸಂಪರ್ಕಿಸುವ ಮಾನಂತವಾಡಿ-ಎಚ್‌.ಡಿ. ಕೋಟೆ ಮತ್ತು ಜಯಪುರ ರಸ್ತೆಯ ಅಭಿವೃದ್ಧಿಗೆ ಅನುದಾನ, ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿಯ ತ್ವರಿತ ಪ್ರಗತಿಗೆ ತಕ್ಕಷ್ಟು ಅನುದಾನದ ನಿರೀಕ್ಷೆಗಳಿವೆ.

ಸಿರಿಧಾನ್ಯ’ಕ್ಕೆ ಸಿಗಲಿ ಬಂಪರ್‌ ಕೊಡುಗೆ
ದೇಶದಲ್ಲೇ ಸಿರಿಧಾನ್ಯ ಉತ್ಪಾದನೆ ಮತ್ತು ಬಳಕೆಯಲ್ಲಿ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕವು ಸಿರಿಧಾನ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಯೋಜನೆ, ಅನುದಾನವನ್ನು ಕೇಂದ್ರ ಬಜೆಟ್‌ನಿಂದ ನಿರೀಕ್ಷೆಯಲ್ಲಿದೆ. ಜಿ-20 ಸೇರಿದಂತೆ ಹತ್ತು ಹಲವು ವೇದಿಕೆಗಳಲ್ಲಿ ಕೇಂದ್ರ ಸರಕಾರವು ಸಿರಿಧಾನ್ಯಕ್ಕೆ ಮನ್ನಣೆ ನೀಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯ ರಫ್ತು ಸೇರಿದಂತೆ ಅವುಗಳ ಬಳಕೆಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಕೇಂದ್ರ ಸರಕಾರ ಪ್ರಕಟಿಸಬಹುದು ಎಂಬ ನಿರೀಕ್ಷೆಯಿದೆ. ಒಂದು ವೇಳೆ ಕೇಂದ್ರ ಸಿರಿಧಾನ್ಯ ಬಳಕೆಯನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಪ್ರಕಟಿಸಿದರೆ ಸಿರಿಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಕರ್ನಾಟಕದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next