Advertisement

Pulmonary Tuberculosis: ಶ್ವಾಸಕೋಶದ ಕ್ಷಯ ತಿಳಿವಳಿಕೆ ಮತ್ತು ಹೋರಾಟ

01:07 PM Aug 11, 2024 | Team Udayavani |

ಪ್ರತೀ ವರ್ಷ ಮಿಲಿಯಗಟ್ಟಲೆ ಮಂದಿಯನ್ನು ಬಾಧಿಸುವ ಶ್ವಾಸಕೋಶದ ಕ್ಷಯ ರೋಗವು ಜಾಗತಿಕವಾಗಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲನ್ನು ಒಡ್ಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2022ರಲ್ಲಿ ಜಾಗತಿಕವಾಗಿ 10.6 ದಶಲಕ್ಷ ಮಂದಿ (1.67 ಲಕ್ಷ ಮಂದಿ ಎಚ್‌ಐವಿ ಸೋಂಕುಪೀಡಿತ ಶ್ವಾಸಕೋಶ ಕ್ಷಯರೋಗಿಗಳ ಸಹಿತ) ಕ್ಷಯ ರೋಗದಿಂದ ಮೃತಪಟ್ಟಿದ್ದಾರೆ.

Advertisement

2022ರಲ್ಲಿ ಜಾಗತಿಕವಾಗಿ 5.8 ದಶಲಕ್ಷ ಮಂದಿ ಪುರುಷರು, 3.5 ದಶಲಕ್ಷ ಮಂದಿ ಮಹಿಳೆಯರು ಮತ್ತು 1.3 ದಶಲಕ್ಷ ಮಂದಿ ಮಕ್ಕಳ ಸಹಿತ ಅಂದಾಜು 10.6 ದಶಲಕ್ಷ ಮಂದಿ ಕ್ಷಯ ರೋಗಕ್ಕೆ ತುತ್ತಾಗಿದ್ದಾರೆ. ಭಾರತದಲ್ಲಿ 2022 ಕ್ಷಯ ರೋಗ ಸರ್ವೇಕ್ಷಣೆಯ ವಿಷಯದಲ್ಲಿ ಒಂದು ಮೈಲಿಗಲ್ಲು ವರ್ಷ ಆಗಿದ್ದು, 24.2 ಲಕ್ಷ ಪ್ರಕರಣಗಳು ದಾಖಲುಗೊಂಡಿವೆ.

ಇದು 2021ಕ್ಕಿಂತ ಶೇ. 13ರಷ್ಟು ಹೆಚ್ಚಳವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದ್ದರೂ ಜಾಗತಿಕವಾಗಿ ಕ್ಷಯ ರೋಗವು ಈಗಲೂ ಆರೋಗ್ಯ ವ್ಯವಸ್ಥೆಗೆ ಗಂಭೀರ ಸವಾಲನ್ನು ಒಡ್ಡುತ್ತಿದೆ.

ಶ್ವಾಸಕೋಶದ ಕ್ಷಯ ರೋಗ: ಹಾಗೆಂದರೇನು?

Advertisement

ಶ್ವಾಸಕೋಶದ ಕ್ಷಯ ಅಥವಾ ಪಲ್ಮನರಿ ಟ್ಯುಬರ್‌ಕ್ಯುಲೋಸಿಸ್‌ ಎನ್ನುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸೂಕ್ಷ್ಮಜೀವಶಾಸ್ತ್ರೀಯವಾಗಿ ಅಥವಾ ಪ್ರಯೋಗಾಲಯ ಮೂಲಕ ದೃಢೀಕರಣಗೊಂಡ ಶ್ವಾಸಕೋಶದ ಪ್ಯಾರೆಂಕೈಮಾ ಅಥವಾ ಟ್ರೇಕೊಬ್ರಾಂಕಿಯಲ್‌ ಟ್ರೀಯನ್ನು ಒಳಗೊಂಡಿರುವ ಕ್ಷಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಶ್ವಾಸಕೋಶದ ಕ್ಷಯವು ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ ಕ್ಯುಲೋಸಿಸ್‌ ಎನ್ನುವ ಬ್ಯಾಕ್ಟೀರಿಯಾದಿಂದ ಉಂಟಾಗುವ, ಒಬ್ಬರಿಂದ ಇನ್ನೊಬ್ಬರಿಗೆ ಹರಡಬಲ್ಲ ಸೋಂಕುರೋಗವಾಗಿದೆ. ಇದು ಸೋಂಕುಪೀಡಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಗಾಳಿಯಲ್ಲಿರುವ ಹನಿಬಿಂದುಗಳ (ಕೆಮ್ಮು/ಸೀನು ಇತ್ಯಾದಿ) ಮೂಲಕ ಹರಡುತ್ತದೆ. ಚಿಕಿತ್ಸೆಗೆ ಒಳಪಡಿಸದೆ ಇದ್ದಲ್ಲಿ ಶ್ವಾಸಕೋಶದ ಕ್ಷಯ ರೋಗವು ಮಾರಣಾಂತಿಕವಾಗಬಹುದಾಗಿರುವ ಕಾರಣ ರೋಗಪೀಡಿತರ ಜೀವ ಉಳಿಸುವುದಕ್ಕಾಗಿ ಶೀಘ್ರ ರೋಗಪತ್ತೆ ಮತ್ತು ಚಿಕಿತ್ಸೆ ಒದಗಿಸುವುದು ನಿರ್ಣಾಯಕವಾಗಿದೆ.

ಶ್ವಾಸಕೋಶದ ಕ್ಷಯ: ಶಂಕಿಸುವುದು ಹೇಗೆ?

ಎರಡು ವಾರಗಳಿಗಿಂತ ಹೆಚ್ಚು ಕಾಲದಿಂದ ಕೆಮ್ಮು, ಜ್ವರ, ಗಮನಾರ್ಹ ತೂಕ ನಷ್ಟ, ಕಪದಲ್ಲಿ ರಕ್ತ ಕಂಡುಬರುವುದು (ಹಿಮೊಪ್ಟಿಸಿಸ್‌) ಮತ್ತು ಎದೆಯ ಎಕ್ಸ್‌ರೇಯಲ್ಲಿ ಯಾವುದೇ ಅಸಹಜತೆಗಳು ಕಂಡುಬಂದರೆ ಶ್ವಾಸಕೋಶದ ಕ್ಷಯಕ್ಕೆ ತುತ್ತಾಗಿದ್ದಾರೆ ಎಂದು ಶಂಕಿಸಬಹುದಾಗಿದೆ.

ಶ್ವಾಸಕೋಶದ ಕ್ಷಯ ಲಕ್ಷಣಗಳು

 ದೀರ್ಘ‌ಕಾಲೀನ ಕೆಮ್ಮು (2 ವಾರಗಳಿಗಿಂತ ಹೆಚ್ಚು ಅವಧಿ) (ಕೆಲವೊಮ್ಮೆ ಕಫ‌ದ ಜತೆಗೆ ರಕ್ತ)

 ಎದೆನೋವು

 ದುರ್ಬಲತೆ

 ದಣಿವು

 ತೂಕ ನಷ್ಟ

 ಜ್ವರ

 ರಾತ್ರಿ ಬೆವರುವುದು

ಯಾರು ಶ್ವಾಸಕೋಶದ ಕ್ಷಯಕ್ಕೆ ತುತ್ತಾಗುವ ಅಪಾಯ ಹೊಂದಿರುತ್ತಾರೆ?

ಕ್ಷಯ ರೋಗವು ಯಾವುದೇ ಲಿಂಗದ, ಯಾವುದೇ ವಯಸ್ಸಿನ ವ್ಯಕ್ತಿಗಳನ್ನು ಬಾಧಿಸಬಹುದಾಗಿದೆ. ಆದರೆ ಕ್ಷಯ ರೋಗಕ್ಕೆ ತುತ್ತಾಗುವ ಕೆಲವು ಅಪಾಯಾಂಶಗಳಿವೆ;

ಅವುಗಳೆಂದರೆ:

 ಮಧುಮೇಹ (ಸಕ್ಕರೆ ಕಾಯಿಲೆ)

 ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವುದು (ಉದಾಹರಣೆಗೆ, ಎಚ್‌ಐವಿ ಸೋಂಕು ಅಥವಾ ಏಡ್ಸ್‌)

 ಅಪೌಷ್ಟಿಕತೆ

 ತಂಬಾಕು ಬಳಕೆ (ಪ್ರಧಾನವಾಗಿ ಧೂಮಪಾನ)

ಶ್ವಾಸಕೋಶದ ಕ್ಷಯ: ರೋಗಪತ್ತೆ

 ಶ್ವಾಸಾಂಗ ವ್ಯೂಹದ ಸ್ರಾವ, ಮುಖ್ಯವಾಗಿ ಕಫ‌, ಬ್ರೊಂಕೊಅಲ್ವೆಯೊಲಾರ್‌ ಲ್ಯಾವೇಜ್‌ (ಬ್ರೊಂಕೊಸ್ಕೊಪಿಯ ಮೂಲಕ ಪಡೆಯಲಾದ ಮಾದರಿ)ಗಳನ್ನು ಶ್ವಾಸಕೋಶದ ಕ್ಷಯರೋಗ ಪತ್ತೆಗೆ ಮಾದರಿಗಳಾಗಿ ಉಪಯೋಗಿಸಬಹುದಾಗಿದೆ.

 ಕಫ‌ದ ಎರಡು ಮಾದರಿಗಳನ್ನು ಸಂಗ್ರಹಿಸಬೇಕಾಗುತ್ತದೆ.

 ಸ್ಥಳದಲ್ಲಿ ಒಂದು ಮತ್ತು ಬೆಳಗ್ಗೆ ಬೇಗನೆ ಒಂದು ಮಾದರಿಗಳು ಅಥವಾ ಕನಿಷ್ಠ ಒಂದು ಗಂಟೆಯ ಅಂತರದಲ್ಲಿ ಸ್ಥಳದಲ್ಲಿಯೇ ಎರಡು ಮಾದರಿ (ರೋಗಿ ದೂರದಿಂದ ಬಂದಿದ್ದರೆ ಅಥವಾ ಅವರು ಎರಡನೇ ಮಾದರಿಯನ್ನು ನೀಡಲು ಮರಳಿ ಬರುವುದು ಅಸಾಧ್ಯವಾಗಿದ್ದರೆ) ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.

 ಮಾದರಿಗಳನ್ನು ಎನ್‌ಟಿಇಪಿಯ ನಿರ್ದೇಶಿತ ಮೈಕ್ರೊಸ್ಕೊಪಿ ಕೇಂದ್ರ (ಡಿಎಂಸಿ) ಗಳಲ್ಲಿ ಸಂಸ್ಕರಿಸುವುದನ್ನು ಶಿಫಾರಸು ಮಾಡಲಾಗಿದೆ.

 ಕ್ಷಯ ರೋಗದ ಖಚಿತ ರೋಗನಿರ್ಣಯಕ್ಕಾಗಿ ಈ ಮಾದರಿಗಳನ್ನು ನ್ಯೂಕ್ಲಿಯಿಕ್‌ ಆ್ಯಸಿಡ್‌ ಆ್ಯಂಪ್ಲಿಫಿಕೇಶನ್‌ ಟೆಸ್ಟ್‌ (ಎನ್‌ಎಎಟಿ), ಎಎಫ್ಬಿ ಸ್ಮಿಯರ್‌ ಮತ್ತು ಎಎಫ್ಬಿ ಕಲ್ಚರ್‌ನಂತಹ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.

ಪರೀಕ್ಷೆಗೆ ಕಫ‌ ನೀಡುವುದು ಹೇಗೆ?

 ಬಾಯಿಯನ್ನು ತೆರೆದಿಟ್ಟುಕೊಂಡು 2-3 ಬಾರಿ ಆಳವಾಗಿ ಉಸಿರೆಳೆದುಕೊಳ್ಳಬೇಕು.

 ಎದೆಯಿಂದ ಆಳವಾಗಿ ಕೆಮ್ಮಬೇಕು.

 ಲೇಬಲ್‌ ಸಹಿತವಾಗಿರುವ ಮೌತ್‌ ಕಂಟೇನರ್‌ ಅಥವಾ ಫಾಲ್ಕನ್‌ ಟ್ಯೂಬನ್ನು ಅಗಲವಾಗಿ ತೆರೆಯಬೇಕು.

 ಅದರೊಳಕ್ಕೆ ಕಫ‌ವನ್ನು ಉಗುಳಬೇಕು ಕಂಟೇನರನ್ನು ಭದ್ರವಾಗಿ ಮುಚ್ಚಬೇಕು.

 ಕಫ‌ವನ್ನು ತೆರೆದ ಸ್ಥಳದಲ್ಲಿ ಅಥವಾ ಯಾರೂ ಇಲ್ಲದ ಕೊಠಡಿಯಲ್ಲಿ ಕಿಟಕಿಗಳನ್ನು ತೆರೆದಿಟ್ಟು ಸಂಗ್ರಹಿಸಬೇಕು.

 ಕಫ‌ ಸಂಗ್ರಹದ ವೇಳೆ ಶಂಕಿತ ರೋಗಿಯ ಬಳಿ ಯಾರೂ ಇರಬಾರದು.

ಶ್ವಾಸಕೋಶದ ಕ್ಷಯ ಪತ್ತೆಯಾದ ಬಳಿಕ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

 ಸಾಧ್ಯವಾದಷ್ಟು ತೆರೆದ ವಾತಾವರಣದಲ್ಲಿ ಅಥವಾ ಸಾಕಷ್ಟು ಗಾಳಿಯಾಡುವ ಕೊಠಡಿಯಲ್ಲಿ ಇರಿ.

 ಕೆಮ್ಮುವ ಸಂದರ್ಭದಲ್ಲಿ ಸುರಕ್ಷಾ ಕ್ರಮ ಅನುಸರಿಸಿ (ಕೆಮ್ಮುವಾಗ/ಸೀನುವಾಗ ಮೊಣಕೈ ಉಪಯೋಗಿಸಿ ಮೂಗು, ಬಾಯಿ ಮುಚ್ಚಿಕೊಳ್ಳುವುದು) ಮತ್ತು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

 ನಿಕಟವರ್ತಿಗಳು ವೈದ್ಯರನ್ನು ಸಂಪರ್ಕಿಸಿ ಕ್ಷಯ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ (ಗಮನಿಸಿ: ಕ್ಷಯದ ವಿರುದ್ಧ ಪ್ರೊಫಿಲ್ಯಾಕ್ಟಿಕ್‌ ಔಷಧಗಳು ಲಭ್ಯವಿವೆ).

 5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳಿಂದ ದೂರವಿರಿ.  ಕಫ‌ ವಿಲೇವಾರಿಯ ಸರಿಯಾದ ವಿಧಾನವನ್ನು ತಿಳಿದುಕೊಂಡು ಅನುಸರಿಸಿ. (ಕಫ‌ವನ್ನು ಒಂದು ನಿರ್ದಿಷ್ಟ ಕಪ್‌ನಲ್ಲಿ ಸಂಗ್ರಹಿಸಬೇಕು, ಶೇ. 5 ಫಿನೋಲ್‌ ಅಥವಾ ಶೇ. 4.8 ಕ್ಲೊರೊಕ್ಸಿಲನೋಲ್‌ನಿಂದ ಸೋಂಕುನಾಶಗೊಳಿಸಬೇಕು ಮತ್ತು ವಿಸರ್ಜಿಸಿ ಫ್ಲಶ್‌ ಮಾಡಬೇಕು)

 ಕ್ಷಯರೋಗ ಚಿಕಿತ್ಸೆಯನ್ನು ಆರಂಭಿಸಿ ಕಫ‌ ಪರೀಕ್ಷೆಯ (ಎಎಫ್ಬಿ ಸ್ಮಿಯರ್‌) ಫ‌ಲಿತಾಂಶವು ನೆಗೆಟಿವ್‌ ಬರುವವರೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಜತೆಗೆ ಸಾರ್ವಜನಿಕ ಸ್ಥಳಗಳಿಗೆ ಹೋಗುವುದಾದರೆ ಎನ್‌95 ಮಾಸ್ಕ್ ಅಥವಾ ಇತರ ಮಾಸ್ಕ್ ಧರಿಸಿ ಮೂಗು, ಬಾಯಿಗಳನ್ನು ಮುಚ್ಚಿಕೊಳ್ಳಬೇಕು.

ಸರಕಾರಿ ಯಂತ್ರಗಳು ನಿಮ್ಮ ಜತೆಗಿವೆ… ಹೆದರದಿರಿ

ಭಾರತದಲ್ಲಿ ಕ್ಷಯ ನಿಯಂತ್ರಣ ಕಾರ್ಯಕ್ರಮವು 1947ರಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ಅಡಿಯಲ್ಲಿ ಕ್ಷಯ ವಿಭಾಗವನ್ನು ಆರಂಭಿಸುವ ಮೂಲಕ ಪ್ರಾರಂಭವಾಯಿತು. 2019ರ ವೇಳೆಗೆ ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮ (ಎನ್‌ ಟಿಇಪಿ)ಯನ್ನು ಆರಂಭಿಸಲಾಯಿತು. ಇದರಡಿ ಸಿಬಿಎನ್‌ಎಎಟಿ (ಯೂನಿವರ್ಸಲ್‌ ಡಿಎಸ್‌ಟಿ ಪಾಲಿಸಿ) ಮತ್ತು ಎದೆಯ ಎಕ್‌ Õರೇಗಳ ಮೂಲಕ ಕ್ಷಯ ತಪಾಸಣೆಯನ್ನು ಕ್ಷಯ ರೋಗಪತ್ತೆಯ ವಿಧಾನಗಳಾಗಿ ಗುರುತಿಸಲಾಯಿತು. ಈ ಯೋಜನೆಯು ದೈನಿಕ ಔಷಧ ಸೇವನೆ ಮತ್ತು ವಿಕೇಂದ್ರೀಕೃತ ಔಷಧ ಸರಬರಾಜು ಹಾಗೂ ಕಿಮೊಥೆರಪಿಯ ಅಲ್ಪಾವಧಿಯ ಕೋರ್ಸ್‌ಗಳನ್ನು ಒಳಗೊಂಡಿತ್ತು. ಡಾಟ್ಸ್‌ ಪೂರೈಕೆದಾರರು ಚಿಕಿತ್ಸೆಯ ಮೇಲೆ ನಿಗಾ ಇರಿಸುತ್ತಿದ್ದರು. ರಾಷ್ಟ್ರೀಯ ಕ್ಷಯ ನಿರ್ಮೂಲನ ಯೋಜನೆಯಡಿ ತಪಾಸಣೆ ಮತ್ತು ಔಷಧಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿತ್ತು.

ಶ್ವಾಸಕೋಶ ಕ್ಷಯಕ್ಕೆ ಚಿಕಿತ್ಸೆ ಶೀಘ್ರ ರೋಗಪತ್ತೆ

ಕ್ಷಯ ರೋಗದ ಪರಿಣಾಮಕಾರಿ ನಿರ್ವಹಣೆಯಲ್ಲಿ ಶೀಘ್ರ ರೋಗಪತ್ತೆಯು ಬಹಳ ನಿರ್ಣಾಯಕವಾಗಿದೆ. ಜೀನೆಕ್ಸ್‌ಪರ್ಟ್‌ ಮತ್ತು ಮಾಲೆಕ್ಯುಲಾರ್‌ ಪರೀಕ್ಷೆಯಂತಹ ರೋಗಪತ್ತೆಯ ಅತ್ಯಾಧುನಿಕ ಸಲಕರಣೆಗಳಿಂದಾಗಿ ಆರೋಗ್ಯ ಸೇವಾ ಪೂರೈಕೆದಾರರು ಕ್ಷಯ ರೋಗವನ್ನು ಕ್ಷಿಪ್ರವಾಗಿ ಪತ್ತೆಹಚ್ಚುವುದು ಸಾಧ್ಯವಾಗಿದೆ. ಇದರಿಂದ ಆದಷ್ಟು ಬೇಗನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುತ್ತಿದೆ. ಕ್ಷಿಪ್ರ ರೋಗಪತ್ತೆಯು ರೋಗ ಹರಡುವುದಕ್ಕೆ ತಡೆ ಮಾತ್ರವಲ್ಲದೆ ಚಿಕಿತ್ಸೆಯು ಯಶಸ್ವಿ ಫ‌ಲಿತಾಂಶ ಪಡೆಯುವುದಕ್ಕೂ ಕಾರಣವಾಗುತ್ತಿದೆ.

ಔಷಧ ಚಿಕಿತ್ಸೆ

ಆ್ಯಂಟಿಬಯಾಟಿಕ್‌ ಚಿಕಿತ್ಸೆಯು ಕ್ಷಯ ನಿರ್ವಹಣೆಯ ತಿರುಳಾಗಿದೆ. ಆದರೆ ಔಷಧ ನಿರೋಧಕ ತಳಿಗಳು ತಲೆಯೆತ್ತುತ್ತಿರುವುದು ಒಂದು ಗಂಭೀರ ಸವಾಲಾಗಿದೆ. ಇದನ್ನು ತಡೆಯುವುದಕ್ಕಾಗಿ ಆರೋಗ್ಯ ಸೇವಾ ಪೂರೈಕೆದಾರರು ಪ್ರತೀ ರೋಗಿಯ ಅಗತ್ಯಕ್ಕನುಸಾರವಾಗಿ ಆ್ಯಂಟಿಬಯಾಟಿಕ್‌ಗಳನ್ನು ಸಂಯೋಜಿಸಿ ನೀಡುವ ಕ್ರಮವನ್ನು ಅನುಸರಿಸುತ್ತಾರೆ. ಡಿರೆಕ್ಟ್ಲೀ ಆಬ್ಸರ್ವ್‌ಡ್‌ ಟ್ರೀಟ್‌ಮೇಂಟ್‌, ಶಾರ್ಟ್‌-ಕೋರ್ಸ್‌ (ಡಿಒಟಿಎಸ್‌) ಎಂದು ಕರೆಯಲ್ಪಡುವ ಈ ಚಿಕಿತ್ಸಾ ಕ್ರಮದಿಂದ ಕ್ಷಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಿವೆ. ಇದರಿಂದ ಚಿಕಿತ್ಸೆಯನ್ನು ಚಾಚೂತಪ್ಪದೆ ಅನುಸರಿಸುವುದು ಮತ್ತು ಔಷಧ ನಿರೋಧಕ ಶಕ್ತಿ ಬೆಳೆಯುವ ಸಾಧ್ಯತೆ ಕನಿಷ್ಠ ಮಟ್ಟಕ್ಕಿಳಿಯುತ್ತದೆ. ಆ್ಯಂಟಿಬಯಾಟಿಕ್‌ ಸಂಯೋಜಿತ ಚಿಕಿತ್ಸೆಯನ್ನು 6 ತಿಂಗಳುಗಳ ಕಾಲ ಚಾಚೂತಪ್ಪದ ನಿಗಾ ವಹಿಸಿ ಅನುಸರಿಸಬೇಕು.

ಅನುಸರಣೆಗೆ ನೆರವು

ಕ್ಷಯ ರೋಗ ಚಿಕಿತ್ಸೆ ಯಶಸ್ವಿಯಾಗುವುದಕ್ಕೆ ರೋಗಿಯು ಔಷಧ ಕ್ರಮವಿಧಿಗಳನ್ನು ಚಾಚೂತಪ್ಪದೆ ಪಾಲಿಸುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕ್ರಮವಿಧಿ ಪಾಲನೆಗೆ ಅಡ್ಡಿಯಾಗಬಲ್ಲ ಸಾಮಾಜಿಕ-ಆರ್ಥಿಕ ಅಡಚಣೆಗಳನ್ನು ಗುರುತಿಸುವ ಮೂಲಕ ಆರೋಗ್ಯ ಸೇವಾ ವ್ಯವಸ್ಥೆಗಳು ಈಗ ಸಮಗ್ರ ನೆರವು ವ್ಯವಸ್ಥೆಯನ್ನು ಒದಗಿಸುತ್ತವೆ. ರೋಗಿ ಶಿಕ್ಷಣ, ಮನೋಸಾಮಾಜಿಕ ಆಪ್ತ ಸಮಾಲೋಚನೆ ಹಾಗೂ ಕ್ರಮವಿಧಿ ಅನುಸರಣೆಯನ್ನು ಖಾತ್ರಿ ಪಡಿಸಿಕೊಳ್ಳಲು ಮೊಬೈಲ್‌ ಹೆಲ್ತ್‌ ಆ್ಯಪ್‌ಗ್ಳಂತಹ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಲಾಗುತ್ತದೆ.

ಪೌಷ್ಟಿಕಾಂಶ ನೆರವು

ಕ್ಷಯ ರೋಗ ಬಾಧೆಯ ಜತೆಗೆ ಅಪೌಷ್ಟಿಕತೆಯೂ ಕೆಲವೊಮ್ಮೆ ಜತೆ ಸೇರಿಕೊಂಡು ರೋಗಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ ಗುಣ ಹೊಂದುವುದನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಪೌಷ್ಟಿಕಾಂಶ ಸಪ್ಲಿಮೆಂಟ್‌ಗಳು ಕ್ಷಯ ರೋಗ ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿದೆ.

ಸಮಗ್ರ ಆರೈಕೆ

ಅನೇಕ ಪ್ರಕರಣಗಳಲ್ಲಿ ಕ್ಷಯ ಏಕೈಕ ರೋಗವಾಗಿರದೆ ಎಚ್‌ಐವಿ/ ಏಡ್ಸ್‌ ಮತ್ತು ಮಧುಮೇಹದಂತಹ ಸಹಕಾಯಿಲೆಗಳೊಂದಿಗೆ ಇರುತ್ತದೆ. ಈ ಅಂತರ್‌ಸಂಬಂಧವನ್ನು ಗುರುತಿಸುವ ಮೂಲಕ ಆರೋಗ್ಯ ಸೇವಾ ಪೂರೈಕೆದಾರರು ಕ್ಷಯ ರೋಗಿಗಳ ಸಮಗ್ರ ಅಗತ್ಯಕ್ಕಾಗಿ ಸಮಗ್ರ ಆರೈಕೆಯ ಕಾರ್ಯವಿಧಾನಗಳನ್ನು ರೂಪಿಸುತ್ತಾರೆ.

ಸಮುದಾಯದ ಒಳಗೊಳ್ಳುವಿಕೆ

ಕ್ಷಯ ರೋಗ ನಿಯಂತ್ರಣಕ್ಕೆ ಸಮುದಾಯ ಮತ್ತು ಸಮಾಜಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಕ್ಷಯ ರೋಗದ ಶೀಘ್ರ ಪತ್ತೆಯ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದರಿಂದ ತೊಡಗಿ ಕ್ಷಯ ರೋಗದ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸುವ ವರೆಗೆ ಹಲವು ವಿಷಯಗಳಲ್ಲಿ ಸಮುದಾಯ ಪಾಲ್ಗೊಳ್ಳುವಿಕೆಯು ಕ್ಷಯ ರೋಗದ ವಿರುದ್ಧ ಹೋರಾಟದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಮುಂದಿನ ವಾರಕ್ಕೆ

ಡಾ| ಆದಿತ್ಯ ಎ.

ಸೀನಿಯರ್‌ ರೆಸಿಡೆಂಟ್‌, ರೆಸ್ಪಿರೇಟರಿ ಮೆಡಿಸಿನ್‌ ವಿಭಾಗ

ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next