Advertisement

ಶುಭಕೃತ್‌ ಸಂವತ್ಸರಕ್ಕೆ ಮುನ್ನುಡಿ: ಯುಗಾದಿ

11:24 AM Apr 02, 2022 | Team Udayavani |

ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಇವುಗಳನ್ನು ಅರಿತುಕೊಂಡು ಹಬ್ಬವನ್ನು ಆಚರಿಸಿದರೆ ಸನಾತನ ಸಂಸ್ಕೃತಿಯ ಮಹತ್ವ, ಶ್ರೇಷ್ಠತೆಯ ಅರಿವು ನಮಗಾಗುತ್ತದೆ. ಚಾಂದ್ರಮಾನ ಯುಗಾದಿಯ ಈ ಶುಭದಿನದಂದು ವರ್ಷಾರಂಭವನ್ನು ಸಂಪ್ರದಾಯಬದ್ಧವಾಗಿ ಆಚರಿಸುವ ಮೂಲಕ ನವ ಸಂವತ್ಸರವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳೋಣ.

Advertisement

ಪ್ರಾಚೀನ ಭಾರತದ ಸನಾತನ ಸಂಸ್ಕೃತಿಯ ಶಾಸ್ತ್ರವಚನದಂತೆ ಸೃಷ್ಟಿಯ ಆದಿಯ ದಿನವೇ ಯುಗಾದಿ. ಅಂದು ಸೂರ್ಯ, ಚಂದ್ರರು ಒಂದೇ ರಾಶಿ, ಒಂದೇ ನಕ್ಷತ್ರದಲ್ಲಿದ್ದು ಈ ಜಗತ್ತಿನ ಸೃಷ್ಟಿಯು ಪ್ರಾರಂಭವಾಯಿತು. ಈ ದಿನವನ್ನು ಸಂವತ್ಸರದ ಪ್ರಥಮ ದಿನವೆಂದು ಸಾರಲಾಯಿತು. ವತ್ಸರ, ಅನುವತ್ಸರ, ಪರಿವತ್ಸ, ಇಡಾವತ್ಸರ ಮತ್ತು ಸಂವತ್ಸರ ಎಂಬುದಾಗಿ ಐದು ತರಹದಲ್ಲಿ ವರ್ಷದ ಮೊದಲ ದಿನದ ಆಚರಣೆಯನ್ನು ಮಾಡಿಕೊಂಡು ಬಂದಿರುತ್ತೇವೆ. ಪ್ರಧಾನವಾಗಿ, ಅಮಾ ವಾಸ್ಯೆಯ ಮರುದಿನ ಪಾಡ್ಯದಿಂದ ಆರಂಭಿಸಿ, ಅಮಾ ವಾಸ್ಯೆಯ ಮುಕ್ತಾಯ ಪರ್ಯಂತ ಇರುವ ಒಂದು ಮಾಸವನ್ನು ಚಾಂದ್ರಮಾಸವೆಂತಲೂ ಸೂರ್ಯನ ರಾಶಿ ಚಲನೆಯ ದಿನಗಳನ್ನು ಚೈತ್ರಾದಿ ಸಂಕ್ರಾಂತಿ ಕಾಲಗಳು ಸೌರಮಾಸವೆಂದು ಕರೆಯಲ್ಪಡುತ್ತದೆ.

ಚಾಂದ್ರಮಾನ ರೀತ್ಯಾ ಹಬ್ಬಹರಿದಿನಗಳನ್ನು ಆಚರಿಸು ವವರು ಚಾಂದ್ರಮಾನ ಪದ್ಧತಿಯಂತೆ ಚಾಂದ್ರಮಾನ ಯುಗಾದಿಯನ್ನು, ಸೌರಮಾನ ರೀತ್ಯಾ ಹಬ್ಬಹರಿದಿನಗಳನ್ನು ಆಚ ರಿಸುವವರು ಸೌರ ಮಾನ ಯುಗಾದಿ ಯೆಂದು ನೂತನ ವರ್ಷಾಚರಣೆಯನ್ನು ಮಾಡುವರು.

ಯುಗಾದಿಯ ದಿನದಂದು ಪ್ರಾತಃಕಾಲ ಮನೆಯ ಅಂಗಳದಲ್ಲಿ ರಂಗೋಲಿಯನ್ನಿಟ್ಟು, ತೈಲಾಭ್ಯಂಗ ಸ್ನಾನ ಇತ್ಯಾದಿಗಳನ್ನು ಮಾಡಿ, ಶುಚಿಭೂìತರಾಗಿ ಮನೆಯ ಪ್ರಧಾನ ದ್ವಾರವನ್ನು ಮಾವಿನ ಎಲೆ, ನಿಂಬಪತ್ರ ತೋರಣಗಳಿಂದ ಅಲಂಕರಿಸಲಾಗುತ್ತದೆ. ಸುಮಂಗಲೆಯರಿಂದ ಹೊಸ್ತಿಲು ಪೂಜೆಯನ್ನು ನೆರವೇರಿಸಿ, ಪಂಚಾಂಗ ಪೂಜೆ ಹಾಗೂ ಅಷ್ಟಮಂಗಲ ದ್ರವ್ಯಗಳನ್ನು ಪೂಜಿಸಿ, ಭಗವಂತನಿಗೆ ಬೇವುಬೆಲ್ಲವನ್ನು ನಿವೇದಿಸಲಾಗುತ್ತದೆ. ಆ ಬಳಿಕ ಹಿರಿಯರನ್ನು ಸ್ಮರಿಸಿ, ನೂತನ ವಸ್ತ್ರ ತಾಂಬೂಲಾದಿಗಳನ್ನು ಸಮರ್ಪಿಸಲಾಗುತ್ತದೆ. ಆ ಮೂಲಕ ಶ್ರೀ ದೇವ ಗುರುಹಿರಿಯರ ಅನುಗ್ರಹವು ಲಭಿಸಿ, ಸದಾಕಾಲ ಲಕ್ಷ್ಮೀಸಾಯುಜ್ಯವು ಮನೆಯಲ್ಲಿ ನೆಲೆಸಿ, ಸುಖಸಂತೋಷದಿಂದ ಆನಂದಮಯ ಜೀವನವನ್ನುನೆರ ವೇರಿಸುವಂತಾಗಲಿ ಎಂದು ಪ್ರಾರ್ಥಿಸುವುದು ಭಾರತೀಯ ಸನಾತನ ಸಂಸ್ಕೃತಿಯ ಪರಂಪರೆ.

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಐದು ಪ್ರಮುಖ ವಸ್ತುವೇ ಪಂಚಾಂಗ. ತಿಥಿಯಿಂದ ಲಕ್ಷ್ಮೀ ಪ್ರಾಪ್ತಿಯು, ವಾರದಿಂದ ಆಯುಷ್ಯ ವರ್ಧನೆಯು, ನಕ್ಷತ್ರದಿಂದ ಪಾಪ ನಿವೃತ್ತಿಯು, ಯೋಗದಿಂದ ರೋಗ ನಿವೃತ್ತಿಯು, ಕರಣ ದಿಂದ ಕಾರ್ಯಸಿದ್ಧಿಯು ಲಭಿಸುವುದಾಗಿ ಪಂಚಾಂಗಶ್ರವಣದ ಫ‌ಲವಾಗಿರುತ್ತದೆ. ಸೂರ್ಯನಿಗೂ ಚಂದ್ರನಿಗೂ ಇರುವ ದೂರವು ಮಿತಿಯೆಂಬುದಾಗಿಯೂ ಸೂರ್ಯನ ಸ್ಥಿತಿ, ಚಂದ್ರನ ಸ್ಥಿತಿಯು ಸೇರಿದಾಗ ಯೋಗವು, ಮಿತಿಯ ಅರ್ಧವು ಕರಣವೆಂಬುದಾಗಿಯೂ ಕರೆಯಲ್ಪಡುತ್ತದೆ.

Advertisement

ಜಗತ್ತು ಸೃಷ್ಟಿಯಾಗಿ 1,97,29,49,123 ವರುಷಗಳು ಸಂದಿವೆ. ಈಗ ಕಲಿಯುಗದ 4,32,000 ವರುಷಗಳಲ್ಲಿ ಕೇವಲ 5,122 ಸಂದು, ಯುಧಿಷ್ಠಿರ ವಿಕ್ರಮ ಶಕ ಕಳೆದು, ಶಾಲಿವಾಹನ ಶಕ 1944ನೇ ಶುಭಕೃತ್‌ ಸಂವತ್ಸರವು ಪ್ರಾರಂಭವಾಗುವುದು. ಈ ಸಂವತ್ಸರದಲ್ಲಿ ಶನಿಯು ರಾಜನಾಗಿಯೂ, ಗುರುವು ಮಂತ್ರಿಯಾಗಿಯೂ, ಸೇನಾಧಿಪ ಬುಧ, ಸಸ್ಯಾಧಿಪ ಶನಿ, ಧಾನ್ಯಾಧಿಪ ಶುಕ್ರ, ಅರ್ಘ‌ ಮೇಘಾಧಿಪ ಬುಧ, ರಸಾಧಿಪ ಚಂದ್ರ, ನಿರಸಾಧಿಪ ಶನಿ, ನಿಶಾಚರ ಬುಧ, ಸ್ವರ್ಣಪರೀಕ್ಷಕ ಬುಧ, ಗ್ರಾಮಾಧಿಪ ಶನಿ, ಗ್ರಾಮಕೂಟ ಚಂದ್ರ, ಗಣಕ ಮತ್ತು ಛತ್ರಧರ ಶನಿ-ಹೀಗೆ ವರುಷದ ನವನಾಯಕರು ಪ್ರಾಚೀನ ಸಿದ್ಧಾಂತ ಗಣಿತ ರೀತ್ಯಾ ಸೂಚಿತರಾಗಿದ್ದಾರೆ. ವಿಶೇಷವಾಗಿ ಶನಿಯು 29 ಎಪ್ರಿಲ್‌ 2022ರಂದು ಬೆಳಗ್ಗೆ ಗಂಟೆ 7.54ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗೆ ಬೃಹಸ್ಪತಿಯು 13 ಎಪ್ರಿಲ್‌ರಂದು ಮಧ್ಯಾಹ್ನ ಗಂಟೆ 3.50ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಧಾನವಾಗಿ ಈ ಎರಡೂ ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಾರೂಢರಾಗಿ ಇರುವುದರಿಂದ ಕೆಲವೊಂದು ಕಷ್ಟ ನಷ್ಟಗಳು ಉಂಟಾದರೂ ಅವುಗಳಿಂದ ಸಮತೋಲನ ಕಾಪಾಡುವಂತಾಗಿ ಉತ್ತಮ ರೀತಿಯ ಜೀವನವನ್ನು ನಡೆಸಲು ಸಕಲ ಚರಾಚರಗಳಿಗೆ ಕಾರಣರಾಗುವರು. ಎಲ್ಲರಲ್ಲೂ ಧರ್ಮಪ್ರಜ್ಞೆ, ಗುರುದೇವನಿಷ್ಠೆ ಹಾಗೂ ತನ್ನ ಸಂಸ್ಕೃತಿಯ ಅರಿವು ಮೂಡಿ ಉತ್ತಮ ಬಾಳ್ವೆಯೊಂದಿಗೆ ಬಾಳುವಂತಾಗುವರು.

-ಪಂಡಿತ ಎಂ. ನರಸಿಂಹ ಆಚಾರ್ಯ
ಪಂಚಾಂಗಕರ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next