Advertisement

Udupi:ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ- 1ನೆಯ- 30ನೆಯ ಯತಿಗಳ ಶಾರೀರಿಕ ಬಲ…

01:00 PM Jan 17, 2024 | Team Udayavani |

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೂಜಾದೀಕ್ಷಿತರಾಗಲಿರುವ ಪುತ್ತಿಗೆ ಮಠದ ಪರಂಪರೆಯ ಮೊದಲ ಯತಿ ಶ್ರೀಉಪೇಂದ್ರತೀರ್ಥರು ಜ್ಞಾನಬಲ, ದೇಹಬಲ ಎರಡರಲ್ಲೂ ಬಲಶಾಲಿಗಳಾಗಿದ್ದರು. ಈಗ 30ನೆಯ ಯತಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಜಗದಗಲದಲ್ಲಿ ಸಂಚರಿಸಿ ತಮ್ಮ ಜ್ಞಾನಬಲ, ದೇಹಬಲ ಎರಡನ್ನೂ ಶ್ರುತಪಡಿಸುತ್ತಿದ್ದಾರೆ.

Advertisement

ಮಧ್ವಾಚಾರ್ಯರ ಎಂಟು ಮಂದಿ ಶಿಷ್ಯರಲ್ಲಿ ಕೇವಲ ಆಧ್ಯಾತ್ಮಿಕ ಜ್ಞಾನ ಪಿಪಾಸುಗಳು ಮಾತ್ರ ಇದ್ದದ್ದಲ್ಲ, ಸಂದರ್ಭ ಬಂದಾಗ
ಜಗಜಟ್ಟಿಯಾಗುತ್ತಿದ್ದರು ಎಂಬುದು ಜೀವನಚರಿತ್ರೆಯಲ್ಲಿ ಕಂಡುಬರುತ್ತದೆ. ಮಧ್ವರು ಎರಡನೆಯ ಬಾರಿ ಉತ್ತರ ಭಾರತ ಯಾತ್ರೆ ಮಾಡುವಾಗ ನಡೆದ ಘಟನೆಯನ್ನು ಅವರ ಸಮಕಾಲೀನ ಶಿಷ್ಯರಾದ ನಾರಾಯಣ ಪಂಡಿತಾಚಾರ್ಯರು ಮಧ್ವವಿಜಯದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯರು ತೆರಳುವಾಗ ಕಳ್ಳರ ಗುಂಪು ಇವರಲ್ಲಿ ಸಂಪತ್ತಿರಬಹುದು ಎಂದು ಆಕ್ರಮಣ ನಡೆಸಲು ಬಂದಾಗ
ಶ್ರೀಉಪೇಂದ್ರತೀರ್ಥರು ಕಳ್ಳರನ್ನು ಹೊಡೆದು ಓಡಿಸಿದರು.

ಇದು ಮೊದಲ ಯತಿಯ ಧೈರ್ಯ, ಸ್ಥೈರ್ಯದ ಕಥೆಯಾದರೆ ಪ್ರಸ್ತುತ 30ನೆಯ ಪೀಠಾಧಿಪತಿಗಳಾದ ಶ್ರೀಸುಗುಣೇಂದ್ರತೀರ್ಥ
ಶ್ರೀಪಾದರು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಶ್ರೀಕೃಷ್ಣನ ಭಗವದ್ಗೀತೆಯ ಸಂದೇಶವನ್ನು ಎದೆಗುಂದದೆ ಪ್ರಚಾರ ಮಾಡುತ್ತಿದ್ದಾರೆ.
ವಿದೇಶಗಳಿಗೆ ಒಬ್ಬ ಸಾಂಪ್ರದಾಯಿಕ ಸನ್ಯಾಸಿಗಳು ಪ್ರವಾಸ ಮಾಡುವುದು ಅಷ್ಟು ಸುಲಭಸಾಧ್ಯವಲ್ಲ.

ಏಕೆಂದರೆ ಭಾರತದಲ್ಲಿ ಯಾವ ರೀತಿಯ ಜೀವನಶೈಲಿಯನ್ನು ನಡೆಸುತ್ತಿದ್ದಾರೋ ಅದೇ ರೀತಿಯ ಜೀವನಶೈಲಿಯನ್ನು ವಿದೇಶಗಳಲ್ಲಿಯೂ ನಡೆಸಬೇಕು. ಎಷ್ಟೋ ವಿವಿಐಪಿಗಳು ವಿವಿಧ ಕಡೆಗಳ ಸಭೆ ಸಮಾರಂಭಗಳಿಗೆ ತೆರಳುವಾಗ ವಿವಿಧ ಬಗೆಯ ಉಡುಪು ಧರಿಸುವುದನ್ನು ಕಾಣಬಹುದು. ಅಗತ್ಯವಿದ್ದಾಗ ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಆಹಾರ ಸ್ವೀಕಾರ ಕ್ರಮವನ್ನೂ ಒಗ್ಗೂಡಿಸಿಕೊಂಡಿರುವುದನ್ನೂ ಕಾಣುತ್ತೇವೆ. ಸಾಂಪ್ರದಾಯಿಕ ಮಠಾಧಿಪತಿಗಳಿಗೆ ಇದು ವಿವಿಧ ಬಗೆಯ ಸಂಸ್ಕೃತಿ ಇರುವ
ದೇಶಗಳಲ್ಲಿ ತೊಡಕಾಗುತ್ತದೆ.

ಉದಾಹರಣೆಗೆ ಇಲ್ಲಿ ಹಾಕುತ್ತಿದ್ದ ಕಾವಿ ಶಾಟಿಯನ್ನೇ ಅಲ್ಲಿ ತೊಡಬೇಕು, ಇಲ್ಲಿ ತಯಾರಿ ಸಿದಂತೆಯೇ ಆಹಾರಗಳನ್ನು ಪರಿಚಾರಕ ವರ್ಗದವರು ತಯಾರಿಸಬೇಕು, ಅದನ್ನೇ ಸ್ವೀಕರಿಸಬೇಕು, ಇಲ್ಲಿ ಹೇಗೆ ಮನಬಂದಂತೆ ನೀರನ್ನೂ ಕುಡಿಯುವುದು ನಿಷೇಧವೋ ಅಲ್ಲಿಯೂ ಅದನ್ನೇ ಪಾಲಿಸಬೇಕು (ಇದು 30 ಗಂಟೆಗಳ ವಿಮಾನ ಪ್ರಯಾಣದಲ್ಲಿ ಹೇಗೆ ಸಾಧ್ಯ ಎಂಬುದನ್ನು ಊಹಿಸಬೇಕು), ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ನಿರಂತರ 24 ತಾಸು ರಾತ್ರಿಯಾಗುವುದನ್ನು
ತಡೆದುಕೊಳ್ಳುವುದರ ಜತೆ ಆಹಾರವನ್ನೂ ತಡೆಗಟ್ಟಿರಬೇಕು ಇತ್ಯಾದಿ. ಕೇವಲ ಆಹಾರ, ನೀರು ಸೇವನೆ ತಡೆಗಟ್ಟುವುದು ಮಾತ್ರವಲ್ಲ, ಇದರ ಅಡ್ಡ ಪರಿಣಾಮ ಆರೋಗ್ಯದ ಮೇಲೆ ಆಗುತ್ತದೆ.

Advertisement

ತಾಸುಗಟ್ಟಲೆ ನೀರನ್ನೂ ಕುಡಿಯದಿದ್ದರೆ ನಿರ್ಜಲೀಕರಣದ ನಾನಾ ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಇದನ್ನೂ
ಸಹಿಸಿಕೊಂಡು ಜೀವನ ನಡೆಸಬೇಕು. ಏತನ್ಮಧ್ಯೆ 15 ದಿನಗಳಿಗೊಮ್ಮೆ ಬರುವ ಏಕಾದಶಿ ವ್ರತವನ್ನು ಪಾಲಿಸಬೇಕು. ಹೀಗೆ ಎಲ್ಲ ಬಗೆಯ ವ್ಯಾವಹಾರಿಕ ತೊಡಕುಗಳನ್ನು ಮೀರಿಸಿ ನಿಂತವರು ಶ್ರೀಸುಗುಣೇಂದ್ರತೀರ್ಥರು.

ಇದು ಎಷ್ಟನೆಯ ವಯಸ್ಸಿನಲ್ಲಿ? 63ನೆಯ ವಯಸ್ಸಿನಲ್ಲಿ. ಈ ವಯಸ್ಸಿನಲ್ಲಿಯೂ ಧರ್ಮ ಪ್ರಚಾರ ಕಾರ್ಯವನ್ನು
ಶ್ರೀಸುಗುಣೇಂದ್ರತೀರ್ಥರು ಮಾಡುತ್ತಿದ್ದಾರೆ. ಈಗ ನಡೆಯುತ್ತಿರುವ ಜಾಗತಿಕ ಸಾಂಸ್ಕೃತಿಕ ಆಕ್ರಮಣಶೀಲತೆಗೆ ಪ್ರತ್ಯುತ್ತರವನ್ನು ಜಾಗತಿಕ ಸಂಚಾರದಲ್ಲಿ ಶ್ರೀಪಾದರು ಕೊಡುತ್ತಿದ್ದಾರೆ. ಶ್ರೀಉಪೇಂದ್ರತೀರ್ಥರು ಆಕ್ರಮಣ ಮಾಡಲು ಬಂದ ಕಳ್ಳರನ್ನು ಓಡಿಸಿದಾಗ ವಯಸ್ಸು ಎಷ್ಟಿರಬಹುದು? ಮಧ್ವಾಚಾರ್ಯರು ಎರಡನೆಯ ಬಾರಿಗೆ ಬದರಿ ಯಾತ್ರೆ ಕೈಗೊಂಡದ್ದೂ ಬಹುತೇಕ ಇಳಿವಯಸ್ಸಿನಲ್ಲಿ ಎಂದು ತಿಳಿದುಬರುತ್ತದೆ. ಅಂದರೆ ಆಗ ಶ್ರೀಉಪೇಂದ್ರತೀರ್ಥರಿಗೂ ಹೆಚ್ಚಾ ಕಡಿಮೆ ಇಳಿವಯಸ್ಸು. ಮೇಲಾಗಿ ಪುತ್ತಿಗೆ ಮಠದ 29 ಯತಿಗಳಲ್ಲಿ 7 ಮಂದಿ ಯತಿಗಳು ಶತಾಯುಷಿಗಳು. ಅಂದರೆ ದೇಹದಾರ್ಢ್ಯಪಟುತ್ವ ಪರಂಪರೆಯ ಒಂದು ಗುಣವಾಗಿರಬಹುದೆ?….

*********************************************************** ************** ******************* ***********

ಆಸ್ಟ್ರೇಲಿಯಾದ ಮೆಲ್ಬೋರ್ನ್ ಶ್ರೀವೆಂಕಟಕೃಷ್ಣ ಬೃಂದಾವನದಲ್ಲಿ 21-01-2023ರಂದು ನಡೆದ ಶ್ರೀನಿವಾಸ ಕಲ್ಯಾಣೋತ್ಸವ, ಗುರುವಂದನೆ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪರಿಸರ, ಪ್ರವಾಸೋದ್ಯಮ, ಕ್ರೀಡಾ ಸಚಿವ ಸ್ಟೀವ್‌ ಡಿಮೊಪೌಲಸ್‌ ಅವರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಪಡೆದ ಸಂದರ್ಭ. ಇವರು 19-03-2017ರಂದು ನಡೆದ ಮಂದಿರದ ಉದ್ಘಾಟನ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈಗ ಕಾಡ್ಗಿಚ್ಚಿನ ಋತುವಾದ ಕಾರಣ ಪರಿಸರ ಸಚಿವರಾಗಿ ದೇಶದಲ್ಲಿ ಇರಬೇಕಾಗಿದೆ. ಪರ್ಯಾಯಕ್ಕೆ ವೀಡಿಯೋ ಸಂದೇಶವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next