Advertisement

Udupi: ಅಳಿವಿನಂಚಿನಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆಗೆ ಟೀಮ್‌ ತೌಳವ

04:42 PM Oct 27, 2024 | Team Udayavani |

ಉಡುಪಿ: ಜನರ ನಿರ್ಲಕ್ಷ್ಯ ದಿಂದ ಅಜ್ಞಾತವಾಗಿರುವ ಐತಿಹಾಸಿಕ ಪ್ರಾಚೀನ ಸ್ಥಳ, ಸ್ಮಾರಕಗಳನ್ನು ಗುರುತಿಸಿ, ಸ್ವತ್ಛಗೊಳಿಸಿ ಸಂರಕ್ಷಣೆಯ ಜತೆಗೆ ದಾಖಲೀ ಕರಣ ಮಾಡುವ ಕಾರ್ಯವೊಂದು ಕರಾವಳಿಯಲ್ಲಿ ಸದ್ದಿಲ್ಲದೆ ಆರಂಭಗೊಂಡಿದೆ.
ಶ್ರೀನಿಕೇತನ ವಸ್ತುಸಂಗ್ರಹಾಲಯ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ – ಕುಕ್ಕೆ ಸುಬ್ರಹ್ಮಣ್ಯ, ಮತ್ತು ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ ಹಾಗೂ ಉಡುಪಿಗೆ ಬನ್ನಿ ಸಹಯೋಗ ಮತ್ತು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಇವರ ಮಾರ್ಗದರ್ಶನದಿಂದ ‘ಪ್ರಾಚ್ಯ ತೌಳವ ಕರ್ಣಾಟ’ ಎಂಬ ಶೀರ್ಷಿಕೆ ಯಡಿಯಲ್ಲಿ ಈ ಅಭಿಯಾನವನ್ನು ಶುರು ಮಾಡಲಾಗಿದೆ.

Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕ್ಕೆ ಸಂಬಂಧಪಟ್ಟ ಪಾಳುಬಿದ್ದ ಸ್ಥಿತಿಯಲ್ಲಿರುವ ಪ್ರಾಚೀನ ದೇಗುಲ, ಸ್ಮಾರಕ, ಕೋಟೆ-ಕೊತ್ತಲ, ಪುಷ್ಕರಣಿ, ಬಸದಿ, ಶಾಸನ, ಶಿಲ್ಪ, ನಾಣ್ಯ, ಹಸ್ತಪ್ರತಿ, ತಾಳೆಗರಿ, ಕಾವಿ ಭಿತ್ತಿಚಿತ್ರಗಳು ಸೇರಿದಂತೆ ಇನ್ನೂ ಮುಂತಾದ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾತನ ಸ್ಥಳಗಳನ್ನು ಅಲ್ಲಿನ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ, ಸ್ಥಳೀಯರಲ್ಲಿ ಅದರ ಕುರಿತ ಐತಿಹಾಸಿಕ ಪ್ರಜ್ಞೆಯನ್ನು ನೀಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

15 ದಿನಗಳ ಹಿಂದೆ ಶಿರ್ವ ಗ್ರಾಮದ ವ್ಯಾಪ್ತಿ ಯಲ್ಲಿ ಬರುವ ಮಾಣಿಬೆಟ್ಟು ಪ್ರದೇಶದಲ್ಲಿನ ಸುಮಾರು 14-15ನೇ ಶತಮಾನಕ್ಕೆ ಸೇರಿರುವ ಪಡುಮಠ ರಾಮತೀರ್ಥ ಪುಷ್ಕರಿಣಿಯನ್ನು ಅಲ್ಲಿನ ಸ್ಥಳೀಯರ ಸಹಕಾರದೊಂದಿಗೆ ಸ್ವತ್ಛಗೊಳಿಸುವ ಕಾರ್ಯವನ್ನು ನೆರವೇರಿಸಿತ್ತು. ಪ್ರತಿ ತಿಂಗಳಿಗೆ ಒಂದು ಅಜ್ಞಾತ ಐತಿಹಾಸಿಕ ಸ್ಥಳವನ್ನು ಗುರುತಿಸಿ ಅದನ್ನು ಸ್ವತ್ಛಗೊಳಿಸಲು ಈ ತಂಡ ನಿರ್ಧರಿಸಿದ್ದು, ಇದಕ್ಕಾಗಿ ಸಾರ್ವ ಜನಿಕರಿಂದಲೂ ಮಾಹಿತಿಯನ್ನು ಬಯಸಿದೆ.

ವಿದ್ಯಾರ್ಥಿಗಳೂ ಭಾಗಿ
ಈ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಅಳಿವಿನಂಚಿನ ಪುರಾತನ ಸ್ಥಳಗಳಿಗೆ ಕರೆದೊಯ್ದು ಅಲ್ಲಿನ ಇತಿಹಾಸದ ಬಗ್ಗೆ ಅಧ್ಯಯನದಲ್ಲಿ ತೊಡಗಿಸಲಾಗುತ್ತದೆ. ಆ ಮೂಲಕ ಅವರು ಸ್ವಯಂಪ್ರೇರಿತರಾಗಿ ಸಂರಕ್ಷಣೆ ಕಾರ್ಯಕ್ಕೆ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಶ್ರೀನಿಕೇತನ ವಸ್ತುಸಂಗ್ರಹಾಲಯ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯದ ಉಪನಿರ್ದೇಶಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ.

Advertisement

ಸಂಘ-ಸಂಸ್ಥೆಗಳ ಸಹಕಾರ ಅಗತ್ಯ
ಪುರಾತನ ಸ್ಥಳಗಳನ್ನು ಗುರುತಿಸಿ ಕಾಪಿಡುವ ಕೆಲಸ ಮಾಡಲು ಮುಂದಾಗಿರುವ ಪ್ರಾಚ್ಯ ತೌಳವ ಕರ್ಣಾಟ ತಂಡಕ್ಕೆ ಸ್ಥಳೀಯರು, ಸ್ಥಳೀಯ ಸಂಘ ಸಂಸ್ಥೆಗಳಿಂದ ಸಹಕಾರ ಬೇಕಾಗಿದೆ. ನಿಸ್ವಾರ್ಥದಿಂದ ಸೇವೆ ನೀಡಲು ಪುರಾತನ ಸ್ಥಳಗಳನ್ನು ಉಳಿಸಲು ಆಸಕ್ತಿ ಇರುವವರು ನಮ್ಮ ತಂಡದ ಜತೆಗೆ ಕೈಜೋಡಿಸಬಹುದು.
-ಜಿ.ಬಿ ಕಲ್ಲಾಪುರ, ನಿರ್ದೇಶಕರು, ಶ್ರೀನಿಕೇತನ ವಸ್ತುಸಂಗ್ರಹಾಲಯ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ

ಜೀವ ವೈವಿಧ್ಯತೆ ಸಂರಕ್ಷಣೆಗೂ ಆದ್ಯತೆ
ಕೇವಲ ಅಜ್ಞಾತ ಐತಿಹಾಸಿಕ ಸ್ಥಳಗಳ ಸ್ವತ್ಛತೆ, ಸಂರಕ್ಷಣೆ ಮಾತ್ರವಲ್ಲದೆ ಪುಷ್ಕರಣಿಯಂತಹ ಜಾಗಗಳಲ್ಲಿ ವಾಸಿಸುತ್ತಿರುವ ಜೀವವೈವಿಧ್ಯತೆಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಪರಿಸರ ಸಮತೋಲನ ಉದ್ದೇಶವನ್ನು ಇಟ್ಟುಕೊಂಡು ತಂಡವು ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಡುತ್ತಿದೆ.
-ಪ್ರೊ. ಎಸ್‌.ಎ ಕೃಷ್ಣಯ್ಯ, ಸಂಸ್ಥಾಪಕ ಅಧ್ಯಕ್ಷರು. ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ, ಉಡುಪಿ

ನಿಮ್ಮಲ್ಲೂ ಅಂತಹ ಸ್ಥಳಗಳಿದ್ದರೆ ಮಾಹಿತಿ ನೀಡಿ
ನಿಮ್ಮ ಸ್ಥಳೀಯ ಅಥವಾ ಪರಿಚಯವಿರುವ ಪಾಳುಬಿದ್ದ ಐತಿಹಾಸಿಕ ಸ್ಥಳ, ವಸ್ತುಗಳ ಕುರಿತು ಮಾಹಿತಿ ಇದ್ದರೆ prachyataulavakarnata@gmail.com  ಮತ್ತು 8296613761 ನಂಬರ್‌ಗೆ ವಾಟ್ಸಪ್‌ ಮಾಡ ಬಹುದು. ತಂಡವು ಅಂತಹ ಸ್ಥಳವನ್ನು ನಿಗದಿತ ದಿನದಂದು ಭೇಟಿ ನೀಡಿ ಪ್ರಾರಂಭಿಕವಾಗಿ ಆಗಬೇಕಿರುವ ಶುಚಿತ್ವ, ವಿಸ್ತೃತ ಮಾಹಿತಿ ಸಂಗ್ರಹಣೆ ಇತ್ಯಾದಿಗಳನ್ನು ಕ್ರೋಡೀಕರಣ ಮಾಡಿ ವೈಜ್ಞಾನಿಕ ಇತಿಹಾಸ ದಾಖಲೀಕರಣ ಮಾಡುತ್ತದೆ.

-ವಿಜಯ ಕುಮಾರ್‌ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next