Advertisement

Sea Erosion: ಉಡುಪಿ; ಕಡಲ ಕೊರೆತ ತಡೆಗೆ ಮತ್ತೆ ಹೊಸ ಪ್ರಸ್ತಾವನೆ ಸಲ್ಲಿಕೆ

02:48 PM Jul 13, 2023 | Team Udayavani |

ಉಡುಪಿ: ಯೋಜನೆಗೆ ಅನುಮೋದನೆ ಹಾಗೂ ಅನುದಾನ ಮೀಸಲಿಟ್ಟು ಒಂದು ವರ್ಷವಾಗುತ್ತಾ ಬಂದರೂ ಸಿಆರ್‌ ಝಡ್‌ ನಿಯಮದ ನೆಪದಡಿ ಕಡಲು ಕೊರೆತಕ್ಕೆ ಸಂಬಂಧಿಸಿದ ಮೂರು ಕಾಮಗಾರಿಗಳು ಇನ್ನೂ ಆರಂಭವಾಗಿಯೇ ಇಲ್ಲ. ಈ ಮಧ್ಯೆ ಈ ವರ್ಷ ಅದೇ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಕೋರಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

ಜಿಲ್ಲೆಯ ಪಡುಬಿದ್ರಿ, ಕೋಟ ಪಡುಕರೆ ಹಾಗೂ ಮರವಂತೆ ನಾಗಬನ ಬಳಿ 5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಆಗಬೇಕಿತ್ತು. ಅವುಗಳಿಗೆ ಅನುಮೋದನೆ ಸಿಕ್ಕು ವರ್ಷವೇ ಕಳೆಯುತ್ತಿದೆ. ಈ ಮಧ್ಯೆ ಅದೇ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಾದರೆ ಕಾಮಗಾರಿ ವಿಳಂಬಕ್ಕೆ ಸಿಆರ್‌ಝಡ್‌ ನಿಯಮ ಕಾರಣವೋ ಅಥವಾ ಹೆಚ್ಚುವರಿ ಅನುದಾನ ಪಡೆಯುವ ತಂತ್ರವೋ ಎಂಬ ಸಂಶಯ ವ್ಯಕ್ತವಾಗಿದೆ.

ಹಳೆ ಕಾಮಗಾರಿಗಳನ್ನು ಇತ್ಯರ್ಥ ಪಡಿಸಲು ಮುಂದಾಗದೇ ಅವುಗಳು ಬಾಕಿ ಇರುವಾಗಲೇ ಈ ವರ್ಷ ಮತ್ತಷ್ಟು ಕಾಮಗಾರಿಗಳಿಗೆ 5 ಕೋ. ರೂ. ಪ್ರಸ್ತಾವನೆಯನ್ನು ಮೀನುಗಾರಿಕೆ, ಬಂದರು ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಿರುವುದು ಮತ್ತಷ್ಟು ಆಶ್ಚರ್ಯ ಹುಟ್ಟಿಸಿದೆ. ಎಲ್ಲೆಲ್ಲಿ ಕಾಮಗಾರಿ: 2022-23ನೇ ಸಾಲಿನಲ್ಲಿ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ತೀವ್ರ ಕಡಲ್ಕೊರೆತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಮೂರು ಕಾಮಗಾರಿಗೆ 5 ಕೋ.ರೂ.ಗಳ ಕಾಮಗಾರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಅನುಮೋದನೆ ನೀಡಿತ್ತು.

ಕಾಪು ತಾಲೂಕಿನ ಪಡುಬಿದ್ರಿ ನಡಿಪಟ್ಣ ಮತ್ತು ಕೊಪ್ಪಲಂಗಡಿ- ಮೂಳೂರು ತೊಟ್ಟಂ ಭಾಗದಲ್ಲಿ ರಸ್ತೆ ದುರಸ್ತಿ ಹಾಗೂ ರಸ್ತೆ ಸಂರಕ್ಷಣೆ ಕಾಮಗಾರಿಗೆ 2.5 ಕೋ.ರೂ., ಕುಂದಾಪುರ ತಾಲೂಕಿನ ಕೋಟ ಪಡುಕರೆ, ಕೋಡಿಬೆಂಗ್ರೆ (ಹೊಸಬೆಂಗ್ರೆ)ಯ ಲೈಟ್‌ ಹೌಸ್‌ ರಸ್ತೆ ದುರಸ್ತಿ ಹಾಗೂ ರಸ್ತೆ ಸಂರಕ್ಷಣೆಗೆ 1.25 ಕೋ.ರೂ. ಹಾಗೂ ಬೈಂದೂರು ತಾಲೂಕಿನ ಮರವಂತೆ ನಾಗಬನ ಮತ್ತು ಬ್ರೇಕ್‌ವಾಟರ್‌ ಉತ್ತರ ದಿಕ್ಕಿನಲ್ಲಿ ರಸ್ತೆ ಕಾಮಗಾರಿ ಮತ್ತು ರಸ್ತೆ ಸಂರಕ್ಷಣೆಗೆ 1.25 ಕೋ.ರೂ. ಮೀಸಲಿಡಲಾಗಿದೆ. ಈ ಮೂರು ಕಾಮಗಾರಿಗಳು ಸಿಆರ್‌ಝಡ್‌ ನಿಯಮ ಅಡ್ಡಿ ಎಂಬ ನೆಪದಡಿ ಇನ್ನೂ ಆರಂಭವಾಗಿಯೇ ಇಲ್ಲ. ಒಟ್ಟಿನಲ್ಲಿ ಸಮುದ್ರದ ಅಂಚಿನಲ್ಲಿರುವ ಕುಟುಂಬಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಮತ್ತು ರಸ್ತೆಗಳು ಇನ್ನಷ್ಟು ಹಾನಿಯಾಗಲಿವೆ ಎನ್ನುವುದು ಸ್ಥಳೀಯರ ಆತಂಕ.

ಹೊಸ ಪ್ರಸ್ತಾವನೆ 
ಕಳೆದ ವರ್ಷದ ಕಾಮಗಾರಿ ಬಾಕಿ ಇರುವಾಗಲೇ ಮೀನುಗಾರಿಕೆ, ಬಂದರು ಇಲಾಖೆಯಿಂದ ಈ ವರ್ಷ ಆಗಬೇಕಿರುವ ತುರ್ತು ಕಾಮಗಾರಿಗೆ 5 ಕೋ.ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ.

Advertisement

ಬೈಂದೂರು ತಾಲೂಕಿನ ಪಡುವರಿ, ಆದ್ರಗೋಳಿ (ಎರಡು ಕಾಮಗಾರಿ), ಹೊಸಹಿತ್ಲು, ಆಕಳಬೈಲು, ಮರವಂತೆ (ಮೂರು ಕಾಮಗಾರಿ) ಸೇರಿ 8 ಕಡೆಗಳಲ್ಲಿ ಕಡಲ್ಕೊರೆತ ಪ್ರತಿಬಂಧಿಸಲು ತುರ್ತು ತಡೆಗೋಡೆ ನಿರ್ಮಿಸಲು ತಲಾ 25 ಲಕ್ಷದಂತೆ 2 ಕೋ.ರೂ., ಕುಂದಾಪುರ ತಾಲೂಕಿನ ತ್ರಾಸಿ, ಗುಜ್ಜಾಡಿಯಲ್ಲಿ ಕಡಲ್ಕೊರೆತ ತಡೆಗೆ 2 ಕಾಮಗಾರಿಗೆ ತಲಾ 25 ಲಕ್ಷ ರೂ., ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನ (2 ಕಾಮಗಾರಿ), ಹೊಸಬೆಂಗ್ರೆಯಲ್ಲಿ ತಡೆಗೋಡೆ ನಿರ್ಮಿಸಲು 3 ಕಾಮಗಾರಿಗೆ ತಲಾ 25 ಲಕ್ಷ ರೂ.,
ಉಡುಪಿ ತಾಲೂಕಿನ ಉದ್ಯಾವರ ಪಡುಕರೆಯಲ್ಲಿ ತಡೆಗೋಡೆ ಕಾಮಗಾರಿಗೆ 25 ಲಕ್ಷ ಮತ್ತು ಕಾಪು ತಾಲೂಕಿನ ಕೈಪುಂಜಾಲ್‌, ಮೂಳೂರು ತೊಟ್ಟಂ (2 ಕಾಮಗಾರಿ), ಪಡುಬಿದ್ರಿ (3 ಕಾಮಗಾರಿ) ಸೇರಿ 6 ಕಾಮಗಾರಿಗೆ ತಲಾ 25 ಲಕ್ಷ ರೂ. ಕೋರಲಾಗಿದೆ.

ಹಳೇ ಕಾಮಗಾರಿಗೇ ಹೊಸ ಪ್ರಸ್ತಾವನೆ
2022-23ರಲ್ಲಿ ಕಾಮಗಾರಿ ಆಗಬೇಕಿರುವಲ್ಲಿ ಇನ್ನೂ ತಡೆಗೋಡೆ ಅಥವಾ ರಸ್ತೆ ನಿರ್ಮಾಣ ಆರಂಭವಾಗಿಲ್ಲ. ಈ ವರ್ಷವೂ ಮರವಂತೆ, ಪಡುಬಿದ್ರಿ ಹಾಗೂ ಕೋಟ ಪಡುಕರೆಯಲ್ಲಿ ರಸ್ತೆ ದುರಸ್ತಿ ಹಾಗೂ ರಸ್ತೆ ಸಂರಕ್ಷಣೆಗೆ ಮತ್ತೆ ಅನುದಾನ ಕೋರಲಾಗಿದೆ. ಮರವಂತೆ ಹಾಗೂ ಪಡುಬಿದ್ರಿಯಲ್ಲಿಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಗೂ ಯೋಜನೆ ರೂಪಿಸಲಾಗಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ.

ಸಿಆರ್‌ಝಡ್‌ ಸಮಸ್ಯೆಯಿಂದ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ಸಹಿತ ಸಮುದ್ರ ಕಿನಾರೆಯಲ್ಲಿ ಹಲವು ಕಾಮಗಾರಿಗಳಿಗೆ ಅಡಚಣೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ಮಂಕಾಳ ವೈದ್ಯ,ಮೀನುಗಾರಿಕೆ ಮತ್ತು ಬಂದರು ಸಚಿವ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next