Advertisement

ದ್ವೈವಾರ್ಷಿಕ ಪರ್ಯಾಯದ 500ನೇ ವರ್ಷಕ್ಕೆ ದಿನಗಣನೆ…

12:49 AM Jan 08, 2021 | Team Udayavani |

ಶ್ರೀಕೃಷ್ಣ ಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಆರಂಭವಾಗಿ 499ನೇ ವರ್ಷ ನಡೆಯುತ್ತಿದೆ. ಬಹುತೇಕ ಈ ವರ್ಷ ಕೊರೊನಾ ಸೋಂಕಿನಿಂದ ಕೃಷ್ಣಮಠವೂ ಸೇರಿದಂತೆ ಇಡೀ ಜಗತ್ತೇ ನಲುಗಿ ಹೋಯಿತು. ಇದು ಎಷ್ಟು ಪಕ್ಕಾ ಆಗಿ ಘಟಿಸಿದೆ ಎಂದರೆ 2019ರ ಡಿ. 31ರಂದು ಸೋಂಕು ಕಾಣಿಸಿಕೊಂಡಿತು. ಎರಡು ದಿನ ಮುನ್ನ ಡಿ. 29ರಂದು ದಿಗ್ಗಜರೆನಿಸಿದ್ದ ಪೇಜಾವರ ಶ್ರೀಗಳೂ ಇಹಲೋಕ ತ್ಯಜಿಸಿದರು. ಪರ್ಯಾಯ ಪೂಜಾ ವ್ಯವಸ್ಥೆ ಇದೇ ಜ. 18ರಂದು 500ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ನೂತನ ವರ್ಷದಲ್ಲಿ ಲಸಿಕೆ ಜಾರಿ ಪ್ರಯೋಗ ನಡೆಯುತ್ತಿದ್ದು ಕೊರೊನಾದಿಂದ ಮುಕ್ತವಾಗಬಹುದೆ ಎಂಬ ಕುತೂಹಲವೂ ಮೂಡುತ್ತದೆ.

Advertisement

ಉಡುಪಿ: ಶ್ರೀಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಆರಂಭಗೊಂಡು 499 ವರ್ಷಗಳು ಮುಗಿದು 500ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುವ ಐತಿಹಾಸಿಕ ಘಟ್ಟಕ್ಕೆ ಇನ್ನು ಕೆಲವೇ ದಿನಗಳಿವೆ.

ಶ್ರೀಮಧ್ವಾಚಾರ್ಯರು ತಮ್ಮ ಜೀವಿತದ ಕೊನೆಯ ಭಾಗದಲ್ಲಿ ಅಂದರೆ 1300ರ ಬಳಿಕ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರೆಂಬ ನಂಬಿಕೆ ಇದೆ. ಇದರ ಅಂಗವಾಗಿಯೇ ಮಕರಸಂಕ್ರಾಂತಿ ಉತ್ಸವ ನಡೆಯುತ್ತದೆ. ಅನಂತೇಶ್ವರ ದೇವಸ್ಥಾನದಲ್ಲೂ ಮಕರ ಸಂಕ್ರಾಂತಿ ಉತ್ಸವ ಲಾಗಾಯ್ತಿನಿಂದ ನಡೆಯು ತ್ತಿತ್ತು ಎಂಬ ಅಂಶವೂ ಮಧ್ವವಿಜಯದಲ್ಲಿ ಉಲ್ಲೇಖೀತಗೊಂಡಿದೆ. ಈಗ ಜ. 14ರಂದು ನಡೆಯುವ ಮಕರಸಂಕ್ರಾಂತಿ ಉತ್ಸವವೂ 499ರಿಂದ 500ನೆಯ ವರ್ಷಕ್ಕೆ ಕಾಲಿಡುವ ಹೊಸ್ತಿಲೂ ಆಗಿದೆ.

ಮಧ್ವರು ಎಂಟು ಮಂದಿ ಸನ್ಯಾಸಿ ಶಿಷ್ಯರಿಗೆ ಎರಡು ತಿಂಗಳಿಗೊಮ್ಮೆ ಸರದಿಯಂತೆ ಪೂಜೆ ಸಲ್ಲಿಸಲು ಅಪ್ಪಣೆ ಕೊಡಿಸಿದ್ದರೆ, ಶ್ರೀವಾದಿರಾಜ ಸ್ವಾಮಿಗಳು (1481-1601) ಇದನ್ನು ಎರಡು ವರ್ಷಗಳಿಗೆ ಪರಿವರ್ತಿಸಿದರು. ಈ ಕ್ರಮವನ್ನು ಆರಂಭಿಸಿದ್ದು 1522ರ ಜ. 18ರಂದು. ಪರ್ಯಾಯ ಪೂಜಾ ಚಕ್ರ ಆರಂಭವಾಗುವುದು ಪಲಿಮಾರು ಮಠದಿಂದ, ಕೊನೆಗೊಳ್ಳುವುದು ಪೇಜಾವರ ಮಠದಲ್ಲಿ. ಈ ನಡುವೆ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಮಠಗಳ ಸರದಿ ಬರುತ್ತದೆ.

1522ರಲ್ಲಿ ಪಲಿಮಾರು ಮಠದ ಸರದಿ ನಡೆದರೆ, 1532ರಲ್ಲಿ ಸ್ವತಃ ವಾದಿರಾಜ ಸ್ವಾಮಿಗಳ ಸರದಿ ಬಂತು. ಆಗ 52 ವರ್ಷದವರಾದ ವಾದಿರಾಜರಿಗೆ ಒಟ್ಟು ನಾಲ್ಕು ಪರ್ಯಾಯ ಪೂಜೆಗಳನ್ನು ನಡೆಸುವಾಗ 100 ವರ್ಷವಾಯಿತು. ಐದನೆಯ ಪರ್ಯಾಯದ ಅವಧಿಯಲ್ಲೂ ಇದ್ದರು, ಈ ಅವಧಿಯ ಪೂಜೆಯನ್ನು ಶಿರಸಿ ಸಮೀಪದ ಸೋಂದೆಯಲ್ಲಿ 1596-97ರಲ್ಲಿ ನಡೆಸಿದರು. 120ನೆಯ ವರ್ಷದಲ್ಲಿ 1601ರಲ್ಲಿ ವೃಂದಾವನಸ್ಥರಾದರು.

Advertisement

1522ರಿಂದ ಆರಂಭಗೊಂಡ ಪೂಜಾ ಪದ್ಧತಿಯಂತೆ 16 ವರ್ಷಗಳಿಗೊಮ್ಮೆ ಒಂದು ಚಕ್ರದಂತೆ 31 ಚಕ್ರಗಳು ಉರುಳಿ 32ನೆಯ ಚಕ್ರದ ಎರಡನೆಯ ಪರ್ಯಾಯ ಪೂಜಾ ಕಾಲಘಟ್ಟ ನಡೆಯುತ್ತಿದೆ. 499ನೆಯ ವರ್ಷ ಉರುಳಿ 2021ರ ಜ. 18ರಂದು 500ನೆಯ ವರ್ಷ ಆರಂಭವಾಗುತ್ತದೆ. 2022ರ ಜ. 18ರಂದು 501ನೆಯ ವರ್ಷದಲ್ಲಿ 251ನೆಯ ಪರ್ಯಾಯ (ಕೃಷ್ಣಾಪುರ ಮಠ) ಆರಂಭವಾಗುತ್ತದೆ.

ಜ. 9ರಿಂದ ಸಪ್ತೋತ್ಸವ
500ನೆಯ ವರ್ಷಕ್ಕೆ ಹೊರಳುವಾಗ ಸರಣಿ ಕಾರ್ಯಕ್ರಮವನ್ನು ಪರ್ಯಾಯ ಅದಮಾರು ಮಠ ಏರ್ಪಡಿಸುತ್ತಿದೆ. ಜ. 9ರಿಂದ ಸಪ್ತೋತ್ಸವ ಆರಂಭಗೊಳ್ಳುತ್ತದೆ. ಕೊರೊನಾ ಲಾಕ್‌ಡೌನ್‌ ಆರಂಭವಾದ ಮಾ. 22ರಿಂದ ನಿಂತು ಹೋದ ಭೋಜನಪ್ರಸಾದ ಜ.
10ರಿಂದ ಆರಂಭಗೊಳ್ಳುತ್ತಿದೆ. ಜ. 14ರವರೆಗೆ ಸಪ್ತೋತ್ಸವ ನಡೆದು ಅಂದು ಮಕರಸಂಕ್ರಾಂತಿ ಉತ್ಸವ ಸಂಪನ್ನ ಗೊಳ್ಳುತ್ತದೆ. ಜ. 15ರಂದು ಚೂರ್ಣೋತ್ಸವ, ಜ. 16ರಿಂದ 23ರ ವರೆಗೆ ಪರ್ಯಾಯ ಇತಿಹಾಸದ ಪಂಚ ಶತಮಾನೋ ತ್ಸವವನ್ನು ಆಯೋಜನೆ ಗೊಳಿಸಲು ನಿರ್ಧರಿಸ ಲಾಗಿದೆ. ದಿನವೂ ವಿವಿಧ ಮಠಗಳ ಪರ್ಯಾಯ, ಅದರ ಇತಿಹಾಸ ಪರಂಪರೆಯ ವೈಶಿಷ್ಟéಗಳ ಮೇಲೆ ಬೆಳಕು ಚೆಲ್ಲುವ ಚಿಂತನಮಂಥನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಆರಂಭವಾಗಿ 499 ವರ್ಷಗಳು ಸರಿದು 500ನೆಯ ವರ್ಷಕ್ಕೆ ಪಾದಾರ್ಪಣೆ ಆಗುವುದು ಅಪೂರ್ವ ಕಾಲಘಟ್ಟ. ಇದನ್ನು ಸರ್ವರ ಸಹಕಾರದಲ್ಲಿ ಅರ್ಥಪೂರ್ಣವಾಗಿಸಲು ಚಿಂತನೆ ನಡೆಸಿದ್ದೇವೆ.
– ಶ್ರೀಈಶಪ್ರಿಯತೀರ್ಥ ಶ್ರೀಪಾದರು,  ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next