Advertisement

ಉಡುಪಿ ಆರ್‌ಟಿಒ ಕಚೇರಿ: ಶೇ.55ರಷ್ಟು ಹುದ್ದೆ ಖಾಲಿ!

09:06 PM Oct 21, 2020 | mahesh |

ಉಡುಪಿ: ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಶೇ.55ರಷ್ಟು ಹುದ್ದೆಗಳು ಖಾಲಿ ಇದ್ದು, ಇದರಿಂದಾಗಿ ಹೊಸ ವಾಹನಗಳ ನೋಂದಣಿ, ಚಾಲನೆ ಪರವಾನಿಗೆ ಪಡೆಯುವುದು ಸಹಿತ ಬಹಳಷ್ಟು ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಉಡುಪಿ ಸಾರಿಗೆ ಇಲಾಖೆಗೆ ಮಂಜೂರಾದ 36 ಹುದ್ದೆಗಳ ಪೈಕಿ ಕೇವಲ 16 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ ಬರೋಬ್ಬರಿ 20 ಹುದ್ದೆಗಳಲ್ಲಿ ಸಿಬಂದಿ ಇಲ್ಲದೆ ಖಾಲಿ ಇವೆ. 36 ಮಂದಿ ಇರಬೇಕಾದ ಕಚೇರಿಯಲ್ಲಿ ಬೆರಳೆಣಿಕೆ ಯಷ್ಟು ಸಿಬಂದಿ ಇದ್ದಾರೆ. ಅವರ ಮೇಲೆಯೂ ಅಷ್ಟೇ ಕೆಲಸದ ಒತ್ತಡವಿರುತ್ತದೆ. ಈ ಬಗ್ಗೆ ಇಲ್ಲಿನ ಸಾರಿಗೆ ಇಲಾಖೆಯಿಂದಲೂ ರಾಜ್ಯ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.

Advertisement

ವಾಹನಗಳ ಪರವಾನಿಗೆ ನವೀಕರಣ, ಹೊಸ ಪರವಾನಿಗೆ ಪಡೆಯಲು, ದಾಖಲೆ ಸಲ್ಲಿಕೆ, ಸಹಿತ ವಿವಿಧ ಕೆಲಸಗಳಿಗೆ ದಿನನಿತ್ಯ ಹಲವು ಮಂದಿ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಸಿಬಂದಿ ಕಡಿಮೆ ಇರುವ ಕಾರಣದಿಂದಾಗಿ ಗ್ರಾಹಕರು ಅನಗತ್ಯವಾಗಿ ಸಮಯ ವ್ಯಯ ಮಾಡಬೇಕಾದ ಸನ್ನಿವೇಶವೂ ಎದುರಾಗುತ್ತಿದೆ.

2 ಮಂದಿ ಬೇರೆ ಕಚೇರಿಗೆ
ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸಿಬಂದಿ ಕೊರತೆ ಇದ್ದರೂ ಇಬ್ಬರು ಸಿಬಂದಿಯನ್ನು ಬೇರೆ ಕಚೇರಿಗಳಿಗೆ ನಿಯೋಜನೆಗೆ ಒಳಪಡಿ ಸಿರುವುದು ವಿಶೇಷ.

ಓರ್ವ ಚಾಲಕ ಬೇರೆಡೆಗೆ ನಿಯೋಜನೆ
ಪ್ರಥಮ ದರ್ಜೆ ಸಹಾಯಕರು-1, ಓರ್ವ ಚಾಲಕ ಬೇರೆಡೆಗೆ ನಿಯೋಜನೆಗೊಂಡಿದ್ದಾರೆ. ಓರ್ವ ಮೋಟಾರು ವಾಹನ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಓರ್ವರು ಸಹಾಯಕ ಪ್ರಾದೇಶಿಕ ಅಧಿಕಾರಿ ಬೇರೆ ಜಿಲ್ಲೆಯಿಂದ ಇಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಖಾಲಿ ಇರುವ ಹುದ್ದೆಗಳು
ಉಡುಪಿ ಸಾರಿಗೆ ಕಚೇರಿಯಲ್ಲಿ ಮಂಜೂರಾದ 36 ಹುದ್ದೆಗಳ ಪೈಕಿ 20 ಹುದ್ದೆಗಳು ಖಾಲಿ ಇದ್ದು, ಮುಖ್ಯವಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಲೆಕ್ಕ ಪತ್ರಾಧಿಕಾರಿ ಹುದ್ದೆ ಖಾಲಿಯಿದೆ. ಹಿರಿಯ ಅಧೀಕ್ಷಕರ ಎರಡು ಹುದ್ದೆಯೂ ಖಾಲಿ ಬಿದ್ದಿವೆ. ಕಚೇರಿ ಮೇಲ್ವಿಚಾರಕರ ಒಟ್ಟು 3 ಹುದ್ದೆಗಳಲ್ಲಿ 1 ಹುದ್ದೆ ಖಾಲಿಯಿದೆ. ಮೋಟಾರು ವಾಹನ ನಿರೀಕ್ಷಕರ 5 ಹುದ್ದೆಗಳಲ್ಲಿ ಮೂವರಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಥಮ ದರ್ಜೆ ಸಹಾಯಕರ 6 ಹುದ್ದೆಗಳ ಪೈಕಿ ಎಲ್ಲವೂ ಭರ್ತಿಯಾಗಿವೆ. ಒಬ್ಬರು ಮಂಗಳೂರಿನಿಂದ ಇಲ್ಲಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆರಳಚ್ಚುಗಾರರ 2 ಹುದ್ದೆಯಲ್ಲಿ 1 ಹುದ್ದೆ ಖಾಲಿಯಿದೆ. ದ್ವಿತೀಯ ದರ್ಜೆ ಸಹಾಯಕರ 8 ಹುದ್ದೆಗಳ ಪೈಕಿ ಓರ್ವ ಸಿಬಂದಿ ಮಾತ್ರ ಇದ್ದಾರೆ.ಚಾಲಕ 3ಹುದ್ದೆಗಳ ಪೈಕಿ 1 ಹುದ್ದೆ ಭರ್ತಿಯಾಗಿದೆ. ಒಬ್ಬರನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಗ್ರೂಪ್‌ “ಡಿ’ ಅಧಿಕಾರಿಗಳ 4 ಹುದ್ದೆಗಳ ಪೈಕಿ 1 ಹುದ್ದೆ ಮಾತ್ರ ಭರ್ತಿಯಾಗಿದ್ದು, 3 ಹುದ್ದೆಗಳು ಖಾಲಿಯಾಗಿವೆ.

Advertisement

ಸರಕಾರದ ಗಮನಕ್ಕೆ ತರಲಾಗಿದೆ
ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಶೇ.50ಕ್ಕಿಂತಲೂ ಅಧಿಕ ಹುದ್ದೆ ಖಾಲಿಯಿವೆ. ಇದರಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಗೆ ಹೆಚ್ಚುವರಿ ಒತ್ತಡ ಬೀಳುತ್ತಿದೆ. ವರ್ಗಾವಣೆ, ನಿವೃತ್ತಿ ಸಹಿತ ಹಲವು ಕಾರಣಗಳಿಂದ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸರಕಾರದ ಗಮನಕ್ಕೂ ತರಲಾಗಿದೆ. -ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next