Advertisement

ಬಾಳೆ ಮುಹೂರ್ತಕ್ಕೆ  “ಪ್ರಯೋಗ ಸ್ಪರ್ಶ’

09:54 AM Dec 13, 2018 | |

ಉಡುಪಿ: ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳಿಗೊಮ್ಮೆ ನಡೆವ ಪರ್ಯಾಯ ಪೂಜಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಮೊದಲ ಕಾರ್ಯಕ್ರಮ ಬಾಳೆ ಮುಹೂರ್ತ. ಪರ್ಯಾಯಕ್ಕೆ ಬಾಳೆ ಎಲೆ, ಬಾಳೆ ಹಣ್ಣು ಪೂರೈಕೆಗೆ ಮುಹೂರ್ತವಿದು. ಹಲವು ವರ್ಷಗಳಿಂದ ಇದು ಸಾಂಕೇತಿಕವಾಗಿದೆ. 2020ರ ಜ. 18ರಂದು ಆರಂಭಗೊಳ್ಳುವ ಶ್ರೀ ಅದಮಾರು ಮಠದ ಪರ್ಯಾಯಕ್ಕೆ ಇದನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. 
ಹೆಬ್ರಿ ಸಮೀಪದ ಚಾರ ಗ್ರಾಮದಲ್ಲಿ ಈ ಬಾಳೆ ಬೆಳೆಯ ಪ್ರಯೋಗ ನಡೆಯುತ್ತದೆ. ಚಾರದ ಬಾವಿಗದ್ದೆ ಸಾಧು ಶೆಟ್ಟಿ ಅವರ ಪುತ್ರ ಮಿಥುನ್‌ ಶೆಟ್ಟಿ ಅವರು ಹಂದಿಗಲ್ಲು ವಿವೇಕಾನಂದ ವೇದಿಕೆ ಮೂಲಕ ಬಾಳೆ ಕೃಷಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ.

Advertisement

ಶ್ರೀಕೃಷ್ಣ ಮಠಕ್ಕೆ ಬೇಕಾಗುವ ಬಾಳೆ ಎಲೆ, ಹಣ್ಣುಗಳನ್ನು ಸ್ಥಳೀಯ ಕೃಷಿಕರಿಂದಲೇ ಖರೀದಿ ಮಾಡಿದರೆ ಅನುಕೂಲ, ಗುಣಮಟ್ಟವನ್ನೂ ಕಾಪಾಡಬಹುದು ಎಂದು ಮನಗಂಡು  ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಅವರ ಪಟ್ಟಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈ ಪರಿಕಲ್ಪನೆ ಸಾರಾಕಗೊಳಿಸಿದ್ದಾರೆ. ಮುಂದೆ ಅಕ್ಕಿ, ಬೆಲ್ಲ ಇತ್ಯಾದಿ ಉತ್ಪನ್ನಗಳನ್ನೂ ಶ್ರೀಕೃಷ್ಣ ಮಠಕ್ಕೆ ಒದಗಿಸಿಕೊಳ್ಳುವ ದೂರಗಾಮಿ ಯೋಚನೆಯೂ ಶ್ರೀಪಾದರಿಗೆ ಇದೆ.

ಸ್ಥಳೀಯ ಆಹಾರ ಉತ್ಪನ್ನ ಶ್ರೇಷ್ಠ
ಆಯುರ್ವೇದ ಶಾಸ್ತ್ರದ ಪ್ರಕಾರ ಸ್ಥಳೀಯವಾಗಿ ಬೆಳೆದ ಆಹಾರ ಪದಾರ್ಥಗಳನ್ನು ಬಳಸುವುದು ಉತ್ತಮ. ಇದಕ್ಕೆ ಕಾರಣ ನಮ್ಮ ಜೀನ್ಸ್‌ (ವಂಶವಾಹಿ) ಆಯಾ ಭೌಗೋಳಿಕ ಸಂಸ್ಕೃತಿ, ಸಂಸ್ಕಾರ, ಸಂಪರ್ಕವನ್ನು ಹೊಂದಿರುತ್ತದೆ. ದೂರದ ಆಹಾರ ಪದಾರ್ಥಗಳ ಗುಣಧರ್ಮ ಬೇರೆಯಾಗಿರುತ್ತವೆ. ದೇಹದ ಪ್ರಕೃತಿಗೆ ಅನುಸಾರವಾಗಿ ಇದನ್ನು ಉಲ್ಲೇಖೀಸಲಾಗಿದೆ. ಸ್ಥಳೀಯವೆಂದರೆ 12 ಯೋಜನವೆಂದು ಪ್ರಾಚೀನರು ಗುರುತಿಸಿದ್ದಾರೆ. ಸುಮಾರು 120 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದ ಆಹಾರ ಉತ್ಪನ್ನಗಳು ಶ್ರೇಷ್ಠವೆಂದು ಅರ್ಥ.

ಚಾರ ಆಸುಪಾಸಿನ ಸುಮಾರು 12 ಮನೆಯವರು 10 ಎಕ್ರೆ ಪ್ರದೇಶದಲ್ಲಿ ಬಾಳೆ ಕೃಷಿಗೆ ಮುಂದಾಗಿದ್ದಾರೆ. ಈಗಾಗಲೇ 1,000 ಬಾಳೆ ಗಿಡಗಳನ್ನು ಸಿದ್ಧಪಡಿಸಿ ಟ್ಟುಕೊಂಡಿದ್ದು ಮುಂದೆ ಇನ್ನೂ 1,000 ಗಿಡಗಳನ್ನು ಸಂಗ್ರಹಿಸುತ್ತಾರೆ. ಬಾಳೆ ಕೃಷಿ ನಡೆಸಲು ಆಸಕ್ತರಿರುವ ರೈತರನ್ನು ಸಂಪರ್ಕಿಸಿ ಅಥವಾ ರೈತರು ಆಸಕ್ತಿ ತೋರಿದರೆ ಅವರನ್ನೂ ಈ ಗುಂಪಿನಲ್ಲಿ ಸೇರಿಸಿಕೊಳ್ಳುವ ಇರಾದೆ ಮಿಥುನ್‌ ಶೆಟ್ಟಿಯವರಿಗೆ ಇದೆ.

ಬಾಳೆದಿಂಡು, ಪೂಂಬೆಯ ಮಹತ್ವ


ಬಾಳೆ ಎಲೆಯ ಊಟ ಶ್ರೇಷ್ಠ. ಬಾಳೆ ದಿಂಡಿನ ಆಹಾರ ಪದಾರ್ಥಗಳು ಕಿಡ್ನಿಯ ಕಲ್ಲು ಸಮಸ್ಯೆಗೆ ರಾಮ ಬಾಣ. ಗುಡ್ಡದಲ್ಲಿ ಬೆಳೆಯುವ “ಕಲ್ಲುಬಾಳೆ’ಯ  ಹಣ್ಣುಗಳಿಗೆ ಕಿಡ್ನಿಯ ಕಲ್ಲನ್ನು ಕರಗಿಸುವ ಶಕ್ತಿ ಇದೆ. ಬಾಳೆಯ ಹೂ(ಪೂಂಬೆ)ವನ್ನು ತಂಬುಳಿ, ಪಲ್ಯ ಮಾಡಿ ಸೇವಿಸುವ ಕ್ರಮವಿದೆ. ಇದು ಮಹಿಳೆಯರ ಬಿಳಿ ಸ್ರಾವ ಸಮಸ್ಯೆಗೆ ರಾಮಬಾಣ. ಇದನ್ನು ಗರ್ಭಿಣಿಯರಿಗೆ ಕೊಡಬಾರದು. ಅತಿಸಾರ, ಹೊಟ್ಟೆಯುರಿ ಇತ್ಯಾದಿ ಸಮಸ್ಯೆಗಳನ್ನೂ ಪರಿಹರಿಸುತ್ತವೆ. (15ನೇ ಶತಮಾನಕ್ಕೆ ಸೇರಿದ ಗುಜರಾತ್‌ ಮೂಲದ ಕಯ್ಯದೇವನ ನಿಘಂಟಿನಲ್ಲಿ ಇದರ ಉಲ್ಲೇಖವಿದ್ದು, ಇವೆರಡೂ ಪ್ರಯೋಗಗಳನ್ನು ಆಯುರ್ವೇದ ವೈದ್ಯರು ಸಲಹೆ ನೀಡುತ್ತಾರೆ.)

Advertisement

ನಾಳೆ ಬಾಳೆ ಮುಹೂರ್ತ
ಡಿ. 14ರ ಬೆಳಗ್ಗೆ 7.45ಕ್ಕೆ ಉಡುಪಿ ಶ್ರೀ ಅದಮಾರು ಮಠದ ಆವರಣದಲ್ಲಿ ಬಾಳೆ ಮುಹೂರ್ತ ನಡೆಯಲಿದೆ. ಅದೇ ದಿನ ಅಪರಾಹ್ನ 4 ಗಂಟೆಗೆ ಹೆಬ್ರಿ ಸಮೀಪದ ಚಾರದಲ್ಲಿ ಬಾಳೆ ಕೃಷಿಗೆ ಚಾಲನೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next