Advertisement

Udupi Paryaya; ಅನ್ನದಾನ ಮನಃತೃಪ್ತಿಯ ಶ್ರೇಷ್ಠ ದಾನ: ಪುತ್ತಿಗೆ ಶ್ರೀ

11:45 PM Jan 14, 2024 | Team Udayavani |

ಉಡುಪಿ: ನಾವು ಗಳಿಸಿದ ಸಂಪತ್ತಿನಲ್ಲಿ ಒಂದಿಷ್ಟು ಪಾಲು ದೇವರಿಗೂ ಸಮರ್ಪಿಸಿದರೆ, ಭಗವಂತನು ದುಪ್ಪಟ್ಟು ನಮಗೆ ಕರುಣಿಸುತ್ತಾನೆ. ಎಲ್ಲ ದಾನಕ್ಕಿಂತಲೂ ಅನ್ನದಾನ ಮನಃತೃಪ್ತಿಯ ಶ್ರೇಷ್ಠದಾನವಾಗಿದೆ ಎಂದು ಭಾವೀ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

Advertisement

ಪುತ್ತಿಗೆ ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನವೋದಯ ಸ್ವಸಹಾಯ ಸಂಘ ಮತ್ತು ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಘಗಳ ವತಿಯಿಂದ ರವಿವಾರ ಹೊರೆ ಕಾಣಿಕೆ ಸಮರ್ಪಣೆಯ ಅನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಈ ಬಾರಿ ಪರ್ಯಾಯದಲ್ಲಿ ಎರಡು ಮಹತ್ವದ ಉದ್ದೇಶ ನಮ್ಮದಾಗಿದ್ದು, ಎರಡು ವರ್ಷ ಭಕ್ತರಿಗೆ ಹೊಟ್ಟೆಗೆ ಸಾತ್ವಿಕ ಅನ್ನ ಪ್ರಸಾದ, ತಲೆಗೆ ಗೀತಾ ಸಂದೇಶ ನಮ್ಮ ಆಶಯವಾಗಿದೆ. ಇದೆರಡೂ ಸಿಕ್ಕರೆ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ. ರವಿವಾರ ದಾಖಲೆ ಪ್ರಮಾಣದಲ್ಲಿ ದೇವರಿಗೆ ಹೊರೆಕಾಣಿಕೆ ಸಲ್ಲಿಕೆಯಾಗಿದೆ ಎಂದರು.

ವಿಶಿಷ್ಟ ರೀತಿಯಲ್ಲಿ ಹೊರೆಕಾಣಿಕೆ ಸಲ್ಲಿಸಿದ ಸಹಕಾರ ಕ್ಷೇತ್ರದ ರಾಜನಾಗಿರುವ ರಾಜೇಂದ್ರ ಕುಮಾರ್‌ ಅವರು ಸಹಕಾರಿ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಿ ಸಾಧನೆ ಮಾಡುವಂತಾಗಲಿ. ಶ್ರೀಕೃಷ್ಣನಿಗೆ ನಾವು ಏನನ್ನೇ ಅರ್ಪಿಸಿದರೂ ದುಪ್ಪಟ್ಟು ರೀತಿಯಲ್ಲಿ ನಮಗೆ ಹಿಂದಿರುಗಿಸುತ್ತಾನೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಮತ್ತು ನವೋದಯ ಸ್ವಸಹಾಯ ಸಂಘ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕಮಾರ್‌, ರಾಜೆ ಛತ್ರಪತಿ ಶಿವಾಜಿ ಮಹಾರಾಜ್‌ ಮರಾಠಿ ಗೋಲ್ಡ್‌ ಆ್ಯಂಡ್‌ ಸಿಲ್ವರ್‌ ಅಸೋಸಿಯೇಶನ್‌ನ ಪ್ರಮುಖರಾದ ಪುಂಡಲೀಕ ಪಾಟೀಲ್‌, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌, ಪ್ರಮುಖರಾದ ದೇವಿಪ್ರಸಾದ್‌ ಶೆಟ್ಟಿ ಬೆಳಪು, ರಂಜನ್‌ ಕಲ್ಕೂರ, ಸುಪ್ರಸಾದ್‌ ಶೆಟ್ಟಿ, ಶ್ರೀ ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ, ನಾಗರಾಜ್‌ ಆಚಾರ್ಯ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪುತ್ತಿಗೆ ಮಠದ ರಮೇಶ್‌ ಭಟ್‌ ನಿರೂಪಿಸಿದರು.

Advertisement

40 ಲಕ್ಷ ರೂ. ಮೌಲ್ಯದ ಹೊರೆಕಾಣಿಕೆ
ನವೋದಯ ಸ್ವಸಹಾಯ ಸಂಘ ಮತ್ತು ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಘಗಳ ವತಿಯಿಂದ ಪುತ್ತಿಗೆ ಪರ್ಯಾಯೋತ್ಸವಕ್ಕೆ 40 ಲಕ್ಷ ರೂ. ಮೌಲ್ಯದ ಹೊರೆಕಾಣಿಕೆ ಸಮರ್ಪಿಸಲಾಯಿತು. ನವೋದಯ ಟ್ರಸ್ಟ್‌ ನ ವತಿಯಿಂದ ಡಾ| ಎಂ.ಎನ್‌. ರಾಜೇಂದ್ರ ಕಮಾರ್‌ ಅವರು 5 ಲಕ್ಷ ರೂ. ಚೆಕ್‌ ಅನ್ನು ಪುತ್ತಿಗೆ ಮಠಕ್ಕೆ ಹಸ್ತಾಂತರಿಸಿದರು.

ಪುತ್ತಿಗೆ ಶ್ರೀಗಳು ಇಂದು ಕಾರ್ಕಳಕ್ಕೆ
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಸೋಮವಾರ ಸಂಜೆ 4ಕ್ಕೆ ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಹಾಗೂ 4.30ಕ್ಕೆ ಕಾರ್ಕಳದ ಪಡು ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next