Advertisement

ಉಡುಪಿ ಜಿಲ್ಲೆ ಕಡಲತೀರ : ಜೀವ ರಕ್ಷಣೆಗೆ ಆಧುನಿಕ ಸೌಕರ್ಯ ಬೇಕು

01:51 AM Apr 20, 2022 | Team Udayavani |

ಕರಾವಳಿ ಕಡಲ ತೀರವನ್ನು ಕಂಡು ಮೋಹಗೊಳ್ಳದಿರುವವರು ವಿರಳ. ವಿಶಿಷ್ಟವೆನಿಸುವ ಕಡಲ ತೀರಕ್ಕೆ ಪರ ಊರುಗಳಿಂದ ಬರುವ ಪ್ರವಾಸಿಗರು ಸಮುದ್ರದ ಆಳರಿವು ಇಲ್ಲದೇ, ಇನ್ನು ಕೆಲವರು ಎಚ್ಚರಿಸಿದರೂ ನಿರ್ಲಕ್ಷ್ಯ ವಹಿಸಿ ಅಪಾಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿ ವರದಿಗಾರರ ತಂಡ ನಡೆಸಿದ ಅಧ್ಯಯನವಿದು. ಪ್ರಮುಖ ಕಡಲ ತೀರದಲ್ಲಿ ಯಾವ ಪರಿಸ್ಥಿತಿ ಇದೆ? ಪ್ರವಾಸಿಗರ ಜೀವ ರಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ಕೊಟ್ಟ ಗಮನ ಎಷ್ಟು? ಜಿಲ್ಲಾಡಳಿತ ಏನು ಮಾಡಬೇಕು ಎಂಬ ಅಂಶಗಳನ್ನು ವರದಿ ಮೂಲಕ ಪಟ್ಟಿ ಮಾಡಿಕೊಡಲಾಗುವುದು.

Advertisement

ಕಾಪು ಬೀಚ್‌-ಪ್ರವಾಸಿ ಮಿತ್ರರು, ಜೀವ ರಕ್ಷಕರ ಕೊರತೆ
ಕಾಪು: ಕಾಪು ಬೀಚ್‌ ಮತ್ತು ಲೈಟ್‌ಹೌಸ್‌ ಅನ್ನು ವೀಕ್ಷಿಸಲು ಬರುವವರಲ್ಲಿ ಬೇರೆ ಜಿಲ್ಲೆಗಳ ಜನ ಸಾಕಷ್ಟಿದ್ದಾರೆ. ಆದರೆ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತಷ್ಟು ಮುತುವರ್ಜಿ ವಹಿಸಬೇಕಿದೆ.
ಈಜು ಬಾರದ ಪ್ರವಾಸಿಗರು ಲೈಫ್‌ಗಾರ್ಡ್‌ಗಳು ಮತ್ತು ಬೀಚ್‌ ನಿರ್ವಹಣ ಸಿಬಂದಿಯ ಮುನ್ನೆಚ್ಚರಿಕೆ ಯನ್ನು ನಿರ್ಲಕ್ಷಿಸಿ ಅಪಾಯಕ್ಕೆ ಸಿಲು ಕುವ ಉದಾಹರಣೆಗಳೇ ಹೆಚ್ಚು.

ಕೆಂಪು, ಹಸಿರು ವಲಯ
ಲೈಟ್‌ಹೌಸ್‌ನ ಎಡ ಮತ್ತು ಬಲ ಭಾಗದಲ್ಲಿ ಸಮುದ್ರ ತೀರವು ಆಳಮತ್ತು ತೀರಾ ಅಪಾಯಕಾರಿಯಾ ಗಿದ್ದು ಇಲ್ಲಿ ನೀರಿಗೆ ಇಳಿಯುವುದು ಮತ್ತು ಈಜುವುದನ್ನು ನಿಷೇಧಿಸಿ ಫಲಕವನ್ನು ಅಳವಡಿಸಲಾಗಿದೆ. ಕೆಂಪು ಬಾವುಟ ಅಳವಡಿಸಿ ಎಚ್ಚರಿಸಲಾಗು ತ್ತಿದ್ದು ತಡೆಬೇಲಿ ಮಾದರಿಯಲ್ಲಿ ಟೇಪ್‌ಗ್ಳನ್ನು ಹಾಕಲಾಗಿದೆ. ಹಸುರು ಧ್ವಜ ಪ್ರದೇಶದಲ್ಲಿ ಮಾತ್ರ ನೀರಿಗೆ ಇಳಿಯಲು ಮತ್ತು ಈಜಾಡಬಹುದು ಎಂದು ಫ‌ಲಕ ಅಳವಡಿಸಲಾಗಿದೆ.


ಇಲ್ಲಿ ಸದ್ಯ ನಾಲ್ವರು ಲೈಫ್‌ ಗಾರ್ಡ್‌ಗಳು ಇದ್ದು ಸಮುದ್ರಕ್ಕೆ ಇಳಿ ಯುವ ವರನ್ನು ಸದಾ ಎಚ್ಚರಿಸುತ್ತಿದ್ದಾರೆ. ಲೈಫ್‌ ಜಾಕೆಟ್‌, ರೋಪ್‌ಗ್ಳನ್ನು ಬಳಸಿ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುತ್ತಾರೆ. ಆದರೆ ಅವರಲ್ಲಿ ಆಧುನಿಕ ರಕ್ಷಣಾ ಸಾಮಗ್ರಿಗಳಿಲ್ಲ.

ಪ್ರವಾಸಿಗರ ಜೀವ ರಕ್ಷಣೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳ ಬೇಕಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಮೂಲಕ ಪ್ರವಾಸಿ ಮಿತ್ರರು ಮತ್ತು ಜೀವ ರಕ್ಷಕರನ್ನು ನೇಮಿಸಿತ್ತು. ಪ್ರಸ್ತುತ ಆ ಸೇವೆಯಿಲ್ಲ. ವಿಶೇಷ ಸಂದರ್ಭ, ರಜಾ ದಿನಗಳು ಮತ್ತು ವಾರಾಂತ್ಯದ ದಿನಗಳಲ್ಲಿ ಪೊಲೀಸರು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟರೂ ವಾಹನ ಸಂಚಾರ ನಿರ್ವಹಣೆಯಲ್ಲೆ ಹೈರಾಣಾಗುತ್ತಾರೆ.

ಜೆಸ್ಕಿ, ಆ್ಯಂಬುಲೆನ್ಸ್‌ಗೆ ಬೇಡಿಕೆ
ಸಮುದ್ರದಲ್ಲಿ ಸಿಲುಕಿದವರನ್ನು ರಕ್ಷಿಸಲು ರೆಸ್ಕೂಬೋಟ್‌ ಅಥವಾ ಜೆಸ್ಕಿ ಸ್ಕೂಟರ್‌ ಬೇಕಿದೆ. ಪ್ರಥಮ ಚಿಕಿತ್ಸೆ ನೀಡಲು ವ್ಯವಸ್ಥೆ ಇಲ್ಲ. ಆಕ್ಸಿಜನ್‌ ಸಿಲಿಂಡರ್‌, ಪ್ರಥಮ ಚಿಕಿತ್ಸಾ ಕೊಠಡಿ, ಆ್ಯಂಬುಲೆನ್ಸ್‌ ಸೌಲಭ್ಯ ಬೇಕಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಬೀಚ್‌ ನಿರ್ವಹಣ ಸಮಿತಿಯ ಪ್ರಮುಖರು ಮತ್ತು ಸ್ಥಳೀಯರು.

Advertisement

- ರಾಕೇಶ್‌ ಕುಂಜೂರು

12 ದಿನಗಳಲ್ಲಿ 7 ಮಂದಿ ಸಮುದ್ರ ಪಾಲು
ಮಂಗಳೂರು: ಕೊರೊನಾ ಸಾಂಕ್ರಾ ಮಿಕವು ದೂರವಾಗುತ್ತಿದ್ದಂತೆ ಪ್ರವಾಸೋದ್ಯಮ ತೆರೆದುಕೊಳ್ಳುತ್ತಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜನರು ಕರಾವಳಿಯ ಸಮುದ್ರ ತೀರಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಬೀಚ್‌ಗಳಲ್ಲಿ ಒಂದೆಡೆ ಸುರಕ್ಷೆಗೆ ಸಂಬಂಧಿಸಿದ ಕೊರತೆಗಳು ಹಾಗೂ ಇನ್ನೊಂದೆಡೆ ಪ್ರವಾಸಿಗರ ನಿರ್ಲಕ್ಷ್ಯದಿಂದ ಅವಘಡಗಳು ಹೆಚ್ಚತೊಡಗಿವೆ.

12 ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಹಾಗೂ ಉಡುಪಿ ಜಿಲ್ಲೆಯಲ್ಲಿ ಐವರು ಪ್ರವಾಸಿಗರು ದುರಂತ ಸಾವನ್ನಪ್ಪಿದ್ದಾರೆ. ಸುರತ್ಕಲ್‌ ನಲ್ಲಿ ಒಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎ. 10 ರಂದು ಸುರತ್ಕಲ್‌ಎನ್‌ಐಟಿಕೆ ಬೀಚ್‌ನಲ್ಲಿ ಇಬ್ಬರು ಯುವತಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮಲ್ಪೆಯಲ್ಲಿ ಎ. 7ರಂದು 3 ಮಂದಿ ವಿದ್ಯಾರ್ಥಿನಿಯರು ಹಾಗೂ ಎ. 18 ರಂದು 2 ವಿದ್ಯಾರ್ಥಿಗಳು ಸಮುದ್ರ ಪಾಲಾದರು.


ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್‌, ಸಸಿ ಹಿತ್ಲು, ಉಡುಪಿ ಜಿಲ್ಲೆಯ ಕಾಪು, ಮಲ್ಪೆ, ಮರವಂತೆ, ಬೈಂದೂರಿನ ಸೋಮೇಶ್ವರ ಬೀಚ್‌ಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಪಣಂಬೂರಿನಲ್ಲಿ ಈ ಹಿಂದೆ ಬೀಚ್‌ ಪ್ರವಾಸೋ ದ್ಯಮ ಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿತ್ತು. ಆಗ 8-10 ಮಂದಿ ಜೀವರಕ್ಷಕರು (ಲೈಫ್ ಗಾರ್ಡ್‌) ಸಮುದ್ರದ ನೀರಿಗಿಳಿಯುವ ಪ್ರವಾಸಿಗರ ಮೇಲೆ ಕಣ್ಣಿಡುತ್ತಿದ್ದರು. ಪ್ರಸ್ತುತ ಗುತ್ತಿಗೆ ಅವಧಿ ಮುಗಿದಿದ್ದು, ಹೊಸಬರಿಗೆ ನೀಡಿಲ್ಲ. ಇದೀಗ ಜೀವ ರಕ್ಷಕರ ಸಂಖ್ಯೆ 2 ಕ್ಕೆ ಇಳಿದಿದೆ.

ಉಳಿದಂತೆ ತಣ್ಣೀರುಬಾವಿ, ಉಳ್ಳಾಲ- ಸೋಮೇಶ್ವರ, ಸುರತ್ಕಲ್‌ಗ‌ಳಲ್ಲಿ ಜೀವ ರಕ್ಷಕರಿಲ್ಲ. ಇಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಯ ಒಬ್ಬೊಬ್ಬ ಸಿಬಂದಿ ಇದ್ದಾರೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ತಲಾ ಇಬ್ಬರು ಗೃಹ ರಕ್ಷಕ ಸಿಬಂದಿ ಗಸ್ತು ಕಾರ್ಯದಲ್ಲಿ ಇರುತ್ತಾರೆ. ಪೊಲೀಸ್‌ ವಾಹನಗಳು ಆಗಾಗ್ಗೆ ಗಸ್ತು ಹಾಕುತ್ತವೆ.

ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಮಿತ್ರ ಎಂಬ ಹೆಸರಿನಲ್ಲಿ ತಲಾ ಇಬ್ಬರಂತೆ ಹೆಚ್ಚು ಪ್ರವಾಸಿ ಗರ ಭೇಟಿ ನೀಡುವ ಪಣಂಬೂರು, ತಣ್ಣೀರುಬಾವಿ ಮತ್ತು ಉಳ್ಳಾಲ- ಸೋಮೇಶ್ವರ ಬೀಚ್‌ಗಳಲ್ಲಿ ಒಟ್ಟು 6 ಮಂದಿ ಗೃಹರಕ್ಷಕರನ್ನು ನಿಯೋಜಿಸಿದೆ ಎನ್ನುತ್ತಾರೆ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ.

ಮಾಹಿತಿಯ ಕೊರತೆ
ಸಮುದ್ರ ತೀರಕ್ಕೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಭೇಟಿ ನೀಡುವವರಿಗೆ ಸಮುದ್ರದಲ್ಲಿ ಎಲ್ಲಿ ಆಳ ಇದೆ, ನೀರಿನ ಸೆಳೆತ ಹೆಚ್ಚಿರುವ ಸ್ಥಳದ ಅರಿವು ಇರದು. ಜೀವ ರಕ್ಷಕ ದಳದವರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದೂ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವೊಮ್ಮೆ ಜೀವ ರಕ್ಷಕ ದಳ ದವರು ನೀಡುವ ಎಚ್ಚರಿಕೆಯನ್ನು ನಿರ್ಲಕ್ಷಿéಸಿ ಹಲವರು ಅಪಾಯಕ್ಕೆ ಸಿಲುಕಿದ ಉದಾಹರಣೆಗಳಿವೆ.

ಈಗ ಮುಂಗಾರು ಪೂರ್ವ ಅವಧಿ. ಸಮುದ್ರ ಕೆಲವೊಮ್ಮೆ ಹೆಚ್ಚು ರಫ್‌ ಆಗಿರುತ್ತದೆ. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಯಾವಾಗ ಪ್ರಕ್ಷುಬ್ಧವಾಗುತ್ತದೆ ಎಂದು ಹೇಳಲಾಗದು. ಹಾಗಾಗಿ ಸಮುದ್ರಕ್ಕೆ ಇಳಿಯಬೇಡಿ ಎನ್ನುತ್ತಾರೆ ಜೀವರಕ್ಷಕರು.

ಬೀಚ್‌ಗಳಲ್ಲಿ ದುರಂತಕ್ಕೆ ಸಿಲುಕಿದವರಿಗೆ ತುರ್ತು ರಕ್ಷಣೆ ಒದಗಿಸಲು ಆ್ಯಂಬುಲೆನ್ಸ್‌ನು° ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು.
-ಮಾಣಿಕ್ಯ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಂಗಳೂರು

-ಹಿಲರಿ ಕ್ರಾಸ್ತಾ

ಪಡುಬಿದ್ರಿ ಬೀಚ್‌- ಲೈಫ್‌ಗಾರ್ಡ್‌ಗಳು, ಸ್ಥಳೀಯರು ಸದಾ ಸಿದ್ಧ
ಪಡುಬಿದ್ರಿ: ಬ್ಲ್ಯೂ ಫ್ಲ್ಯಾಗ್‌ ಮನ್ನಣೆ ಪಡೆದಿರುವ ಜಿಲ್ಲೆಯ ಏಕೈಕ ಬೀಚ್‌ ಪಡುಬಿದ್ರಿ ಸಮುದ್ರ ತೀರ. ಹಾಗಾಗಿ ಇದನ್ನು ನೋಡಲು ಬರುವವರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಮುಖ್ಯ ಬೀಚ್‌ ಹಾಗೂ ಬ್ಲ್ಯೂ ಫ್ಲ್ಯಾಗ್‌ ಬೀಚ್‌ ಎಂದಿವೆ.

ಮುಖ್ಯ ಬೀಚ್‌ ನಲ್ಲಿ ಲೈಫ್‌ಗಾರ್ಡ್‌ಗಳು ಮತ್ತು ಸ್ಥಳೀಯರು ಪ್ರವಾಸಿಗರ ರಕ್ಷಣೆಗೆ ಇಲ್ಲಿ ಇಬ್ಬರು ಜೀವ ರಕ್ಷಕರಿದ್ದಾರೆ. ಮುಖ್ಯ ಬೀಚ್‌ನಲ್ಲಿ ಯಾವುದೇ ಜೀವಹಾನಿ ಈಚಿನ ವರ್ಷಗಳಲ್ಲಿ ವರದಿಯಾಗಿಲ್ಲ. (ಇತ್ತೀಚಿನ ಒಂದು ದುರ್ಘ‌ಟನೆ ಯಲ್ಲಿ ಸುಮಾರು 1.5 ಕಿ.ಮೀ. ದೂರದಲ್ಲಿ ಸಮುದ್ರಕ್ಕಿಳಿದ ಕಾರಣ ಅಪಾಯಕ್ಕೆ ಸಿಲುಕಿ ಓರ್ವ ಪ್ರಾಣ ಕಳೆದು ಕೊಂಡಿದ್ದ.)


ಬ್ಲ್ಯೂ ಫ್ಲ್ಯಾಗ್‌ ಬೀಚ್‌ನಲ್ಲಿಯೂ ಮೂವರು ಲೈಫ್‌ ಗಾರ್ಡ್‌ಗಳಿದ್ದು ಇವರಲ್ಲಿ ಈರ್ವರು ಸಮುದ್ರ ತಟದಲ್ಲಿರುತ್ತಾರೆ. ಒಬ್ಬರು ಹೊಳೆಯಲ್ಲಿನ ಬೋಟಿಂಗ್‌ ವೇಳೆ ಪ್ರವಾಸಿಗರ ನಿಗಾ ವಹಿಸುತ್ತಾರೆ. ಇವರಲ್ಲದೇ ಸ್ಥಳೀಯ ಮೀನುಗಾರ ಕುಟುಂಬದ ಸದಸ್ಯರಾಗಿ ಇಲ್ಲಿನ ಸಿಬಂದಿಯಾದ ಮೂರು ಮಂದಿಗೂ ಜೀವ ರಕ್ಷಣೆಯ ವಿಶೇಷ ತರಬೇತಿ ನೀಡಲಾಗಿದೆ. ಅವರೂ ಆವಘಡಗಳ ಸಂದರ್ಭ ದಲ್ಲಿ ಜೀವ ರಕ್ಷಣೆಗೆ ಮುಂದಾಗುತ್ತಾರೆ. ಇದು ವರೆಗೆ ಇಲ್ಲಿ ಯಾವುದೇ ಅನಾಹುತ ಗಳಾಗಿಲ್ಲ.

-ಆರಾಮ

ಮಲ್ಪೆ ಬೀಚ್‌, ಸೈಂಟ್‌ಮೇರಿಸ್‌ ದ್ವೀಪ ಸೂಕ್ತ ಸೌಕರ್ಯಗಳಿಲ್ಲ
ಮಲ್ಪೆ: ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರೀಸ್‌ ದ್ವೀಪದಲ್ಲಿ ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಪ್ರವಾಸಿಗರು ಹೆಚ್ಚು. ತೆರೆಗಳ ನಡುವೆ ಈಜಾಡುವ, ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಜಾರಿ ಬಿದ್ದು ಅಥವಾ ತೆರೆಗಳ ಹೊಡೆತಕ್ಕೆ ಸಿಲುಕಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಪ್ರಕರಣಗಳು ಹೆಚ್ಚು. ಸೈಂಟ್‌ ಮೇರೀಸ್‌ನಲ್ಲಿ ಒಂದು ವಾರದಲ್ಲಿ ಐವರು ಪ್ರವಾಸಿಗರು ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾಗಿದ್ದಾರೆ.

ಆಧುನಿಕ ಸೌಕರ್ಯಗಳು ಕೊರತೆ
ಮಲ್ಪೆ ಬೀಚ್‌ನಲ್ಲಿ ಐವರು, ಸೈಂಟ್‌ಮೇರಿ ದ್ವೀಪದಲ್ಲಿ ಐವರು ಜೀವ ರಕ್ಷಕ ಸಿಬಂದಿ ಇದ್ದು, ಬೆಳಗ್ಗೆ 9 ರಿಂದ ರಾತ್ರಿ 7ರ ವರೆಗೆ ಕಾರ್ಯ ನಿರ್ವಹಿಸುತ್ತಾರೆ. ಸಮುದ್ರದ ಆಳ, ಅಪಾಯಕಾರಿ ಸ್ಥಳದ ಬಗ್ಗೆ ಮಾಹಿತಿ ಇದ್ದು, ಅಪಾಯದಲ್ಲಿ ಸಿಲುಕಿದವರ ನ್ನು ಯಾವ ರೀತಿ ರಕ್ಷಿಸಬೇಕೆನ್ನುವ ತಂತ್ರಗಾರಿಕೆ ಅವರಲ್ಲಿದ್ದರೂ ಅತ್ಯಾ ಧುನಿಕ ರಕ್ಷಣ ಸೌಕರ್ಯಗಳಿಲ್ಲ. ರೋಪ್‌, ಜಾಕೆಟ್‌, ರಿಂಗ್‌ ಮಾತ್ರ ಅವರಲ್ಲಿದೆ. 4 ವರ್ಷಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ 160 ಮಂದಿಯನ್ನು, ದ್ವೀಪದಲ್ಲಿ 60 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.


ಮುನ್ನಚ್ಚರಿಕೆ ಫಲಕಗಳು
ದ್ವೀಪದ ಅಪಾಯಕಾರಿ ಸ್ಥಳಗಳಲ್ಲಿ ಸುಮಾರು 600 ಮೀ. ಉದ್ದಕ್ಕೆ ಕಬ್ಬಿಣದ ಪಟ್ಟಿ ಹಾಕಿದ್ದು 7 ಕಡೆ ಎಚ್ಚರಿಕೆ ಫಲಕ, 35 ಕಡೆ ಬಾವುಟ ಹಾಕಲಾಗಿದೆ. ಬೀಚ್‌ನಲ್ಲಿ ಸ್ವಿಮ್ಮಿಂಗ್‌ ವಲಯಗಳನ್ನು ಮಾಡಿ ಅಲ್ಲಲ್ಲಿ ಕೆಂಪು ಮತ್ತು ಹಳದಿ ಬಾವುಟ ಅಳವಡಿಸ ಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಹಾಕಲಾಗಿದೆ. ರಕ್ಷಣೆಗೆ ಖಾಸಗಿ ವಾಟರ್‌ ಸ್ಪೋರ್ಟ್ಸ್ ನವರ ಬೋಟುಗಳನ್ನು ಬಳಸಲಾಗುತ್ತದೆ.

ಜೆಟ್‌ಸ್ಕಿ ಸ್ಕೂಟರ್‌ ಅಗತ್ಯ
ಸಮುದ್ರದಲ್ಲಿ ಸಂಚರಿಸುವ ಜೆಟ್‌ಸ್ಕಿ ಸ್ಕೂಟರ್‌ ಬೇಕೆಂಬ ಬೇಡಿಕೆ ಈಡೇರಿಲ್ಲ. ರೆಸ್ಕೂ Âಬೋಟ್‌ ಅಥವಾ ಜೆಟ್‌ಸ್ಕಿ ಸ್ಕೂಟರಿನ ವ್ಯವಸ್ಥೆ ಇದ್ದಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವವರ ಬಳಿ ಕೂಡಲೇ ತೆರಳಿ ರಕ್ಷಿಸಬಹುದು. ಬೀಚ್‌ನಲ್ಲಿ ಈ ಹಿಂದೆ 7 ಸಿಸಿ ಕೆಮರಾ ಇತ್ತು. ಸಮುದ್ರದ ನೀರಿನ ತೇವಾಂಶ ದಿಂದಾಗಿ ಅವುಗಳು ಹಾಳಾಗಿದ್ದು ಪ್ರಸ್ತುತ ಗಾಂಧಿ ಕಟ್ಟೆಯ ಬಳಿ ಮಾತ್ರ ಇದೆ. ಸೈಂಟ್‌ಮೇರಿಸ್‌ ದ್ವೀಪದಲ್ಲಿ ಕೆಮರಾ ಅಳವಡಿಸಲು ಸೌಲಭ್ಯ ಇಲ್ಲ ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ವಾದ ಸೈಂಟ್‌ ಮೇರಿಸ್‌ ದ್ವೀಪದಲ್ಲಿ ಅಧಿಕಾರಿಗಳು ಇನ್ನಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು.
– ಕೋಟ ಶ್ರೀನಿವಾಸ ಪೂಜಾರಿ, ಸಚಿವ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next