Advertisement

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

12:38 AM Oct 02, 2023 | Team Udayavani |

ಉಡುಪಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಕಟ್ಟಡ ಸಾಮಗ್ರಿ ಲಾರಿ ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಹೆದ್ದಾರಿ ಬದಿ ವಾಹನ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದು, ರವಿವಾರ ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಅವರು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ 1 ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು.
ಸುದೀರ್ಘ‌ ಚರ್ಚೆಯ ಬಳಿಕವೂ ಮುಷ್ಕರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಸಂಧಾನ ಸಭೆ ವಿಫಲವಾಯಿತು.

Advertisement

ತಮ್ಮ ವಾಹನಗಳಿಗೆ ಜಿಪಿಎಸ್‌ ಅಳವಡಿ ಸುವುದಕ್ಕೆ ಸಿದ್ಧವಿದ್ದರೂ ಗಣಿ ಇಲಾಖೆಯ ತಪ್ಪು ಮಾಹಿತಿ, ಅನಧಿಕೃತ ಕೋರೆಗಳು, ಬೇಡಿಕೆಯಷ್ಟು ಲಭ್ಯವಿಲ್ಲದ ಮರಳು, ಜಲ್ಲಿ, ಸೈಜ್‌ ಕಲ್ಲು ಈ ಎಲ್ಲ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ವಾಹನ ಮಾಲಕರು ಸಭೆಗೆ ತಿಳಿಸಿ ತೆರಳಿದರು.

ಮಾಲಕ ಶರತ್‌ ಕುಮಾರ್‌ ಶೆಟ್ಟಿ ಮಾತನಾಡಿ, ವಾಹನಗಳಿಗೆ ಜಿಪಿಎಸ್‌, ರಾಜಧನ ಕಟ್ಟಿ ವ್ಯವಹಾರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ಕ್ವಾರೆಗಳಿಲ್ಲ. ಜಿಪಿಎಸ್‌ ಇರುವ ವಾಹನಗಳ ಮೂಲಕ ಕೆಂಪು ಕಲ್ಲು ಸಾಗಾಟ ಮಾಡಬಹುದೇ? ರಸ್ತೆಯಲ್ಲಿ ನಿಲ್ಲಿಸಿ ವಾಹನ ತಡೆದರೆ ಏನು ಮಾಡಬೇಕೆಂದು ಪ್ರಶ್ನಿಸಿದರು.

ಕಿರುಕುಳ ನೀಡುವ ಉದ್ದೇಶವಿಲ್ಲ

ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಯಾರಿಗೂ ಕಿರುಕುಳ ನೀಡುವ ಉದ್ದೇಶ ಜಿಲ್ಲಾಡಳಿತಕ್ಕಿಲ್ಲ. ಸರಕಾರ ಒನ್‌ ಸ್ಟೇಟ್‌ ಒನ್‌ ಜಿಪಿಎಸ್‌ ಕಾಯಿದೆ ಮಾಡಿದೆ. 36 ಉಪಖನಿಜಗಳನ್ನು ತೆಗೆಯಲು/ಸಾಗಾಟಕ್ಕೆ ಜಿಪಿಎಸ್‌ ಅಳವಡಿಸಿಯೇ ವ್ಯವಹಾರ ನಡೆಸಬೇಕು. ಇದು 2022ರ ನವೆಂಬರ್‌ನಲ್ಲಿ ಜಾರಿ ಮಾಡಿದ್ದು, ಡಿಸೆಂಬರ್‌ನಲ್ಲಿ ಚಾಲ್ತಿಗೆ ಬಂದಿದೆ. ಸರಕಾರದ ಆದೇಶವನ್ನು ಅನುಷ್ಠಾನಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ. ಉಡುಪಿ ಜಿಲ್ಲೆಯಲ್ಲಿ 488 ಜಿಪಿಎಸ್‌ ಅಳವಡಿಸಿಕೊಂಡಿರುವ ಲಾರಿಗಳು ಹಾಗೂ ದ.ಕ. ಜಿಲ್ಲೆಯಲ್ಲಿ 990 ಜಿಪಿಎಸ್‌ ಅಳವಡಿಕೆಗೊಂಡಿರುವ ವಾಹನಗಳಿವೆ. ಜಿಪಿಎಸ್‌ ಇಲ್ಲದ ವಾಹನಗಳಿಗೆ 5000 ರೂ. ದಂಡವಿದೆ. ಹೀಗಾಗಿ ಕಾನೂನು ಪಾಲನೆ ಮಾಡುವುದು ಅನಿವಾರ್ಯವಾಗಿದೆ. 2023 ಮಾ. 17ರಂದು ಕೆಂಪು ಕಲ್ಲು ತೆಗೆಯುವ ಬಗ್ಗೆ ಕೆಲ ತಿದ್ದುಪಡಿ ಮಾಡಿರುವುದರಿಂದ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರಕಾರದ ಸುತ್ತೋಲೆ ಇದೆ ಎಂದರು.

ಗಣಿ ಇಲಾಖೆ ಲೆಕ್ಕಾಚಾರಕ್ಕೆ ಆಕ್ಷೇಪ
ಗಣಿ ಇಲಾಖೆ ಅಧಿಕಾರಿ ಸಂದೀಪ್‌ ಮಾತ ನಾಡಿ, ಜಿಲ್ಲೆಯಲ್ಲಿ ಒಟ್ಟು 127 ಕೋರೆಗಳಿದ್ದು, 36 ಮರಳು ಧಕ್ಕೆಗಳಿವೆ ಎಂದು ಲೆಕ್ಕಾಚಾರವನ್ನು ಮುಂದಿಟ್ಟರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಲಾರಿ ಮಾಲಕರು ಈ ಬಗ್ಗೆ ಪರಿಶೀಲನೆ ಮಾಡಬೇಕು. ಗಣಿ ಇಲಾಖೆಯ ಮೇಲೆ ನಂಬಿಕೆ ಇಲ್ಲ. ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದರೆ ನಮ್ಮನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಾರೆ ಎಂದು ಆರೋಪಿಸಿದರು. ಈ ಬಗ್ಗೆ ಸ್ವತಃ ತಾನೇ ಪರಿಶೀಲಿಸುವುದಾಗಿ ಮಂಜುನಾಥ್‌ ಭಂಡಾರಿ ಆಶ್ವಾಸನೆ ನೀಡಿದರು.

ಇಂದು ಒಕ್ಕೂಟದ ಸಭೆ
ಜಿಪಿಎಸ್‌ ಅಳವಡಿಸಲು ನಾವು ಸಿದ್ಧರಿದ್ದೇವೆ. ಆದರೆ ಸಭೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅ. 2ರಂದು ಕಟ್ಟಡ ಸಾಮಗ್ರಿ ಲಾರಿ/ಟೆಂಪೋ ಮಾಲಕರ ಸಂಘಟನೆಗಳ ಸಭೆ ಕರೆದು ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಒಕ್ಕೂಟದವರು ತಿಳಿಸಿದರು.

Advertisement

ಮುಷ್ಕರ ಸ್ಥಳಕ್ಕೆ ಭೇಟಿ
ಸಭೆಗೂ ಮುನ್ನ ಮಂಜುನಾಥ್‌ ಭಂಡಾರಿ ಅವರು ಬಲಾಯಿಪಾದೆಯಲ್ಲಿ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

ಕಾನೂನು ಪಾಲನೆ ಕಡ್ಡಾಯ
ಸುಪ್ರೀಂ ಕೋರ್ಟ್‌ನ ಆದೇಶ ಎಲ್ಲರೂ ಪಾಲನೆ ಮಾಡಬೇಕು. ಅಧಿಕೃತ ಕಲ್ಲು ಕೋರೆಗಳಿಂದ ಮಾತ್ರ ಕಲ್ಲು ತೆಗೆದು ಸಾಗಾಟ ಮಾಡಬಹುದು. ಪರವಾನಿಗೆ ಇಲ್ಲದೆ ಯಾರೂ ಮಾಡು ವಂತಿಲ್ಲ. ಕಾನೂನು ಪಾಲಿಸಿ ಕೆಲಸ ಮಾಡುವವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
-ಡಾ| ಕೆ. ಅರುಣ್‌ ಕುಮಾರ್‌, ಎಸ್‌ಪಿ

ಸಮಸ್ಯೆ ಪರಿಹಾರಕ್ಕೆ ಯತ್ನ: ಭಂಡಾರಿ
ಉಡುಪಿ: ಜಿಲ್ಲೆಯಲ್ಲಿ ಲಾರಿ, ಟೆಂಪೋ ಮಾಲಕರ, ಚಾಲಕರ ಸಮಸ್ಯೆ ಪರಿಹಾರಕ್ಕೆ ಸರಕಾರದ ಹಂತದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಹೇಳಿದರು.
ರವಿವಾರ ಪ್ರವಾಸಿ ಮಂದಿರದಲ್ಲಿ ಅವರು ಮಾತನಾಡಿ, ಈ ಬಗ್ಗೆ ಲಾರಿ ಮಾಲಕರು, ಚಾಲಕರ ಸಹಿತ ಡಿಸಿ, ಎಸ್‌ಪಿ ಅವರಲ್ಲಿ ಚರ್ಚಿಸಿ ಪರಿಸ್ಥಿತಿಯ ವಿವರ ಪಡೆದಿದ್ದೇನೆ. ಲಾರಿ ಮಾಲಕರು ಕಾನೂನು ಪ್ರಕಾರ ಜಿಪಿಎಸ್‌ ಅಳವಡಿಸಿಕೊಂಡು ಉಪ ಖನಿಜ ಸಾಗಾಟ ಮಾಡುವ ಮೂಲಕ ಸಹಕರಿಸುವಂತೆ ಜಿಲ್ಲಾಡಳಿತ ತಿಳಿಸಿದೆ ಎಂದರು.
ಲಾರಿ ಮಾಲಕರಿಗೆ ತೊಂದರೆ, ಕಿರು ಕುಳವಾಗದಂತೆ, ಕಾನೂನಿಗೂ ಸಮಸ್ಯೆ ಯಾಗದಂತೆ ಸಹಕಾರ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮುಖಂಡ ಎಂ.ಎ. ಗಫ‌ೂರ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಸಂದೀಪ್‌, ದಿನೇಶ್‌ ಪುತ್ರನ್‌, ರಾಜು ಪೂಜಾರಿ, ಹರೀಶ್‌ ಕಿಣಿ, ಪ್ರಸನ್ನ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಕಟ್ಟಡ ಸಾಮಗ್ರಿ ವಾಹನ ಮುಂದುವರಿದ ಮುಷ್ಕರ
ಅ. 4: ಡಿಸಿ ಕಚೇರಿಗೆ ಪಾದಯಾತ್ರೆ
ಉಡುಪಿ: ಕಟ್ಟಡ ಸಾಮಗ್ರಿ ಲಾರಿ ಟೆಂಪೋಗಳಿಗೆ ಜಿಪಿಎಸ್‌ ಅಳವಡಿಸಲು ಒಕ್ಕೂಟ ಸಿದ್ಧವಿದೆ. ಆದರೆ ಬೇಡಿಕೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಜಿಲ್ಲೆಯ ಎಲ್ಲ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಲಿಖಿತ ರೂಪದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಇದಕ್ಕಾಗಿ ಅ. 4ರಂದು ಜೋಡುಕಟ್ಟೆಯಿಂದ ಡಿಸಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಮನವಿ ನೀಡಲಾಗು ವುದು ಎಂದು ಕಟ್ಟಡ ಸಾಮಗ್ರಿ ಲಾರಿ ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿ ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ರವಿವಾರ ತಿಳಿಸಿದರು.

ಜಿಲ್ಲಾಡಳಿತ ಈ ಹಿಂದೆ ತಿಳಿಸಿದ ಎಲ್ಲ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಿದ್ದೇವೆ. ಎಲ್ಲ ರೀತಿಯ ಜಿಪಿಎಸ್‌ಗಳನ್ನೂ ಅಳವಡಿಕೆ ಮಾಡಿದ್ದೇವೆ. ಈಗ “ಒನ್‌ಸ್ಟೆಟ್‌ ಒನ್‌ ಜಿಪಿಎಸ್‌’ ಅಳವಡಿಸಬೇಕು ಅನ್ನುತ್ತಿದ್ದಾರೆ. ಮುಂದೆ “ಒನ್‌ ನೇಶನ್‌ ಒನ್‌ ಜಿಪಿಎಸ್‌’ ಅಳವಡಿಸಬೇಕು ಎಂದು ತಿಳಿಸಬಹುದು. ಈ ಕಾರಣಕ್ಕೆ ನಮ್ಮೊಂದಿಗೆ ಮಾತುಕತೆ ನಡೆಸಿ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ಅ. 3- ಬಂದ್‌ ಇಲ್ಲ
ರಾಜ್ಯಪಾಲರು ಅ. 3ರಂದು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಬಂದ್‌ ಇರುವುದಿಲ್ಲ. ಅದೇ ದಿನ ಪಾದಯಾತ್ರೆ ಮಾಡುವ ಚಿಂತನೆ ಇತ್ತಾದರೂ ಅನುಮತಿ ದೊರಕದ ಕಾರಣ ಅ. 4ರಂದು ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಗಣಿ ಇಲಾಖೆಯಿಂದ ತಪ್ಪು ಮಾಹಿತಿ
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಗಣಿ ಇಲಾಖೆಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಲಾರಿ, ಟೆಂಪೋ ಮಾಲಕರು ಮಾಫಿಯಾ ನಡೆಸುತ್ತಿದ್ದಾರೆ ಎಂದಾದರೆ ಅದಕ್ಕೆ ಅನುಮತಿ ಕೊಟ್ಟವರಾದರೂ ಯಾರು? ಮೊದಲು ಅಂತಹವರಿಗೆ ಶಿಕ್ಷೆ ವಿಧಿಸುವ ಕೆಲಸವಾಗಬೇಕು.

ಸಕ್ರಮವಾಗಿ ಓಡಾಟಕ್ಕೆ ಅನುಮತಿ ನೀಡಿ

ಸಕ್ರಮವಾಗಿ ಮರಳು ಸಾಗಾಟ ಮಾಡಲು ಅವಕಾಶ ನೀಡುವಂತೆ ಒಕ್ಕೂಟದವರು ಕೇಳಿಕೊಳ್ಳುತ್ತಿದ್ದಾರೆ. ಕಾನೂನು ಗೌರವಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲಿದ್ದೇವೆ. ನಮ್ಮ ವಾಹನಗಳನ್ನು
ಸೀಝ್ ಮಾಡಿ ಪ್ರಕರಣ ದಾಖಲಿಸಿದರೆ ಜೈಲಿಗೆ ಹೋಗಲೂ ಸಿದ್ಧ ಎಂದರು.

ಪ್ರಮುಖರಾದ ಮನೋಹರ ಕುಂದರ್‌, ರಮೇಶ್‌ ಶೆಟ್ಟಿ ಹೆರ್ಗ, ರಾಜೇಶ್‌, ಕೃಷ್ಣ ಅಂಬಲಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next