Advertisement

ಸಂಸತ್‌ ಅಧಿವೇಶನಕ್ಕೆ ಮೊದಲು ಅಯೋಧ್ಯೆಗೆ ಉದ್ಧವ್‌ ಠಾಕ್ರೆ

02:48 PM Jun 06, 2019 | Team Udayavani |

ಮುಂಬಯಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಪಕ್ಷದ ಎಲ್ಲ ಸಂಸದರ ಜತೆಗೂಡಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಕಳೆದ ವರ್ಷದ ನವೆಂಬರ್‌ನಲ್ಲಿ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು ಮತ್ತು ಲೋಕಸಭೆ ಚುನಾವಣೆಗೆ ಮೊದಲು ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೆಂದು ಆಗ್ರಹಿಸಿದ್ದರು. ಆಗ ಶಿವಸೇನೆ ಮತ್ತು ಅದರ ಮಿತ್ರಪಕ್ಷ ಬಿಜೆಪಿ ನಡುವಿನ ಸಂಬಂಧಗಳಲ್ಲಿ ಕಹಿ ಇತ್ತು. ಅನಂತರ ಶಿವಸೇನೆಯು ಲೋಕಸಭೆ ಚುನಾವಣೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಆದರೆ ರಾಮ ಮಂದಿರವು ಪಕ್ಷದ ಪಾಲಿಗೆ ಒಂದು ಪ್ರಮುಖ ವಿಷಯವಾಗಿದೆ ಎಂದು ಪುನರುಚ್ಚರಿಸಿತ್ತು.

ಉದ್ಧವ್‌ ಠಾಕ್ರೆ ಅವರ ನಿಕಟವರ್ತಿ ಮತ್ತು ಶಿವಸೇನೆಯ ಮಾಧ್ಯಮ ಉಸ್ತುವಾರಿ ಹರ್ಷಲ್‌ ಪ್ರಧಾನ್‌ ಅವರನ್ನು ಸಂಪರ್ಕಿಸಿದಾಗ ಅವರು, ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಿರುವುದು ಸತ್ಯ. ಜೂನ್‌ 17ರಂದು ಸಂಸತ್‌ ಅಧಿವೇಶನ ಪ್ರಾರಂಭವಾಗುವ ಮೊದಲು ಅಲ್ಲಿಗೆ (ಅಯೋಧ್ಯೆ) ಭೇಟಿ ನೀಡಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲೇ ಭೇಟಿ ಬಗ್ಗೆ ಪ್ರಕಟಣೆಯೊಂದು ಜಾರಿಗೊಳ್ಳಲಿದೆ. ಸ್ವತಃ ಉದ್ಧವ್‌ ಜಿ ಅವರು ಭೇಟಿ ಮತ್ತು ಪಕ್ಷದ ನಿಲುವನ್ನು ವಿವರಿಸಲಿದ್ದಾರೆ ಎಂದು ಹರ್ಷಲ್‌ ಪ್ರಧಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next