Advertisement

ತುಳು-ಕನ್ನಡಿಗ ಚಾರಣ ಯಾತ್ರಿ ದಂಪತಿಯ ವಿಶೇಷ ಸಾಧನೆ

03:09 PM Aug 01, 2018 | Team Udayavani |

ಮುಂಬಯಿ: ಉಪನಗರ ಭಾಂಡೂಪ್‌ನ ನಿವಾಸಿಗಳಾದ ತುಳು-ಕನ್ನಡಿಗರಾದ ಪ್ರಮೀಳಾ ಶಿವರಾಮ ಇವರ ಪುತ್ರ ಜಗದೀಶ ಶಿವರಾಮ ಪದ್ಮಶಾಲಿ ಮತ್ತು ದಿವ್ಯಾ ಪದ್ಮಶಾಲಿ ದಂಪತಿಯನ್ನೊಳಗೊಂಡ ತಂಡವೊಂದು ಪ್ರಪಂಚದ ನಾಲ್ಕನೇ ಅತ್ಯುನ್ನತ ಶಿಖರವಾದ ಕಿಲಿಮಾಂಜರೋವನ್ನು ಜು. 20ರಂದು ಏರಿ ವಿಶೇಷ ಸಾಧನೆಗೈದಿದ್ದಾರೆ.

Advertisement

ಕಿಲಿಮಾಂಜರೊ ಪರ್ವತ ಶಿಖರವು ಆಫ್ರಿಕಾ ದೇಶಗಳಲ್ಲೊಂದಾದ ತಾಂಜಾನಿಯದಲ್ಲಿದೆ. ಈ ಶಿಖರವು ಸಮುದ್ರ ತಟದಿಂದ 19,341 ಅಡಿ ಎತ್ತರದಲ್ಲಿದೆ. ಏಳು ದಿನಗಳ ಸುದೀರ್ಘ‌ ಹಾಗೂ ಕಠಿನ ಪರಿಶ್ರಮದಿಂದ ಸದ್ಯ ದುಬಾೖಯಲ್ಲಿರುವ ಹತ್ತು ಜನರ ತಂಡವು ಈ ಶಿಖರವನ್ನು ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜು.  14 ರಂದು ಚಾರಣವನ್ನು  ಪ್ರಾರಂಭಿಸಿದ ಈ ತಂಡವು ಸತತ ಪ್ರಯತ್ನದಿಂದ ಆರನೇ ದಿನದಂದು ಉಹುರು ತುದಿಯಿಂದ ಕೆಲವೇ ಅಂತರದಲ್ಲಿ ಕ್ಯಾಂಪ್‌ ಹೂಡಿತು. ನಾಲ್ಕು ಗಂಟೆಗಳ ವಿಶ್ರಾಂತಿಯ ತರುವಾಯ ರಾತ್ರಿ 11.30ಕ್ಕೆ ಹೊರಟ ಈ  ತಂಡವು ಹನ್ನೊಂದು ಗಂಟೆಯ ಕಷ್ಟದಾಯಕ ಚಾರಣದ ನಂತರ ಉಹುರು ಶಿಖರದ ತುತ್ತ ತುದಿಯನ್ನು ಏರಿ ತಮ್ಮ ಸಂತಸ ಹಂಚಿಕೊಂಡರು. ರಾತ್ರಿ ತಾಪಮಾನವು 2 ಡಿಗ್ರಿಯಿಂದ 10 ಡಿಗ್ರಿಯವರೆಗೆ ಏರಿಕೆಯಾಗಿದ್ದರೂ ತಂಡವು ಈ ಸಾಧನೆಯನ್ನು ಮಾಡಿದೆ.

ವಿಶೇಷವೇನೆಂದರೆ ಇರಾಕಿನ ಕುರ್ಡಿಸ್ತಾನದಲ್ಲಿರುವ ಎರ್ಬಿಲ್‌, ದುಹೋಕ್‌, ಸುಲೈಮಾನಿಯ ಹಾಗೂ ಮೊಸುಲ್‌ನಲ್ಲಿ ನಿರಾಶ್ರಿತರ ಕ್ಯಾಂಪಿನಲ್ಲಿ ಅತೀ ಕಷ್ಟದ ಜೀವನ ಸಾಗಿಸುತ್ತಿರುವ ಜನರ ವೇದನೆಯನ್ನು ಜಾಗತಿಕವಾಗಿ ಗಮನ ಸೆಳೆಯುವ ಪ್ರಯತ್ನವೂ ಈ ಚಾರಣದಲ್ಲಿ ಸೇರಿತ್ತು. ಬ್ರಿಂಗ್‌ ಹೋಪ್‌ ಹ್ಯುಮನಿಟೇರಿಯನ್‌ ಫೌಂಡೇಶನ್‌ ಹಾಗೂ ಲೈಟ್‌ ಹೌಸ್‌ ಕೊಹೊರ್ಟ್‌’ ಈ ಚಾರಣದ ಸಾರಥ್ಯವನ್ನು  ವಹಿಸಿದ್ದವು. ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ  ಉತ್ತಮ್‌ ಎ. ಶೆಟ್ಟಿಗಾರ್‌ ಅವರು  ಜಗದೀಶ ಹಾಗೂ ದಿವ್ಯಾ ದಂಪತಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next