ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಎರಡು ಮೆಡಿಕಲ್ ಕಾಲೇಜು ಹಾಗೂ ಎರಡು ಹೈಟೆಕ್ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಗೆ ನಗರದಲ್ಲಿ ಗುರುವಾರ ಪ್ರಸಿದ್ಧ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಆರಂಭಿಸಲಾಯಿತು.
ಅನಂತಮೂರ್ತಿ ಹೆಗಡೆ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡ ಪಾದಯಾತ್ರೆ ನವೆಂಬರ್ 2 ರಿಂದ 9 ರ ತನಕ ನಡೆಯಲಿದ್ದು, 9 ರಂದು ಕಾರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೈಟೆಕ್ ಆಸ್ಪತ್ರೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಕುಮಟಾದಲ್ಲಿ ಹಾಗೂ ಶಿರಸಿಯಲ್ಲಿ ಪ್ರತ್ಯೇಕ ಮೆಡಿಕಲ್ ಕಾಲೇಜು ಹಾಗೂ ಪ್ರತ್ಯೇಕ ಹೈಟೆಕ್ ಆಸ್ಪತ್ರೆ ಆಗಬೇಕು. ನಿತ್ಯ ಹೊರ ಜಿಲ್ಲೆಗಳಿಗೆ 300 ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ತೆರಳುತ್ತಿದ್ದು , ಅವರಿಗೆ ಅನುಕೂಲ ಆಗಬೇಕು ಹಾಗೂ ಜೀವ ಉಳಿಸಲು ನೆರವಾಗಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದೆ.
ಪಾದಯಾತ್ರೆಗೆ ಚಾಲನೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ ಮೂಡಿ, ಜಿಲ್ಲೆಯಲ್ಲಿ ಎರಡು ಮೂರು ಪ್ರಮುಖ ಬೇಡಿಕೆ ಇದೆ. ಇದು ಆಗಲೇ ಬೇಕಿದೆ. ಇಚ್ಛಾ ಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದರು.
ಹೋರಾಟಗಾರ ಅನಂತಮೂರ್ತಿ ಹೆಗಡೆ, ಇರುವೆ ಹಾಗೆ ಕಣ್ಣ ಮುಂದೆ ಜನ ಸಾಯುವಂತೆ ಆಗಿದೆ. ಅಪಘಾತದಿಂದ, ಹೃದಯಾಘಾತದಿಂದ ಸಾವಾಗುತ್ತಿದ್ದಾರೆ. ಯಾವುದೋ ಸಮುದಾಯ, ಜಾತಿ, ಪಕ್ಷದ ಹೋರಾಟವಲ್ಲ, ನ್ಯಾಯಕ್ಕಾಗಿ ಹೋರಾಟ. ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ ಬೇಕಾಗಿದೆ ಎಂದರು.
ಈ ವೇಳೆ ಸ್ಕಾಡವೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಚಾಲಕರ ಸಂಘದ ವಿಶ್ವನಾಥ ಗೌಡ, ಉಪೇಂದ್ರ ಪೈ, ಜನಶಕ್ತಿಯ ಡಾ. ನಾಗೇಶ ನಾಯ್ಕ ಕಾಗಾಲ, ಜನಾರ್ಧನ ಆಚಾರ್ಯ ಶರ್ಮಾ, ವಕೀಲರ ಸಂಘದ ಅಧ್ಯಕ್ಷ ಸಿ.ಏಫ್.ಈರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: IIT Student: ವೇಟ್ಲಿಫ್ಟಿಂಗ್ ರಾಡ್ಗೆ ನೇಣು ಬಿಗಿದು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ…