Advertisement

ತಿರುಗಾಟ

07:26 PM Jan 25, 2020 | mahesh |

ಚಿಕ್ಕವರಿದ್ದಾಗ ಮುಂಬಯಿಯ ಹಡಗು ಪಯಣ, ಅಲ್ಲಿನ ಜನನಿಬಿಡತೆ, ಬೆರಗುಪಡಿಸುವ ಹತ್ತಾರು ಮಹಡಿಗಳ ಕಟ್ಟಡಗಳು, ಸಾಲುಗಟ್ಟಿ ಸಾಗುವ ಕಾರುಗಳು, “ಹ್ಯಾಂಗಿಂಗ್‌ ಗಾರ್ಡನ್ನಿ’ನಂತಹ ಆಕರ್ಷಣೆಗಳು- ಇವುಗಳ ಬಗ್ಗೆ ಹೋಗಿಬಂದವರು ಹೇಳುತ್ತಿದ್ದರೆ ಕಣ್ಣಗಲಿಸಿ ಕೇಳುತ್ತಿದ್ದುದಿತ್ತು. ಇನ್ನು ಬಹ್ರೈನ್‌, ಇಂಗ್ಲೆಂಡ್‌, ಅಮೆರಿಕದಂತಹ ವಿದೇಶಗಳಿಂದ ಬಂದವರ ವೃತ್ತಾಂತಗಳು ಸಿಂದಬಾದನ ಕತೆಗಳಂತೆ ಅನಿಸುತ್ತಿದ್ದುದೂ ಇತ್ತು. ಆನಂತರ, ಸ್ವತಃ ಪ್ರವಾಸಗಳನ್ನು ಕೈಗೊಳ್ಳಲು ಆರಂಭಿಸಿದಾಗ, ಕಲ್ಪನೆಯ ಚಿತ್ರಣಕ್ಕೂ, ಪ್ರತ್ಯಕ್ಷ ಅನುಭವಕ್ಕೂ ಬಹಳ ಅಂತರವಿದೆಯೆಂಬುದರ ಅರಿವಾಗತೊಡಗಿತ್ತು.

Advertisement

ಇತ್ತೀಚೆಗಿನ ದಿನಗಳಲ್ಲಿ ಭಾರತೀಯರು ಹೆಚ್ಚು ಹೆಚ್ಚು ಪ್ರವಾಸ ಕೈಗೊಳ್ಳುತ್ತಿದ್ದಾರೆಂದು ಅಂಕೆಸಂಖೆಗಳು ಹೇಳುತ್ತಿವೆ. ಜನರ ಆಸಕ್ತಿಯೂ ಹೆಚ್ಚಿದೆ, ಆರ್ಥಿಕ ಅನುಕೂಲತೆಗಳೂ ಸುಧಾರಿಸಿವೆ. ಪ್ರವಾಸೀ ಸಂಸ್ಥೆಗಳೂ, ಜಾಲತಾಣಗಳೂ ಒದಗಿಸುವ ಮಾಹಿತಿ, ಸೌಲಭ್ಯಗಳೂ ಪೂರಕವಾಗಿವೆ. ಪ್ರವಾಸಗಳಿಂದಾಗಿ ಹೃದಯ, ಕಣ್ಣುಗಳು ತೆರೆಯಲ್ಪಟ್ಟು ಜಗತ್ತನ್ನು ಹೆಚ್ಚು ಅರಿಯುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ. ಬಹುಶಃ ನಮ್ಮನ್ನು ನಾವು ಕಂಡುಕೊಂಡು, ಬದುಕಿನ ಅಲಗನ್ನು ಹರಿತಗೊಳಿಸಲು ಪ್ರವಾಸವು ಅಗತ್ಯವಿರಬಹುದು. ಜಗತ್ತನ್ನು ಸ್ಪಷ್ಟವಾಗಿ ನೋಡಿ ನೈಜವಾಗಿ ಅನುಭವಿಸುವ ಪಯಣದ ಅವಕಾಶವು ಬುದ್ಧಿ ಮತ್ತು ಅಂತಃಕರಣ ಗಳನ್ನು ಸರಿಯಾದ ತೂಕದಲ್ಲಿಡಲು ಕಲಿಸುತ್ತದೆ. ನಮ್ಮ ಪೂರ್ವಜರ ತೀರ್ಥಯಾತ್ರೆಯ ಕಲ್ಪನೆಯ ಉದ್ದೇಶವೂ ಇದೇ ಇದ್ದಿರಬೇಕು ಎಂದು ನನ್ನಮ್ಮ ಯಾವಾಗಲೂ ಹೇಳುವುದಿತ್ತು.

ಮನೆ, ಪರಿಸರ, ಊರು, ನಮ್ಮವರು ಎನ್ನುವ ವ್ಯಾಮೋಹಗಳು ಒಂದೆಡೆಯಾದರೆ, ಅದೇ ಊರು, ಅದೇ ಜನ, ಸದಾ ಮರುಕಳಿಸುವ ದಿನಚರಿಗಳನ್ನು ಬಿಟ್ಟು ಹೊಸ ಜಾಗದ ಅನುಭವಗಳಿಂದ ಮನಸ್ಸಿಗೆ ಹೊಸತನವನ್ನು ತುಂಬಿಸಬೇಕೆಂಬ ತುಡಿತವು ಇನ್ನೊಂದೆಡೆ. ಈ ತುಡಿತವೇ ಪ್ರವಾಸಕ್ಕೆ ನಾಂದಿ. ಸ್ವಂತದ ನಂಬುಗೆ, ಖಚಿತತೆಗಳನ್ನೆಲ್ಲ ಮನೆಯಲ್ಲಿ ಬಿಟ್ಟು, ತಿಳಿದಿದ್ದ ವಿಷಯಗಳನ್ನೇ ಹೊಸ ಬೆಳಕಿನಲ್ಲಿ ನೋಡಲು ಹೊರಡುವ ಪ್ರವಾಸದ ಕಲ್ಪನೆಯೇ ರೋಮಾಂಚಕಾರಿ.

ಮಣಿಪುರದ ಗೆಳತಿ, ಕವಯಿತ್ರಿ ಬೋರ್‌ಕನ್ಯಾ ಇಲ್ಲಿನ ಸಮುದ್ರವನ್ನು ನೋಡಿ ಅದೆಷ್ಟು ಪುಳಕಿತಳಾದಳೆಂದರೆ, ಬದುಕಿನುದ್ದಕ್ಕೂ ಬರುವಂತೆ ಅದನ್ನು ಕಣ್ಣಲ್ಲಿ ತುಂಬಿಕೊಂಡು ಹೋಗುತ್ತೇನೆಂದು ಇಲ್ಲಿಂದ ಹೊರಡುವ ದಿನ ಸಮುದ್ರವನ್ನೇ ನೋಡುತ್ತ ಅದೆಷ್ಟೋ ಹೊತ್ತು ನಿಂತಿದ್ದಳು. ಅಷ್ಟೇ ಅಲ್ಲ ದಿನಬೆಳಗಾದರೆ ನೋಡುವ ಕಡಲನ್ನು ಹೊಸ ದೃಷ್ಟಿಯಲ್ಲಿ ನೋಡುವುದನ್ನೂ ಕಲಿಸಿಹೋದಳು. ಹೀಗೆ ಜಾಗವೊಂದನ್ನು ಹೊಸ ಕಣ್ಣಿನಿಂದ ನೋಡುವುದು ಮಾತ್ರವಲ್ಲ, ಅಲ್ಲಿನವರಲ್ಲೂ ಹೊಸದೃಷ್ಟಿಯನ್ನು ಮೂಡಿಸುವುದೂ ಸಾಧ್ಯವಾಗುವುದಿದೆ. ಮುನ್ನಾರಿನ ದೇವಸರೋವರಕ್ಕೆ ಹೋಗುವ ಕಡಿದಾದ ದಾರಿಯಲ್ಲಿ ಹೆಜ್ಜೆಯಿಡಲು ತಡವರಿಸುತ್ತಿದ್ದಾಗ, ಕಟ್ಟಿಗೆ ಹೊತ್ತಿದ್ದ ಬಾಲೆಯೊಬ್ಬಳು ಕೈಹಿಡಿದು ಬೆಟ್ಟ ಹತ್ತಿಸಿದ್ದಳು; ಸರೋವರದ ಕನ್ನಡಿಯಂತಹ ಶುಭ್ರ ನೀರಿನಲ್ಲಿ ಪ್ರತಿಫ‌ಲಿತವಾದ ಸಸ್ಯರಾಶಿಯನ್ನು ನೋಡಿ ನನ್ನಿಂದ ಹೊರಟಸಂತೋಷದ ಉದ್ಗಾರಕ್ಕೆ ಅಚ್ಚರಿಪಟ್ಟು, ಕೊನೆಗೆ ತಾನೂ ಖುಶಿಪಟ್ಟು ನಕ್ಕು ಆನಂದಿಸಿದ್ದಳು.

ಕೆಲವರು ಹಣಕಾಸಿನ ಅಥವಾ ಇತರ ತಾಪತ್ರಯಗಳಿಂದ ಈ ತುಡಿತವನ್ನು ಅದುಮಿದರೂ, ಪರಿಸ್ಥಿತಿ ಸುಧಾರಿಸುತ್ತಲೇ “ಪೆಟ್ಟಿಗೆ ಕಟ್ಟಿ’ ಪ್ರವಾಸದ ಸಿದ್ಧತೆ ನಡೆಸಿಯಾರು. ಇನ್ನು ಕೆಲವರು ಎಲ್ಲ ಅನುಕೂಲತೆಗಳಿದ್ದೂ ಜಪ್ಪೆಂದರೂ ಊರು ಬಿಡಲೊಲ್ಲರು. ಸದಾ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಅಲೆಮಾರಿ ಬದುಕನ್ನು ನಡೆಸುತ್ತಿದ್ದ ಆದಿಮಾನವನು, ಮುಂದೆ ಕೃಷಿ-ಉದ್ಯೋಗಗಳಲ್ಲಿ ತೊಡಗಿ, ಒಂದೆಡೆ ತಳವೂರತೊಡಗಿದಾಗ ನೆಲ-ಮನೆ-ಊರುಗಳ ಸಂಬಂಧಗಳೇ ದೃಢವಾದುದು ಈ ದ್ವಂದ್ವಕ್ಕೆ ಕಾರಣವಿರಬಹುದು. ಆದರೆ, ಹಿಂದಿನವರ ಹೊಸ ಸಾಧ್ಯತೆಗಳ ಹುಡುಕಾಟದ ಹಂಬಲವು ಮಾತ್ರ ಇಂದೂ ನಮ್ಮಲ್ಲಿ ಉಳಿದುಬಿಟ್ಟಿದೆ.

Advertisement

ಭಾವನೆಗಳ ಜಾಗೃತಿ
ಪ್ರವಾಸವು ತುಕ್ಕುಹಿಡಿದ ಅಥವಾ ಹಿಡಿಯಬಹುದಾದ ಮನದೊಳಗಿನ ಭಾವನೆಗಳಿಗೂ ಮರುಚಾಲನೆ ನೀಡುತ್ತದೆ. ಹೊರಗಿನ ಹೊಸತಿನೊಂದಿಗೆ, ಮನಸ್ಸಿನಲ್ಲಿ ಹುದುಗಿದ ಹೊಸದಾರಿಗಳ ದರ್ಶನವನ್ನೂ ಹೊಳೆಸಿ ನಮ್ಮನ್ನು ನಿಬ್ಬೆರಗಾಗಿಸುವುದುಂಟು. ತಿರುಗಾಟದಲ್ಲಿ ಕೆಲವೊಮ್ಮೆ ದಿನವೆಂಬುದು ವರ್ಷದಷ್ಟು ಹಿಗ್ಗುವುದಿದೆ; ತಿಂಗಳೆಂಬುದು ಕೆಲವೇ ಗಂಟೆಗಳಲ್ಲಿ ಕಳೆದಂತೆನಿಸುವುದೂ ಇದೆ. ಯಾರು, ಎಲ್ಲಿದ್ದೇವೆ, ಇದು ಯಾವ ಕಾಲ ಎಂದು ದಿಗ್ಮೂಢರಾಗಿ ನಿಲ್ಲುವ ಕ್ಷಣಗಳೂ ಇಲ್ಲದಿಲ್ಲ. ಅಥೆನ್ಸಿನ ಪ್ಯಾಂಥಿಯೋನಿನಲ್ಲೋ, ರೋಮಿನ ಕೊಲೀಸಿಯಮ್ಮಿನಲ್ಲೋ, ಅಜಂತಾ ಎಲ್ಲೋರಾದ ಗುಹೆಗಳೊಳಗೋ ನಿಂತ ಕ್ಷಣಗಳು ಅಂಥವು.

ಮಾನವನ ಪ್ರವಾಸದ ಆಸಕ್ತಿ ಇಂದುನಿನ್ನೆಯದಲ್ಲ. ರಸ್ತೆ, ಸಾರಿಗೆ, ರಕ್ಷಣಾ ವ್ಯವಸ್ಥೆ, ಮಾರ್ಗದರ್ಶನ ಮುಂತಾದ ಸೌಲಭ್ಯಗಳ ಅತೀವ ಕೊರತೆಯಿದ್ದ ಪ್ರಾಚೀನ ಕಾಲದಲ್ಲೂ ದುರ್ಗಮವಾದ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದ ಸಾಹಸಿಗಳಿದ್ದರು. ಹದಿನೇಳನೇ ಶತಮಾನದಲ್ಲಿ ಉಡುಪಿಯ ಪೆರಂಪಳ್ಳಿಯಲ್ಲಿದ್ದ ನಮ್ಮ ಹಿರಿಯರಾದ ನೆಕ್ಕಾರು ಕೃಷ್ಣದಾಸರು ಬರೆದ (ಆಧುನಿಕ ಕನ್ನಡ ಸಾಹಿತ್ಯದ ಮೊದಲ ಪ್ರವಾಸ ಕಥನಕಾವ್ಯವಿರಬಹುದೆಂದು ಸಂಶೋಧಕ ಡಾ. ಶ್ರೀನಿವಾಸ ಹಾವನೂರರು ಅಭಿಪ್ರಾಯ ಪಟ್ಟಿದ್ದ) ತಿರುಪತಿ ಯಾತ್ರೆಯಲ್ಲಿ ಕಾಲ್ನಡಿಗೆಯ ತಿರುಪತಿ ಪಯಣದ ಹೃದಯಂಗಮವಾದ ಕಣ್ಣಿಗೆ ಕಟ್ಟುವ ಚಿತ್ರಣವಿದೆ. ಜಾಣರಾದ ಹಾದಿ ಕಾಣಬಲ್ಲವರಿಗೆ ತ್ರಾಣಗುಂದದ ಹಾಗೆ, ಕಳ್ಳಕಾಕರು ಇಲ್ಲದ ಹಾಗೆ, ಎಳ್ಳಷ್ಟು ನೋವು ಆಗದ ಹಾಗೆ, ಉಳ್ಳಷ್ಟು ಮಾರ್ಗದಿ ನಡೆಸು ಎಂಬ ಪ್ರಾರ್ಥನೆ ಸಲ್ಲಿಸಿಯೇ ಹೊರಡುವ ಕೃಷ್ಣದಾಸರು ದಾರಿಯಲ್ಲಿ ಅಡಿಗೆ ಮಾಡಿಕೊಳ್ಳಲು ಚೆಂಬು ಚರಿಗೆ, ಸವುಟು, ಉಂಬ ಸಂಭ್ರಮಕೆಲ್ಲ ಸಂಬಾರದ ಸುರುಟು ಇವನ್ನೆಲ್ಲ ಗಂಟುಕಟ್ಟಿ, ತೋಪು, ತೋಪುಗಳಲ್ಲಿ, ತಾಪವ ಕಳಗೊಂಡು, ಕಾಪಥವಾಗದೆ ಅಡುಗೆಯನುಂಡು, ಮುಂದೆ ಮಾರ್ಗವ ನಡೆವುದು ಎನ್ನುತ್ತಾರೆ.

ಸಕಲ ಅನುಕೂಲತೆಗಳಿರುವ ಈಗಿನ ಕಾಲದಲ್ಲೂ ಪ್ರವಾಸಿಗಳಿಗೆ ಸಾಹಸಿ ಮನೋಭಾವವಿರುವುದು ಅಗತ್ಯ. ಹವಾಮಾನದ ವೈಪರೀತ್ಯ, ಅಭ್ಯಾಸವಿಲ್ಲದ ಊಟತಿಂಡಿ, ಅಕಸ್ಮತ್ತಾಗಿ ಬರುವ ಆಪತ್ತುಗಳಿಗೆಲ್ಲ ಸಿದ್ಧರಾಗಿರಬೇಕಾಗುತ್ತದೆ. ವಿದೇಶದಲ್ಲಿ ಊಟ ಮಾಡುತ್ತ, “ಅಯ್ಯೋ! ಮನೆಸಾರಿನ ರುಚಿ ಇದಕ್ಕೆಲ್ಲಿಂದ ಬರಬೇಕು?’ ಎಂದು ಹಳಹಳಿಸಿದರೆ ಹೇಗಾದೀತು? ಅದುವರೆಗೆ ಕಂಡರಿಯದ, ಭೂಗೋಳದಲ್ಲೇ ಇಲ್ಲದಿದ್ದ ದೇಶಗಳನ್ನು ಹುಡುಕಿದ ಮೆಗಲನ್‌, ಕೊಲಂಬಸ್‌, ವಾಸ್ಕೋಡಗಾಮಾ ಮುಂತಾದವರದು ಅದೆಂಥ ಎದೆಗಾರಿಕೆಯಿದ್ದಿದ್ದಿರಬೇಡ! ಅವರ ವೃತ್ತಾಂತಗಳು ಇಂದಿಗೂ ನಮ್ಮನ್ನು ಪ್ರಚೋದಿಸಿ, ನಮ್ಮೊಳಗೆ ಸಾಹಸದ ಕಿಡಿಯನ್ನು ಹಚ್ಚುತ್ತವೆ. ಅಂಥವರ ಸಾಹಸಗಳೇ ಕತೆಗಾರರ ಕಲ್ಪನೆಗಳನ್ನು ಕೆದಕಿ ಯುಲಿಸಿಸ್‌, ಸಿಂದಬಾದ್‌ನಂತಹ ಮನರಂಜಕ ಕತೆಗಳು ಹುಟ್ಟುವಂತಾದುದು.

ಹಡಗು, ದೋಣಿ, ಕುದುರೆ, ಒಂಟೆಗಳ ಮೇಲಲ್ಲದೆ ಕಾಲ್ನಡಿಗೆಯಲ್ಲೂ ಪಯಣ ಮಾಡಿದ (ನಮ್ಮ ಕರಾವಳಿಗೂ ಭೇಟಿಯಿತ್ತ) ಮಧ್ಯಕಾಲೀನ ಯುಗದ ಮಾರ್ಕೊ ಪೋಲೊ, ಇಬ್‌° ಬುಟಾಟಾ ಮತ್ತಿತರ ಪ್ರವಾಸಿಗಳ ವರದಿಗಳನ್ನು ನೋಡುವಾಗ ಮೈ ಜುಮ್ಮೆನ್ನುತ್ತದೆ. ಹದಿಮೂರನೆಯ ಶತಮಾನದಷ್ಟು ಹಿಂದೆ, ತನ್ನ ಇಪ್ಪತ್ತೂಂದನೇ ವಯಸ್ಸಿನಿಂದ ಎರಡೂವರೆ ದಶಕಗಳ ಕಾಲ ಸುಮಾರು ಎಪ್ಪತ್ತೈದು ಸಾವಿರ ಮೈಲುಗಳಷ್ಟು ಪ್ರಯಾಣ ಮಾಡಿ, ಭಾರತವೂ ಸೇರಿದಂತೆ ನಲ್ವತ್ನಾಲ್ಕು ದೇಶಗಳನ್ನು ಸುತ್ತಿದ್ದ, ಮೊರೊಕ್ಕೊದ ಇಬ್‌° ಬಟುಟಾ ಒಂದು ಕಡೆ ಹೀಗೆ ಬರೆದಿದ್ದ: “ಒಂಟಿಯಾಗಿ ಹೊರಟಿದ್ದೆ, ದಾರಿಯಲ್ಲಿ ಮಾತನಾಡಲು, ಉಮೇದು ಕೊಡಲು ಯಾವ ಸಹಪ್ರಯಾಣಿಕರೂ ಇರಲಿಲ್ಲ. ನನ್ನೊಳಗಿನ ಹತ್ತಿಕ್ಕಲಾರದ ಒತ್ತಡಕ್ಕೆ ಮಣಿದು, ಜಗತ್ತಿನ ವಿವಿಧ ವೈಭವಯುತ ಸ್ಥಳಗಳನ್ನು ನೋಡುವ ಬಹುಕಾಲದ ಇಚ್ಛೆಯಿಂದ, ನನ್ನವರನ್ನೆಲ್ಲ ಅಗಲಿ, ಮನೆಯಿಂದ ದೂರ ಸರಿಯುವ ದುಃಖದ ನಿರ್ಧಾರ ತೆಗೆದುಕೊಂಡಿದ್ದೆ’.

ಮಿತ್ರಾ ವೆಂಕಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next