Advertisement

ಟ್ರೋಮಾ ಸೆಂಟರ್‌ ಕನಸು ನನಸಾದೀತೆ?

06:27 PM Nov 21, 2020 | Suhan S |

ಹೊನ್ನಾವರ: ಅಪಘಾತ ವೇಳೆ ಗಂಭೀರ ಗಾಯವಾಗುವುದಕ್ಕೆ ತುರ್ತುಚಿಕಿತ್ಸೆ ನೀಡುವ ಘಟಕಕ್ಕೆ ಟ್ರೋಮಾ ಸೆಂಟರ್‌ ಎಂದು ಕರೆಯಲಾಗುತ್ತದೆ. ಇದು ಜಿಲ್ಲೆಯ ಮಧ್ಯವರ್ತಿಸ್ಥಳದಲ್ಲಿ ಬೇಕು ಎನ್ನುವುದು ಜನರ ಬಹುದಿನದ ಬೇಡಿಕೆ.

Advertisement

ಉದ್ಯಮಿಯೊಬ್ಬರು ಈ ಕುರಿತು ಭರವಸೆ ಹುಟ್ಟಿಸಿದ್ದರು. ಅವರೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇನ್ನು ಜಿಲ್ಲಾಕೇಂದ್ರದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಿರುವುದರಿಂದಕನಿಷ್ಠ ಸಂಖ್ಯೆಯಲ್ಲಿ ವಿಶೇಷ ತಜ್ಞರು ಲಭ್ಯವಿದ್ದರೆ ಅಲ್ಲಿ ಟ್ರೋಮಾ ಸೆಂಟರ್‌ ವ್ಯವಸ್ಥೆ ತಕ್ಕಮಟ್ಟಿಗೆ ಮಾಡಬಹುದು. ಹೊಸದಾಗಿ ಆರಂಭವಾದ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ವೈದ್ಯರ ಕೊರತೆ ಇದೆ. ಕಾರವಾರ ಜಿಲ್ಲಾ ಕೇಂದ್ರವಾದರೂಒಂದು ಮೂಲೆಯಲ್ಲಿದೆ. ಹಳಿಯಾಳ, ದಾಂಡೇಲಿ, ಮುಂಡಗೋಡ, ಶಿರಸಿ, ಸಿದ್ದಾಪುರಭಾಗದ ಜನರಿಗೆ ಕಾರವಾರಕ್ಕಿಂತ ಹುಬ್ಬಳ್ಳಿಹತ್ತಿರವಾಗುತ್ತದೆ. ಭಟ್ಕಳ, ಹೊನ್ನಾವರದ ಜನಕ್ಕೆಉಡುಪಿ ಹತ್ತಿರವಾಗುತ್ತದೆ. ಕಾರವಾರದಲ್ಲಿ ಟ್ರೋಮಾ ಸೆಂಟರ್‌ ಆದರೆ ಜಿಲ್ಲೆಯಲ್ಲಿ ಟ್ರೋಮಾ ಸೆಂಟರ್‌ ಇದೆ ಎಂದು ಹೇಳಿಕೊಳ್ಳಬಹುದು ಅಷ್ಟೇ.

ಕುಮಟಾದಲ್ಲಿ ಟ್ರೋಮಾ ಸೆಂಟರ್‌ ಆದರೆ ಒಂದು ದಿಕ್ಕಿಗೆ ಹೊನ್ನಾವರ-ಭಟ್ಕಳ, ಇನ್ನೊಂದು ದಿಕ್ಕಿಗೆ ಅಂಕೋಲಾ-ಕಾರವಾರ, ಇನ್ನೊಂದು ದಿಕ್ಕಿಗೆ ಶಿರ್ಸಿ-ಸಿದ್ದಾಪುರ ಇದೆ. ಈ ತಾಲೂಕುಗಳ ಜನ ಬೇಗ ಕುಮಟಾ ತಲುಪಬಹುದು.ರಾಜಕಾರಣಿಗಳಲ್ಲೇ ಏಕಾಭಿಪ್ರಾಯವಿಲ್ಲದಕಾರಣ ಖಾಸಗಿ ಆಸ್ಪತ್ರೆಗಳವರು ಟ್ರೋಮಾ  ಸೆಂಟರ್‌ ಒಳಗೊಂಡ ಆಸ್ಪತ್ರೆ ತೆರೆಯಲು ಹಿಂದೇಟು ಹಾಕುತ್ತಾರೆ.

ಟ್ರೋಮಾ ಸೆಂಟರ್‌ ಎಂದರೆ 24 ತಾಸು ತೆರೆದಿರಬೇಕು. ತಲಾ ಇಬ್ಬರು ವೈದ್ಯರು ಬೇಕು. ನರ, ಎಲುಬು ಮತ್ತು ದೇಹದ ಒಳಭಾಗಕ್ಕೆ ಪೆಟ್ಟಾದರೆ ಸರ್ಜನ್‌ರು ಬೇಕು. ಮೆದುಳಿಗೆ ನ್ಯುರೋ ಸರ್ಜನ್‌ ಬೇಕು. ಹೃದಯಾಘಾತವಾದರೆ ಇಂಟರ್‌ವೆನ್ಶನಲ್‌ ಕಾರ್ಡಿಯೋಲಜಿಸ್ಟ್‌ ಮತ್ತು ಕ್ಯಾಥ್‌ಲ್ಯಾಬ್‌ ಬೇಕು. ಇದಕ್ಕೆ ಪರಿಣಿತ ಸಿಬ್ಬಂದಿ, ಉತ್ತಮ ಆಪರೇಶನ್‌ ಥಿಯೇಟರ್‌, ಬ್ಲಿಡ್‌ ಬ್ಯಾಂಕ್‌ ಸಹಿತ ದೊಡ್ಡ ಆಸ್ಪತ್ರೆಗಳಲ್ಲಿರುವ ಎಲ್ಲ ಸೌಲಭ್ಯಗಳೂ ಬೇಕಾಗುತ್ತದೆ. ವಿಭಾಗಕ್ಕೆ ಇಬ್ಬರಂತೆ 20-30 ವೈದ್ಯರು ಬೇಕು. ಕನಿಷ್ಠ 200 ಕೋಟಿರೂ. ಬಂಡವಾಳ ಬೇಕು. ಜಿಲ್ಲೆಯಲ್ಲಿ ಒಂದೂ ಕ್ಯಾಥ್‌ ಲ್ಯಾಬ್‌ ಇಲ್ಲ, ನರ್ಸಿಂಗ್‌ ಹೋಂಗಳಿವೆ,ವೈದ್ಯರಿದ್ದಾರೆ ವಿನಃ ಟ್ರೋಮಾ ಸೆಂಟರಿಗೆ ಅಗತ್ಯವಿರುವ ವೈದ್ಯರು ಲಭ್ಯವಿಲ್ಲ. ಅಂತಹ ಒಂದು ಪ್ರಯತ್ನವನ್ನು ಉದ್ಯಮಿ ಆರ್‌.ಎನ್‌. ಶೆಟ್ಟಿಯವರು ಮಾಡಿ ಎರಡು ದಶಕದ ಹಿಂದೆ 10 ಕೋಟಿ ರೂ. ವೆಚ್ಚಮಾಡಿ ಆಸ್ಪತ್ರೆ ಕಟ್ಟಿಸಿದ್ದರು. ಆರಂಭದಲ್ಲಿ ಕೆಲವು ವೈದ್ಯರು ಇದ್ದರು. ಜನ ಬರಲಿಲ್ಲ, ವೈದ್ಯಕೀಯ ಕ್ಷೇತ್ರದ ಒಳರಾಜಕೀಯ ಆಸ್ಪತ್ರೆಯನ್ನು ಹಿಂದಿಕ್ಕಿತು. ನಂತರ ಅಂತಹ ಪ್ರಯತ್ನ ನಡೆದೇ ಇಲ್ಲ.

ವರ್ಷಕ್ಕೆ 100ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ :  ಜಿಲ್ಲೆಯಲ್ಲಿ ವರ್ಷಕ್ಕೆ 600-800 ರಸ್ತೆ ಅಪಘಾತಗಳಾಗಿ ಕನಿಷ್ಠ 100 ಜನ ಗಂಭೀರ ಗಾಯಗೊಳ್ಳುತ್ತಾರೆ. ಹೆಚ್ಚಿನವರು ದೊಡ್ಡ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಮೃತಪಡುತ್ತಾರೆ. ಹೃದಯಾಘಾತ, ಪಾರ್ಶ್ವವಾಯು, ಮರದಿಂದ ಬೀಳುವುದು ಮೊದಲಾದ ಸಾವಿರ ಜನ ತೊಂದರೆಗೊಳಗಾಗುತ್ತಾರೆ.ಇಂಥವರಿಗೆ ಗಾಯಗಳ ಗಂಭೀರತೆಯ ಆಧಾರದಲ್ಲಿ ಅರ್ಧ ತಾಸಿನಿಂದ ಎರಡು ತಾಸಿನೊಳಗೆ ಚಿಕಿತ್ಸೆ ಸಿಗಬೇಕು. ಇದು ವೈದ್ಯರ ಭಾಷೆಯಲ್ಲಿ ಗೋಲ್ಡನ್‌ ಪೀರಿಯಡ್‌, ಬದುಕಿಸುವ ಚಿನ್ನದ ಕ್ಷಣಗಳು. ಕೋವಿಡ್‌ ನಿರ್ಬಂಧ ಕಾಲದಲ್ಲಿ ಗಡಿದಾಟಲು ಪರವಾನಿಗೆ ಪಡೆಯಲು ನಾಲ್ಕಾರು ತಾಸುಹಾದಿಯಲ್ಲಿ ಹಲವರು ಅಸುನೀಗಿದರು. ಇದನ್ನು ನೋಡಲಾರದೆ ಕರಾವಳಿ ತಾಲೂಕುಗಳ ಅಂಬ್ಯುಲೆನ್ಸ್‌ ಚಾಲಕರು ಪ್ರತಿಭಟನೆ ಮಾಡಬೇಕಾಗಿ ಬಂತು.

Advertisement

ಎಲ್ಲದಕ್ಕೂ ರಾಜಕೀಯ ಬೇಡ : ಮಣಿಪಾಲ ಸಂಸ್ಥೆಗಳಲ್ಲಿ 200ಕ್ಕೂ ಹೆಚ್ಚು ವೈದ್ಯರಿದ್ದಾರೆ, ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ನೂರಾರು ವೈದ್ಯರ ಸೇವೆ ಲಭ್ಯವಿರುತ್ತದೆ. ತುರ್ತು ಸಂದರ್ಭಗಳಲ್ಲಿ ಒಬ್ಬರಲ್ಲ ಒಬ್ಬರು ವೈದ್ಯರು ಸಿದ್ಧರಾಗಿ ಬರುತ್ತಾರೆ. ಆದ್ದರಿಂದ ಅಲ್ಲಿ ಟ್ರೋಮಾ ಸೆಂಟರ್‌ ನಡೆಸುವುದುಸುಲಭ. ಉತ್ತರ ಕನ್ನಡಕ್ಕೆ ಟ್ರೋಮಾ ಸೆಂಟರ್‌ ಬೇಕೆಂದಾದರೆದಕ್ಷಿಣದ ದೊಡ್ಡ ಮೆಡಿಕಲ್‌ ಕಾಲೇಜುಗಳ ಶಾಖೆಯನ್ನು ಕುಮಟಾದಲ್ಲಿ ತೆರೆಯುವಂತೆ ಅಲ್ಲಿಯ ಆಡಳಿತ ಮಂಡಳಿಯ ಮನವೊಲಿಸಬೇಕು, ಜನ ಸ್ವಾಗತಿಸಬೇಕು. ಎಲ್ಲದಕ್ಕೂ ಬರೀ ರಾಜಕೀಯ ಮಾಡಿದರೆ ಏನೂ ಆಗುವುದಿಲ್ಲ ಅಥವಾ ದಕ್ಷಿಣಕನ್ನಡದ ದೊಡ್ಡ ಆಸ್ಪತ್ರೆಗಳಿಂದ ಎರ್‌ ಅಂಬುಲೆನ್ಸ್‌ ಸೇವೆ ದೊರೆಯುವಂತೆ ಮಾಡಬೇಕು. ಅದರ ಲಾಭ ಬಡವರಿಗೆ ಸಿಗಬೇಕಾದರೆ ಕೇಂದ್ರ ಸರ್ಕಾರ ಆಯುಷ್ಮಾನ್‌ ಹೊಂದಿದವರಿಗೆ ಈ ಸೌಲಭ್ಯವನ್ನು ವಿಸ್ತರಿಸಬೇಕು. ರಾಜಕೀಯ ಇಚ್ಛಾಶಕ್ತಿಯಿದ್ದರೆ ಎಲ್ಲವೂ ಸಾಧ್ಯ. ಜಿಲ್ಲೆಯಲ್ಲಿರುವ ನರ್ಸಿಂಗ್‌ ಹೋಂಗಳ ವೈದ್ಯರು, ಸರ್ಕಾರಿ ವೈದ್ಯರು ಮನಸ್ಸು ಮಾಡಿದರೆ ಟ್ರೋಮಾಸೆಂಟರ್‌ಸ್ಥಾಪಿಸಬಹುದು. ಇತ್ತೀಚೆಗೆ ಉನ್ನತ ವೈದ್ಯಕೀಯ ಶಿಕ್ಷಣ ಪಡೆದ ಜಿಲ್ಲೆಯ 50ಕ್ಕೂ ಹೆಚ್ಚು ಪರಿಣಿತ ವೈದ್ಯರು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿದ್ದಾರೆ, ಎಲ್ಲ ಕ್ಷೇತ್ರವನ್ನೂ ರಾಜಕೀಯ ಹಾಳುಮಾಡುತ್ತಿದೆ. “ಸದ್ಯಕ್ಕಂತೂ ಉತ್ತರ ಕನ್ನಡಕ್ಕೆ ಸ್ವಾಗತ, ಇಲ್ಲಿ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲಾ, ನಿಧಾನವಾಗಿ ಚಲಾಯಿಸಿ’ ಎಂಬ ಬೋರ್ಡ್‌ ಎಲ್ಲೆಡೆ ರಾರಾಜಿಸಲಿ ಎಂದು ವಾಟ್ಸ್‌ಆ್ಯಪ್‌ನಲ್ಲಿ ಹಲವರು ಸಲಹೆ ನೀಡಿದ್ದಾರೆ.

ಏನಿದು ಟ್ರೋಮಾ ಸೆಂಟರ್‌? : ಅಪಘಾತಗಳಿಂದ ಮೆದುಳು, ಎದೆ ಸಹಿತ ದೇಹದ ಯಾವುದೇ ಭಾಗಕ್ಕೆ ಆಗುವ ಗಂಭೀರ ಗಾಯ, ಹೃದಯಾಘಾತ, ಆತ್ಮಹತ್ಯೆಯ ಯತ್ನ, ವಿಷಕಾರಿ ಹಾವು ಕಡಿತ, ಪಾರ್ಶ್ವವಾಯು, ಮರದಿಂದ ಬಿದ್ದು ಕೈಕಾಲು,ಬೆನ್ನುಹುರಿಗೆ ಗಂಭೀರ ಗಾಯವಾಗುವುದಕ್ಕೆ ತುರ್ತುಚಿಕಿತ್ಸೆ ನೀಡುವ ಘಟಕಕ್ಕೆ ಟ್ರೋಮಾ ಸೆಂಟರ್‌ ಎಂದು ಕರೆಯಲಾಗುತ್ತದೆ.

 

-ಜೀಯು

Advertisement

Udayavani is now on Telegram. Click here to join our channel and stay updated with the latest news.

Next