Advertisement

ಪೇಟೆ ಹಾದಿಯಲ್ಲಿ ಕಸದ ರಾಶಿ, ವಾಹನ ದಟ್ಟಣೆ

03:01 PM Mar 27, 2018 | Team Udayavani |

ಬೆಂಗಳೂರು: ಪಾದಚಾರಿ ಮಾರ್ಗ ಹಾಗೂ ರಸ್ತೆಗಳಲ್ಲೆಲ್ಲಾ ಹರಡಿರುವ ಕಸದ ರಾಶಿ. ಕಿರಿದಾದ ರಸ್ತೆಗಳಲ್ಲಿ ನಿತ್ಯ ವಾಹನ ದಟ್ಟಣೆ ಕಿರಿಕಿರಿ. ಕಾಲ ಬದಲಾದರೂ ಸ್ವರೂಪ ಬದಲಾಗದ ಕೊಳೆಗೇರಿಗಳು. ಇಲ್ಲಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ಸದ್ದಿಲ್ಲದೆ ನಡೆದಿರುವ ಕಾಂಕ್ರಿಟ್‌ ರಸ್ತೆ ಕಾಮಗಾರಿ… ಇದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಚಿತ್ರಣ. ಟಿಪ್ಪು ಸುಲ್ತಾನ್‌ ಹಾಗೂ ಮೈಸೂರು ಒಡೆಯರ ಆಡಳಿತದಲ್ಲಿ ನಿರ್ಮಾಣ  ಗೊಂಡ ಅರಮನೆ, ಕೋಟೆ, ಮಾರುಕಟ್ಟೆ ಹೊಂದಿರುವ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಾಮಗಾರಿ ವರ್ಷಪೂರ್ತಿ ನಡೆಯುತ್ತಲೇ ಇದ್ದರೂ ಸಮಸ್ಯೆಗಳಿಗೆ ಬರ ಇಲ್ಲ.  ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊಳೆಗೇರಿ ಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಗಳಲ್ಲಿ ಚಾಮರಾಜಪೇಟೆ ಕೂಡ ಒಂದು. ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಬರೋಬ್ಬರಿ 42 ಕೊಳೆಗೇರಿ ಗಳಿದ್ದು, ಸಿದ್ದಾರ್ಥನಗರ, ಆನಂದಪುರ, ವೆಂಕಟಸ್ವಾಮಿ ಗಾರ್ಡನ್‌, ಭಕ್ಷಿ ಗಾರ್ಡನ್‌, ವೆಂಕಟ ರಾಮನಗರ, ಟಿಪ್ಪುನಗರ, ವಾಲ್ಮೀಕಿನಗರ ಕೊಳೆಗೇರಿಗಳಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆಯಾದರೂ ಇನ್ನೂ ಮೂಲ ಸೌಕರ್ಯದ ಕೊರತೆ ತೀವ್ರವಾಗಿದೆ. ಜಗಜೀವನರಾಂ ನಗರ, ಹಳೆ ಗುಡ್ಡದಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಕ್ಕ ಮಟ್ಟಿನ ಸೌಲಭ್ಯಗಳಿವೆ.

Advertisement

ಶ್ರಮಿಕ ವರ್ಗವೇ ಪ್ರಧಾನ: ಕ್ಷೇತ್ರದ ಜನಸಂಖ್ಯೆಯಲ್ಲಿ ಸುಮಾರು ಶೇ.75ರಷ್ಟು ಶ್ರಮಿಕ ವರ್ಗದವರಿದ್ದಾರೆ. ದಿನಗೂಲಿ, ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಆಯಾ ದಿನದ ಖರ್ಚಿಗಾಗುವಷ್ಟು ದುಡಿಮೆ ಆಶ್ರಯಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಇಂದಿರಾ ಕ್ಯಾಂಟೀನ್‌ ಇಲ್ಲಿ ಎಲ್ಲ ದಿನಗಳಲ್ಲೂ ಭರ್ತಿ.ರಾಯಪುರ, ಜಗಜೀವನರಾಂ ನಗರ ದಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಕ್ಷೇತ್ರ, ವಾರ್ಡ್‌ ಸಮಸ್ಯೆಗಿಂತ ವೈಯಕ್ತಿಕ ಸಮಸ್ಯೆಗಳೇ ಹೆಚ್ಚು. ಹೀಗಾಗಿ, ಶಾಸಕರಿಂದ ಹಿಡಿದು ಪಾಲಿಕೆ ಸದಸ್ಯರವರೆಗೆ ವೈಯಕ್ತಿಕ ಪರಿಹಾರ ವಿತರಣೆಗೆ ಮೊದಲ ಆದ್ಯತೆ ಕೊಟ್ಟಿರುವುದು ಕಂಡು ಬರುತ್ತದೆ.

ಸೌಲಭ್ಯ ಕೊರತೆಯಲ್ಲಿ ಏಕರೂಪತೆ ಕಾಯ್ದುಕೊಂಡ ಆರು ವಾರ್ಡ್‌ಗಳ ನಡುವೆ ಚಾಮರಾಜಪೇಟೆ ವಾರ್ಡ್‌ನಲ್ಲಿ ವಿಶಾಲ
ರಸ್ತೆಗಳು, ಯೋಜಿತ ಅಭಿವೃದ್ಧಿ, ಸುಸಜ್ಜಿತ ಸೌಲಭ್ಯವೂ ಇವೆ. ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಸದಸ್ಯರಿದ್ದರೆ, ಜೆಡಿಎಸ್‌ ಹಾಗೂ ಬಿಜೆಪಿಯ ತಲಾ ಇಬ್ಬರು ಸದಸ್ಯರಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರು, ಕ್ರೈಸ್ತರು, ಪರಿಶಿಷ್ಟ ಜಾತಿ/ ಪಂಗಡದವರು (ತಮಿಳರು) ಗಣನೀಯ ಸಂಖ್ಯೆಯಲ್ಲಿದ್ದು, ನಿರ್ಣಾಯಕರೆನಿಸಿದ್ದಾರೆ
 
ಕ್ಷೇತ್ರದ ಬೆಸ್ಟ್‌ ಏನು? 
ಕೆ.ಆರ್‌.ಮಾರುಕಟ್ಟೆಯಿಂದ ಮೈಸೂರು ರಸ್ತೆಯಲ್ಲಿ ಚಾಮರಾಜಪೇಟೆ ಗಡಿವರೆಗಿನ ರಸ್ತೆಯನ್ನು ವೈಟ್‌ಟಾಪಿಂಗ್‌ನಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ರಾಯಪುರ ವಾರ್ಡ್‌ ವ್ಯಾಪ್ತಿಯಲ್ಲಿ 50 ಹಾಸಿಗೆಯ ಆಸ್ಪತ್ರೆ ನಿರ್ಮಾಣ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರ ಸಮುದಾಯ ಕುಟುಂಬಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು 7 ಸಾವಿರ ಜನರಿಗೆ ಸಾಲದ ವ್ಯವಸ್ಥೆ, ಕೊಳಗೇರಿಗಳಲ್ಲಿ ಸಿಮೆಂಟ್‌ ರಸ್ತೆ, ಬಿಬಿಎಂಪಿಯಿಂದ 1200 ಒಂಟಿ ಮನೆ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 700 ಮನೆಗಳನ್ನು ಹಂಚಿಕೆ ಮಾಡಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?
ಕುಡಿಯುವ ನೀರಿನ ಅಭಾವ, ಒಳಚರಂಡಿ ಅವ್ಯವಸ್ಥೆ ಹಾಗೂ ಕಸ ವಿಲೇವಾರಿ ಸಮಸ್ಯೆ ಕ್ಷೇತ್ರದ ಬಹುತೇಕ ಕಡೆ ಕಾಡುತ್ತಿದೆ. ಸುಮಾರು 42 ಕೊಳೆಗೇರಿಗಳಿದ್ದು, ಬಹುಳಷ್ಟು ಕಡೆ ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆ ಇಲ್ಲ. ಇದರಿಂದ ಜನ ಎಲ್ಲೆಂದರಲ್ಲಿ ಕಸ ಸುರಿಯುವುದು ಸಾಮಾನ್ಯವಾಗಿದ್ದು, ನೈರ್ಮಲ್ಯ ಕಾಣದಾಗಿದೆ. ಒಳಚರಂಡಿ ವ್ಯವಸ್ಥೆಯೂ ಬಹುತೇಕ ಕಡೆ ಹಾಳಾಗಿದ್ದು, ರಸ್ತೆ, ಕಿರು ಚರಂಡಿಗಳಲ್ಲಿ ಕೊಳಚೆ ನೀರು ಹರಿಯುವುದು ಸಾಮಾನ್ಯವೆನಿಸಿದೆ.

ಶಾಸಕರು ಏನಂತಾರೆ?
ಗೋರಿಪಾಳ್ಯದಲ್ಲಿ 8 ಕೋಟಿ ವೆಚ್ಚದಲ್ಲಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 45 ಕೋಟಿ ರೂ. ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಪ್ರಗತಿಯಲ್ಲಿದೆ. ರುದ್ರಭೂಮಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ನೆರವಾಗಿದ್ದೇನೆ.
ಜಮೀರ್‌ ಅಹಮ್ಮದ್‌ 

Advertisement

ಕ್ಷೇತ್ರ ಮಹಿಮೆ
ಕನ್ನಡ ಸಾಹಿತ್ಯ ಲೋಕದ ಪ್ರಾತಿನಿಧಿಕ ಸಂಸ್ಥೆ ಎನಿಸಿರುವ ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಕ್ಷೇತ್ರದ ಹೆಗ್ಗುರುತು ಎನಿಸಿದೆ. ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆ, ಕೋಟೆಯು ಪುರಾತನ ಕಾಲದ ಸ್ಮಾರಕಗಳ ಪ್ರತೀಕದಂತಿದೆ. ಕೃಷ್ಣ ರಾಜ ಮಾರುಕಟ್ಟೆ, ಪುರಾತನ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಸೇಂಟ್‌ ಜೋಸೆಫ್ ಚರ್ಚ್‌ ಈ ಕ್ಷೇತ್ರದಲ್ಲಿದೆ. ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಕಣ್ಣಿನ ಆಸ್ಪತ್ರೆ ಕೂಡ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಡೆ ಬಗೆಹರಿದಿದ್ದು, ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕಿದೆ. ಸ್ಥಳೀಯರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಾರೆ. ಪ್ರಮುಖ ರಸ್ತೆಗಳು ವಿಸ್ತರಣೆಯಾದರೆ ಸಂಚಾರ ಸುಗಮವಾಗಲಿದೆ.
ಇಮ್ರಾನ್‌ ಚಾಮರಾಜಪೇಟೆ

ಚಾಮರಾಜಪೇಟೆ ವಾರ್ಡ್‌ನಲ್ಲಿ ಬಹುತೇಕ ಸೌಲಭ್ಯಗಳಿವೆ. ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಾರೆ. ಕೆಲವೆಡೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಮುಂದೆ ಗಂಭೀರವಾಗಿ ಕಾಡದಂತೆ ಈಗಲೇ ಕ್ರಮ ಕೈಗೊಳ್ಳಬೇಕು. 
 ಉಮಾದೇವಿ

ಜಗಜೀವರಾಂ ನಗರ, ರಾಯಪುರ ವಾರ್ಡ್‌ನ ಗಡಿ ಭಾಗದಲ್ಲಿ ಇಂದಿರಾ ಕ್ಯಾಂಟೀನ್‌, ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಇತರೆ ಸೌಲಭ್ಯಗಳಿವೆ. ಕಸ ವಿಲೇವಾರಿ ಸಮಸ್ಯೆ ಬಗೆಹರಿದಿಲ್ಲ. 
 ಷರೀಫ್ 

ಬಡವರ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಫ್ರೀಜರ್‌ ಸೌಲಭ್ಯವಿರುವ ಶವಪೆಟ್ಟಿಗೆಯನ್ನು ಜಗಜೀವನರಾಂ ನಗರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ರುದ್ರಭೂಮಿಗಳ ಅಭಿವೃದ್ಧಿ ಆಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಬೇಕು.
ಈಶ್ವರ್‌

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next