Advertisement

ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಆಗ್ರಹ

10:47 AM Jan 09, 2018 | |

ಕಲಬುರಗಿ: ನೌಕರರ ವರ್ಗಾವಣೆಗೆ ಅಡ್ಡಗಾಲಾಗಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿ ಹಾಗೂ ಸಾರಿಗೆ ನಿಗಮಗಳ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಜ. 25ರಂದು ಎಲ್ಲ ವಿಭಾಗೀಯ ಸಾರಿಗೆ ಕಚೇರಿಗಳ ಎದುರು ಧರಣಿ ಹಾಗೂ ಜ.30ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕ್‌ರ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಅನಂತಸುಬ್ಬರಾವ್‌ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರೆಲ್ಲ ಸಂಘಟಿತವಾಗಿ ಹೋರಾಟ ಮಾಡಿದಾಗ
ಆಡಳಿತ ಮಂಡಳಿಗಳನ್ನು ಹಿಮ್ಮೆಟ್ಟಿಸುವ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸುವ ಕೆಲಸ ಸುಲಭವಾಗುತ್ತದೆ. ಹೋರಾಟದ ಯಶಸ್ವಿಗಾಗಿ ವಿಭಾಗ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ವಾಯವ್ಯ ಸಾರಿಗೆ ಸಮಾವೇಶ ಜನವರಿ 17ರಂದು ಹುಬ್ಬಳ್ಳಿಯಲ್ಲಿ, ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಸಮಾವೇಶ ಜನವರಿ 20ರಂದು, ಬೆಂಗಳೂರಿನಲ್ಲಿ ಜನವರಿ 25ರಂದು ಬಿಎಂಟಿಸಿ
ನೌಕರರ ಸಮಾವೇಶ ನಡೆಯಲಿದೆ ಎಂದರು.

ಈ ಹಿಂದೆ ಮುಖ್ಯಮಂತ್ರಿಗಳೇ 19,000 ನೌಕರರ ವರ್ಗಾವಣೆಗೆ ಒಪ್ಪಿದ್ದರು. ಆದಾಗ್ಯೂ, 3800 ನೌಕರರ ವರ್ಗಾವಣೆಗೆ ಒಪ್ಪಲಾಗಿತ್ತು. ಅದನ್ನೂ ಸಹ ಜಾರಿಗೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾರಿಗೆ ನೌಕರರಿಗೆ ವಸತಿ ಸಮಸ್ಯೆ ಇದ್ದು, ಬೆಂಗಳೂರಿನಲ್ಲಿಯೇ ಸುಮಾರು 50,000 ನೌಕರರು ನಿರ್ವಸತಿಕರಾಗಿದ್ದಾರೆ. ಆದಾಗ್ಯೂ, 3000 ಕ್ವಾಟರ್ಸ್‌ಗೆ ಸರ್ಕಾರ ನಿರ್ಧರಿಸಿದೆ. ಎಲ್ಲರಿಗೂ ವಸತಿ ಸೌಲಭ್ಯ ದೊರೆಯಬೇಕು ಎಂದು ಹೇಳಿದರು. ನೌಕರರ ವೇತನದಲ್ಲಿ ಹಿಡಿದಿರುವ ಜೀವ ವಿಮಾ ಪ್ರೀಮಿಯಂ ಹಣ, ಸಹಕಾರಿ ಸಂಘಗಳಿಗೆ ಕೊಡಬೇಕಾಗಿರುವ ಹಣ, ಡಿಆರ್‌ಬಿಎಫ್‌ ವಂತಿಕೆಗಳನ್ನು ನಿಗಮಗಳು ಸಂಬಂಧಪಟ್ಟ ಸಂಸ್ಥೆಗಳಿಗೆ ಸಕಾಲಕ್ಕೆ ಕಟ್ಟಿಲ್ಲದ ಕಾರಣ ಪಾಲಿಸಿ ಲ್ಯಾಪ್ಸ್‌ ಆಗಿದೆ. ಬಡ್ಡಿ ಸಮೇತ ಪ್ರೀಮಿಯಂ ಹಣ ಕಟ್ಟಲು ನೋಟಿಸ್‌ ಬಂದಿದೆ. 

ವೇತನದಲ್ಲಿ ಕಡಿತವಾಗಿರುವ ಹಣ ಮತ್ತೂಮ್ಮೆ ತುಂಬುವುದು ಹೇಗೆ? ಎಂದು ಪ್ರಶ್ನಿಸಿದರು. ಬಿಎಂಟಿಸಿ ಕಳೆದ 2016ರ ಆಗಸ್ಟ್‌ನಿಂದ ಗ್ರಾಚ್ಯುವಿಟಿ ಹಣ ಬಿಡುಗಡೆ ಮಾಡಿಲ್ಲ. ತುಟ್ಟಿಭತ್ಯೆ ಹಣ ಸಂದಾಯ ಮಾಡಿಲ್ಲ. ಲೀವ್‌ ಎನ್‌ ಕ್ಯಾಷ್‌ಮೆಂಟ್‌ ಹಣವನ್ನು ಕೊಟ್ಟಿಲ್ಲ. ವಾಯವ್ಯ ನಿಗಮವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕೈಗಾರಿಕಾ ಒಪ್ಪಂದಗಳ ಉಲ್ಲಂಘನೆ, ಕಾನೂನುಬಾಹಿರ ಫಾರಂ-4, ಇದರಿಂದ
ಉದ್ಭವಿಸಿರುವ ಬಾರ್‌ ಡ್ನೂಟಿಗಳು, ಮಿತಿಮೀರಿದ ಶಿಕ್ಷೆಗಳು, ನೌಕರರ ಯಾವುದೇ ಕುಂದು- ಕೊರತೆಗಳನ್ನು ಸಂಘದೊಂದಿಗೆ ಬಗೆಹರಿಸದಿರುವ ಆಡಳಿತ ವರ್ಗದ ಮನಸ್ಥಿತಿ ಮುಂತಾದವುಗಳು ಕೈಗಾರಿಕಾ ಬಾಂಧವ್ಯವನ್ನೇ ನಾಶ ಮಾಡಿವೆ. 

ಹಿಂದಿನ ಕೈಗಾರಿಕಾ ಒಪ್ಪಂದಗಳಿಂದ ಕಾರ್ಮಿಕರು ಪಡೆದಿರುವ ಹಲವಾರು ಸೌಲಭ್ಯಗಳನ್ನು ಮತ್ತು ಗಳಿಸಿರುವ ಹಕ್ಕುಗಳನ್ನು ರದ್ದುಪಡಿಸಬೇಕೆಂದು ಅಧಿಕಾರಶಾಹಿ ತುದಿಗಾಲಿನಲ್ಲಿ ನಿಂತಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಳೆದ ಜುಲೈ 2016ರ ಮುಷ್ಕರದ ಸಂದರ್ಭದಲ್ಲಿ ಹಾಸನ, ಚಿಕ್ಕಮಗಳೂರು, ಪುತ್ತೂರು, ಮಂಗಳೂರುಗಳಲ್ಲಿ ಕೆಲವು ಕಾರ್ಯಕರ್ತರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಹಿಂದಿನ ಸಾರಿಗೆ ಸಚಿವರು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರೂ ಸಹ ಹಾಲಿ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

1991ರ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಬೇಕು. ನಾಲ್ಕು ಸಾರಿಗೆ ನಿಗಮಗಳನ್ನು ಒಂದೇ ನಿಗಮವನ್ನಾಗಿ ಮಾಡಬೇಕು. ವಾಯವ್ಯ ಸಾರಿಗೆ ನಿಗಮದಲ್ಲಿ ಕಳೆದ 1998ರ ಏಪ್ರಿಲ್‌ 1ರ ನಂತರ ಭವಿಷ್ಯನಿಧಿ ಆಯುಕ್ತರಿಗೆ ಕಳಿಸಿರುವ ಹಣವನ್ನು ಕೆಎಸ್‌ಆರ್‌ಟಿಸಿ ಭವಿಷ್ಯ ನಿ ಧಿ ಟ್ರಸ್ಟ್‌ಗೆ ವರ್ಗಾವಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೂ ಬೋನಸ್‌ ಕೊಡಬೇಕು ಎಂದು ಆಗ್ರಹಿಸಿ, ಕಳೆದ ಡಿಸೆಂಬರ್‌ 27,28 ಮತ್ತು 29ರಂದು ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಹೋರಾಟ ರೂಪಿಸಲಾಗಿದೆ ಎಂದು ಹೇಳಿದರು. ವಿಜಯಭಾಸ್ಕರ್‌ ಡಿ.ಎ., ಸಿದ್ದಪ್ಪ ಪಾಲ್ಕಿ, ಎಸ್‌.ಎಸ್‌. ಪತಕಿ, ರತ್ನಪ್ಪ ಜೈನ್‌, ಪ್ರಭುದೇವ ಯಳಸಂಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next