ಹುಣಸೂರು: ಪಶ್ಚಿಮಬಂಗಾಳದ ಕೋಲ್ಕತಾದ ಹೌರಾದ ರೈಲ್ವೆ ನಿಲ್ದಾಣದಲ್ಲಿ ಸಿಲುಕಿರುವ ಹುಣಸೂರಿನ ವಾಲಿಬಾಲ್ ಕ್ರೀಡಾಪಟುಗಳು ಸುಗಮವಾಗಿ ವಾಪಸ್ಸಾಗಲು ರಾಜ್ಯ ಸರಕಾರ ಎಲ್ಲ ವ್ಯವಸ್ಥೆ ಕಲ್ಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಕರೆಮಾಡಿ ನಮಗೆ ಧೈರ್ಯ ತುಂಬಿದ್ದಾರೆ ಎಂದು ತಂಡದ ಆಟಗಾರ ಮಹದೇವಸ್ವಾಮಿ ತಿಳಿಸಿದ್ದಾರೆ.
ಹುಣಸೂರಿನ ಆಕಾಶ್ ಮತ್ತು ರತ್ನಪುರಿ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹುಣಸೂರಿನ ಕ್ರೀಡಾಪಟ್ಟುಗಳಾದ ಗೌತಮ್, ಪುಟ್ಟಸ್ವಾಮಿ(ರತ್ನಪುರಿ), ಅರುಣ್ಕುಮಾರ್.ಎಸ್, ರಾಮು.ಬಿ, ಮನೋರಂಜನ್.ಜೆ, ಮಹದೇವಮೂರ್ತಿ(ಧರ್ಮಪುರ), ಮಂಜುನಾಥ್(ಪಿರಿಯಾಪಟ್ಟಣ), ದುಷ್ಯಂತ್(ಕೆ.ಆರ್.ನಗರ)ರವರು ತಂಡದಲ್ಲಿದ್ದು, ಶುಕ್ರವಾರ ರಾತ್ರಿ ಹೌರಾದಿಂದ ರೈಲು ಹೊರಡಬೇಕಿತ್ತು, ಆದರೆ ರೈಲು ಅಫಘಾತದಿಂದಾಗಿ ಅಲ್ಲಿಂದ ವಾಪಸ್ ಬರುವುದು ತಡವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂಡದ ಮನವಿಯನ್ನು ನೋಡಿದ ಮಾಜಿ ಶಾಸಕ ಮಂಜುನಾಥ್ ಹಾಲಿ ಶಾಸಕ ಜಿ.ಡಿ.ಹರೀರ್ಶ ಗೌಡರು ತಂಡವನ್ನು ಸಂಪರ್ಕಿಸಿ ಸ್ಪಂದಿಸಿದ್ದು, ಶಾಸಕ ಜಿ.ಡಿ.ಹರೀಶ್ಗೌಡ ಹಾಗೂ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ರವರು ಸಹ ಕ್ರೀಡಾಪಟುಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಮಂಜುನಾಥರು ಮುಖ್ಯಮಂತ್ರಿ ಹಾಗೂ ಸಚಿವ ಸಂತೋಷ್ಲಾಡ್ ಅವರಿಂದ ಕರೆ ಮಾಡಿಸಿ ಮಾತನಾಡಿದ್ದಲ್ಲದೆ ಎಲ್ಲ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ಇತ್ತರೆ, ಶಾಸಕ ಜಿ.ಡಿ.ಹರೀಶ್ಗೌಡರು ಸಹ ತಂಡದ ಆಟಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲರ ಸಹಕಾರದಿಂದ ಭಾನುವಾರ ಬೆಳಗಿನ ಜಾವ 4.15 ರ ವಿಮಾನದಲ್ಲಿ ಕರ್ನಾಟಕದ ಎಲ್ಲ 32 ಮಂದಿ ಕ್ರೀಡಾಪಟುಗಳು ಬೆಂಗಳೂರಿಗೆ ವಾಪಸ್ ಆಗಲಿದ್ದೇವೆಂದು ಉದಯವಾಣಿಗೆ ತಿಳಿಸಿದ್ದು, ಎಲ್ಲರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಮತ್ತು ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾವತಿಯಿಂದ ಪಶ್ಚಿಮಬಂಗಾಳದ ಹೌರನಗರದಲ್ಲಿ 2023ರ ಮೇ.27 ರಿಂದ ಜೂ.1 ರವರೆಗೆ ಪಶ್ಚಿಮಬಂಗಾಳದ ಹೂಗ್ಲಿಯ ಚಂದರ್ ನಾಗೂರ್ನಲ್ಲಿ ಬಾಲಕ ಮತ್ತು ಬಾಲಕಿಯರ ೪೫ನೇ ಸಬ್ ಜೂನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಕರ್ನಾಟಕದಿಂದ 38 ಮಂದಿ ಆಟಗಾರರು ತೆರಳಿದ್ದರು.