Advertisement

ಲಾಕ್‌ಡೌನ್‌ ನಡುವೆಯೂ ವಾಹನಗಳ ಓಡಾಟ ಹೆಚ್ಚಳ !

10:29 PM Apr 29, 2021 | Team Udayavani |

ಮಹಾನಗರ: ನಗರದಲ್ಲಿ ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ಜಾರಿಗೊಂಡ ಎರಡನೇ ದಿನವಾದ ಗುರುವಾರ ಬೆಳಗ್ಗೆ 10 ಗಂಟೆಯವರೆಗೆ ವಾಹನ ದಟ್ಟಣೆ ಅತಿಯಾಗಿತ್ತು. ಮಾತ್ರವಲ್ಲದೆ ಅನಂತರವೂ ಹೆಚ್ಚಿನ ಸಂಖ್ಯೆಯ ವಾಹನಗಳ ಓಡಾಟ ಕಂಡುಬಂದಿದೆ.

Advertisement

ಬುಧವಾರ 10 ಗಂಟೆಯ ಅನಂತರ ನಗರ ಬಹುತೇಕ ಸ್ತಬ್ಧವಾಗಿತ್ತು. ತುರ್ತುಸೇವೆಯ ವಾಹನಗಳ ಓಡಾಟ ಮಾತ್ರ ಕಂಡುಬಂದಿತ್ತು. ಆದರೆ ಬುಧ ವಾರಕ್ಕೆ ಹೋಲಿಸಿದರೆ ಗುರುವಾರ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿತ್ತು. ಈ ಹಿಂದೆ ಲಾಕ್‌ಡೌನ್‌ ಘೋಷಣೆ ಮಾಡಿದ್ದಾಗ ಇದ್ದಂತೆ ವಾಹನಗಳ ಓಡಾಟದ ಮೇಲೆ ಅತಿಯಾದ ನಿರ್ಬಂಧ ಗುರುವಾರ ಕಂಡುಬರಲಿಲ್ಲ. ಕೆಲವೆಡೆ ವಾಹನಗಳನ್ನು ತಪಾಸಣೆ ನಡೆಸದೆ ಕಳುಹಿಸಿಕೊಡುತ್ತಿರುವುದು ಕಂಡುಬಂದಿದೆ. ತುರ್ತುಸೇವೆಗಳು, ಕೆಲವು ಕೈಗಾರಿಕೆಗಳ ಉದ್ಯೋಗಿಗಳು, ಬ್ಯಾಂಕ್‌ ಸಹಿತ ಸರಕಾರಿ ಸಂಸ್ಥೆಗಳ ಉದ್ಯೋಗಿಗಳು ಮಾತ್ರವಲ್ಲದೆ ಕೆಲವು ಸಾರ್ವಜನಿಕರು ಕೂಡ ಓಡಾಟ ನಡೆಸಿರುವುದು ಕಂಡು ಬಂದಿದೆ.

ಕೂಳೂರು, ನಂತೂರು ಚೆಕ್‌ಪೋಸ್ಟ್‌ ಗಳನ್ನು ಹೊರತುಪಡಿಸಿದರೆ ಉಳಿದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಯಾಗಿರಲಿಲ್ಲ. ಹಾಗಾಗಿ ನಗರದೊಳಗಿನ ರಸ್ತೆಗಳಲ್ಲಿ ಕೆಲವರು ಅನಗತ್ಯ ಸಂಚಾರ ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮ  :

ತುರ್ತುಸೇವೆ, ಕೆಲವು ಉದ್ಯಮಗಳ ಉದ್ಯೋಗಿಗಳು ಹೊರತುಪಡಿಸಿದರೆ ಇತರ ಅನಗತ್ಯ ಓಡಾಟದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಯಾವುದೇ ರೀತಿಯ ಸಡಿಲಿಕೆ ಮಾಡಿಲ್ಲ. ಅನಗತ್ಯ ಸಂಚಾರ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Advertisement

28 ವಾಹನಗಳು ವಶಕ್ಕೆ :

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಗುರುವಾರ 4 ಪ್ರಕರಣ, ಮಾಸ್ಕ್ ಧರಿಸದೇ ಇದ್ದ 154 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 28 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಅಂಗಡಿ, ಬಾರ್‌, ರೆಸ್ಟೋರೆಂಟ್‌ ಸಹಿತ ವಾಣಿಜ್ಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next