Advertisement

Bangalore-Mysore Express: ಸರಣಿ ರಜೆ: ಎಕ್ಸ್‌ಪ್ರೆಸ್‌ ವೇನಲ್ಲಿ ಟ್ರಾಫಿಕ್‌ ಜಾಮ್‌

03:32 PM Dec 24, 2023 | Team Udayavani |

ರಾಮನಗರ: ಸರಣಿ ರಜೆ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳ ರಸ್ತೆಗಿಳಿದ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ ಪ್ರಸ್‌ ಹೈವೆ ಕಣ್ಮಿಣಕಿ ಗ್ರಾಮದ ಬಳಿ ಇರುವ ಟೋಲ್‌ನಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ ನಿಂದ ರಜೆಮೂಡ್‌ನ‌ಲ್ಲಿ ಪ್ರವಾಸಕ್ಕೆ ಹೊರಟಿದ್ದ ಬೆಂಗಳೂರು ನಿವಾಸಿಗಳು ಟೋಲ್‌ಬಳಿ ತಾಸುಗಟ್ಟಲೆ ಕಾಯ್ದು ನಿಲ್ಲುವಂತಾಯಿತು.

Advertisement

ಇಂದಿನಿಂದ ಮೂರು ದಿನಗಳ ಕಾಲ ಸರಣಿ ರಜೆ ಇರುವ ಕಾರಣ ರಾಜಧಾನಿಯ ನಿವಾಸಿಗಳು ಪ್ರವಾಸ ಹಾಗೂ ತಮ್ಮ ಸ್ವಂತ ಊರಿನತ್ತ ಪ್ರಯಾಣ ಬೆಳೆಸುವುದು ಸಾಮಾನ್ಯ. ಶನಿವಾರ ವೈಕುಂಠ ಏಕಾದಶಿ, ಭಾನುವಾರ ಹನುಮಜಯಂತಿ ಹಾಗೂ ಸೋಮವಾರ ಕ್ರಿಸ್‌ಮಸ್‌ ಹಬ್ಬ ಇರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರಿಂದ ಟೋಲ್‌ ಪ್ಲಾಜಾ ಬಳಿ ಸಂಚಾರ ದಟ್ಟಣೆ ಕಂಡು ಬಂದಿತು.

3ಕಿ.ಮೀ.ಗೂ ಹೆಚ್ಚು ಜಾಮ್‌: ಬೆಂಗಳೂರುರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವ ವಾಹನಗಳು ಕುಂಬಳಗೂಡಿನಿಂದ ತುಸು ಮುಂದೆ ಇರುವ ಕಣ್ಮಿಣಕಿ ಟೋಲ್‌ಪ್ಲಾಜಾದ ಬಳಿ ಪರದಾಡು ವಂತಾಯಿತು. ಸುಮಾರು 3 ಕಿ.ಮೀ.ಗೂ ಹೆಚ್ಚು ಉದ್ದದ ವಾಹನಗಳ ಸಾಲು ಟೋಲ್‌ಪ್ಲಾಜಾ ಬಳಿ ಕಂಡು ಬಂದಿತು. ಬೆಂಗಳೂರಿನಿಂದ ಕುಂಬಳ ಗೂಡು ಎಲಿವೇಟೆಡ್‌ ರಸ್ತೆ ಮೂಲಕ ಬಂದ ಪ್ರಯಾಣಿಕರು ಅತ್ತ ಸರ್ವಿಸ್‌ ರಸ್ತೆಗೆ ಸಂಪರ್ಕ ಪಡೆಯ ಲಾಗದೆ ಟೋಲ್‌ಭೂತ್‌ ಮುಂದೆ ತಾಸುಗಟ್ಟಲೆ ಕಾಯುವಂತಾಪರಿಸ್ಥಿತಿ ನಿರ್ಮಾಣಗೊಂಡಿತ್ತು. ಟೋಲ್‌ ದಾಟಲು ಪ್ರಯಾಣಿಕರು ಹೆಣಗಾಡುತ್ತಿದ್ದು ಕಂಡು ಬಂದಿತು. ಇನ್ನು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ವಾದರೂ ಈ ಪರದಾಟ ತಪ್ಪಿದ್ದಲ್ಲ ಎಂದು ಪ್ರಯಾಣಿಕರು ಟೋಲ್‌ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದರು. ಸರ್ವಿಸ್‌ ರಸ್ತೆಯಲ್ಲೂ ವಾಹನ ಜಂಗುಳಿ ಇತ್ತಾದರೂ ಎಕ್ಸ್‌ಪ್ರೆಸ್‌ ವೇ ಗಿಂತ ಸರ್ವಿಸ್‌ ರಸ್ತೆಯೇ ಪರವಾಗಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತು.

ಹೈವೇನಲ್ಲಿ ಹೈ ಅಲರ್ಟ್‌: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಅಪಘಾತ ಮತ್ತು ಅಪರಾಧ ಪ್ರಕರಣ ಗಳು ಸಂಭವಿಸದಂತೆ ಎಚ್ಚರವಹಿಸಿರುವ ಜಿಲ್ಲಾ ಪೊಲೀಸ್‌, ಎಕ್ಸ್‌ ಪ್ರಸ್‌ ವೇನಲ್ಲಿ ತೀವ್ರ ನಿಗಾವಹಿಸಿದೆ. ಇದಕ್ಕಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಿದ್ದು, ಪ್ರಯಾಣಿಕರು ಸಂಚಾರ ನಿಯಮ ಉಲ್ಲಂಘಿಸದಂತೆ ಹಾಗೂ ಯಾವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.

ಸೋಮವಾರವೂ ಜಾಮ್‌ : ಆಗುವ ಸಾಧ್ಯತೆ ಸೋಮವಾರ ಸರಣಿ ರಜೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರ ಸಂಖ್ಯೆ ಹೆಚ್ಚಿರುವ ಕಾರಣ, ಅಂದು ಸಂಜೆ ಸಹ ಬಿಡದಿಯ ಶೇಷಗಿರಿ ಹಳ್ಳಿ ಟೋಲ್‌ಪ್ಲಾಜಾ ಬಳಿ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳು ಇಂದೇ ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Advertisement

ರಸ್ತೆಗಿಳಿದ 70 ಸಾವಿರಕ್ಕೂ ಹೆಚ್ಚು ವಾಹನ: ಸರಣಿ ರಜೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಟೋಲ್‌ ಪ್ಲಾಜಾಬಳಿ ಸಾವಿರಾರು ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿತ್ತು. ಟೋಲ್‌ ಪ್ಲಾಜಾ ಸಿಬ್ಬಂದಿಯ ಮಾಹಿತಿಯ ಪ್ರಕಾರ ಶುಕ್ರವಾರ ಸಂಜೆಯಿಂದಲೇ ವಾಹನಗಳ ಸಂಚಾರ ಹೆಚ್ಚಿದ್ದು, ಶನಿವಾರ ಸಂಜೆಯ ಸುಮಾರಿಗೆ 53 ಸಾವಿರದಷ್ಟು ವಾಹನಗಳ ಟೋಲ್‌ ಪ್ಲಾಜಾ ಹಾಯ್ದು ಹೋಗಿವೆ. ಇನ್ನು ಸರ್ವಿಸ್‌ ರಸ್ತೆಯಲ್ಲಿ 15 ರಿಂದ 20 ಸಾವಿರ ದಷ್ಟು ವಾಹನ ಗಳು ಹೋಗಿದ್ದು, ಎಕ್ಸ್‌ಪ್ರೆಸ್‌ ವೇನಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆ ಯವರೆಗೆ 70 ಸಾವಿರಕ್ಕೂ ಹೆಚ್ಚು ವಾಹನ ಸಂಚರಿಸಿವೆ.

ಬೆಂಗಳೂರು -ಮೈಸೂರು ಎಕ್ಸ್‌ ಪ್ರಸ್‌ ವೇನಲ್ಲಿ ಸರಾಸರಿ 35 ಸಾವಿರ ವಾಹನ ಪ್ರತಿದಿನ ಸಂಚರಿಸುತ್ತವೆ ಎಂದು ಅಂದಾಜು ಮಾಡಿದ್ದು, ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 50 ಸಾವಿರದ ಆಸುಪಾಸಿದೆ. ಸರಣಿ ರಜೆ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತ ವಾಹನಗಳ ಸಂಚಾರ ಪ್ರಮಾಣ ದುಪಟ್ಟಿದೆ.

ಫಾಸ್ಟ್‌ ಟ್ಯಾಗ್‌ ಕಿರಿಕಿರಿಯೇ ಕಾರಣ:  ಟೋಲ್‌ಪ್ಲಾಜಾ ಬಳಿ ಸಂಚಾರ ಸಮಸ್ಯೆ ಎದುರಾಗಿದ್ದಕ್ಕೆ ಸಂಚಾರ ಫಾಸ್ಟ್‌ಟ್ಯಾಗ್‌ ಗೊಂದಲ ಪ್ರಮುಖ ಕಾರಣವಾಗಿತ್ತು. ಕೆಲ ವಾಹನಗಳು ಫಾಸ್ಟ್‌ ಟ್ಯಾಗ್‌ಇಲ್ಲದೆ ಟೋಲ್‌ ದಾಟಲು ಮುಂದಾದ ಪರಿಣಾಮ ಇವ ರಿಂದ ಟೋಲ್‌ ಶುಲ್ಕ ಸಂಗ್ರಹಿಸಿ ರಶೀದಿ ನೀಡುವುದಕ್ಕೆ ಸಾಕಷ್ಟು ಸಮಯವಾಗುತ್ತಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ವಿಳಂಬವಾಯಿತು. ಇದರೊಂದಿಗೆ ಕೆಲ ವಾಹನಗಳ ಫಾಸ್ಟ್‌ಟ್ಯಾಗ್‌ ಖಾತೆಯಲ್ಲಿ ಹಣ ಖಾಲಿಯಾಗಿದ್ದು, ಒಂದರ ಹಿಂದೆ ಒಂದು ವಾಹನ ಚಲಿಸುತ್ತಿದ್ದ ಕಾರಣ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಮಾಡುವಲ್ಲಿ ತಾಂತ್ರಿಕ ಅಡಚಣೆಗಳಿಂದಾಗಿ ಟೋಲ್‌ ಪ್ಲಾಜಾ ಪಾಸ್‌ ಮಾಡುವಷ್ಟರಲ್ಲಿ ಚಾಲಕರು ಹೈರಾಣಾಗಿ ಹೋದರು. ಟೋಲ್‌ ಸಿಬ್ಬಂದಿ ಸಹ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸಾಕು ಬೇಕಾಗಿ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next