Advertisement

“ನಾಯರ್‌ ಕುದ್ರು’’ವಿಗೆ ಪ್ರವಾಸಿ ಲುಕ್‌!

10:07 AM Mar 28, 2022 | Team Udayavani |

ತಣ್ಣೀರುಬಾವಿ: ಸ್ಮಾರ್ಟ್‌ಸಿಟಿ ಮುಖೇನ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಜಾರಿಯಾಗುತ್ತಿರುವ ಜತೆಗೆ ತಣ್ಣೀರುಬಾವಿ ಪರಿಸರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಕ್ರಮಗಳು ಅನುಷ್ಠಾನ ರೂಪಕ್ಕೆ ಬರುತ್ತಿವೆ; ಇದರಂತೆ, ತಣ್ಣೀರುಬಾವಿ ಸಮೀಪದ ನಾಯರ್‌ ಕುದ್ರು ಎಂಬ ಪ್ರದೇಶ ಸಾಂಸ್ಕೃತಿಕ ಹಾಗೂ ಜಲ ಕ್ರೀಡೆಯ ನೆಲೆಯಿಂದ ಮಹತ್ವದ ಯೋಜನೆ ಸಿದ್ಧಗೊಳ್ಳುತ್ತಿದೆ. ಸುಲ್ತಾನ್‌ಬತ್ತೇರಿ- ತಣ್ಣೀರು ಬಾವಿ ಮಧ್ಯೆ ತೂಗುಸೇತುವೆ ಯೋಜನೆ ‘ಸೀ ಲಿಂಕ್‌ ‘ ಹೆಸರಿನಲ್ಲಿ ಸಾಕಾರವಾಗಲಿದೆ.

Advertisement

ಹೀಗಾಗಿ ತಣ್ಣೀರು ಬಾವಿಯಲ್ಲಿ ಸೀ ಲಿಂಕ್‌ ಕೊನೆಗೊಳ್ಳುವ ಪ್ರದೇಶದ ಸಮೀಪ ದಲ್ಲಿರುವ ನಾಯರ್‌ಕುದ್ರು ಪ್ರದೇಶವನ್ನು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಇದೀಗ ಯೋಜನೆ ಸಿದ್ಧಪಡಿಸಲಾಗಿದೆ. ಸಾಂಪ್ರದಾಯಿಕ ಕ್ರೀಡಾಂಗಣ ಅಭಿವೃದ್ಧಿ, ಸಾಂಸ್ಕೃತಿಕ ವಲಯ ಅಭಿವೃದ್ಧಿ, ಮೀನುಗಾರಿಕೆ ತಾಣ ಅಭಿವೃದ್ಧಿ ಹಾಗೂ ಮಳಿಗೆಗಳ ಅಭಿವೃದ್ಧಿ, ಜಲಕ್ರೀಡಾ ಭಿವೃದ್ಧಿ ಕಾಮಗಾರಿಗಳು (ಯಾಂತ್ರಿಕ ವಲ್ಲದ), ಬಯಲು ರಂಗಮಂದಿರ ತಣ್ಣೀರುಬಾವಿ ವ್ಯಾಪ್ತಿಯಲ್ಲಿ ರೂಪುಗೊಳ್ಳಲಿದೆ.

ನೀರಿನ ಸನಿಹದಲ್ಲಿ ಬಯಲು ರಂಗಮಂದಿರ!

ಕುದ್ರುವಿನಲ್ಲಿ ಬಯಲು ರಂಗಮಂದಿರ ನಿರ್ಮಾಣವಾಗಲಿದೆ. ಸಾಂಸ್ಕೃತಿಕ ಚಟುವಟಿಕೆಗೆ ಪೂರವಾಗುವ ನೆಲೆಯಲ್ಲಿ ನೀರಿನ ದಡದಲ್ಲಿ ಆಕರ್ಷಕ ಬಯಲು ರಂಗಮಂದಿರದ ಕಲ್ಪನೆ ಇದಾಗಿದೆ. ಈ ಮೂಲಕ ಕರಾವಳಿಯ ಸಾಂಸ್ಕೃತಿಕ ಲೋಕದಲ್ಲಿ ವಿಭಿನ್ನ ಸಾಂಸ್ಕೃತಿಕ ಪ್ರದರ್ಶನದ ಆಹ್ಲಾದಕತೆಯನ್ನು ಉಣಬಡಿಸುವುದು ಯೋಜನೆಯ ಉದ್ದೇಶ. ಇದಕ್ಕೆ ಪೂರಕವಾಗಿ ಮ್ಯೂಸಿಕ್‌ ಅಕಾಡೆಮಿ ರೂಪುಗೊಳ್ಳಲಿದೆ. ಸಂಗೀತ ಆಸಕ್ತರನ್ನು ಹಾಗೂ ಸಂಗೀತ ಅಭಿರುಚಿ ಉಳ್ಳವರನ್ನು ಆಕರ್ಷಿಸುವ ನೆಲೆಯಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ.

ವಾಟರ್‌ ನ್ಪೋರ್ಟ್ಸ್!

Advertisement

ಸಾಮಾನ್ಯವಾಗಿ ಮಂಗಳೂರು ವ್ಯಾಪ್ತಿಯಲ್ಲಿ ಬೀಚ್‌ ಸಹಿತ ಪ್ರವಾಸೋದ್ಯಮ ಚಟುವಟಿಕೆಗೆ ಸೂಕ್ತ ಅವಕಾಶ ಇದ್ದರೂ ಅದರ ಬಳಕೆ ಸೂಕ್ತ ಮಟ್ಟದಲ್ಲಿ ಆಗುತ್ತಿಲ್ಲ. ಜಲ ಕ್ರೀಡೆಗೆ ಹೆಚ್ಚಿನ ಅವಕಾಶ ಇದ್ದರೂ ಅನುಷ್ಠಾನ ಮಾತ್ರ ಆಗಿಲ್ಲ. ಈ ನಿಟ್ಟಿನಲ್ಲಿ ವಾಟರ್‌ ನ್ಪೋರ್ಟ್ಸ್ ಚಟುವಟಿಕೆಗೆ ಇಲ್ಲಿ ಅವಕಾಶ ಸಿಗಲಿದೆ. ಪ್ರವಾಸಿಗರನ್ನು ಆಕರ್ಷಿಸಲು ಬಗೆ ಬಗೆಯ ಕ್ರೀಡೆಗಳಿಗೆ ಬೇಕಾದ ಅವಕಾಶ ಇಲ್ಲಿ ಕಲ್ಪಿಸುವ ಉದ್ದೇಶ ಇರಿಸಲಾಗಿದೆ.

ಫುಡ್‌ ಕಿಯೋಸ್ಕ್ ಆಕರ್ಷಣೆ

ಪಾದಚಾರಿಗಳಿಗೆ ಮಾತ್ರ ಅನುಕೂಲವಾಗುವ ‘ಸೀ ಲಿಂಕ್‌’ ಸುಲ್ತಾನ್‌ಬತ್ತೇರಿ-ತಣ್ಣೀರುಬಾವಿ ಮಧ್ಯೆ 260 ಮೀ. ಉದ್ದ ಹಾಗೂ 15 ಮೀ ಎತ್ತರದ ತೂಗು ಸೇತುವೆ ನಿರ್ಮಾಣವಾಗಲಿದೆ. ತೂಗು ಸೇತುವೆಯ ಎರಡೂ ಕಡೆಗೆ ಸಂಪರ್ಕಿಸುವ ಪಕ್ಕದಲ್ಲಿ ವಾರದ ಸಂತೆ ಪರಿಕಲ್ಪನೆ ಇರಲಿದೆ. ಜತೆಗೆ ಬಗೆ ಬಗೆಯ ಫುಡ್‌ ಕಿಯೋಸ್ಕ್ಗಳಿರಲಿವೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ರೆಸ್ಟೋರೆಂಟ್‌ ಸಹಿತ ವಿವಿಧ ಫುಡ್‌ ಕಿಯೋಸ್ಕ್ಗಳು ಇಲ್ಲಿರಲಿದೆ. ಈ ಮೂಲಕ ಇಡೀ ಪರಿಸರವನ್ನು ಪ್ರವಾಸಿ ನೆಲೆಯಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಸಾಂಸ್ಕೃತಿಕ, ಕ್ರೀಡಾ ಪೂರಕ ಯೋಜನೆ

ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ನದಿ ತೀರ ಹಾಗೂ ಸಮುದ್ರ ತೀರ ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ತಣ್ಣೀರುಬಾವಿ ಪ್ರದೇಶದಲ್ಲಿ ಬಯಲು ರಂಗಮಂದಿರ ಸಹಿತ ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಪೂರಕವಾಗುವ ವಿವಿಧ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. – ಡಿ. ವೇದವ್ಯಾಸ ಕಾಮತ್‌, ಶಾಸಕರು ಮಂಗಳೂರು ದಕ್ಷಿಣ

 

Advertisement

Udayavani is now on Telegram. Click here to join our channel and stay updated with the latest news.

Next