Advertisement

ಪೌರತ್ವ ಕಿಚ್ಚಿಗೆ ನಲುಗಿದ್ದ ಪ್ರವಾಸೋದ್ಯಮ ಚೇತರಿಕೆ

09:10 PM Dec 28, 2019 | Team Udayavani |

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಕಾಯ್ದೆಯ ಪರವಾಗಿ ಮೆರವಣಿಗೆಗಳು ನಡೆದು, ಸಿಎಎ ಪರ-ವಿರುದ್ಧದ ಪ್ರತಿಭಟನೆಗಳ ಕಿಚ್ಚಿಗೆ ನಲುಗಿ ಹೋಗಿದ್ದ ಪ್ರವಾಸೋದ್ಯಮ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಡಿ.2 ಮತ್ತು 3ನೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಕಿಚ್ಚು ಜೋರಾಗಿದ್ದರಿಂದಾಗಿ ಕ್ರಿಸ್‌ಮಸ್‌ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಪ್ರವಾಸಿಗರ ನೆಚ್ಚಿನ ತಾಣ, ಅರಮನೆಗಳ ನಗರಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.

Advertisement

ಶನಿವಾರದಿಂದ ಪ್ರವಾಸೋದ್ಯಮ ಚೇತರಿಕೆ: ವರ್ಷಾಂತ್ಯದಲ್ಲಿ ಪ್ರತಿಭಟನೆಯ ಕಾವು ಕಡಿಮೆಯಾಗಿದ್ದರಿಂದ ಶನಿವಾರದಿಂದ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ದಸರೆಯ ಬಳಿಕ ವರ್ಷಾಂತ್ಯದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಮಾಗಿ ಉತ್ಸವ, ಮೃಗಾಲಯದಿಂದ ಏರ್ಪಡಿಸಿರುವ ಪಕ್ಷಿ ವೀಕ್ಷಣೆ ಕಾರ್ಯಕ್ರಮಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.

ಪ್ರವಾಸಿ ತಾಣಗಳಲ್ಲೆಲ್ಲಾ ಜನರ ದಂಡು: ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ, ಕೆಆರ್‌ಎಸ್‌, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ತಲಕಾಡು, ಸೋಮನಾಥಪುರ ದೇವಸ್ಥಾನ, ಬಂಡೀಪುರ, ನಾಗರಹೊಳೆಗಳಲ್ಲಿ ಪ್ರವಾಸಿಗರು ಕಾಣಸಿಗುತ್ತಾರೆ.

ಕೇರಳದ ಮದ್ಯಪಾನ ಪ್ರಿಯರಿಗೆ ಮೈಸೂರೇ ಗತಿ: ಕೇರಳದ ಪ್ರವಾಸಿಗರಿಗೆ ಮೈಸೂರು ನೆಚ್ಚಿನ ತಾಣ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಕಾವು ಎರಡೂ ರಾಜ್ಯಗಳಲ್ಲಿ ಜೋರಾಗಿ ನಿಷೇಧಾಜ್ಞೆ ಜಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮೈಸೂರಿಗೆ ಬರುವ ಕೇರಳ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಪ್ರತಿಭಟನೆಯ ಕಾವು ಕಡಿಮೆಯಾಗಿದ್ದು,

ಅಲ್ಲಲ್ಲಿ ಪ್ರತಿಭಟನೆಗಳು ನಡೆದರೂ ತೀವ್ರಸ್ವರೂಪ ಪಡೆಯದೆ ಶಾಂತಿಯುತವಾಗಿ ನಡೆಯುತ್ತಿರುವುದರಿಂದ ಪ್ರವಾಸಿಗರು ವರ್ಷಾಂತ್ಯ ಮತ್ತು ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ಮೈಸೂರಿನತ್ತ ಮುಖ ಮಾಡತೊಡಗಿದ್ದಾರೆ. ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ಇರುವುದರಿಂದ ವರ್ಷಾಂತ್ಯ ಆಚರಣೆ ಮತ್ತು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮದ್ಯಪಾನ ಪ್ರಿಯರು ನೆರೆಯ ಕರ್ನಾಟಕವನ್ನು ಆಶ್ರಯಿಸಿ ಬರುತ್ತಿದ್ದಾರೆ.

Advertisement

ಶೇ.90ರಷ್ಟು ಈಗಾಗಲೇ ಬುಕ್‌: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಗಲಾಟೆ, ಹಿಂಸಾಚಾರಗಳು ನಡೆಯುತ್ತಿದ್ದರಿಂದ ಡಿಸೆಂಬರ್‌ ತಿಂಗಳಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದ್ದು, ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಶೇ.30ರಷ್ಟು ಕುಸಿದಿದೆ ಎಂದು ಹೋಟೆಲ್‌ ಉದ್ಯಮಿಗಳು ಹೇಳುತ್ತಿದ್ದರು.

ಆದರೆ, ಶುಕ್ರವಾರದಿಂದ ಪರಿಸ್ಥಿತಿ ಸುಧಾರಿಸಿದ್ದು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ಮೈಸೂರು ನಗರದಲ್ಲಿರುವ ಹೋಟೆಲ್‌, ವಸತಿ ಗೃಹಗಳಲ್ಲಿನ ಸುಮಾರು 9500 ಕೊಠಡಿಗಳ ಪೈಕಿ ಶೇ.90ರಷ್ಟು ಈಗಾಗಲೇ ಬುಕ್‌ ಆಗಿದ್ದು, ಈ ವರ್ಷ ಶೇ.100ರಷ್ಟು ಬುಕ್‌ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ.

ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫ‌ಲ: ದೇಶ-ವಿದೇಶಗಳಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ಯಾತ್ರಾ ಸ್ಥಳಗಳು, ಪ್ರವಾಸಿ ತಾಣಗಳನ್ನು ತೋರಿಸುವ ಸಲುವಾಗಿ ರಚಿಸಲಾದ ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಗಾಢ ನಿದ್ದೆಯಲ್ಲಿದೆ. ಇದರ ಪರಿಣಾಮ ಪ್ರವಾಸಿಗರು ಖಾಸಗಿ ಸಂಸ್ಥೆಗಳನ್ನೇ ಆಶ್ರಯಿಸಬೇಕಿದೆ. ಇನ್ನೂ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಆಯೋಜಿಸಿರುವ ಮಾಗಿ ಉತ್ಸವ ನೋಡಲು ಸ್ಥಳೀಯರೇ ಬರುತ್ತಿದ್ದು, ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫ‌ಲವಾಗಿದೆ ಎಂಬ ಆರೋಪವೂ ಇದೆ.

ಈ ತಿಂಗಳ ಮಧ್ಯಭಾಗದಲ್ಲಿ ಪ್ರತಿಭಟನೆಗಳಿಂದಾಗಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಮೈಸೂರಿನ ಯಾವುದೇ ತಾಣಕ್ಕೆ ಹೋದರೂ ಪ್ರವಾಸಿಗರಿದ್ದಾರೆ.
-ಎಚ್‌.ಪಿ.ಜನಾರ್ದನ್‌, ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ಪ್ರತಿಭಟನೆಗಳಿಂದಾಗಿ ಮೈಸೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಮೈಸೂರಿಗೆ ಬರುವವರಿಗಿಂತ ಇಲ್ಲಿಂದ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಿನಲ್ಲಿ ಇನ್ನೋವಾ, ಟೆಂಪೋ ಟ್ರಾವೆಲರ್‌ಗಳು ಬಾಡಿಗೆಗೆ ಸಿಗುತ್ತಿಲ್ಲ. ವರ್ಷಾಂತ್ಯಕ್ಕೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ.
-ಬಿ.ಎಸ್‌.ಪ್ರಶಾಂತ್‌, ಅಧ್ಯಕ್ಷ, ಮೈಸೂರು ಟ್ರಾವೆಲ್‌ ಏಜೆಂಟ್ಸ್‌ ಅಸೋಸಿಯೇಷನ್‌

ಕಳೆದ ವಾರ ಇದ್ದ ಪರಿಸ್ಥಿತಿ ಈಗಿಲ್ಲ. ಪರಿಸ್ಥಿತಿ ಸುಧಾರಿಸಿದ್ದು, ಪಿಕಪ್‌ ಆಗ್ತಿದೆ. ಮೈಸೂರಿನಲ್ಲಿರುವ ಹೋಟೆಲ್‌ ಮತ್ತು ವಸತಿಗೃಹಗಳಲ್ಲಿ ಶೇ.90ರಷ್ಟು ರೂಮ್‌ ಬುಕ್ಕಿಂಗ್‌ ಆಗಿದೆ.
-ಸಿ.ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್‌ ಮಾಲೀಕರ ಸಂಘ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next