Advertisement

ಸೋಂಕುದ್ವಿಗುಣ 7.5 ದಿನಗಳಿಗೆ ಇಳಿಕೆ;ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಣೆ

10:03 AM Apr 22, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಸಮಾಧಾನಕರ ಮುನ್ನಡೆ ಎಂಬಂತೆ, ದೇಶದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಪ್ರಮಾಣವು 7.5 ದಿನಗಳಿಗೆ ಇಳಿಕೆಯಾಗಿದೆ.

Advertisement

ವಿಶೇಷವೆಂದರೆ, ಕರ್ನಾಟಕ ಸೇರಿದಂತೆ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ 9.2 ದಿನಗಳಾಗಿದ್ದರೆ, ದೆಹಲಿಯಲ್ಲಿ ಇದು 8.5 ದಿನಗಳು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ತಿಳಿಸಿದ್ದಾರೆ.

ಸೋಮವಾರ ಸಂಜೆ 4 ಗಂಟೆಗೆ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಗೂ ಮುನ್ನ ಸೋಂಕು 3.5 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಆದರೆ, ಈಗ ಜನರ ಚಲನವಲನಗಳಿಗೆ ನಿರ್ಬಂಧದಿಂದಾಗಿ ಕಡಿವಾಣ ಬಿದ್ದಿರುವ ಕಾರಣ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 7.5 ದಿನಗಳು ಬೇಕಾಗುತ್ತಿವೆ ಎಂದಿದ್ದಾರೆ.

ಅಂಡಮಾನ್‌- ನಿಕೋಬಾರ್‌ ದ್ವೀಪ, ಹರ್ಯಾಣ, ಹಿಮಾಚಲ, ಚಂಡೀಗಡ, ಅಸ್ಸಾಂ, ಉತ್ತರಾಖಂಡ ಮತ್ತು ಲಡಾಖ್‌ನಲ್ಲಿ ಸೋಂಕು ದ್ವಿಗುಣಗೊಳ್ಳಲು 20ರಿಂದ 30 ದಿನಗಳು ಬೇಕಾಗುತ್ತಿವೆ. ಇನ್ನು ಒಡಿಶಾದಲ್ಲಿ 39.8 ದಿನಗಳಿಗೊಮ್ಮೆ ಮತ್ತು ಕೇರಳದಲ್ಲಿ 72.2 ದಿನಗಳಿಗೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ ಎಂದೂ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

Advertisement

ಒಂದೇ ದಿನ 1, 553 ಪ್ರಕರಣ: ದೇಶದಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡು ಬಂದಿದೆ. 24 ಗಂಟೆಗಳ ಅವಧಿಯಲ್ಲಿ 1,553 ಮಂದಿಗೆ ಸೋಂಕು ದೃಢಪಟ್ಟಿದ್ದು, 36 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 18 ಸಾವಿರ ದಾಟಿದ್ದು, ಸಾವಿನ ಸಂಖ್ಯೆ 600ರ ಸಮೀಪಕ್ಕೆ ಬಂದಿದೆ. ಇದೇ ವೇಳೆ, ಈವರೆಗೆ 2,900ಕ್ಕೂ ಅಧಿಕ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಗುಣಮುಖರಾಗುತ್ತಿದ್ದವವರ ಪ್ರಮಾಣ ಶೇ. 14.75 ಆಗಿದೆ ಎಂದು ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

ಕೊಡಗು ಬಗ್ಗೆ ಮತ್ತೆ ಪ್ರಶಂಸೆ
ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ಕರ್ನಾಟಕದ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿನ ಸಾಧನೆ ಬಗ್ಗೆ ಆರೋಗ್ಯ ಸಚಿವಾಲಯ ಸೋಮವಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕೊಡಗು, ಪುದುಚೇರಿಯ ಮಾಹೆ, ಉತ್ತರಾಖಂಡದ ಪೌರಿ ಗರ್ವಾಲ್‌ ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಇದೊಂದು ಉತ್ತಮ ಸಾಧನೆ ಎಂದು ಅಗರ್ವಾಲ್‌ ಬಣ್ಣಿಸಿದ್ದಾರೆ.

ಜತೆಗೆ, 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ 59 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂದೂ ಮಾಹಿತಿ ನೀಡಿದ್ದಾರೆ. ಅಲ್ಲದೆ, ಗೋವಾದಲ್ಲಿ ಎಲ್ಲ ಸೋಂಕಿತರೂ ಡಿಸಾcರ್ಜ್‌ ಆಗಿದ್ದು, ಸದ್ಯಕ್ಕೆ ಅಲ್ಲಿ ಯಾವುದೇ ಸಕ್ರಿಯ ಪ್ರಕರಣವಿಲ್ಲ ಎಂದು ಹೇಳಿದ್ದಾರೆ.

ನಾಲ್ಕು ರಾಜ್ಯಗಳ ಸ್ಥಿತಿ ಗಂಭೀರ
ಮಹಾರಾಷ್ಟ್ರದ ಮುಂಬೈ, ಪುಣೆ, ಮಧ್ಯಪ್ರದೇಶದ ಇಂದೋರ್‌, ರಾಜಸ್ಥಾನದ ಜೈಪುರ ಮತ್ತು ಪಶ್ಚಿಮ ಬಂಗಾಲದ ಕೋಲ್ಕತಾ ಸೇರಿ ಇನ್ನೂ ಕೆಲ ನಗರಗಳಲ್ಲಿ ಕೋವಿಡ್ 19 ವೈರಸ್ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುವ ಕಿಡಿಗೇಡಿತನ ಹೀಗೇ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಘೋರವಾಗಲಿದೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಈ ಕುರಿತಂತೆ ಸೋಮವಾರ ಎಲ್ಲ ರಾಜ್ಯಗಳಿಗೂ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಕೆಲವೆಡೆ ವೈದ್ಯರು ಮತ್ತು ಆರೋಗ್ಯ ಸಿಬಂದಿ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಲಾಕ್‌ಡೌನ್‌ ಉಲ್ಲಂಘಿಸಿ ಬ್ಯಾಂಕ್‌ಗಳಲ್ಲಿ, ಔಷಧ ಮಳಿಗೆ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಗುಂಪು ಸೇರುವ ಜನ, ಸಾಮಾಜಿಕ ಅಂತರದ ನಿಯಮ ಪಾಲಿಸುತ್ತಿಲ್ಲ. ಕೋವಿಡ್ 19 ವೈರಸ್ ಸೋಂಕು ಇರುವ ಹಾಟ್‌ಸ್ಪಾಟ್‌ಗಳಲ್ಲಿ ವಾಹನಗಳು, ಜನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನೊಳಗೊಂಡ ಆರು ಆಂತರಿಕ ತಂಡಗಳು ಮುಂದಿನ ಮೂರು ದಿನಗಳಲ್ಲಿ ನಾಲ್ಕೂ ರಾಜ್ಯಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಪರಿಹಾರ ಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಿವೆ.

ಯೋಧರಿಗೆ ಹಳದಿ, ಹಸಿರು, ಕೆಂಪು ನೀತಿ
ಈಗಷ್ಟೇ ರಜೆ ಮುಗಿಸಿದವರು, ತರಬೇತಿ ಪೂರ್ಣಗೊಂಡವರು, ಮತ್ತೆ ಸೇನೆಗೆ ಸೇರುತ್ತಿರುವ ಯೋಧರಿಗೆ, ಭಾರತೀಯ ಸೇನೆ ಹೊಸ ಸೂಚನೆಗಳನ್ನು ನೀಡಿದೆ. ಹಸಿರು, ಹಳದಿ, ಕೆಂಪು ಶ್ರೇಣಿಯ ಸೂಚನೆಗಳನ್ನು ಪಾಲಿಸಿ, ಸೇನೆಗೆ ಮರುಪ್ರವೇಶ ನೀಡಲು ಸೂಚಿಸಲಾಗಿದೆ.

ಸೇನೆಗೆ ಹಿಂದಿರುಗಿದ ಎಲ್ಲರೂ ‘ಹಳದಿ’ ಶ್ರೇಣಿಗೆ ಒಳಪಡುತ್ತಾರೆ. ಇವರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ. ಹಾಗೆ ಕ್ವಾರಂಟೈನ್‌ ಮುಗಿಸಿದವರು, ‘ಹಸಿರು’ ಶ್ರೇಣಿಗೆ ಬರುತ್ತಾರೆ. ಒಂದು ವೇಳೆ ಈ ಹಂತದಲ್ಲಿ ಯಾರಿಗಾದರೂ ಸೋಂಕು ಕಂಡುಬಂದಲ್ಲಿ, ಅವರನ್ನು “ಕೆಂಪು’ ಶ್ರೇಣಿಯಲ್ಲಿ ಇಡಲಾಗುತ್ತದೆ. ಇಂಥವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.

ಹೀಗೆ ಮರಳುವ ಪ್ರತಿಯೊಬ್ಬರೂ 500 ಕಿ.ಮೀ. ವ್ಯಾಪ್ತಿಯಲ್ಲಿರುವ ಸೇನಾ ಘಟಕವನ್ನು ಸೇರಬೇಕಾಗಿದೆ. ಅಗತ್ಯ ಸೌಕರ್ಯವನ್ನು ಅಲ್ಲಿಯೇ ನೀಡಲಾಗುತ್ತದೆ. ಆದರೆ, ಹಾಟ್‌ಸ್ಪಾಟ್‌ಗಳಲ್ಲಿರುವ ಸೈನಿಕರಿಗೆ ಈ ಮೇಲಿನ ನಿಯಮಗಳು ಅನ್ವಯಿಸುವುದಿಲ್ಲ. ಪರಿಸ್ಥಿತಿ ತಿಳಿಯಾದ ನಂತರವಷ್ಟೇ ಅವರು ಸೇನೆಗೆ ಮರಳಬೇಕು ಎಂದು ಭಾರತೀಯ ಸೇನೆ ಹೇಳಿದೆ.

ಮಾರ್ಗಸೂಚಿಗಳ ಉಲ್ಲಂಘನೆ ಬೇಡ
ಲಾಕ್‌ಡೌನ್‌ ಸಡಿಲಿಕೆ ವಿಚಾರದಲ್ಲಿ ಕರ್ನಾಟಕ ಮಾಡಿದ ಎಡವಟ್ಟನ್ನೇ ಕೇರಳ ಸರಕಾರ ಮಾಡಿದೆ. ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ಪ್ರತಿಪಾದಿಸಿರುವ ಎಲ್‌ಡಿಎಫ್ ಸರಕಾರ ಎ.15, 16ರಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದ ಮಾರ್ಗಸೂಚಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಡಿಲಗೊಳಿಸಿ ಆದೇಶ ನೀಡಿತ್ತು. ಅದಕ್ಕೆ ಕೇಂದ್ರ ಗೃಹ ಸಚಿವಾಲಯ ಆಕ್ಷೇಪ ಮಾಡಿದ ಬಳಿಕ ವಾಪಸ್‌ ಪಡೆಯಲಾಗಿದೆ. ಹೀಗಾಗಿ, ಮಾರ್ಗಸೂಚಿಗಳನ್ನು ಯಾವುದೇ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸಡಿಲಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಕೇರಳ ಸರಕಾರ ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪುನರಾರಂಭ, ವರ್ಕ್‌ಶಾಪ್‌ಗಳು, ಕ್ಷೌರದಂಗಡಿಗಳು, ಪುಸ್ತಕ ಮಳಿಗೆಗಳು, ನಗರ ಮತ್ತು ಪಟ್ಟಣಗಳಲ್ಲಿ 60 ಕಿ.ಮೀ. ವ್ಯಾಪ್ತಿಯವರೆಗೆ ಬಸ್‌ ಸೌಕರ್ಯ, ಕಾರುಗಳಲ್ಲಿ ಚಾಲಕ ಸೇರಿದಂತೆ ಹಿಂಬದಿಯ ಸೀಟಿನಲ್ಲಿ ಮತ್ತಿಬ್ಬರು ಪ್ರಯಾಣಿಸಲು ಅವಕಾಶ, ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೂ ಅವಕಾಶ, ರೆಸ್ಟಾರೆಂಟ್‌ಗಳಿಗೆ ಅವಕಾಶ ನೀಡಿತ್ತು.

ಕೇರಳವು ಕೇಂದ್ರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ. ಯಾವುದೇ ಹೆಚ್ಚುವರಿ ನಿರ್ಬಂಧ ಸಡಿಲಿಕೆಯನ್ನೂ ಮಾಡಿಲ್ಲ. ಆದರೂ, ಕೇರಳದ ಬಗ್ಗೆ ಕೇಂದ್ರಕ್ಕೆ ತಪ್ಪುಗ್ರಹಿಕೆ ಉಂಟಾಗಿದೆ. ಇದನ್ನು ಕೂಡಲೇ ಬಗೆ ಹರಿಸಿಕೊಳ್ಳಲಾಗುತ್ತದೆ.
– ಕಡಕಂಪಲ್ಲಿ ಸುರೇಂದ್ರನ್‌, ಕೇರಳ ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next