Advertisement

ನಾಳೆ ವಿಶ್ವ ಮಕ್ಕಳ ಪುಸ್ತಕ ದಿನ 

07:30 AM Apr 01, 2018 | |

ಕಪಿಲ ಮಹರ್ಷಿಯಾದ ಕಥೆ ಯಾರಿಗೆ ಗೊತ್ತಿಲ್ಲ? ಕಾಡಿನಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನಿಗಾಗಿ ದಿನವೂ ಊಟವನ್ನು ಒಯ್ಯುತ್ತಿದ್ದ ಕಪಿಲ ದಾರಿಯಲ್ಲಿ ಹೋಗುವಾಗ ತಾಳೆಗರಿಯನ್ನು ಓದುತ್ತಿದ್ದ. ಹೀಗೇ ಒಂದು ದಿನ ಅವನು ದಾರಿಯಲ್ಲಿ ಓದುತ್ತ ಓದುತ್ತ ಒಂದು ದಿನ ಆಳವಾದ ಕಮರಿಗೂ ಬಿದ್ದ. ಆದರೂ ಅವನ ಓದು ನಿಲ್ಲಲಿಲ್ಲ. ಇವನ ಓದಿನ ಹುಚ್ಚನ್ನು ನೋಡಿ ಸಾಕ್ಷಾತ್‌ ಸರಸ್ವತಿಯೇ ಕಾಣಿಸಿಕೊಂಡು, “ಏನು ವರ ಬೇಕು ಕೇಳು’ ಎಂದಳು. “ದಾರಿಯಲ್ಲಿ ಓದುತ್ತ ಹೋಗುವಾಗ ದಾರಿ ಕಾಣಲು ಕಾಲುಗಳಿಗೂ ಕಣ್ಣು ಕೊಡು’ ಎಂದ. “ತಥಾಸ್ತು’ ಎಂದಳು ಸರಸ್ವತಿ. 

Advertisement

ಇದು 2005ರಲ್ಲಿ ವಿಶ್ವಮಟ್ಟದ ಸಂಸ್ಥೆಯಾದ IBBY (INTERNATIONAL BOARD ON BOOKS FOR YOUNG PEOPLE)  ಮಕ್ಕಳ ದಿನವನ್ನ ಆಚರಿಸಲು ಅತಿಥಿ ದೇಶವಾಗಿ ಭಾರತ ಆಯ್ಕೆಯಾದಾಗ ರಚಿತವಾದ ಪೋಸ್ಟರ್‌. “ಓದು ನಿರಂತರ’ ಎನ್ನುವ ತತ್ವವನ್ನು ಈ ಪೋಸ್ಟರ್‌ ಪರಿಣಾಮಕಾರಿಯಾಗಿ ಚಿತ್ರಿಸಿದೆ.

ವಿಶ್ವ ಮಕ್ಕಳ ಪುಸ್ತಕ ದಿನ
1952ರಲ್ಲಿ ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಲೇಖಕರು, ಅಧ್ಯಾಪಕರು, ಪ್ರಕಾಶಕರು ಮತ್ತು ಶಿಕ್ಷಣ ತಜ್ಞರು ಮಕ್ಕಳ ಸಾಹಿತ್ಯದ ಮೂಲಕ ಅಂತರಾಷ್ಟ್ರೀಯತ್ವವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಒಂದು ಸಂಸ್ಥೆಯನ್ನು ಹುಟ್ಟುಹಾಕಲು ನಿರ್ಧರಿಸಿದರು. 1953ರಲ್ಲಿ ಆರಂಭಗೊಂಡ ಐಬಿಬಿವೈ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಡ್ಯಾನಿಷ್‌ ಬರಹಗಾರ ಹ್ಯಾನ್ಸ್‌ ಕಿಶ್ಚಿಯನ್‌ ಅಂಡರ್‌ಸನ್‌ನ ಜನ್ಮದಿನವನ್ನು 1962ರಲ್ಲಿ ವಿಶ್ವ ಮಕ್ಕಳ ಪುಸ್ತಕ ದಿನವನ್ನಾಗಿ ಘೋಷಿಸಿತು.

ಪ್ರತಿವರ್ಷ ಮಕ್ಕಳ ಸಾಹಿತ್ಯಕ್ಕೆ ಪ್ರಶಸ್ತಿಯನ್ನು ಕೊಡುತ್ತಿದ್ದು ಅದು ಲಿಟಲ್‌ ನೋಬೆಲ್‌ ಎಂದೇ ಹೆಸರುವಾಸಿಯಾಗಿದೆ. ಇದರ ಜೊತೆಗೆ ಪ್ರತಿವರ್ಷ ಮಕ್ಕಳ ಸಾಹಿತ್ಯ ಪ್ರಸಾರದಲ್ಲಿ ವಿಶೇಷವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೂ ಮಕ್ಕಳ ಚಿತ್ರ ಕಲಾವಿದನಿಗೂ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಜೊತೆಗೆ ಬುಕ್‌ ಬರ್ಡ್‌ ಎಂಬ ಪತ್ರಿಕೆಯನ್ನೂ ಹೊರತರುತ್ತಿದೆ. ವಿಶ್ವದಾದ್ಯಂತ ಸುಮಾರು 90 ದೇಶಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ. ಪ್ರತಿವರ್ಷ ಒಂದೊಂದು ದೇಶವು ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತದೆ. ಭಾರತದಲ್ಲಿ  ಚಿತ್ರಕಲಾವಿದ ಶಂಕರ ಪಿಳ್ಳೆ ಅವರ ಮುತುವರ್ಜಿಯಿಂದಾಗಿ ಅಸೋಸಿಯೇಶನ್‌ ಆಫ್ ರೈಟರ್ಸ್‌ ಅಂಡ್‌ ಇಲ್ಲಸ್ಟೇಟರ್ಸ್‌ ಫಾರ್‌ ಚಿಲ್ಡ್ರನ್‌ ಎನ್ನುವ ಸಂಸ್ಥೆ ಹುಟ್ಟಿಕೊಂಡಿತು. ಅಂದಿನಿಂದ ಇಂದಿನವರೆಗೂ ಮಕ್ಕಳ ಸಾಹಿತ್ಯದ ಕಡೆಗೆ ಜನರನ್ನು ಸೆಳೆಯಲು ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಈಗ ಹಿರಿಯ ಲೇಖಕಿ ನೀಲಿಮಾ ಸಿನ್ಹ ಅಧ್ಯಕ್ಷರು.

ಈ ವರ್ಷ ಉತ್ತರ ಯುರೋಪಿನ ಪುಟ್ಟ ದೇಶ ಲಾತ್ವಿಯಾ ವಿಶ್ವ ಮಕ್ಕಳ ಪುಸ್ತಕ ಮೇಳದ ಪ್ರಾಯೋಜಕತ್ವದ ನೇತೃತ್ವ ವಹಿಸಿಕೊಂಡಿದೆ. ಮಗುವಿನ ಆಸಕ್ತಿಗೆ ಅಂದದ ಪುಸ್ತಕ ಎಂಬುದು ಘೋಷವಾಕ್ಯ. ಈಗಾಗಲೇ ಅದಕ್ಕಾಗಿ ಪೋಸ್ಟರ್‌ ಕೂಡ ಸಿದ್ಧಪಡಿಸಲಾಗಿದೆ. ಜನಸಾಮಾನ್ಯರಲ್ಲಿ ಮಕ್ಕಳ ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಮತ್ತು ಮಕ್ಕಳಿಗೆ ವರ್ತಮಾನವನ್ನು ಗ್ರಹಿಸಲು ಸಾಧ್ಯವಾಗುವಂತೆ ಸಜ್ಜುಗೊಳಿಸುವ ಪುಸ್ತಕಗಳ ಪ್ರಕಟನೆಗೆ ಉತ್ತೇಜಿಸುವುದು ಲಾತ್ವಿಯಾ ದೇಶದ ಈ ವರ್ಷದ ವಿಶ್ವ ಮಕ್ಕಳ ದಿನದ ವಿಷಯವಾಗಿದೆ.

Advertisement

ಭಾರತದಲ್ಲಿ ಮಕ್ಕಳ ಪುಸ್ತಕಗಳ ಪ್ರಕಟನಾ ಸಂಸ್ಥೆಗಳಲ್ಲಿ ಮುಖ್ಯವಾದವುಗಳೆಂದರೆ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಮತ್ತು ಚಿಲ್ಡ್ರನ್‌ ಬುಕ್‌ ಟ್ರಸ್ಟ್‌ . ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ವಿಷಯಗಳ ಆಯ್ಕೆಯಲ್ಲಿ ಮಾತ್ರವಲ್ಲ ಆಕರ್ಷಕ ಚಿತ್ರ ಮತ್ತು ವಿನ್ಯಾಸಗಳಲ್ಲಿಯೂ ಈ ಸಂಸ್ಥೆಗಳು ಮಕ್ಕಳಿಗಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ವಿಶ್ವ ಪುಸ್ತಕ ಮೇಳದಲ್ಲಿಯೂ ಪ್ರತ್ಯೇಕವಾದ ಮಳಿಗೆಗಳನ್ನು ನಿರ್ಮಿಸಿರುವುದು ನ್ಯಾಷನಲ್‌ ಬುಕ್‌ ಟ್ರಸ್ಟ್‌ನ ಮಕ್ಕಳ ಪುಸ್ತಕ ಪ್ರಸಾರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಜೊತೆಗೆ ಭಾರತದಲ್ಲಿ ಪ್ರಕಟವಾಗುವ ಮಕ್ಕಳ ಸಾಹಿತ್ಯದ ಬಗೆಗೂ ಮಾಹಿತಿಯನ್ನು ಸಂಗ್ರಹಿಸುತ್ತದೆ. 1957ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಸ್ವತಂತ್ರ ಅಸ್ತಿತ್ವ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ವಿಚಾರಸಂಕಿರಣಗಳನ್ನು ಏರ್ಪಡಿಸುವುದು, ಮಕ್ಕಳ ಪುಸ್ತಕಗಳ ಪ್ರದರ್ಶನ ಏರ್ಪಡಿಸುವುದು ಈ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಕೆಲವು. ವಿಶೇಷ ವಿನ್ಯಾಸ ಮತ್ತು ಆಕರ್ಷಕವಾದ ಮುದ್ರಣಕ್ಕೆ ಮತ್ತು ಸೋವಿ ಬೆಲೆಗೆ ಟ್ರಸ್ಟ್‌ನ ಪುಸ್ತಕಗಳು ಹೆಸರುವಾಸಿಯಾಗಿವೆ.

1957ರಲ್ಲಿ ಶಂಕರ್‌ ಪಿಳ್ಳೆಯವರ ಆಸಕ್ತಿಯಿಂದಾಗಿ ರೂಪುಗೊಂಡ ಈ ಟ್ರಸ್ಟ್‌ ಮಕ್ಕಳ ಸಾಹಿತ್ಯ ಪ್ರಕಟನೆ ಮತ್ತು ಪ್ರಸಾರಕ್ಕೆ ಅಹರ್ನಿಶಿ ಕೆಲಸಮಾಡುತ್ತಿದೆ. ಮಕ್ಕಳ ಸಾಹಿತ್ಯ ಪ್ರಕಟನೆಗೆ ಮಾತ್ರವಲ್ಲ, ಮಕ್ಕಳ ಸಾಹಿತ್ಯ ರಚನೆಗೆ ಪೂರಕವಾಗಿ ಲೇಖಕರು ಮತ್ತು ಚಿತ್ರಗಾರರಿಗೆ ಬೇಕಾದ ತರಬೇತಿಯನ್ನು ನೀಡುತ್ತಿದೆ. ಮಕ್ಕಳ ಸಾಹಿತ್ಯ ಗ್ರಂಥಾಲಯ, ಬೊಂಬೆಗಳ ವಸ್ತುಸಂಗ್ರಹಾಲಯ ಮುಂತಾದವು ಶಂಕರ್‌ ಪಿಳ್ಳೆ ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಇನ್ನು ಖಾಸಗಿಯಾಗಿ ಮಕ್ಕಳ ಪುಸ್ತಕಗಳ ಪ್ರಕಟನೆಗೆ ಹೆಸರಾದ ಸಂಸ್ಥೆಗಳೆಂದರೆ ತುಳಿಕಾ, ತಾರಾ ಮತ್ತು ಪ್ರಥಮ್‌ ಇವು ಕೇವಲ ಪ್ರಕಟನಾ ಸಂಸ್ಥೆಗಳು ಮಾತ್ರವಾಗಿರದೆ, ಮಕ್ಕಳ ಸಾಹಿತ್ಯ ಪ್ರಕಟನಾ ಪ್ರಪಂಚದ ಎಲ್ಲೆಗಳನ್ನು ವಿಸ್ತರಿಸುವ ಪ್ರಯೋಗಶಾಲೆಗಳಾಗಿವೆ.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಪ್ರಕಟನಾ ಸಂಸ್ಥೆಗಳ ಇತಿಹಾಸವೂ ಕೂಡ ಆರಂಭವಾಗುವುದು ಕ್ರಿಶ್ಚಿಯನ್‌ ಮಿಷನರಿಗಳ ಪ್ರಸಾರ ಕಾರ್ಯದೊಂದಿಗೆ. ಈ ಹೊತ್ತಿಗೂ ಮಕ್ಕಳ ಸಾಹಿತ್ಯ ಪ್ರಕಟನೆಗೆಂದೇ ಮೀಸಲಾದ ಪ್ರಕಟನಾ ಸಂಸ್ಥೆಗಳು ಕಡಿಮೆಯೇ. ಸುಬೋಧ ರಾಮರಾಯರು ಪ್ರಕಟಿಸಿದ ಮಕ್ಕಳ ಪುಸ್ತಕಗಳನ್ನು ಮಾರಾಟ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಓದುಗರಿಗೆ ರಿಯಾಯಿತಿಯ ಆಕರ್ಷಣೆ ತೋರಿದರೂ ಕೊಳ್ಳುವವರಿರಲಿಲ್ಲ ಎಂಬುದು ಇತಿಹಾಸ. ಆಗಿನ ಕಾಲದಲ್ಲಿ  ರಾಜರತ್ನಂ, ಮಾಸ್ತಿ, ಕುವೆಂಪು ಮುಂತಾದವರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿಕೊಂಡರೆ ಶಿಸುಸಂಗಮೇಶ, ಪಳಕಳ ಸೀತಾರಾಮಭಟ್‌ ಮುಂದುವರಿಸಿದರು. ಈಗ  ಕೃಷ್ಣಮೂರ್ತಿ ಬಿಳಿಗೆರೆ, ಟಿ. ಎಸ್‌. ನಾಗರಾಜ ಶೆಟ್ಟಿ , ಸಿ. ಎಂ. ಗೋವಿಂದ ರೆಡ್ಡಿ ಮುಂತಾದವರು ತಮ್ಮ ಪುಸ್ತಕಗಳನ್ನು ಪ್ರಕಟಿಸಿಕೊಳ್ಳುತ್ತಿ¨ªಾರೆ. ಧಾರವಾಡದ ಸಮಾಜ ಪುಸ್ತಕಾಲಯ, ಬೆಂಗಳೂರಿನ ಐಬಿಎಚ್‌, ಮೈಸೂರಿನ ಕಾವ್ಯಾಲಯ ಪ್ರಕಟನಾಮಂದಿರಗಳ ಮಕ್ಕಳ ಪುಸ್ತಕ ಪ್ರಕಾಶನ ಸಾಧನೆಯನ್ನು ಅಲ್ಲಗಳೆಯುವಂತಿಲ್ಲ. ಮಂಗಳೂರಿನ ಯುಗಪುರುಷ ಪ್ರಕಟನಾಲಯ, ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ರಾಷ್ಟ್ರೋತ್ಥಾನ ಸಾಹಿತ್ಯ, ಸಪ್ನಾ ಬುಕ್‌ ಹೌಸ್‌ ಮುಂತಾದವು ಈ ಹೊತ್ತಿಗೂ ಮಕ್ಕಳ ಸಾಹಿತ್ಯದ ಪ್ರಕಟನೆ ಮತ್ತು ಪ್ರಚಾರದಲ್ಲಿ ತೊಡಗಿವೆ. ಧಾರವಾಡದ ಗುಬ್ಬಚ್ಚಿ ಗೂಡು ಪ್ರಕಟನೆಗಳು, ಮಕ್ಕಳ ಪುಸ್ತಕ ಪ್ರಕಟನೆಯಲ್ಲಿ ಹಲವು ವೈವಿಧ್ಯಮಯವಾದ ಪ್ರಯೋಗಗಳನ್ನು ಮಾಡುತ್ತಿದೆ. ಸಮೀರ್‌ ಜೋಶಿ ಅವರು ಈಚೆಗೆ ಆರಂಭಿಸಿದ “ಜಡಭರತ ಪ್ರಕಾಶನ’ ಉತ್ತಮ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು ಜ್ಞಾನಪರಿಷತ್ತುಗಳು ಮೊದಲು ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರೂ ಈಗ ಭಾಗಶಃ ನಿಲ್ಲಿಸಿವೆ. ಮಕ್ಕಳ ಸಾಹಿತ್ಯದ ಬಗೆಗೆ ನಮ್ಮಲ್ಲಿ ಎಷ್ಟು ಅನಾದರ ಇದೆ ಎನ್ನುವುದಕ್ಕೆ ಯೂನಿವರ್ಸಿಟಿಗಳು ತಳೆದಿರುವ ಧೋರಣೆಯೇ ಸಾಕ್ಷಿ. ಯಾವುದೇ ವಿಶ್ವವಿದ್ಯಾಲಯ ಮಕ್ಕಳ ಪುಸ್ತಕ ಪ್ರಕಟನೆಗೆ ನಿರ್ದಿಷ್ಟ ಯೋಜನೆಗಳನ್ನು ಹಮ್ಮಿಕೊಳ್ಳುವುದಿರಲಿ, ಪ್ರೋತ್ಸಾಹವನ್ನೂ ಕೊಡುತ್ತಿಲ್ಲ.

ಮಕ್ಕಳ ಸಾಹಿತ್ಯದ ಪ್ರಸಾರದಲ್ಲಿ ಇಪ್ಪತ್ತೈದು ವರ್ಷಗಳಿಂದಲೂ ಕ್ರಿಯಾಶೀಲವಾಗಿ ಆನಂದ ಪಾಟೀಲರ ಮುಂದಾಳುತನದಲ್ಲಿ ತೊಡಗಿಕೊಂಡ ಶಹಾಪುರದ  ಸಂಧ್ಯಾ ಸಾಹಿತ್ಯ ವೇದಿಕೆ ಈ ವರ್ಷ ಬೆಂಗಳೂರಿನ “ಅಭಿನವ’ದ ಸಹಯೋಗದಲ್ಲಿ ಮಕ್ಕಳ ಕಾದಂಬರಿ ಸುಗ್ಗಿ ಎನ್ನುವ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ.  ನಾಳೆ, ಕಲಬುರಗಿಯಲ್ಲಿ ವಿಶ್ವ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಪುಸ್ತಕಗಳನ್ನು ಹಂಚುವುದು, ಮಕ್ಕಳ ಪುಸ್ತಕಗಳ ಬಗೆಗೆ ಚರ್ಚೆ, ಹಾಡು ಇತ್ಯಾದಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 

ನ. ರವಿಕುಮಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next