Advertisement

Tulu Tradition: ಆ.4 ಆಟಿ ಅಮಾವಾಸ್ಯೆ- ರೋಗ ನಿರೋಧಕ ಸಪ್ತಪರ್ಣಿ ಕಷಾಯ

12:03 PM Aug 03, 2024 | Team Udayavani |

ಕರ್ಕಾಟಕ ಮಾಸ ಅಥವಾ “ಆಟಿ ಅಮಾವಾಸ್ಯೆ’ ಎಂದರೆ ಪಕ್ಕನೆ ಕಣ್ಣೆದುರಿಗೆ ನೀಳವಾಗಿ ಬೆಳೆದ ಹಾಲುವಾನ ಅಥವಾ ಸಪ್ತವರ್ಣಿ ಮರದ ಭವ್ಯ ನಿಲುವು ವ್ಯಕ್ತವಾಗುತ್ತದೆ. ತನ್ನದೇ ಆದ ವೈಚಿತ್ರ್ಯ ಮತ್ತು ವೈಶಿಷ್ಟéವನ್ನು ಹೊಂದಿರುವ ಈ ವೃಕ್ಷವು ವರ್ಷದಲ್ಲಿ ಒಮ್ಮೆ ಮಾತ್ರ ಓಲೈಸಿಕೊಳ್ಳುವ ಅಪರೂಪದ ಸಂಪ್ರದಾಯಕ್ಕೆ ಒಳಪಟ್ಟಿವೆ.

Advertisement

ಕರ್ಕಾಟಕ ಮಾಸದ ಅಮಾವಾಸ್ಯೆ ಅಥವಾ ತುಳು ಸಂಪ್ರದಾಯದ “ಆಟಿ ಅಮಾವಾಸ್ಯೆ’ಯ ಪ್ರಾದೇಶಿಕ ಪರ್ವದಂದು “ಸಪ್ತಪರ್ಣಿ’ ವೃಕ್ಷಕ್ಕೆ ಒಂದು ರೀತಿಯ ಜನಪದೀಯ ಮೌಲ್ಯವು ಪ್ರಾಪ್ತಿಯಾಗಿ ತುಳುವರ ಕೆಲವು ಆಚರಣೆಯ ಒಂದು ಭಾಗವಾಗಿ “ಹಾಲುವಾನ’ ವೃಕ್ಷವು ತನ್ನ ಮಹತ್ವವನ್ನು ಸಾರುತ್ತದೆ.

ಬಲಿಷ್ಠವಾದ ಬುಡವನ್ನು ಹೊಂದಿ ನೀಳವಾಗಿ ಬೆಳೆಯುವ ಹಾಲುವಾನ, ಪಾಳೆಮರ ಎಂದು ಕರೆಸಿಕೊಳ್ಳುವ ಈ ವೃಕ್ಷವು ಸಂಸ್ಕೃತದಲ್ಲಿ “ಸಪ್ತಪರ್ಣಿ’ ಎಂದೂ ಕನ್ನಡದಲ್ಲಿ “ಏಳೆಲಗ’ ಎಂದು ಉಲ್ಲೇಖಿತವಾಗಿದೆ. ಸಸ್ಯಶಾಸ್ತ್ರದಲ್ಲಿ ಇದನ್ನು “ಆಲ್‌ ನ್ಪೋನಿಯಾ ಸ್ಕಾಲರೀಸ್‌’ ಎಂದು ಗುರುತಿಸಲಾಗಿದೆ.

ಹಾಲುವಾನ ಮರವು ಎಲ್ಲೆಡೆ ಗೋಚರಿಸಿದರೂ ಒಂದು ರೀತಿಯ ನಿಷಿದ್ಧ ವೃಕ್ಷವೆಂದೇ ತಿಳಿಯಲಾಗಿದೆ. ಈ ಮರದ ಕಟ್ಟಿಗೆಯನ್ನು ಉರುವಲಾಗಿ ಉಪಯೋ ಗಿಸುವುದು ತೀರಾ ಕಡಿಮೆ. ಮಂತ್ರ ಶಾಸ್ತ್ರದ ಪ್ರಕಾರ ಪ್ರೇತಾವಾಹನೆಗೆ ಮತ್ತು ಬಾಧ ಕರ್ಷಣೆಗೆ ಉಪಯೋಗಿಸಲ್ಪಡುವ ಕೆಲವು ವಿಕಾರ ಮೂರ್ತಿಗಳಿಗೆ ಈ ವೃಕ್ಷದ ತಿರುಳನ್ನು ಬಳಸಲಾಗುತ್ತದೆ. ವಿಸರ್ಜನೆ ಮಾಡುವ ಕಾಷ್ಠ ಮೂರ್ತಿಗಳ ರಚನೆಗೆ ಈ ವೃಕ್ಷ ಬಳಕೆ ಯಾಗುವುದನ್ನು ಹೊರತುಪಡಿಸಿದರೆ ಅನ್ಯತ್ರ ಇದರ ಉಪಯೋಗವು ಗೋಚರಿ ಸುವುದಿಲ್ಲ.

Advertisement

ಆದರೆ ಈಗಾಗಲೇ ಉಲ್ಲೇಖಿಸಿದಂತೆ ಕರ್ಕಾಟಕ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆಯಂದು ಈ ಮರಕ್ಕೆ ಅತ್ಯಂತ ಮಹತ್ವ ಒದಗುತ್ತದೆ. ಅಮಾವಾಸ್ಯೆಯ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಲುವಾನ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದ ಅದರ ಕಹಿ-ಒಗರು ರಸವನ್ನು ಸೇವಿಸುವ ಪದ್ಧತಿ ತುಳು ಜನಾಂಗದ ಜನರಲ್ಲಿ ರೂಢಿಯಲ್ಲಿದೆ. ವೈಜ್ಞಾನಿಕವಾಗಿ ಈ ಪದ್ಧತಿಗೆ ಯಾವುದೇ ಸ್ಪಷ್ಟತೆ ದೊರಕಿಲ್ಲವಾದರೂ ಜನರ ನಂಬಿಕೆ ಮತ್ತು ಸಂಪ್ರದಾಯದ ದೃಷ್ಟಿಯಿಂದ ಒಂದು ರೀತಿಯ ಧಾರ್ಮಿಕ ಮಹತ್ವವು ಆಟಿ ಅಮಾವಾಸ್ಯೆ ಮತ್ತು ಸಪ್ತವರ್ಣಿ ವೃಕ್ಷದ ಕಷಾಯ ಸೇವನೆಗೆ ಒದಗಿಸಿರುವುದು ಗಮನೀಯವೆನಿಸಿದೆ.

ರೋಗ ನಿರೋಧಕ-ನಂಜು ನಿವಾರಕ ಕಷಾಯ: ಆಯುರ್ವೇದ ಶಾಸ್ತ್ರದಲ್ಲಿ “ಸಪ್ತವರ್ಣಿ’ ವೃಕ್ಷದ ರಸವನ್ನು ರೋಗ ನಿರೋಧಕ ಮತ್ತು ನಂಜು ನಿವಾರಕ ಶಕ್ತಿಯಿಂದ ಕೂಡಿದ ಔಷಧೀಯ ಗುಣಗಳ ಸತ್ವವೆಂದು ಉಲ್ಲೇಖೀಸಲಾಗಿದೆ. ಜ್ಯೇಷ್ಠ ಆಷಾಢ ಮಾಸಗಳ ಶೀತ-ಜ್ವರಗಳ ಸಮಸ್ಯೆ ಮತ್ತು ಕೊಳೆತ ಮಣ್ಣಿನಿಂದಾಗಿ ಕಾಲಿನಲ್ಲಿ ಉಂಟಾಗುವ ನಂಜಿನ ಬಾಧೆಗಳ ಪರಿಹಾರಕ್ಕೆ ಹಾಲುವಾನ ಮರದ ಕಷಾಯ ಮಹಾ ಔಷಧ ಎಂದು ಪರಿಗಣಿಸಿ ಆಟಿ ಅಮಾವಾಸ್ಯೆಯಂದು ಅದರ ಸೇವನೆಗೆ ಜನಪದೀಯ ಒತ್ತಾಸೆಯನ್ನು ನೀಡಲಾಗಿದೆ ಎಂದು ಕೆಲವರ ಅನಿಸಿಕೆ.

ಆಟಿ ಅಮಾವಾಸ್ಯೆಯಂದು ಹಾಳೆಮರದ ತೊಗಟೆಯ ರಸವು ಸ್ವಲ್ಪವಾದರೂ ಹೊಟ್ಟೆಗೆ ಸೇರಿದರೆ ಹೊಟ್ಟೆಯಲ್ಲಿರುವ ಲಾಡಿಹುಳ, ಜಂತುಹುಳಗಳ ತೊಂದರೆ ನಿವಾರಣೆಯಾಗುವುದರ ಜತೆಗೆ ಕೆಲವು ಅಭಿಚಾರ ದೋಷದ ಔಷಧ ಪ್ರಯೋಗದ (ಕೈಮಾಸ್‌-ಕೈ ಮದ್ದು) ಬಾಧೆಯೂ ಪರಿಹಾರವಾಗಲು ಸಾಧ್ಯವಿದೆ ಎಂದು ಮಾಂತ್ರಿಕ ಮತ್ತು ವೈದ್ಯಕೀಯ ಅಭಿಪ್ರಾಯಗಳೂ ಉಲ್ಲೇಖಿತವಾಗಿವೆ. ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಗೆ ಹಾಲೆಮರದ ಕಷಾಯ ಆಟಿ ಅಮಾವಾಸ್ಯೆಯ ದಿನ ಸೇವಿಸಿದರೆ 366 ಬಗೆ ಔಷಧಗಳು ಶರೀರಕ್ಕೆ ವ್ಯಾಪಿಸಿದಂತೆ ಎಂದು ತುಳುವರ ನಂಬಿಕೆ.

ಏಕೆಂದರೆ ಕಾಡಿನಲ್ಲಿರುವ ಎಲ್ಲ ಔಷಧೀಯ ಗುಣವುಳ್ಳ ಸಸ್ಯಗಳ ಸಾರವು ಆಟಿ ಅಮಾವಾಸ್ಯೆಯಂದು “ಸಪ್ತಪರ್ಣಿ, ಏಳೆಲಗ, ಹಾಲುವಾನ, ಹಾಳೆಮರ, ಪಾಳೆದ ಮರ’ ಎಂದು ಹಲವಾರು ಹೆಸರಿನಿಂದ ಕರೆಯಲ್ಪಡುವ ಈ ಮಹಾವೃಕ್ಷದ ತೊಗಟೆಯಲ್ಲಿ ಅಡಕವಾಗಿರುತ್ತದಂತೆ! ರೋಗ ನಿರೋಧಕವಾಗಿ, ಕ್ರಿಮಿನಾಶಕವಾಗಿ, ಉಷ್ಣಧಾತುವಾಗಿ ಶರೀರದ ಥಂಡಿ, ಶೀತ, ಚಳಿ, ಜ್ವರಗಳನ್ನು ನಿಯಂತ್ರಿಸುವ ಚೈತನ್ಯವಿರುವ ಹಾಳೆ ಮರದ ಕಷಾಯ ವನೌಷಧವಾಗಿ ಪರಿಗಣಿಸಲ್ಪಟ್ಟು ಆಟಿ ಅಮಾವಾಸ್ಯೆಯ ದಿನದಂದು ಮಾತ್ರ ಸೇವಿಸಲ್ಪಡುವ ತುಳುನಾಡಿನ ಈ ಜಾನಪದ ಆಚರಣೆಯ ಹಿನ್ನೆಲೆಯ ವೈಜ್ಞಾನಿಕ ಸತ್ಯ-ತಣ್ತೀ- ಸತ್ವವನ್ನು ತಳ್ಳಿ ಹಾಕುವಂತಿಲ್ಲ ಅಲ್ಲವೇ?.

-ಮೋಹನದಾಸ, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next