Advertisement

ಭೂಗತ ಜಲವಿದ್ಯುತ್‌ ಯೋಜನೆಗೆ ವಿರೋಧ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ

03:35 PM Sep 13, 2024 | Team Udayavani |

■ ಉದಯವಾಣಿ ಸಮಾಚಾರ
ಶಿರಸಿ: ರಾಜ್ಯ ಸರ್ಕಾರ ಶರಾವತಿ ಭೂಗತ ಜಲವಿದ್ಯುತ್‌ ಯೋಜನೆ ಕೈಬಿಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ
ಸಾಗಿಸುವ ಯೋಜನೆ ಕೈಗೆತ್ತಿಕೊಳ್ಳಬಾರದು. ಶರಾವತಿ ನದಿಗೆ ಅಘನಾಶಿನಿ ನದಿ ತಿರುಗಿಸುವ ಯೋಜನೆ ರೂಪಿಸುವ ಹಿಂಬಾಗಿಲ ಪ್ರಯತ್ನ ನಡೆದಿದೆ ಎಂದೂ ಹೇಳಿದರು.

Advertisement

ಅಘನಾಶಿನಿ ಕಣಿವೆ ಜನತೆ ಎಚ್ಚರದಿಂದ ಇರಬೇಕು. ಹಾವೇರಿ ಜಿಲ್ಲೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವರು ಆಶ್ವಾಸನೆ ನೀಡುತ್ತಿರುವ ಸಂಗತಿ ಬಗ್ಗೆ ಬೇಡ್ತಿ ಕಣಿವೆ ಜನತೆ ಜಾಗೃತಿ ವಹಿಸಬೇಕಿದೆ. ಪ್ರಚಲಿತ ಭೂ ಕುಸಿತ, ಮೇಘಸ್ಫೋಟ, ಮಲೆನಾಡಿನ ಮಹಾಮಳೆಯಿಂದ ಪಶ್ಚಿಮ ಘಟ್ಟ ತತ್ತರಗೊಂಡಿದೆ. ಇನ್ನಷ್ಟು ಬೃಹತ್‌ ಅಭಿವೃದ್ಧಿ
ಯೋಜನೆಗಳನ್ನು ತಡೆದುಕೊಳ್ಳುವ ಧಾರಣಾ ಸಾಮರ್ಥ್ಯ ಇಲ್ಲವಾಗಿದೆ ಎಂದರು. ಕರಾವಳಿ ತಿರದ ಮೀನುಗಾರರು, ರೈತರು ಉಪ್ಪು ನೀರು ಹೆಚ್ಚಾಗಿ ಅತಂತ್ರರಾಗುವ ಪರಿಸ್ಥಿತಿ ಬರಲಿದೆ.

ಶರಾವತಿ-ಅಘನಾಶಿನಿ ಕೆಳಭಾಗಕ್ಕೆ ಸಿಹಿನೀರು ಬಾರದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯ ವರದಿ, ಶರಾವತಿ ಮತ್ತು ಅಘನಾಶಿನಿ ಕಣಿವೆ ಅಧ್ಯಯನ ವರದಿಗಳ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನ ಮಾಡಬೇಕು ಎಂದರು.

2021 ರ ಭೂಕುಸಿತ ಅಧ್ಯಯನ ವರದಿ ಶಿಫಾರಸು ಜಾರಿ ಮಾಡಬೇಕು. ಈಗಾಗಲೇ ಈ ಘಟ್ಟಗಳು ಸಡಿಲಗೊಂಡಿವೆ. ಬೃಹತ್‌ ಯೋಜನೆಗ ಳಿಂದ ಅರಣ್ಯ, ಪರಿಸರ, ವನ್ಯಜೀವಿ, ಜೀವವೈವಿಧ್ಯ ಕಾಯಿದೆಗಳ ಉಲ್ಲಂಘನೆ ಆಗಲಿವೆ. ಜಲ, ಸಿಆರ್‌ ಜಡ್‌ ಮಾಲಿನ್ಯ ಮುಂತಾದ ಕಾನೂನು ಭಂಗ ಆಗುವ, ಶರಾವತಿ ಅಭಯಾರಣ್ಯ, ಅಘನಾಶಿನಿ ಸಂರಕ್ಷಿತ ಪ್ರದೇಶ, ಬೇಡ್ತಿ-ಶಾಲ್ಮಲಾ ಸಂರಕ್ಷಿತ ಪ್ರದೇಶಗಳು ಛಿದ್ರವಾಗಲಿದೆ ಎಂದರು.

ಕತ್ತಲೆಕಾನು, ಸಿಂಗಳೀಕ, ಕರಿಕಾನಬೆಟ್ಟ, ಯಾಣ ಶಿಖರ, ರಾಮ್‌ಸಾರ್‌ಸೈಟ್‌, ಮಿರಿಸ್ಟಿಕಾ ಸ್ಟಾಂಪ್ಸ್‌, ವಿನಾಶದ ಅಂಚಿನ ವೃಕ್ಷ ಸಮೂಹ ಸೇರಿ ಅಪಾರ ಸಸ್ಯ ವನ್ಯಜೀವಿಗಳ ಆವಾಸಕ್ಕೆ ಧಕ್ಕೆ ಬರಲಿದೆ. ಹಲವು ಅರಣ್ಯ ಬುಡಕಟ್ಟು ಜನಾಂಗದವರು ನೆಲೆ ಕಳೆದುಕೊಳ್ಳಲಿದ್ದಾರೆ ಎಂದರು.

Advertisement

ಮಲೆನಾಡಿಗೆ ಮಾರಕವಾದ ಬೃಹತ್‌ ಯೋಜನೆಗಳು ಬೇಡ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಅರಣ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ ಜಾರಿ ಮಾಡಬೇಕು ಎಂದು ರೈತರು, ಮೀನುಗಾರರು, ವನವಾಸಿಗಳು ಒತ್ತಾಯಿಸಿದ್ದಾರೆ. ಈ ಮೇಲಿನ ಎಲ್ಲ ಅಂಶಗಳ ಕುರಿತು ಜನಪ್ರತಿನಿಧಿಗಳು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಧ್ವನಿ ಎತ್ತಬೇಕು. ಮಲೆನಾಡಿನ ಜನಪ್ರತಿನಿಧಿಗಳು ಒಂದಾಗಿ ಹೋರಾಟ ನಡೆಸಬೇಕು. ಇದಕ್ಕಾಗಿ ವಿಧಾನ ಸಭೆ ವಿಶೇಷ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಸಚಿವರು ಪಶ್ಚಿಮ ಘಟ್ಟದಲ್ಲಿ ಇಂತಹ ಬೃಹತ್‌ ಯೋಜನೆಗಳ ಅರಣ್ಯ ಪರವಾನಿಗೆ ನೀಡಬಾರದು. ವನ್ಯಜೀವಿ ಪರವಾನಗಿ ನೀಡಬಾರದು. ಶರಾವತಿ ಭೂಗತ ಯೋಜನೆ ಬಗ್ಗೆ ಸಾಗರ, ಹೊನ್ನಾವರಗಳಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು. ರಾಜ್ಯದ ಅರಣ್ಯ ಸಚಿವರು ಶರಾವತಿ ನದಿ ಕಣಿವೆಗೆ ಭೇಟಿ ನೀಡಬೇಕು. ಕೇಂದ್ರ ಪರಿಸರ ಅರಣ್ಯ ಮಂತ್ರಾಲಯ ಶರಾವತಿ ಅಘನಾಶಿನಿ, ಬೇಡ್ತಿ ಕಣಿವೆ ಪರಿಸ್ಥಿತಿ ಪರಿಶೀಲನೆಗೆ ಉನ್ನತ ಅಧಿಕಾರಿಗಳ ತಂಡ ಕಳಿಸಬೇಕು ಎಂದರು. ಈ ವೇಳೆ ವಕ್ಷಲಕ್ಷ ಆಂದೋಲನದ ವಿಶ್ವನಾಥ, ಗಣಪತಿ ಬಿಸಲಕೊಪ್ಪ ಇದ್ದರು.

ಪಶ್ಚಿಮ ಘಟ್ಟದಲ್ಲಿ ಹಲವು ಪರಿಸರ ನಾಶಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದ ವೇಳೆ ಹೋರಾಟದ
ಮೂಲಕ ಸ್ಥಗಿತಗೊಳಿಸಲಾಗಿದೆ.
●ಅನಂತ ಹೆಗಡೆ ಅಶೀಸರ,
ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ.

Advertisement

Udayavani is now on Telegram. Click here to join our channel and stay updated with the latest news.

Next