ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಶನಿವಾರ ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದ್ದು, ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್. ರಮೇಶ್ಕುಮಾರ್ ತಿಳಿಸಿದರು.ಗುರುವಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ನಡೆಸಲಾಗಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
30 ಸಾವಿರ ಕಾರ್ಯಕರ್ತರು ಭಾಗಿ: ಕಾಂಗ್ರೆಸ್ ಸಮಾವೇಶ ಜನ ಸೇರಿಸುವ ಉದ್ದೇಶದಿಂದ ನಡೆಸುತ್ತಿಲ್ಲ. ಇದು ಸಾರ್ವಜನಿಕ ಸಭೆಯೂ ಅಲ್ಲ. ಜಿಲ್ಲೆಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿನ ಬೂತ್ ಮಟ್ಟದ ಸಮಿತಿಗಳಿಂದ ಸುಮಾರು 25 ರಿಂದ 30 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮಗೆ ಆ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಸೇರ್ಪಡೆಯಾಗುವವರಿಗೆ ಅಡ್ಡಿ ಇರುವು ದಿಲ್ಲ ಎಂದು ಉತ್ತರಿಸಿದರು. ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನದ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಪನೂ ಇಲ್ಲ ಮುಖ್ಯ ಉಪನೂ ಇಲ್ಲ. ಹಾಗೇನಾದರೂ ಮಾಡುವ ಹಾಗಿದ್ದರೆ ತಮಗೂ ಒಂದು ಅವಕಾಶ ಕೊಡಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕೆರೆಗಳು ಭರ್ತಿ, ಸಚಿವರ ಹರ್ಷ: ಸಾಕಷ್ಟು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನೂರಾರು ಕೆರೆಗಳು
ತುಂಬಿರುವುದು ಹರ್ಷದ ಸಂಗತಿಯಾಗಿದೆ. ಕೆಲವೆಡೆ ರಸ್ತೆ ಗುಂಡಿ ಬಿದ್ದಿರುವುದು, ಮನೆಗಳು ಉರುಳಿರುವುದು ಸೇರಿದಂತೆ ಸಣ್ಣಪುಟ್ಟ ಅನಾಹುತಗಳು ಸಂಭವಿಸಿವೆ. ಅವುಗಳನ್ನು ಸರಿಪಡಿಸಿ, ಪರಿಹಾರ ನೀಡಲು ಸರಕಾರ ಕ್ರಮವಹಿಸುತ್ತದೆ. ಹೀಗಾಗಿ ಇನ್ನಷ್ಟು ಮಳೆ ಬರಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು ಮತ್ತಿತರರು ಹಾಜರಿದ್ದರು.