Advertisement

ಬಿಜೆಪಿ ಚುನಾವಣೆಗೆ ಸನ್ನದ್ಧ: ಸುದರ್ಶನ್‌

12:00 AM Mar 28, 2023 | Team Udayavani |

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಸನ್ನದ್ಧರಾಗಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ.

Advertisement

ಈಗಾಗಲೇ ಒಂದು ಹಂತದಲ್ಲಿ ಬೂತ್‌ ಮಟ್ಟದ ಪ್ರಚಾರ ಕಾರ್ಯ ಮುಗಿದಿದೆ. ಎಲ್ಲ ಮೋರ್ಚಾ ಸಭೆಗಳು ಪೂರ್ತಿಯಾಗಿವೆ. ವಿಜಯ ಸಂಕಲ್ಪ ಯಾತ್ರೆಯೂ ಆಗಿದೆ. ಬೂತ್‌ ಪ್ರಮುಖ್‌, ಪೇಜ್‌ ಪ್ರಮುಖ್‌ ವ್ಯವಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷ ಸಂಘಟನೆಯ ಆಧಾರದಲ್ಲಿ ಈ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಐತಿಹಾಸಿಕ ನಿರ್ಧಾರ
ರಾಜ್ಯದ ಪರಿಶಿಷ್ಟ ಸಮುದಾಯದ 3 ದಶಕಗಳ ಮೀಸಲಾತಿ ಬೇಡಿಕೆ ಈಡೇರಿಸುವುದರೊಂದಿಗೆ ಬಸವರಾಜ ಬೊಮ್ಮಾಯಿ ಸರಕಾರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಈ ಹಿಂದಿನ ಎಲ್ಲ ಸರಕಾರಗಳು ಮೀಸಲಾತಿ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಈಗ ಬಿಜೆಪಿ ಸರಕಾರ ಕೈಗೊಂಡಿರುವ ನಿರ್ಧಾರವನ್ನು ರಾಜ್ಯದ ಜನತೆ ಸ್ವಾಗತಿಸಿದ್ದಾರೆ ಎಂದರು.

ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಏರಿಕೆ ಮಾಡಿದ್ದರೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಏರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಪರಿಶಿಷ್ಟ ಸಮುದಾಯದೊಳಗೆ ಬಲ ಪಂಗಡಕ್ಕೆ ಶೇ. 5.5 ಒಳ ಮೀಸಲಾತಿ ನೀಡಿದ್ದರೆ, ಎಡ ಪಂಗಡಕ್ಕೆ ಶೇ. 6, ಲಂಬಾಣಿ-ಬೋವಿ ಸಮುದಾಯಕ್ಕೆ ಶೇ. 4.5, ಅಲೆಮಾರಿ ಅರೆ ಅಲೆಮಾರಿ ಸಮುದಾಯಕ್ಕೆ ಶೇ. 1 ಒಳ ಮೀಸಲಾತಿ ಕಲ್ಪಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲಿಂಗಾಯತ ಸಮುದಾಯವನ್ನು 2ಡಿ ಕೆಟಗರಿಗೆ ತರುವ ಮೂಲಕ ಶೇ. 5ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಅದೇ ರೀತಿ ಒಕ್ಕಲಿಗ ಸಮುದಾಯವನ್ನು 2ಸಿ ಕೆಟಗರಿಗೆ ತಂದು ಶೇ. 4ರಿಂದ 6ಕ್ಕೆ ಮೀಸಲಾತಿ ಏರಿಕೆ ಮಾಡಿರುವುದು ಸ್ವಾಗತಾರ್ಹ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಕಸ್ತೂರಿ ಪಂಜ, ಸುಧೀರ್‌ ಶೆಟ್ಟಿ ಕಣ್ಣೂರು, ಜಗದೀಶ ಶೇಣವ ಇದ್ದರು.

ಟಿಕೆಟ್‌ ವರಿಷ್ಠರ ತೀರ್ಮಾನ
ಮೂಡುಬಿದಿರೆ ಕ್ಷೇತ್ರದಲ್ಲಿ ತನ್ನ ಸ್ಪರ್ಧಾಕಾಂಕ್ಷೆಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುದರ್ಶನ್‌ ಮೂಡುಬಿದಿರೆ, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಅಭ್ಯರ್ಥಿಗಳ ಬದಲಾವಣೆ ಸೇರಿದಂತೆ ಎಲ್ಲ ತೀರ್ಮಾನಗಳನ್ನು ವರಿಷ್ಠ ನಾಯಕರು ಕೈಗೊಳ್ಳಲಿದ್ದಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next