Advertisement

ಶೌಚಾಲಯ ಕಟ್ಟಿದ್ದಾಯ್ತು, ಇನ್ನು ಬಳಕೆ ಜಾಗೃತಿ

03:20 PM Dec 06, 2017 | Team Udayavani |

ಕೊಪ್ಪಳ: ಶೌಚಾಲಯ ನಿರ್ಮಾಣದಲ್ಲಿ ಒಂದಿಲ್ಲೊಂದು ಅಭಿಯಾನ ನಡೆಸಿ ಜಾಗೃತಿ ಮೂಡಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿಯು ಈಗ ಮತ್ತೂಂದು ಅಭಿಯಾನಕ್ಕೆ ಸದ್ದಿಲ್ಲದೆ ಯೋಜನೆ ರೂಪಿಸುತ್ತಿದೆ. ಜನರು ಕಟ್ಟಿಸಿದ ಶೌಚಾಲಯಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವ ಕುರಿತಂತೆ ಜಾಗೃತಿ ಮೂಡಿಸಲು ಹೊರಟಿದೆ.

Advertisement

ಹೌದು.. ಕೊಪ್ಪಳ ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದರೂ ಸ್ವತ್ಛತೆಯಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಎಂಬಂತೆ ಜಾಗೃತಿ ವಹಿಸಿದೆ. ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಡುವಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಪಟ್ಟ ಪರಿಶ್ರಮ ಯಶಸ್ವಿಯ ಮೈಲುಗಲ್ಲಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳಿಂದ, ಗ್ರಾಮಮಟ್ಟದ ಅಧಿಕಾರಿಗಳು ಹಗಲಿರುಳೆನ್ನದೇ ಜನರ ಮನೆ ಬಾಗಿಲಿಗೆ ತೆರಳಿ ಕೈ ಕಾಲು ಮುಗಿದು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ ನೀಡಿದ್ದಲ್ಲದೇ ಸ್ವಚ್ಛತೆಯ ಜಾಗೃತಿಯನ್ನೂ ಮೂಡಿಸಿದ್ದಾರೆ.

11 ಸಾವಿರ ಶೌಚಾಲಯ ಅಷ್ಟೇ ಬಾಕಿ :
ಕೊಪ್ಪಳ ಜಿಲ್ಲೆಯಲ್ಲಿ 2012ರ ಬೇಸ್‌ಲೈನ್‌ ಪ್ರಕಾರ, 2,19,916 ಕುಟುಂಬಗಳು ಶೌಚಾಲಯ ಹೊಂದಿರಲಿಲ್ಲ. ಈ ಎಲ್ಲ ಕುಟುಂಬಕ್ಕೆ ಪ್ರತಿ ವರ್ಷವೂ ಹಂತ ಹಂತವಾಗಿ ಶೌಚಾಲಯ ನಿರ್ಮಿಸಿ ಕೊಡಬೇಕು ಎಂದು ಗುರಿ ಹಾಕಿಕೊಂಡ ಜಿಲ್ಲಾ ಪಂಚಾಯಿತಿಯು 2013 ರಿಂದ 2018ರ ವರೆಗೂ 1,91,669 ಶೌಚಾಲಯ ನಿರ್ಮಿಸಿತು. 2017-18ರಲ್ಲಿ ಮಿಷನ್‌ -200 ಅಭಿಯಾನದಡಿ ಕೇವಲ 200 ಗಂಟೆಯಲ್ಲಿ 21 ಸಾವಿರ ಶೌಚಾಲಯ ನಿರ್ಮಿಸಿ ಹೊಸ ದಾಖಲೆ ಬರೆಯಿತು. ಪ್ರಸಕ್ತ ವರ್ಷದಲ್ಲಿ ಆಗಲೇ 66,781 ಶೌಚಾಲಯ ನಿರ್ಮಿಸಿದೆ. ಬೇಸ್‌ಲೈನ್‌ ಸರ್ವೇ ಪ್ರಕಾರ ಜಿಲ್ಲೆಯಾದ್ಯಂತ ಕೇವಲ 11,380 ಶೌಚಾಲಯ ನಿರ್ಮಿಸಿದ್ದೇ ಆದರೆ ಕೊಪ್ಪಳ ಜಿಲ್ಲೆಯು
ಬಯಲು ಬಹಿರ್ದೆಸೆಯಿಂದ ಮುಕ್ತಿ ಹೊಂದಲಿದೆ. ಈ ನಿಟ್ಟಿನಲ್ಲಿ ಜಿಪಂ ಹತ್ತಾರು ಅಭಿಯಾನ ನಡೆಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು ಮಹಾ ಕ್ರಾಂತಿ ಮಾಡಿದೆ.

ಪ್ರಸ್ತುತ ಸ್ವಚ್ಛತೆಯ ಕುರಿತು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಅಭಿವೃದ್ಧಿ ಹೊಂದಿದಂತಹ ಪ್ರತಿಷ್ಠಿತ ಜಿಲ್ಲೆಗಳಲ್ಲೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಆದರೆ ಹಿಂದುಳಿದಂತಹ ಕೊಪ್ಪಳ ಜಿಲ್ಲೆಯಲ್ಲಿ ಕೇವಲ 5 ವರ್ಷದಲ್ಲಿ 2 ಲಕ್ಷಕ್ಕೂ ಅ ಧಿಕ ಶೌಚಾಲಯ ನಿರ್ಮಾಣವಾಗಿದ್ದು ದೊಡ್ಡ ಹೊಸ ದಾಖಲೆಯೇ ಸರಿ. ಕೊಪ್ಪಳ ಜಿಪಂ ಹೇಗೂ ಹರಸಾಹಸ
ಮಾಡಿ ಜನರಿಗೆ ಮನೆ ಮುಂದೆ ಶೌಚಾಲಯ ಕಟ್ಟಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಆದರೆ ಜನರು ಅವುಗಳನ್ನು ಸಮರ್ಪಕ ಬಳಕೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಕಟ್ಟಿಸಿದ ಶೌಚಾಲಯ ಸದ್ಬಳಕೆ ಮಾಡಿಕೊಂಡು ಸ್ವತ್ಛತೆ
ಕಾಪಾಡುವಂತೆ ಅಭಿಯಾನ ನಡೆಸಲು ಜಿಪಂ ಮತ್ತೆ ತಯಾರಿ ನಡೆಸಿದೆ. ಶೌಚಾಲಯ ಕಟ್ಟಿಸಿಕೊಳ್ಳುವ ವೇಳೆ ಗ್ರಾಪಂ
ಮಟ್ಟದಲ್ಲಿ ಅಧಿಕಾರಿಗಳು ಅಭಿಯಾನ ನಡೆಸಿದಂತೆಯೇ ಈ ಬಾರಿ ಕಟ್ಟಿಸಿದ ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳುವಂತೆ
ಅಭಿಯಾನ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಇನ್ನೂ 11 ಸಾವಿರ ಶೌಚಾಲಯ ನಿರ್ಮಿಸುವುದು ಬಾಕಿಯಿರುವ ಕಾರಣ ಪೂರ್ಣ ಪ್ರಮಾಣದಲ್ಲಿ ಶೌಚಾಲಯ ನಿರ್ಮಿಸಿ, ಬಯಲು ಬಹಿರ್ದೆಸೆಯಿಂದ ಮುಕ್ತಿ ಹೊಂದಿದ ತಕ್ಷಣವೇ ಅಭಿಯಾನ ಆರಂಭಕ್ಕೆ
ಸಿದ್ಧತೆ ನಡೆಸಿದ್ದಾರೆ. 

ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮತ್ತೆ ಕಟ್ಟಿಸಿದ ಶೌಚಾಲಯ ಬಳಸಿಕೊಳ್ಳುವಂತೆ ಜಾಗೃತಿ ಮೂಡಿಸಲಿದ್ದಾರೆ. ವಿಶ್ವ ವಿಖ್ಯಾತಿ ಗವಿಸಿದ್ದೇಶ್ವರ ಜಾತ್ರೆ ಜನೆವರಿ ಮೊದಲ ವಾರದಲ್ಲಿ ನಡೆಯಲಿದ್ದು, ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ
ಜನರು ಆಗಮಿಸಲಿದ್ದಾರೆ. ಈ ವೇಳೆಯೂ ಜಾತ್ರೆಗೆ ಬರುವ ಭಕ್ತರಿಗೆ ಜಾಗೃತಿ ಮೂಡಿಸಲು ಗವಿಮಠ ಆವರಣದಲ್ಲಿ ಮಳಿಗೆ
ಸ್ಥಾಪಿಸಿ ಶೌಚಾಲಯ ಬಳಕೆಯ ಜಾಗೃತಿಗೆ ಜಿಪಂ ಸಿದ್ಧತೆ ನಡೆಸಿದೆ. ಜಿಲ್ಲಾ ಪಂಚಾಯಿತಿಯಿಂದ ವಿವಿಧ
ಅಭಿಯಾನಗಳ ಮೂಲಕ ಜನರು ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಈವರೆಗೂ ಎರಡು ಲಕ್ಷ ವೈಯಕ್ತಿಕ 
ಶೌಚಾಲಯ ನಿರ್ಮಿಸಿದ್ದೇವೆ. ಇನ್ನು 11 ಸಾವಿರ ಶೌಚಾಲಯ ನಿರ್ಮಿಸುವುದೊಂದೆ ಬಾಕಿಯಿದೆ. ಅವುಗಳು ಪೂರ್ಣಗೊಂಡ
ಬಳಿಕ ಕಟ್ಟಿಸಿದ ಶೌಚಾಲಯ ಬಳಕೆ ಮಾಡಿಕೊಳ್ಳುವಂತೆ ಅಭಿಯಾನ ಆರಂಭ ಮಾಡಲಿದ್ದೇವೆ. ಸ್ವಚ್ಛತೆ ಕುರಿತು ಮತ್ತೆ ಜನರಲ್ಲಿ
ಜಾಗೃತಿ ಮೂಡಿಸಲಿದ್ದೇವೆ. 
 ನರೇಂದ್ರನಾಥ ತೊರವಿ, ಜಿಪಂ ಉಪಕಾರ್ಯದರ್ಶಿ, ಕೊಪ್ಪಳ

Advertisement

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next