Advertisement

ಇಂದು ಟಿ20 ಫೈನಲ್‌ : ಸಿಹಿ ಯುಗಾದಿ ನಿರೀಕ್ಷೆಯಲ್ಲಿ ಟೀಮ್‌ ಇಂಡಿಯಾ

06:05 AM Mar 18, 2018 | Team Udayavani |

ಕೊಲಂಬೊ: ತುಂಬು ಆತ್ಮವಿಶ್ವಾಸದಲ್ಲಿರುವ ಭಾರತ ಹಾಗೂ ಹಾರಾಡುತ್ತಿರುವ ಬಾಂಗ್ಲಾದೇಶ ತಂಡಗಳು ರವಿವಾರದ “ನಿದಹಾಸ್‌ ಟಿ20 ತ್ರಿಕೋನ ಸರಣಿ’ಯ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ. ಆತಿಥೇಯ ಶ್ರೀಲಂಕಾ ತಂಡವನ್ನು ಮನೆಯಲ್ಲೇ ಕೂಡಿಹಾಕಿದ ಕಾರಣ ಅಲ್ಲಿನ ವೀಕ್ಷಕರ ಕುತೂಹಲ ತಣಿದರೂ ಇತ್ತಂಡಗಳನ ನಡುವಿನ ಕದನ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಎರಡು ಮಾತಿಲ್ಲ. ರೋಹಿತ್‌ ಪಡೆ ಗೆದ್ದು ಯುಗಾದಿಯ ಸಿಹಿಯನ್ನು ಕ್ರಿಕೆಟ್‌ ಪ್ರೇಮಿಗಳಿಗೆ ಹಂಚಲಿ ಎಂಬುದು ಭಾರತದ ಅಭಿಮಾನಿಗಳ ಆಶಯ.

Advertisement

ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸೋತುದನ್ನು ಕಂಡಾಗ ದ್ವಿತೀಯ ದರ್ಜೆಯ ಭಾರತ ತಂಡ ಈ ಕೂಟದಲ್ಲಿ ಬಹಳ ಮುಂದೆ ಸಾಗಲಿಕ್ಕಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಅನಂತರ ಸತತ 3 ಲೀಗ್‌ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಗರಿಮೆಯೊಂದಿಗೆ ಎಲ್ಲರಿಗಿಂತ ಮೊದಲೇ ಫೈನಲ್‌ ಟಿಕೆಟ್‌ ಕಾದಿರಿಸಿದ್ದು ಭಾರತದ ಹಿರಿಮೆಗೆ ಸಾಕ್ಷಿ. ಈ ಹಾದಿಯಲ್ಲಿ 2 ಸಲ ಸ್ಪಿರಿಟೆಡ್‌ ಬಾಂಗ್ಲಾದೇಶಕ್ಕೆ ಸೋಲುಣಿಸಿದ್ದನ್ನು ಮರೆಯುವಂತಿಲ್ಲ. ಮೂರನೇ ಸಲವೂ ಜಯ ಟೀಮ್‌ ಇಂಡಿಯಾದ್ದೇ ಆಗಬಹುದೆಂಬುದು ಸಹಜ ನಿರೀಕ್ಷೆ.

ಬಾಂಗ್ಲಾ ಪಡೆ ಶ್ರೀಲಂಕಾವನ್ನು ಎರಡೂ ಸಲ ಭರ್ಜರಿಯಾಗಿ ಮಣಿಸಿ ತಾನು “ಕ್ರಿಕೆಟ್‌ ಟೈಗರ್‌’ ಎಂಬುದನ್ನು ಯಶಸ್ವಿಯಾಗಿ ನಿರೂಪಿಸಿತ್ತು. ಮೊದಲ ಸಲ 215 ರನ್‌ ಬೆನ್ನಟ್ಟಿ ಪ್ರಚಂಡ ಜಯಭೇರಿ ಮೊಳಗಿಸಿದರೆ, ಶುಕ್ರವಾರ ರಾತ್ರಿ ಒಂದಿಷ್ಟು ಅಹಿತಕರ ಘಟನೆಯ ಬಳಿಕ 2 ವಿಕೆಟ್‌ ಅಂತರದ ರೋಮಾಂಚಕಾರಿ ಗೆಲುವು ಸಾಧಿಸಿತ್ತು; ತವರಿನ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಮರ್ಮಾಘಾತವಿಕ್ಕಿತ್ತು. ಮುಶ್ಫಿಕರ್‌ ರಹೀಂ ಮತ್ತು ಮಹಮದುಲ್ಲ ರಿಯಾದ್‌ ಗೆಲುವಿನ ರೂವಾರಿಗಳಾಗಿ ಮೂಡಿಬಂದಿದ್ದರು. ಫೈನಲ್‌ನಲ್ಲೂ ಇವರಿಬ್ಬರೇ ಎದುರಾಳಿ ಪಾಲಿಗೆ ಹೆಚ್ಚು ಅಪಾಯಕಾರಿಗಳೆಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ ರಹೀಂ-ಮಹಮದುಲ್ಲ ಅವರನ್ನು ಎಷ್ಟು ಬೇಗ ಔಟ್‌ ಮಾಡಲಾಗುವುದೋ ಅಷ್ಟು ಲಾಭ ಭಾರತಕ್ಕೆ ಲಭಿಸಲಿದೆ.

ಆ್ಯಂಗ್ರಿ ಮ್ಯಾನ್‌ ಶಕಿಬ್‌!
ಸರಣಿಯಲ್ಲಿ ಇದೇ ಮೊದಲ ಸಲ ಆಡಲಿಳಿದು ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ “ಆ್ಯಂಗ್ರಿ ಮ್ಯಾನ್‌’ ಶಕಿಬ್‌ ಅಲ್‌ ಹಸನ್‌ ಕೂಡ ಅಪಾಯಕಾರಿ ಆಟಗಾರ. ಅವರು “ಆ್ಯಂಗ್ರಿ’ ಆದುದಕ್ಕೆ ಕಾರಣ, ಈ ಪಂದ್ಯದ ಅಂತಿಮ ಹಂತದಲ್ಲಿ ನಡೆದ ಘಟನೆ.

ಇಸುರು ಉದಾನ ಎಸೆದ ಅಂತಿಮ ಓವರ್‌ನ ಮೊದಲ ಎಸೆತ ಫ‌ುಲ್‌ಟಾಸ್‌ ಆಗಿತ್ತು. ಲೆಗ್‌ ಅಂಪಾಯರ್‌ ಇದನ್ನು “ನೋ ಬಾಲ್‌’ ಎಂದರೂ ಮತ್ತೂಬ್ಬ ಅಂಪಾಯರ್‌ ಇದನ್ನು ಪುರಸ್ಕರಿಸಲಿಲ್ಲ. ಆಗ ಇತ್ತಂಡಗಳ ಕೆಲವು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಕ್ರೋಶಗೊಂಡ ಶಕಿಬ್‌ ಅಂಪಾಯರ್‌ ಜತೆ ವಾದಕ್ಕಿಳಿದು, ಕ್ರೀಸಿನಲ್ಲಿದ್ದ ಬ್ಯಾಟ್ಸ್‌ಮನ್‌ಗಳನ್ನು ವಾಪಸ್‌ ಕರೆಸಿಕೊಳ್ಳುವ ಮಟ್ಟಕ್ಕೆ ಮುಂದಾಗಿದ್ದರು. ಆದರೆ ಪರಿಸ್ಥಿತಿ ತಿಳಿಗೊಂಡು ಬಾಂಗ್ಲಾದ ಜಯದೊಂದಿಗೆ ಪಂದ್ಯ ಮುಗಿಯಿತು. ಮುಂದೆಂದೂ ಈ ರೀತಿ ಸಹನೆ ಮೀರುವುದಿಲ್ಲ ಎಂದು ಶಕಿಬ್‌ ಭರವಸೆ ನೀಡಿದ್ದಾರೆ. ತಮ್ಮ ಗಮನವೇನಿದ್ದರೂ ಭಾರತದೆದುರಿನ ಫೈನಲ್‌ ಪಂದ್ಯದ ಮೇಲೆ ಎಂದಿದ್ದಾರೆ.

Advertisement

ಕಾಕತಾಳೀಯವೆಂಬಂತೆ, ಮೆಲ್ಬರ್ನ್ನಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ 2015ರ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲೂ ಇಂಥದೇ ಘಟನೆಯೊಂದು ಸಂಭವಿಸಿತ್ತು. ಆಗ ರೋಹಿತ್‌ ಶರ್ಮ ಫ‌ುಲ್‌ಟಾಸ್‌ ಎಸೆತವೊಂದಕ್ಕೆ ಕ್ಯಾಚ್‌ ನೀಡಿದಾಗ ಅದನ್ನು ನೋಬಾಲ್‌ ಎಂದು ಅಂಪಾಯರ್‌ ತೀರ್ಪಿತ್ತಿದ್ದರು. ಇದನ್ನು ಬಾಂಗ್ಲಾ ಕ್ರಿಕೆಟಿಗರು ಬಲವಾಗಿ ವಿರೋಧಿಸಿದ್ದರು. ಈಗ ಇಂಥದೇ ಎಸೆತಕ್ಕೆ ನೋಬಾಲ್‌ ನೀಡದ ಕಾರಣ ವಿರೋಧಿಸಿದ್ದಾರೆ. ಕ್ರಿಕೆಟಿನ ವೈಚಿತ್ರ್ಯಗಳಲ್ಲಿ ಇದೂ ಒಂದು!

ಮತ್ತೂಂದು ಹ್ಯಾಟ್ರಿಕ್‌
ಭಾರತದೆದುರಿನ ಮೊದಲ ಲೀಗ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಕಳೆದುಕೊಂಡ ಬಾಂಗ್ಲಾ, ಮರು ಮುಖಾಮುಖೀಯಲ್ಲಿ ರಹೀಂ ಅವರ ಭಾರೀ ಹೋರಾಟದ ನಡುವೆಯೂ 17 ರನ್ನುಗಳ ಸೋಲಿಗೆ ಗುರಿಯಾಯಿತು. ಆದರೆ ಈ ಸೋಲುಗಳ ಕತೆ ಹಾಗಿರಲಿ, ಭಾರತದೆದುರಿನ ಉಳಿದೊಂದು ಪಂದ್ಯ ಗೆದ್ದರೆ ಬಾಂಗ್ಲಾ ಚಾಂಪಿಯನ್ನೇ ಆಗಲಿದೆ ಎಂಬುದನ್ನು ಮರೆಯುವಂತಿಲ್ಲ!

ಶ್ರೀಲಂಕಾ ವಿರುದ್ಧ ಹಾರಾಡಿದ ಬಾಂಗ್ಲಾದೇಶದ ಆಟ ಭಾರತದ ವಿರುದ್ಧ ನಡೆಯಲಿಲ್ಲ ಎಂಬುದು ಇಲ್ಲಿಯ ತನಕ ಸತ್ಯ. ಆದರೆ ರವಿವಾರ ರಾತ್ರಿ ಏನೂ ಆಗಬಹುದು. ಲಂಕೆಯನ್ನು ಹೊರದಬ್ಬಿದ ಬಳಿಕ ಬಾಂಗ್ಲಾದ ಸ್ಪಿರಿಟ್‌ ಸಹಜವಾಗಿಯೇ ಹೆಚ್ಚಿದೆ. ಹೀಗಾಗಿ ರೋಹಿತ್‌ ಪಡೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ಈ ಕೂಟದಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿರುವ ಟೀಮ್‌ ಇಂಡಿಯಾ, ಬಾಂಗ್ಲಾ ಟೈಗರ್ ವಿರುದ್ಧವೂ ಹ್ಯಾಟ್ರಿಕ್‌ ಪೂರೈಸಬೇಕಿದೆ.

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ವಿಜಯ್‌ ಶಂಕರ್‌, ಶಾದೂìಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ಜೈದೇವ್‌ ಉನಾದ್ಕತ್‌, ಯಜುವೇಂದ್ರ ಚಾಹಲ್‌.

ಬಾಂಗ್ಲಾದೇಶ: ತಮಿಮ್‌ ಇಕ್ಬಾಲ್‌, ಲಿಟ್ಟನ್‌ ದಾಸ್‌, ಶಬ್ಬೀರ್‌ ರೆಹಮಾನ್‌, ಮುಶ್ಫಿಕರ್‌ ರಹೀಂ, ಸೌಮ್ಯ ಸರ್ಕಾರ್‌, ಮಹಮದುಲ್ಲ, ಶಕಿಬ್‌ ಅಲ್‌ ಹಸನ್‌ (ನಾಯಕ), ಮೆಹಿದಿ ಹಸನ್‌ ಮಿರಾಜ್‌, ಮುಸ್ತಫಿಜುರ್‌ ರೆಹಮಾನ್‌, ರುಬೆಲ್‌ ಹೊಸೇನ್‌, ನಜ್ಮುಲ್‌ ಇಸ್ಲಾಮ್‌.

ಆರಂಭ: ಸಂಜೆ 7.00 
ಪ್ರಸಾರ: ಡಿ ನ್ಪೋರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next