Advertisement

ಇಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ

11:48 AM Oct 22, 2018 | Team Udayavani |

ಮೈಸೂರು: ವಿಜಯದಶಮಿಯ ದಿನದಂದು ಮೈಸೂರು ರಾಜಮನೆತನದ ಇಬ್ಬರು ನಿಧನ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ ಹಾಗೂ ಇನ್ನಿತರ ಧಾರ್ಮಿಕ ಪೂಜಾಕೈಂಕರ್ಯಗಳು ಇಂದು ನಡೆಯಲಿದೆ. 

Advertisement

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದ ನವರಾತ್ರಿಯ ಹತ್ತನೇ ದಿನದ ವಿಜಯದಶಮಿಯ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಮುಂದೂಡಲಾಗಿತ್ತು.

ಹೀಗಾಗಿ ಈ ಎಲ್ಲಾ ಕಾರ್ಯಕ್ರಮಗಳನ್ನು ಅ.22ರಂದು ನಡೆಸಲಾಗುತ್ತಿದ್ದು, ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ ನಡೆಸಲಾಗುತ್ತಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ರಾಜಮನೆತನದವರು ತಮ್ಮದೇ ಕೆಲವು ಕಟ್ಟುಪಾಡುಗಳನ್ನು ಅನುಸರಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ನವರಾತ್ರಿ ಪೂಜಾ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆ ಆವರಣದ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯಿಟ್ಟು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬೆಳ್ಳಿ ರಥದಲ್ಲಿ ಕುಳಿತು ತೆರಳಿ ಶಮಿ ಪೂಜೆ ಸಲ್ಲಿಸಿ, ಬಳಿಕ ಅರಮನೆಗೆ ವಿಜಯಯಾತ್ರೆ ಬರುವುದು ಸಂಪ್ರದಾಯ.

ಆದರೆ ಪ್ರಮೋದಾದೇವಿ ಒಡೆಯರ್‌ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಅವರ ನಿಧನದಿಂದ ಅ.19ರಂದು ನಡೆಯಬೇಕಿದ್ದ ದಸರಾ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಬಳಿಕ ರಾಜಮನೆತನದ ಗುರುಗಳು, ರಾಜಪುರೋತರ ಸಲಹೆಯ ಮೇರೆಗೆ ಅ.22ರಂದು ವಜ್ರಮುಷ್ಠಿ ಕಾಳಗ, ಶಮಿ ಪೂಜೆ, ವಿಜಯ ಯಾತ್ರೆ ನಡೆಸಲು ಸಿದ್ಧತೆಗಳು ನಡೆದಿವೆ.

Advertisement

ಅರಮನೆಗೆ ನಿರ್ಬಂಧ: ದಸರಾ ಮಹೋತ್ಸವ ಅಂಗವಾಗಿ ರಾಜಮನೆತನದವರು ವಿಜಯದಶಮಿ ಪೂಜಾಕೈಂಕರ್ಯಗಳನ್ನು ನಡೆಸುವ ಹಿನ್ನೆಲೆಯಲ್ಲಿ ಅ.22 ರಂದು ಪ್ರವಾಸಿಗರು ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಅರಮನೆಗೆ ಬೇಟಿ ನೀಡುವ ಪ್ರವಾಸಿಗರಿಗೆ ಅರಮನೆ ಒಳಾವರಣ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌ ಸುಬ್ರಹ್ಮಣ್ಯ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next