Advertisement

32 ತಾಸಲ್ಲಿ ಸಾವಿರ ಕೆಜಿ ಮಂಡಿಗೆ ತಯಾರಿ!

11:35 AM Mar 21, 2022 | Team Udayavani |

ಹುಬ್ಬಳ್ಳಿ: ವಿದ್ಯಾನಗರ ಕುಮಾರವ್ಯಾಸ ನಗರದ “ಸೀತಾರಾಮ ಕ್ಯಾಟರಿಂಗ್‌’ನ ಕೇಶವಾಚಾರ್ಯ ಭಾವಿಕಟ್ಟಿ ನೇತೃತ್ವದ ತಂಡ ಮಂಡಿಗೆ ತಯಾರಿಕೆಯಲ್ಲಿ ಭೇಷ್‌ ಎನಿಸಿಕೊಂಡಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠದಲ್ಲಿ ಈಚೆಗೆ ನಡೆದ “ಶ್ರೀಮನ್ಯಾಯಸುಧಾಮಂಗಲ’ ಕಾರ್ಯಕ್ರಮದಲ್ಲಿ 32 ತಾಸುಗಳಲ್ಲಿ ಸುಮಾರು ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಸುಮಾರು ಹದಿನೈದು ಜನರ ತಂಡ ಹನ್ನೆರಡು ಒಲೆಗಳಲ್ಲಿ ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿದೆ. ಇದಕ್ಕೆ 400 ಕೆಜಿ ಸಕ್ಕರೆ, 700 ಕೆಜಿ ಮಂಡಿಗೆ ಹಿಟ್ಟು, 150 ಕೆಜಿ ತುಪ್ಪ, 70 ಕೆಜಿ ಅಕ್ಕಿ ಹಿಟ್ಟು ಇನ್ನಿತರೆ ಪದಾರ್ಥ ಬಳಸಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಜನರು ಮಂಡಿಗೆ ಸವಿದಿದ್ದಾರಂತೆ.

ಕಳೆದ 18-20 ವರ್ಷಗಳಿಂದ ಮಂಡಿಗೆ ತಯಾರಿಸುವ ಕಾಯಕದಲ್ಲಿ ತೊಡಗಿರುವ ಭಾವಿಕಟ್ಟಿ ಅವರು ತಯಾರಿಸಿದ ಮಂಡಿಗೆ ನಾಡಿನ ವಿವಿಧೆಡೆ ತನ್ನದೇ ಖ್ಯಾತಿ ಪಡೆದಿದೆ. ಉಡುಪಿಯ ಅಷ್ಟಮಠಗಳ ಶ್ರೀಗಳು ಸಹ ಇವರ ಮಂಡಿಗೆಗೆ ಮಾರುಹೋಗಿದ್ದಾರೆ. ಪೇಜಾವರ ಶ್ರೀಗಳ ಶಿಷ್ಯರಾದ ಕೇಶವಾಚಾರ್ಯರು ಅವರಿಗೂ ಸಹ ಮಂಡಿಗೆ ಉಣಬಡಿಸಿದ್ದಾರೆ.

ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ದೈವಾಧೀನ ನಂತರದಲ್ಲಿ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ಸುಮಾರು 500 ಕೆಜಿ ಮಂಡಿಗೆ, ಮಳಖೇಡದ ಶ್ರೀಜಯತೀರ್ಥರ ಸನ್ನಿಧಾನದಲ್ಲಿ ಒಂದು ಸಾವಿರ ಕೆಜಿ, ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ 500 ಕೆಜಿ ಹಾಗೂ ಮಾದನೂರ ವಿಷ್ಣುತೀಥ ಮಠದಲ್ಲಿ 300 ಕೆಜಿ ಸಿದ್ಧಪಡಿಸಿದ್ದಾರೆ.

Advertisement

ಪ್ರಮೋದ ಕುಲಕರ್ಣಿ, ಮಯೂರ ಸಿದ್ದಾಪುರ ಹಾಗೂ ಅವರ ಕೈಯಡಿಯಲ್ಲಿ ಅನಿರುದ್ಧ, ಬದರಿ, ರಾಘವೇಂದ್ರ, ಕೃಷ್ಣಾ ಜೋಶಿ ಸೇರಿದಂತೆ ಸುಮಾರು 15 ಜನರ ತಂಡ ಹೊಂದಿದ್ದಾರೆ. ಕೇಶವಾಚಾರ್ಯ ಭಾವಿಕಟ್ಟಿ ಅವರ ಸಹೋದರ ಮಾವನವರಾದ ರಾಘವೇಂದ್ರ ಆಚಾರ್ಯ, ಗೋಪಾಲಾಚಾರ್ಯ ಅವರಲ್ಲಿ ಮಂಡಿಗೆ ಮಾಡುವ ವಿಧಾನ ಕಲಿತಿರುವ ವೆಂಕಟೇಶಾಚಾರ್ಯ ಅವರು ಸಹ ಮಂಡಿಗೆ ತಯಾರಿಸುವಲ್ಲಿ ತಮ್ಮದೇ ಖ್ಯಾತಿ ಪಡೆದಿದ್ದಾರೆ.

 

ಚಿಕ್ಕವನಿದ್ದಾಗಲೇ ಮಾವನವರಿಂದ ಮಂಡಿಗೆ ಮಾಡುವುದನ್ನು ಕಲಿತು ಉಡುಪಿಯ ಅಷ್ಟ ಮಠಗಳು ಸೇರಿದಂತೆ ನಾಡಿನ ವಿವಿಧೆಡೆ ನಡೆದ ಸಮಾರಂಭಗಳಲ್ಲಿ ಮಂಡಿಗೆ ಸಿದ್ಧಪಡಿಸಿದ್ದೇನೆ. ನಾವು ನೀಡುವ ಸೇವೆ, ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಇದೆ. ಅದು ನಮಗೆ ಶ್ರೀ ರಕ್ಷೆಯಾಗಿದೆ.

ಕೇಶವಾಚಾರ್ಯ ಭಾವಿಕಟ್ಟಿ, ಮಂಡಿಗೆ ತಯಾರಕರು

– ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next