Advertisement

ಜೆಡಿಎಸ್‌ಗೆ ದುಡಿದವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಿಲ್ಲ

06:35 AM Feb 01, 2018 | Team Udayavani |

ಮಂಡ್ಯ: ಜೆಡಿಎಸ್‌ನ ಇತಿಹಾಸದಲ್ಲೇ ಪಕ್ಷಕ್ಕೆ ದುಡಿದವರನ್ನು ರಾಜ್ಯಸಭೆಗೆ ಎಂದಿಗೂ ಆಯ್ಕೆ ಮಾಡಲಿಲ್ಲ ಎಂದು ಶಾಸಕ ಎನ್‌.ಚೆಲುವರಾಯಸ್ವಾಮಿ ಆರೋಪಿಸಿದರು. ನಗರದಲ್ಲಿ ಬುಧವಾರ ಮಾತನಾಡಿ, ಎಂ.ಎಂ.ರಾಮಸ್ವಾಮಿಯಿಂದ ಆರಂಭವಾಗಿ ಕುಪೇಂದ್ರರೆಡ್ಡಿವರೆಗೂ ಜೆಡಿಎಸ್‌ ಕಟ್ಟಿ ಬೆಳೆಸಲು ಶ್ರಮಿಸಿದವರನ್ನು ತಿರಸ್ಕರಿಸಲಾಯಿತೇ ವಿನಃ ಅವರಿಗೆ ಅವಕಾಶ ನೀಡಲಿಲ್ಲ. ಅದೇ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ ಫಾರೂಕ್‌ ಅವರಿಗೆ ಟಿಕೆಟ್‌ ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಯಿತು. ಇದು ಜೆಡಿಎಸ್‌ ಸಂಸ್ಕೃತಿ ಎಂದು ಟೀಕಿಸಿದರು.

Advertisement

ಜೆಡಿಎಸ್‌ನಿಂದ ನಮ್ಮನ್ನು ಹೊರಹಾಕಲು ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಲಿಲ್ಲವೆಂಬುದು ಮುಖ್ಯ ಕಾರಣವಲ್ಲ. ಅದರ ಹಿಂದೆ ನೂರಾರು ಕಾರಣಗಳಿವೆ. ಪಕ್ಷದ ನಾಯಕರ ನಡವಳಿಕೆ, ನಮ್ಮನ್ನು ನಡೆಸಿಕೊಂಡ ರೀತಿ ನಾವು ಪಕ್ಷ ತ್ಯಜಿಸಲು ಮುಖ್ಯ ಕಾರಣ. ಪಕ್ಷದಲ್ಲಿ ನಮ್ಮನ್ನು ಉಡಾಫೆಯಾಗಿ ನೋಡಿದರು. ರಾಜಕೀಯವಾಗಿ ಮುಗಿಸಲು ಸಂಚು ನಡೆಸಿದರು. ತುತ್ಛ ಮಾತುಗಳಿಂದ ಸ್ನೇಹಿತರೆದುರು ನಿಂದಿಸಿದರು. ಅದನ್ನು ಸಹಿಸಿಕೊಳ್ಳಲು ನಮ್ಮ ಮನಃಸಾಕ್ಷಿ, ಸ್ವಾಭಿಮಾನ ಒಪ್ಪಲಿಲ್ಲ. ಅದಕ್ಕಾಗಿ ಪಕ್ಷ ಬಿಡುವುದು ನಮಗೆ ಅನಿವಾರ್ಯವಾಯಿತು ಎಂದು ಹೇಳಿದರು.

ಹಿಂದೂ-ಮುಸ್ಲಿಮರನ್ನು ಬೇರ್ಪಡಿಸಲು ಪಿತೂರಿ
ಮಂಡ್ಯ:
ಕರ್ನಾಟಕದಲ್ಲಿ ಹಿಂದೂ ಮತ್ತು ಮುಸಲ್ಮಾನರು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದಿಂದ ಇರುವುದನ್ನು ಸಹಿಸದ ಹಲವರು ಇಬ್ಬರನ್ನೂ ಬೇರ್ಪಡಿಸಲು ಪಿತೂರಿ ನಡೆಸುತ್ತಿದ್ದಾರೆಂದು ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌ ಅಹಮದ್‌ ಬಿಜೆಪಿ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಬುಧವಾರ ಮಾತನಾಡಿ, ಪಾಕಿಸ್ತಾನದಲ್ಲಿರುವ ಮುಸಲ್ಮಾನರು ನೆಮ್ಮದಿಯಾಗಿಲ್ಲ. ಭಾರತದಲ್ಲಷ್ಟೇ ಮುಸಲ್ಮಾನರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿಂದೂ ಮತ್ತು ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. ಇದನ್ನು ಸಹಿಸದ ವಿರೋಧಿಗಳು ಏನಾದರೂ ಮಾಡಿ ಇಬ್ಬರನ್ನೂ ಬೇರ್ಪಡಿಸಬೇಕೆಂಬ ಕುತಂತ್ರ ನಡೆಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡಬಾರದು ಎಂದು ಹೇಳಿದರು.

ಜಮೀರ್‌, ಚೆಲುವರಾಯಸ್ವಾಮಿ ವಿರುದ್ಧ ಕ್ರಮಕ್ಕೆ ಮನವಿ
ಮಂಡ್ಯ:
ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕರಾದ ಎನ್‌.ಚೆಲುವರಾಯಸ್ವಾಮಿ ಹಾಗೂ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಪಕ್ಷ ನಿಯಮ ಉಲ್ಲಂಘನೆ ಆಧರಿಸಿ ತುರ್ತು ಕ್ರಮ ಜರುಗಿಸುವಂತೆ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ. ಜಾತ್ಯತೀತ ಜನತಾದಳ ಪಕ್ಷದಿಂದ ಪಕ್ಷ ವಿರೋಧಿ ಕ್ರಮದಡಿ ಏಳು ಮಂದಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಆದರೆ, ಇವರ್ಯಾರೂ ಇನ್ನೂ ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆಗೊಂಡಿಲ್ಲ. ಹಾಗಾಗಿ, ಇವರು ಪಕ್ಷದ ತತ್ವ-ಸಿದ್ಧಾಂತಗಳು ಹಾಗೂ ನಿಯಮಗಳ ಪಾಲನೆಗೆ ಬದ್ಧರಾಗಿರಬೇಕು. ಒಂದು ಪಕ್ಷದ ಚಿಹ್ನೆಯಡಿ ಚುನಾಯಿತ ಪ್ರತಿನಿಧಿಗಳಾಗಿದ್ದು, ಇತರ ಪಕ್ಷಗಳಲ್ಲಿ ಗುರುತಿಸಿಕೊಳ್ಳುವ ಅಧಿಕೃತ ಕಾರ್ಯಗಳನ್ನು ಮಾಡಬಾರದು. ಇದು ನಿಯಮಕ್ಕೆ ವಿರುದ್ಧವಾದುದು ಎಂದು ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next